ಕರ್ನಾಟಕ

karnataka

ಮುಳ್ಳಯ್ಯನಗಿರಿಯ ತಪ್ಪಲಿನ ಮೀಸಲು ಅರಣ್ಯದಿಂದ 12 ಸಾವಿರ ಎಕರೆ ಕೈಬಿಟ್ಟಿತಾ ಸರ್ಕಾರ..? ಪರಿಸರವಾದಿಗಳ ಆತಂಕ

By ETV Bharat Karnataka Team

Published : Oct 17, 2023, 7:49 PM IST

Updated : Oct 17, 2023, 10:11 PM IST

ಮುಳ್ಳಯ್ಯನಗಿರಿಯ ಅರಣ್ಯ ಪ್ರದೇಶವೇ ಒತ್ತುವರಿಯಾಗಿದೆ. ಈಗಲೇ ಮುಳ್ಳಯ್ಯನಗಿರಿಯನ್ನು ಉಳಿಸದಿದ್ದರೆ ಮುಂದಿನ ದಿನಗಳಲ್ಲಿ ಒತ್ತುವರಿದಾರರಿಂದ ಅರಣ್ಯಕ್ಕೆ ಉಳಿಗಾಲವಿರಲ್ಲ ಎಂಬುದು ಪರಿಸರವಾದಿಗಳ ಆತಂಕವಾಗಿದೆ.

ಮುಳ್ಳಯ್ಯನಗಿರಿ
ಮುಳ್ಳಯ್ಯನಗಿರಿ

ಚಿಕ್ಕಮಗಳೂರು : ಮುಳ್ಳಯ್ಯನಗಿರಿ ಉಳಿವಿಗೆ ಸರ್ಕಾರವೇ 18 ಸಾವಿರ ಎಕರೆಯನ್ನ ಮೀಸಲು ಅರಣ್ಯ ಎಂದು ಘೋಷಿಸಲು ವರದಿ ಸಲ್ಲಿಸಿದೆ. ಆದರೀಗ, ಆ 18 ಸಾವಿರ ಎಕರೆಯಲ್ಲಿ 12 ಸಾವಿರ ಎಕರೆ ಕೈಬಿಟ್ಟು ಕೇವಲ ನಾಲ್ಕು ಸಾವಿರ ಎಕರೆಯನ್ನ ಮಾತ್ರ ಮೀಸಲು ಅರಣ್ಯದ ಪಟ್ಟಿಗೆ ಸೇರಿಸಲು ಸರ್ಕಾರ ಮುಂದಾಗಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿಯ ಈ ಸೌಂದರ್ಯವನ್ನ ಕಣ್ತುಂಬಿಕೊಳ್ಳದ ಕನ್ನಡಿಗರೇ ಇಲ್ಲ ಅನ್ಸತ್ತೆ. ಕಣ್ಣಿನ ದೃಷ್ಟಿ ಮುಗಿದರೂ ಮುಗಿಯದ ಈ ಸೌಂದರ್ಯಕ್ಕೆ ಆಯಸ್ಸು ಹೆಚ್ಚಿಲ್ಲ ಎಂಬ ಅನುಮಾನ ಈಗ ಮೂಡಿದೆ. ಏಕೆಂದರೆ, 2019ರಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆ ಸರ್ಕಾರಕ್ಕೆ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿರುವ ಮುಳ್ಳಯ್ಯನಗಿರಿ ತಪ್ಪಲಿನ ಸುಮಾರು 14 ಸಾವಿರ ಎಕರೆಯನ್ನ ಮುಳ್ಳಯ್ಯನಗಿರಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಬಳಿಕ ಅದು 18.284 ಎಕರೆಗೆ ಏರಿಕೆ ಆಗಿತ್ತು.

ಪರಿಸರವಾದಿ ವೀರೇಶ್ ಹಾಗೂ ಭರತ್​​ ಅವರು ಮಾತನಾಡಿದರು

ತದನಂತರ ಸಾರ್ವಜನಿಕ ಉದ್ದೇಶಗಳಿಗೆ 1,448 ಎಕರೆಯನ್ನ ಕೈಬಿಟ್ಟು 16,836 ಎಕರೆ ಪ್ರದೇಶವನ್ನ ಸಂರಕ್ಷಿತ ಪ್ರದೇಶ ಮಾಡಲು ವರದಿ ಸಲ್ಲಿಸಿತ್ತು. ಆದರೆ, ಈಗ ಪುನಃ ಆ ವರದಿ ಪರಿಷ್ಕರಣೆಗೊಂಡು ಮೊದಲ ಹಂತವಾಗಿ ಕೇವಲ 4,636 ಎಕರೆ ಪ್ರದೇಶವನ್ನಷ್ಟೇ ಸಂರಕ್ಷಿತ ಪ್ರದೇಶವನ್ನಾಗಿಸಲು ಸರ್ಕಾರ ಮುಂದಾಗಿದೆ. ಇದು ಕೆಲ ಪರಿಸರಪ್ರಿಯರು ಹಾಗೂ ಪರಿಸರವಾದಿಗಳ ಆಕ್ರೋಶಕ್ಕೂ ಕಾರಣವಾಗಿದೆ. ಮೊದಲ ಹಂತದ ಬಳಿಕ ಎರಡನೇ ಹಂತ ನಿಜಕ್ಕೂ ಆಗುತ್ತಾ ಅನ್ನೋದು ಪರಿಸರವಾದಿಗಳ ಆತಂಕ.

