ಕರ್ನಾಟಕ

karnataka

ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

By ETV Bharat Karnataka Team

Published : Sep 6, 2023, 2:14 PM IST

ಕರಾವಳಿ ಜಿಲ್ಲೆ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ.

Sri Krishna Janmashtami celebration
ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಮಂಗಳೂರು :ನಾಡಿನೆಲ್ಲೆಡೆ ಇಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಕೃಷ್ಣನೂರು ಉಡುಪಿ ಸೇರಿದಂತೆ ಕರಾವಳಿಯಲ್ಲಿ ಸಂಭ್ರಮ ಮನೆಮಾಡಿದೆ. ಉಡುಪಿ ಶ್ರೀಕೃಷ್ಣ ಮಠದಲ್ಲಿ ಮುಂಜಾನೆಯಿಂದಲೇ ಭಕ್ತರು ದೇವರ ದರ್ಶನ ಪಡೆಯಲು ಆಗಮಿಸುತ್ತಿದ್ದು, ಸರತಿ ಸಾಲಿನಲ್ಲಿ ನಿಂತು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಹೌದು, ಉಡುಪಿ ಜಿಲ್ಲೆಯ ಶ್ರೀ ಕೃಷ್ಣ ದೇವಾಲಯದ ರಥಬೀದಿಯಲ್ಲಿ ಹಬ್ಬದ ಸಡಗರ ಮೇಲೈಸಿದೆ. ದೇವರ ದರ್ಶನ ಮಾಡಿ ಪುನೀತರಾಗುತ್ತಿರುವ ಭಕ್ತರು, ಇಂದು ಉಪವಾಸದಿಂದ ಇರುತ್ತಾರೆ. ರಾತ್ರಿ 12 ಗಂಟೆ ಸುಮಾರಿಗೆ ಅರ್ಘ್ಯ ಪ್ರದಾನ ನಡೆಯಲಿದ್ದು, ಆ ಬಳಿಕ ಫಲಾಹಾರ ಸೇವನೆ ಮಾಡುತ್ತಾರೆ.

ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಾಳೆ ವಿಟ್ಲಪಿಂಡಿ ನಡೆಯುತ್ತದೆ. ಇದೊಂದು ಜಾತ್ರೆಯ ವಾತಾವರಣ ಸೃಷ್ಟಿಸುವ ಉತ್ಸವ. ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಮೃಣ್ಮಯ ಮೂರ್ತಿಯನ್ನು ಪೂಜಿಸಲಾಗುತ್ತಿದ್ದು, ಈ ಮೂರ್ತಿಯನ್ನು ರಥದಲ್ಲಿರಿಸಿ ಬೀದಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ನಾಳೆ ಮಧ್ಯಾಹ್ನ ನಡೆಯುವ ಈ ಮೆರವಣಿಗೆಯಲ್ಲಿ ವಿವಿಧ ವೇಷಧಾರಿಗಳು, ಹುಲಿ ವೇಷ ನರ್ತನಗಳು ಗಮನಸೆಳೆಯುತ್ತವೆ. ಇದನ್ನು ವೀಕ್ಷಿಸಲೆಂದೆ ಜನಸಾಗರವೇ ರಥಬೀದಿಗೆ ಹರಿದುಬರುತ್ತದೆ. ಈ ಮೆರವಣಿಗೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಅರ್ಪಿಸಿದ ಉಂಡೆ ಚಕ್ಕುಲಿಯನ್ನು ಭಕ್ತರಿಗೆ ಪ್ರಸಾದವಾಗಿ ಹಂಚಲಾಗುತ್ತದೆ.

