ಕರ್ನಾಟಕ

karnataka

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ : ಸಂತ್ರಸ್ತ ಚಾಲಕನಿಗೆ ರಿಕ್ಷಾ, 5 ಲಕ್ಷ ರೂ. ಹಸ್ತಾಂತರ

By

Published : Mar 5, 2023, 7:11 PM IST

Updated : Mar 5, 2023, 10:45 PM IST

ಮಂಗಳೂರು ಕುಕ್ಕರ್​ ಬಾಂಬ್​ ಸ್ಫೋಟ ಪ್ರಕರಣ - ಗಾಯಾಳು ಪುರುಷೋತ್ತಮ ಪೂಜಾರಿಗೆ ಹೊಸ ರಿಕ್ಷಾ, 5 ಲಕ್ಷ ರೂ. ಚೆಕ್​ ವಿತರಣೆ - ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್​ ಅವರಿಂದ ಚೆಕ್​ ಹಸ್ತಾಂತರ

mangaluru-bomb-blast-case-rickshaw-rs-5-lakh-for-victim-rickshaw-driver-hand-over
ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ : ಸಂತ್ರಸ್ತ ಚಾಲಕನಿಗೆ ರಿಕ್ಷಾ, 5 ಲಕ್ಷ ರೂ. ಹಸ್ತಾಂತರ

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ : ಸಂತ್ರಸ್ತ ಚಾಲಕನಿಗೆ ರಿಕ್ಷಾ, 5 ಲಕ್ಷ ರೂ. ಹಸ್ತಾಂತರ

ಮಂಗಳೂರು: ನಗರದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಗಾಯಾಳು ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿಗೆ ಹೊಸ ರಿಕ್ಷಾ ಮತ್ತು 5 ಲಕ್ಷ ರೂಪಾಯಿ ಚೆಕ್​ ಅನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಸ್ತಾಂತರಿಸಿದರು. ನಗರದ ಉಜ್ಜೋಡಿಯಲ್ಲಿರುವ ಪುರುಷೋತ್ತಮ ಪೂಜಾರಿ ಅವರ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ರಿಕ್ಷಾ ಮತ್ತು 5 ಲಕ್ಷ ರೂ. ಗಳ ಚೆಕ್ ಅನ್ನು ಹಸ್ತಾಂತರಿಸಲಾಯಿತು.

2022ರ ನವೆಂಬರ್ 19 ರಂದು ನಗರದ ಗರೋಡಿ ಬಳಿ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ಶಂಕಿತ ಉಗ್ರ ಶಾರೀಕ್ ಕುಕ್ಕರ್ ಬಾಂಬ್ ಸ್ಫೋಟಿಸಲು ರಿಕ್ಷಾದಲ್ಲಿ ಹೋಗುತ್ತಿದ್ದ ವೇಳೆ ಗರೋಡಿ ಬಳಿ ಬಾಂಬ್​ ಸ್ಫೋಟಗೊಂಡಿತ್ತು. ಇದರಲ್ಲಿ ಶಂಕಿತ ಉಗ್ರ ಶಾರೀಕ್ ಮತ್ತು ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರು ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ತಿಂಗಳ ಹಿಂದೆ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈ ಸಂದರ್ಭದಲ್ಲಿ ಅವರ ಮನೆಗೆ ಬಂದು ವೀಕ್ಷಿಸಿದ ಶಾಸಕ ವೇದವ್ಯಾಸ ಕಾಮತ್ ಅವರು ಪುರುಷೋತ್ತಮ ಪೂಜಾರಿ ಅವರಿಗೆ ತಮ್ಮ ವೈಯಕ್ತಿಕ ನಿಧಿಯಿಂದ ಹೊಸ ರಿಕ್ಷಾ ಮತ್ತು ಬಿಜೆಪಿ ಪಕ್ಷದ ವತಿಯಿಂದ 5 ಲಕ್ಷ ರೂ.ಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು.

