ಕರ್ನಾಟಕ

karnataka

ಮಂಗಳೂರು: ಕಸ್ಟಮ್ಸ್​ ಅಧಿಕಾರಿಗಳಿಂದ 2 ಕೋಟಿ ಮೌಲ್ಯದ ಚಿನ್ನ‌ ವಶ!

By

Published : Jan 20, 2023, 3:28 PM IST

ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್​ ಅಧಿಕಾರಿಗಳಿಂದ ಕಳೆದ 18 ದಿನದ ಅವಧಿಯಲ್ಲಿ ಒಟ್ಟು 2 ಕೋಟಿ ರೂ. ಮೌಲ್ಯದ ಅಕ್ರಮ ಚಿನ್ನ ಸಾಗಣೆ ಪತ್ತೆ - ದುಬೈ ಮತ್ತು ಅಬುಧಾಬಿಯಿಂದ ಬಂದ ಎಂಟು ಪುರುಷ ಪ್ರಯಾಣಿಕರಿಂದ ಅಕ್ರಮ ಚಿನ್ನ ವಶ.

Illegal gold seized from eight male passengers
ಕಸ್ಟಮ್ಸ್​ ಅಧಿಕಾರಿಗಳಿಂದ 2 ಕೋಟಿ ಮೌಲ್ಯದ ಚಿನ್ನ‌ ವಶ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ 18 ದಿನದ ಅವಧಿಯಲ್ಲಿ ಒಟ್ಟು 2 ಕೋಟಿ ರೂ. ಮೌಲ್ಯದ ಅಕ್ರಮ ಚಿನ್ನ ಸಾಗಣೆಯನ್ನು ಮಂಗಳೂರು ಕಸ್ಟಮ್ಸ್​ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳು ಜನವರಿ 1 ರಿಂದ ಜನವರಿ 18 ವರೆಗಿನ ಅವಧಿಯಲ್ಲಿ ದುಬೈ ಮತ್ತು ಅಬುಧಾಬಿಯಿಂದ ಬಂದ ಎಂಟು ಪುರುಷ ಪ್ರಯಾಣಿಕರಿಂದ ಅಕ್ರಮ ಚಿನ್ನ ವಶಪಡಿಸಿಕೊಂಡಿದ್ದಾರೆ.

ಕಳೆದ 18 ದಿನದ ಅವಧಿಯಲ್ಲಿ ರೂ.2,01,69.800/- ಮೌಲ್ಯದ 3,677.000 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಟ್ರಾಲಿ ಬ್ಯಾಗ್‌ನ ಬೀಡಿಂಗ್‌ನಲ್ಲಿ ಪ್ರಯಾಣಿಕ ಧರಿಸಿದ ಡಬಲ್ ಲೇಯರ್ಡ್ ವೆಸ್ಟ್ (ಬನಿಯನ್) ಒಳಗೆ ಪೇಸ್ಟ್ ರೂಪದಲ್ಲಿ, ಬಾಯಿಯ ಕುಳಿಯಲ್ಲಿ ಮತ್ತು ಗುದನಾಳದಲ್ಲಿ ವಿವಿಧ ವಿಧಾನಗಳ ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು.