ಈ ಬಾರಿಯ ಕೃಷ್ಣ ಜನ್ಮಾಷ್ಟಮಿ ವಿಟ್ಲಪಿಂಡಿ ಮಹೋತ್ಸವದಂದು ಶಿರೂರು ಮಠದ ವತಿಯಿಂದ ಸುಮಾರು 4 ಲಕ್ಷ ರೂ. ನೋಟಿನ ಮಾಲೆಗಳನ್ನು ವಿವಿಧ ಕಲಾ ತಂಡಗಳಿಗೆ ನೀಡಿ ಗೌರವಿಸಲಾಗುವುದು ಎಂದು ಶಿರೂರು ಮಠಾಧೀಶ ಶ್ರೀ ವೇದವರ್ಧನತೀರ್ಥರು ತಿಳಿಸಿದ್ದಾರೆ. ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥರು ಈ ಹಿಂದೆ ವಿಜೃಂಭಣೆಯಿಂದ ಕೃಷ್ಣಜನ್ಮಾಷ್ಟಮಿಯನ್ನು ಆಚರಿಸುತ್ತಿದ್ದರು. ಅವರಂತೆಯೇ ಸಂಭ್ರಮ, ಸಡಗರದಿಂದ ಅಷ್ಟಮಿಯನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ಉಡುಪಿ ಜಿಲ್ಲೆಯ ಸನಿಹದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಭಕ್ತರು ಉಪವಾಸದಿಂದ ಇದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಬಗೆಯ ಖಾದ್ಯಗಳೊಂದಿಗೆ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಷ್ಟಮಿಯ ದಿನ ಮಧ್ಯಾಹ್ನ ಸಸ್ಯಹಾರದ ಊಟ ಮಾಡಲಾಗುತ್ತದೆ. ಕಡಲೆ, ಗೋಡಂಬಿ ಪದಾರ್ಥ, ಹೆಸರು ಕಾಳು, ಅಲೂಗಡ್ಡೆ ಪಲ್ಯ, ಕೆಸುವಿನ ಎಲೆ, ಅಂಬಡೆ ಕಾಯಿಯ ಸಾಂಬಾರ್, ಬೆಂಡೆಕಾಯಿ ಅಂಬಡೆ ಗಸಿ, ಅನ್ನ, ಪಾಯಸ ಮಾಡಿ ಸವಿಯಲಾಗುತ್ತದೆ. ಸಂಜೆ ಮೂಡೆ, ಕೊಟ್ಟಿಗೆ, ಗುಂಡ ಎಂಬ ಅಕ್ಕಿಯಿಂದ ತಯಾರಿಸಿದ ತಿಂಡಿಯನ್ನು ಬೆಲ್ಲ ಹಾಕಿ, ತೆಂಗಿನ ಹಾಲಿನೊಂದಿಗೆ ತಿನ್ನುತ್ತಾರೆ. ಅಷ್ಟಮಿಯ ಮರುದಿನ (ದ್ವಾದಶ) ದಂದು ಮಾಂಸಹಾರಿಗಳು ಮನೆಯಲ್ಲಿ ಮಾಂಸಹಾರ ಮಾಡಿ ಸಂಭ್ರಮಿಸುತ್ತಾರೆ.

ಇನ್ನು ಅಷ್ಟಮಿಯ ಪ್ರಯುಕ್ತ ಮಂಗಳೂರಿನಲ್ಲಿ ಪ್ರತಿವರ್ಷ ಮುದ್ದು ಕೃಷ್ಣನ ವೇಷ ಸ್ಪರ್ಧೆ ನಡೆಯುತ್ತದೆ. ಕಲ್ಕೂರ ಪ್ರತಿಷ್ಠಾನದಿಂದ ನಡೆಯುವ ಮುದ್ದು ಕೃಷ್ಣನ ವೇಷ ಸ್ಪರ್ಧೆಯಲ್ಲಿ ಈ ಬಾರಿಯು ಸಾವಿರಾರು ಮಕ್ಕಳು ಭಾಗವಹಿಸುತ್ತಾರೆ. ಮಂಗಳೂರಿನ ಹೆಚ್ಚಿನ ‌ಪುಟಾಣಿಗಳಿಗೆ ಕೃಷ್ಣನ ವೇಷ ಹಾಕಿ ಸಂಭ್ರಮಿಸಲಾಗುತ್ತದೆ. ಇನ್ನೊಂದೆಡೆ, ಅಷ್ಟಮಿ ಸಂಭ್ರಮಾಚರಣೆಯಾಗಿ ನಾಳೆ ಮೊಸರು ಕುಡಿಕೆ ಉತ್ಸವ ನಡೆಯುತ್ತದೆ. ಬಣ್ಣಗಳ ನೀರನ್ನು ಹಾಕಿದ ಮಡಿಕೆಗಳನ್ನು ಎತ್ತರದಲ್ಲಿ ಕಟ್ಟಿ ಅದನ್ನು ಯುವಕರು ಒಬ್ಬರ ಮೇಲೊಬ್ಬರು ಹತ್ತಿ ಒಡೆಯುವ ಮೂಲಕ ಸಂಭ್ರಮಿಸುತ್ತಾರೆ.

ಇದನ್ನೂ ಓದಿ :ದೇಶಾದ್ಯಂತ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಹೇಗಿತ್ತು? ಫೋಟೋಗಳಲ್ಲಿ ನೋಡಿ

ABOUT THE AUTHOR

...view details