ಅದರಂತೆ ಇಂದು ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರ ವೈಯಕ್ತಿಕ ನಿಧಿಯಿಂದ ಹೊಸ ರಿಕ್ಷಾ ಮತ್ತು ಬಿಜೆಪಿ ಪಕ್ಷದ ವತಿಯಿಂದ 5 ಲಕ್ಷ ರೂಗಳ ಚೆಕ್ ಅನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ನಗರದ ಬಿಜೆಪಿ ನಾಯಕರು, ವಿಹಿಂಪ ಮುಖಂಡ ಶರಣ್ ಪಂಪ್ ವೆಲ್, ಪುರುಷೊತ್ತಮ ಪೂಜಾರಿ ಕುಟುಂಬಸ್ಥರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ ಹಲವು ವರ್ಷಗಳಿಂದ ನಡೆಯುತ್ತಿದೆ. ಇಸ್ಲಾಮಿಕ್ ರಾಷ್ಟ್ರ ಮಾಡಲು ದೊಡ್ಡ ಪ್ರಯತ್ನ ನಡೆಯುತ್ತಿದೆ. ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಆದ ನಂತರ ಅದನ್ನು ನಿಲ್ಲಿಸುವ ಕಾರ್ಯ ನಡೆಯುತ್ತಿದೆ. ಇವತ್ತು ಭಯೋತ್ಪಾದನಾ ಚಟುವಟಿಕೆ ಕಡಿಮೆಯಾಗಿದೆ. ಆದರೆ ಅಲ್ಲೊಂದು ಇಲ್ಲೊಂದು ಭಯೋತ್ಪಾದನಾ ಕಾರ್ಯ ನಡೆಯುತ್ತಿದೆ. ಅದಕ್ಕಾಗಿಯೇ ಪಿಎಫ್ ಐ ನ್ನು ನಿಷೇಧ ಮಾಡಲಾಗಿದೆ ಎಂದರು.

ಹಿಂದೆ ಸಿಮಿಯನ್ನು ನಿಷೇಧ ಮಾಡಲಾಗಿತ್ತು. ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ಇಸ್ಲಾಮಿಕ್ ರಾಷ್ಟ್ರ ಮಾಡುವ ಪ್ರಯತ್ನ ಎಂದು ಸಂಸ್ಥೆ ಹೇಳಿದೆ. ಅದಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಆದರೆ ಕಾಂಗ್ರೆಸ್ ಪಕ್ಷವು ಇಂತಹ ಘಟನೆಗಳಾದಾಗ ಅವರ ಪರವಾಗಿ ನಿಲ್ಲುತ್ತದೆ. ಕಾಂಗ್ರೆಸ್ ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲ ಕೊಡುವ ಪಕ್ಷ ಎಂದು ಆರೋಪಿಸಿದರು.

ಕಾಂಗ್ರೆಸ್​​ ಗಾಯಾಳು ಪುರುಷೋತ್ತಮ ಪೂಜಾರಿ ಅವರನ್ನು ಅಮಾಯಕ ಎಂದು ಹೇಳದೆ ಆರೋಪಿಯನ್ನು ಅಮಾಯಕ ಎಂದು ಹೇಳಿದೆ. ಇದಕ್ಕೆ ಎನ್ಐಎ ಸರಿಯಾದ ಉತ್ತರ ಕೊಟ್ಟಿದೆ. ಇದಕ್ಕೆ ಕಾಂಗ್ರೆಸ್ ಪಕ್ಷ, ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಏನು ಹೇಳುತ್ತಾರೆ. ಪ್ರಕರಣ ಸಂಬಂಧ ಉಡುಪಿಯ ಒಬ್ಬ ಕಾಂಗ್ರೆಸ್ ಮುಖಂಡನ ಮಗನನ್ನು ಬಂಧಿಸಲಾಗಿದೆ. ಇವತ್ತಿನವರೆಗೆ ಆತನನ್ನು ಕಾಂಗ್ರೆಸ್ ಪಕ್ಷ ಉಚ್ಛಾಟಿಸಿಲ್ಲ. ಭಯೋತ್ಪಾದಕರು ಕಾಂಗ್ರೆಸ್ ನಲ್ಲಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಕಟೀಲ್​ ವಾಗ್ದಾಳಿ ನಡೆಸಿದರು.

ಮಾರ್ಚ್ 9 ರಂದು ಕಾಂಗ್ರೆಸ್ ಎರಡು ಗಂಟೆಗಳ ಬಂದ್​ಗೆ ಕರೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಕಟೀಲ್, ಅವರು ಮೊದಲು ಕಾಂಗ್ರೆಸ್ ಕಚೇರಿಗೆ ಬೀಗ ಹಾಕಿ ಬಂದ್ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ. ಅವರ ಮೇಡಂ ಜಾಮೀನು ಯಾಕೆ ತೆಗೆದುಕೊಂಡರು? ರಾಹುಲ್ ಗಾಂಧಿ ಅವರು ಯಾವ ವಿಚಾರದಲ್ಲಿ ಜಾಮಿನು ತೆಗೆದುಕೊಂಡರು? ವಾದ್ರಾ ಯಾವ ವಿಚಾರದಲ್ಲಿ ಜಾಮೀನು ತೆಗೆದುಕೊಂಡರು. ಇವರು ಯಾಕೆ ತಿಹಾರ್​​ಗೆ ಹೋದರು? ಎಂದು ಪ್ರಶ್ನಿಸಿದರು.

ಇದನ್ನೂ ಓದಿ :ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟ: ಅಂಗಡಿ ಎದುರು ಆಟವಾಡುತ್ತಿದ್ದ ಬಾಲಕ ಸಾವು

Last Updated : Mar 5, 2023, 10:45 PM IST

ABOUT THE AUTHOR

...view details