ಕರ್ನಾಟಕ

karnataka

ಚಿಕ್ಕಮಗಳೂರು ಜನತೆಗೆ ನಿಫಾ ವೈರಸ್ ಭೀತಿ.. ಬಾವಲಿಗಳ ಸ್ಥಳಾಂತರಕ್ಕೆ ಒತ್ತಾಯ

By

Published : Sep 15, 2021, 10:19 AM IST

chikmagalur people fear about nipah virus
ಚಿಕ್ಕಮಗಳೂರು ಜನತೆಗೆ ನಿಫಾ ಆತಂಕ ()

ಚಿಕ್ಕಮಗಳೂರಿನ ನಗರಸಭೆ ಆವರಣದಲ್ಲಿರುವ ಮರಗಳಲ್ಲಿ ಸಾವಿರಾರು ಬಾವಲಿಗಳು ಜೋತು ಬಿದ್ದಿವೆ. ಇದರಿಂದಾಗಿ ಜನರು ನಿಫಾ ವೈರಸ್​ ಆತಂಕಕ್ಕೆ ಒಳಗಾಗಿದ್ದಾರೆ.

ಚಿಕ್ಕಮಗಳೂರು: ಇಲ್ಲಿನ ಜಿಲ್ಲಾಡಳಿತ, ಎಸ್​​ಪಿ ಕಚೇರಿ, ಕೋರ್ಟ್, ನಗರಸಭೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಹಾಗೂ ರೋಗಿಗಳು ನಿಫಾ ಭಯಕ್ಕೆ ಬೆಚ್ಚಿ ಬಿದ್ದಿದ್ದಾರೆ. ಕಾಫಿನಾಡಲ್ಲಿ ಈ ವೈರಸ್‍ನಿಂದ ಸಮಸ್ಯೆಗೀಡಾಗಿರೋ ಪ್ರಕರಣಗಳಿಲ್ಲ. ಆದರೆ, ಜಿಲ್ಲಾ ಕೇಂದ್ರಸ್ಥಾನದ ಮರಗಳಲ್ಲಿ ತಲೆಕೆಳಗಾಗಿ ಜೋತು ಬಿದ್ದಿರೋ ಬಾವಲಿಗಳನ್ನ ಕಂಡು ಜನ ವಿಚಲಿತರಾಗಿದ್ದಾರೆ.

ಚಿಕ್ಕಮಗಳೂರು ಜನತೆಗೆ ನಿಫಾ ಆತಂಕ

ಇಲ್ಲಿನ ನಗರಸಭೆ ಆವರಣದಲ್ಲಿನ ನಾಲ್ಕೈದು ದಶಕದ ಮರಗಳಲ್ಲಿ ಜೋತು ಬಿದ್ದಿರೋ ಬಾವಲಿಗಳು ಒಂದಲ್ಲ, ಎರಡಲ್ಲ, ಸಾವಿರಾರು. ರಾಶಿ-ರಾಶಿ ಬಾವಲಿಗಳನ್ನ ಕಂಡು ಕಾಫಿನಾಡಿಗರು ಈ ಮರಗಳ ಕೆಳಗೆ ಆತಂಕದಲ್ಲೇ ಓಡಾಡ್ತಿದ್ದಾರೆ. ನಿಫಾ ವೈರಸ್‍ಗೆ ಈ ಬಾವಲಿಯೇ ಮೂಲ ಕಾರಣ ಎಂಬುದು ಜನರ ನಿದ್ದೆಗೆಡಿಸಿದೆ.

ಬಾವಲಿಗಳ ಸ್ಥಳಾಂತರಕ್ಕೆ ಜನರ ಒತ್ತಾಯ

ನಗರದ ಕೇಂದ್ರ ಬಿಂದುವಾಗಿರೋ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಎಸ್ಪಿ ಆಫೀಸ್, ಎಸ್​​ಪಿ-ಡಿಸಿ ಮನೆ, ನಗರಸಭೆ, ಕೋರ್ಟ್, ಆಸ್ಪತ್ರೆ, ಶಾಲೆ ಸೇರಿದಂತೆ ಇತರ ಸರ್ಕಾರಿ ಕಚೇರಿಗಳೂ ಇವೆ. ನಗರಸಭೆ ಆವರಣದಲ್ಲಿರೋ ಹತ್ತಾರು ವರ್ಷಗಳ ಮರಗಳಲ್ಲಿ ಲೆಕ್ಕವಿಲ್ಲದಷ್ಟು ಬಾವಲಿಗಳು ಬದುಕ್ತಿವೆ. ಈಗ ನಿಫಾ ಹೆಸರು ಕೇಳುತ್ತಿದ್ದಂತೆ ಆತಂಕಕ್ಕೀಡಾಗಿರೋ ಅಧಿಕಾರಿಗಳು-ಸಾರ್ವಜನಿಕರು ಬಾವಲಿಗಳ ಸ್ಥಳಾಂತರಕ್ಕೆ ಒತ್ತಾಯಿಸುತ್ತಿದ್ದಾರೆ.