18,284 ಸಾವಿರ ಎಕರೆಯಿಂದ 16,836 ಎಕರೆಗೆ ಬಂದು ಬಳಿಕ 4 ಸಾವಿರ ಎಕರೆಗೆ ಇಳಿಕೆ ಆಗಲು ಕಾರಣ ಒತ್ತುವರಿದಾರರು ಎಂಬ ಮಾತು ಕೇಳಿ ಬಂದಿದೆ. ಈಗಾಗಲೇ ಮುಳ್ಳಯ್ಯನಗಿರಿಯಲ್ಲಿ ಬಹುತೇಕ ಭೂಮಿ ಒತ್ತುವರಿಯಾಗಿ, ಕಾಫಿ ತೋಟವಾಗಿದೆ. ಫಾರಂ 53, 54, 57ರ ಅಡಿ ಸಾವಿರಾರು ಜನ ಭೂಮಿಗಾಗಿ ಅರ್ಜಿ ಹಾಕಿದ್ದಾರೆ. ರಾಜಕಾರಣದ ಒತ್ತಡದಿಂದಲೇ ಸರ್ಕಾರ ಇಂದು 18 ಸಾವಿರದಿಂದ 4 ಸಾವಿರಕ್ಕೆ ಬಂದಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.

ಸರ್ಕಾರದ ಸುತ್ತೋಲೆ

ಸಾವಿರಾರು ವೈಶಿಷ್ಯಗಳನ್ನು ಹೊಂದಿರುವ ಅರಣ್ಯ:'ಮುಳ್ಳಯ್ಯನಗಿರಿ ದಟ್ಟ ಅರಣ್ಯದಲ್ಲಿ ಸಾವಿರಾರು ಪ್ರಾಣಿಗಳಿವೆ. ಹಲವು ನದಿಗಳ ಉಗಮ ಸ್ಥಾನವಾಗಿದೆ. ಹತ್ತಾರು ಕೆರೆಗಳಿಗೆ ನೀರಿನ ಮೂಲವಾಗಿದೆ. ಮುಳ್ಳಯ್ಯನಗಿರಿಯಲ್ಲಿ ಈಗಾಗಲೇ ಅರಣ್ಯವೇ ಒತ್ತುವರಿಯಾಗಿದೆ. ಈಗಲೇ ಮುಳ್ಳಯ್ಯನಗಿರಿಯನ್ನ ಉಳಿಸದಿದ್ದರೆ ಮುಂದಿನ ದಿನಗಳಲ್ಲಿ ಒತ್ತುವರಿದಾರರಿಂದ ಮುಳ್ಳಯ್ಯನಗಿರಿ ಪ್ರದೇಶಕ್ಕೆ ಉಳಿಗಾಲವಿರೋಲ್ಲ ಅನ್ನೋದು ಸ್ಥಳೀಯರು ಹಾಗೂ ಪರಿಸರವಾದಿಗಳ ಆತಂಕ. ಹಾಗಾಗಿ, ಈಗಲೇ ಮುಳ್ಳಯ್ಯಗಿರಿಗೊಂದು ಭದ್ರತೆ ಮಾಡದಿದ್ದರೆ ಮುಂದಿನ ಎಂಟತ್ತು ವರ್ಷಗಳಲ್ಲಿ ಮುಳ್ಳಯ್ಯನಗಿರಿ ತಪ್ಪಲಿನ ಪ್ರದೇಶ ಒತ್ತುವರಿ ಹಾಗೂ ತೋಟಗಳು ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ' ಎಂದು ಪರಿಸರವಾದಿ ಭರತ್ ತಿಳಿಸಿದ್ದಾರೆ.

ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಹಲವು ಗ್ರಾಮಗಳಿವೆ. ಆದರೆ, ಅಲ್ಲಿನ ಜನರಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಪರಿಸರ ಉಳಿಸಲು ಮುಂದಾಗಿದೆ. ಸರ್ಕಾರ ಮಾತ್ರ ಯಾವುದೋ ಮುಲಾಜು-ಒತ್ತಡಕ್ಕೆ ಸಿಲುಕಿ ಈ ರೀತಿ 18 ಸಾವಿರವಿದ್ದ ಅರಣ್ಯ ಪ್ರದೇಶವನ್ನು 4 ಸಾವಿರಕ್ಕೆ ಇಳಿಸಲು ಮುಂದಾಗಿದೆಯಾ ಎಂಬ ಅನುಮಾನ ಮೂಡಿದೆ. ಇರೋ ಮುಳ್ಳಯ್ಯನಗಿರಿಯನ್ನ ಉಳಿಸಿಕೊಂಡರೆ ಮುಂದಿನ ಪೀಳಿಗೆಗೂ ಉಳಿಯಲಿದೆ. ಸರ್ಕಾರ ಮುಲಾಜಿಗೋ ಅಥವಾ ಒತ್ತಡಕ್ಕೋ ಒಳಗಾಗಿ ಮುಳ್ಳಯ್ಯನಗಿರಿಯನ್ನ ಕಳೆದುಕೊಂಡರೆ ಎಷ್ಟು ಸಾವಿರ ಕೋಟಿಯನ್ನ ಹಾಕಿದರೂ ನೈಸರ್ಗಿಕ ಅರಣ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಪರಿಸರವಾದಿಗಳ ಅಳಲಾಗಿದೆ.

ಇದನ್ನೂ ಓದಿ:ಕಾಫಿನಾಡಿನ ಗಿರಿ ಭಾಗದ ಪ್ರವಾಸಿ ತಾಣಗಳಲ್ಲಿಲ್ಲ ಮೂಲಭೂತ ಸೌಲಭ್ಯ: ರಾಷ್ಟ್ರಪತಿಗೆ ಪತ್ರ ಬರೆದ ಮಹಿಳೆ

Last Updated : Oct 17, 2023, 10:11 PM IST

ABOUT THE AUTHOR

...view details