ಕಸ್ಟಮ್ ಅಧಿಕಾರಿಗಳಿಂದ ವಿಮಾನ ನಿಲ್ದಾಣದಲ್ಲಿ ಅಕ್ರಮ ಸಾಗಣೆ ಬಗ್ಗೆ ಹೆಚ್ಚಿನ ತನಿಖೆ: ಇನ್ನು ದುಬೈನಿಂದ ಆಗಮಿಸಿದ ಓರ್ವ ಪುರುಷ ಪ್ರಯಾಣಿಕನಿಂದ ರೂ.3,20,265/- ಮೌಲ್ಯದ ಸಿಗರೇಟ್ ಮತ್ತು ಇ-ನಿಕೋಟಿನ್ ದ್ರವಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅವರು ತಮ್ಮ ಬ್ಯಾಗ್ ನಲ್ಲಿ ಅವುಗಳನ್ನ ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ್ದರು. ಸದ್ಯ ಕಾರ್ಯಾಚರಣೆ ಚುರುಕುಗೊಳಿಸಿರುವ ಮಂಗಳೂರು ಕಸ್ಟಮ್ ಅಧಿಕಾರಿಗಳಿಂದ ವಿಮಾನ ನಿಲ್ದಾಣದಲ್ಲಿ ಅಕ್ರಮ ಸಾಗಣೆ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಮುಂಬೈನಲ್ಲಿ ಡಿಆರ್​ಇ ಅಧಿಕಾರಿಗಳಿಂದ 8.23 ಕೆಜಿ ಅಕ್ರಮ ಚಿನ್ನ ವಶ: ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲೂ ಇಂತಹುದ್ದೇ ಘಟನೆ ನಡೆದಿತ್ತು. ಆರೋಪಿಗಳ ಹೆಡೆ ಮುರಿಕಟ್ಟಲು ಅಧಿಕಾರಿಗಳು ಸರ್ಕಾರಗಳು ಅದೆಷ್ಟು ಭದ್ರತೆ, ಕಣ್ಗಾವಲನ್ನು ಹೆಚ್ಚಿಸಿದ್ದರು. ಪೊಲೀಸರು ಎಷ್ಟೇ ವ್ಯವಸ್ಥೆ ಮಾಡಿದರೂ ಕಳ್ಳರು ಅದೆಲ್ಲದರಿಗಿಂತ ಒಂದು ಹೆಜ್ಜೆ ಮಂದೆಯೇ ಇರುತ್ತಾರೆ. ಹೌದು ಇದಕ್ಕೆ ಉದಾಹರಣೆಯಂತೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್​ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಬ್ಬರು ಒಳ ಉಡುಪಿನಲ್ಲಿ ಚಿನ್ನ ಬಚ್ಚಿಟ್ಟು ಅಕ್ರಮವಾಗಿ ಸಾಗಿಸಲು ಪ್ರಯತ್ನಿಸುತ್ತಿದ್ದರು. ಇದರ ಮಾಹಿತಿ ದೊರೆತ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್(ಡಿಆರ್​ಐ) ಅಧಿಕಾರಿಗಳು ಆ ಇಬ್ಬರು ಪ್ರಯಾಣಿಕರನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಚಿನ್ನವನ್ನು ದ್ರವರೂಪದಲ್ಲಿ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೆಚ್ಚಿದ ಕಣ್ಗಾವಲು: ಹೆಚ್ಚುತ್ತಿರುವ ಕಳ್ಳಸಾಗಣೆ ಹಿನ್ನೆಲೆಯಲ್ಲಿ ಕಳೆದ ಡಿಸೆಂಬರ್​​ನಲ್ಲಿ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಕಳ್ಳಸಾಗಣೆ ನಿರ್ವಹಣೆಗೆ ವಿಶೇಷ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ವಿಶೇಷ ಬಾಂಬ್ ಪತ್ತೆ ಮತ್ತು ವಿಲೇವಾರಿ ಸ್ಕ್ವಾಡ್ ಉಪಕರಣಗಳನ್ನು ಸಿಐಎಸ್‌ಎಫ್‌ನ ಏರ್‌ಪೋರ್ಟ್ ಸೆಕ್ಯುರಿಟಿ ಗ್ರೂಪ್‌ಗೆ (ಎಎಸ್‌ಜಿ) ಹಸ್ತಾಂತರಿಸಲಾಗಿತ್ತು.

ವಿಮಾನ ನಿಲ್ದಾಣದಲ್ಲಿ ಸ್ಫೋಟಕಗಳನ್ನು ಒಳಗೊಂಡಿರುವ ವ್ಯಕ್ತಿಗಳು ಪ್ರವೇಶಿಸಿದರೆ ವಿಮಾನ ನಿಲ್ದಾಣದ ಭದ್ರತೆ ಕಾರ್ಯ ಮಾಡುತ್ತಿರುವ ASG ಸಿಬ್ಬಂದಿಗೆ ಈ ಅತ್ಯಾಧುನಿಕ ಉಪಕರಣಗಳು ಸಹಾಯ ಮಾಡಲಿವೆ. ಡಿಸೆಂಬರ್ 7 ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (BCAS) ಪ್ರಾದೇಶಿಕ ನಿರ್ದೇಶಕ ರಾಜೀವ್ ಕುಮಾರ್ ರೈ ಉಪಕರಣಗಳನ್ನು ಲೋಕಾರ್ಪಣೆ ಮಾಡಿದ್ದರು.

ಇದನ್ನೂ ಓದಿ:ಪಿಎಸ್ಐ ನೇಮಕಾತಿ ಅಕ್ರಮ: ಕಿಂಗ್‌ಪಿನ್‌ ಆರ್.ಡಿ.ಪಾಟೀಲ್‌ ವಿರುದ್ದ ಹೊಸ ಪ್ರಕರಣ ದಾಖಲು

ABOUT THE AUTHOR

...view details