ಡಿಸಿಯಿಂದ ಸೂಕ್ತ ಕ್ರಮದ ಭರವಸೆ

ಮುಗಿಲೆತ್ತರದ ಮರಗಳ ತುದಿಯಲ್ಲಿರೋ ಬಾವಲಿಗಳನ್ನ ಸಾಗಿಸೋದು ಅಷ್ಟು ಸುಲಭವೂ ಅಲ್ಲ. ಹಾಗಾಂತ ಸಾಯಿಸೋದಕ್ಕೂ ಆಗೋದಿಲ್ಲ. ಆದರೆ, ಜಿಲ್ಲಾಧಿಕಾರಿ ನಿಫಾ ವೈರಸ್ ಕರ್ನಾಟಕಕ್ಕೆ ಅಷ್ಟಾಗಿ ತಾಗಿಲ್ಲ. ನೇರವಾಗಿ ಕೇರಳದಿಂದ ಇಲ್ಲಿಗೆ ಬರುವವರು ಕಡಿಮೆ. ಸದ್ಯಕ್ಕೆ ನಮಗೆ ಆತಂಕ ಇಲ್ಲ. ಆದರೂ ನಿಫಾ ಬಗ್ಗೆ ನಿಗಾ ವಹಿಸುತ್ತೇವೆ, ಸೂಕ್ತ ಕ್ರಮಕೈಗೊಳ್ಳಲಿದ್ದೇವೆ ಅಂತಾರೆ.

ಸಾಲದ್ದಕ್ಕೆ ನಗರಸಭೆ ಆವರಣದಲ್ಲಿ ಬೃಹತ್ತಾದ ಪಾರ್ಕ್ ಕೂಡ ಇದೆ. ದಿನ ಸಾವಿರಾರು ಜನ ಓಡಾಡ್ತಾರೆ. ಮಕ್ಕಳು ಆಟವಾಡ್ತಾರೆ. ಹಿರಿಯರು ವಿಶ್ರಾಂತಿ ಪಡೆಯುತ್ತಾರೆ. ಪಾರ್ಕ್ ಪಕ್ಕದಲ್ಲೇ ಸರ್ಕಾರಿ ಆಸ್ಪತ್ರೆಯೂ ಇದೆ. ಸರ್ಕಾರ ನೋಡೊಣ - ಮಾಡೋಣ ಅನ್ನೋದಕ್ಕಿಂತ ಮುಂಜಾಗೃತ ಕ್ರಮ ಕೈಗೊಳ್ಳೋದು ಸೂಕ್ತ. ಹಾಗಾಗಿ, ಸ್ಥಳೀಯರು ಕೂಡ ಸರ್ಕಾರ ಬಾವಲಿಗಳನ್ನ ಸ್ಥಳಾಂತರಿಸಬೇಕು ಅಥವಾ ಅವುಗಳ ಮಲ-ಮೂತ್ರ ಕೆಳಗೆ ಬೀಳದಂತೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಜಿಲ್ಲೆಗೆ ಕೇರಳ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಹಾಗಾಗಿ, ಸರ್ಕಾರ ಜಿಲ್ಲೆಗೆ ಬರುವ ಕೇರಳ ಪ್ರವಾಸಿಗರನ್ನ ಸಂಪೂರ್ಣ ನಿಷೇಧ ಮಾಡುವುದು ಒಳ್ಳೆಯದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಜಿಲ್ಲಾಡಳಿತ ನಾಳೆ - ನಾಡಿದ್ದು ಅಂತ ದಿನ ದೂಡೋ ಬದಲು, ಕೂಡಲೇ ಅವುಗಳನ್ನ ಸ್ಥಳಾಂತರಗೊಳಿಸಿ ನಮ್ಮ ಆತಂಕವನ್ನ ದೂರ ಮಾಡಬೇಕೆಂದು ಜನಸಾಮಾನ್ಯರು ಜಿಲ್ಲಾಡಳಿತಕ್ಕೆ ಮನವಿ ಮಾಡ್ಕೊಂಡಿದ್ದಾರೆ.

ಇದನ್ನೂ ಓದಿ:Watch.. ಮೇಲ್ಸೇತುವೆ ಮೇಲೆ ಯುವಕ - ಯುವತಿಗೆ ಕಾರು ಡಿಕ್ಕಿ: ಮೇಲ್ಸೇತುವೆಯಿಂದ ಕೆಳಗೆ ಬಿದ್ದು ಸಾವು

ABOUT THE AUTHOR

...view details