7 ವರ್ಷಗಳ ಬಳಿಕ ಲಕ್ಷದ್ವೀಪದಿಂದ ಮಂಗಳೂರಿಗೆ ಬಂದ ಹೈಸ್ಪೀಡ್ ಪ್ರವಾಸಿ ಪರೇಲಿ ಹಡಗು - High speed ship

author img

By ETV Bharat Karnataka Team

Published : May 3, 2024, 10:53 AM IST

Updated : May 3, 2024, 2:02 PM IST

HIGH SPEED CRUISE SHIP
ಸುರಕ್ಷಿತ ಸಂಚಾರದ ಬಳಿಕ ಹಡಗಿನಿಂದ ಇಳಿಯುತ್ತಿರುವ ಪ್ರಯಾಣಿಕರು (Etv Bharat kannada)

ಕೊರೋನಾ ನಂತರ ಸಂಪೂರ್ಣ ಸ್ಥಗಿತಗೊಂಡಿದ್ದ ಮಂಗಳೂರು - ಲಕ್ಷದ್ವೀಪದ ನಡುವಿನ ಹೈಸ್ಪೀಡ್​​ ಹಡಗು ಸಂಚಾರ ಮತ್ತೆ ಆರಂಭವಾಗಿದೆ.

ಪರೇಲಿ ಹಡಗು ಕುರಿತು ಪ್ರಯಾಣಿಕರ, ಮಾಜಿ ಶಾಸಕರ ಅಭಿಪ್ರಾಯ (Etv Bharat kannada)

ಮಂಗಳೂರು: 7 ವರ್ಷದ ನಂತರ ಮತ್ತೆ ಮಂಗಳೂರು-ಲಕ್ಷದ್ವೀಪದ ನಡುವೆ ಹೈಸ್ಪೀಡ್​​ ಹಡಗು ಸಂಚಾರ ಆರಂಭವಾಗಿದೆ. ಲಕ್ಷದ್ವೀಪದಿಂದ ಗುರುವಾರ ಸಂಜೆ ಆಗಮಿಸಿದ ಪರೇಲಿ ಎಂಬ ಐಷಾರಾಮಿ ಹಡಗಿನಲ್ಲಿ ಆಗಮಿಸಿದ ಪ್ರಯಾಣಿಕರನ್ನು ನಗರದ ಹಳೆ ಬಂದರಿನಲ್ಲಿ ಸ್ವಾಗತಿಸಲಾಯಿತು. ಈ ಐಷಾರಾಮಿ ಹಡಗಿನಲ್ಲಿ 150 ಪ್ರಯಾಣಿಕರು ಸೇರಿದಂತೆ 8 ಮಂದಿ ಸಿಬ್ಬಂದಿ, ಓರ್ವ ಪೈಲಟ್, ಚೀಫ್ ಇಂಜಿನಿಯರ್, ಸಹಾಯಕ ಇಂಜಿನಿಯರ್‌ ಬಂದಿಳಿದಿದ್ದಾರೆ. ಮಾಜಿ ಶಾಸಕ ಜೆ.ಆರ್‌.ಲೋಬೊ, ಟಿ.ಕೆ. ಸುಧೀರ್ ಮತ್ತಿತರರು ಪ್ರಯಾಣಿಕರನ್ನು ಸ್ವಾಗತಿಸಿದರು. ಈ ಹಡಗು ಶನಿವಾರ ಬೆಳಗ್ಗೆ ಮತ್ತೆ ಲಕ್ಷದ್ವೀಪದತ್ತ ಪ್ರಯಾಣ ಬೆಳೆಸಲಿದೆ.

Luxury ship Pareli
ಐಷಾರಾಮಿ ಹಡಗು ಪರೇಲಿ (Etv Bharat kannada)

7 ವರ್ಷದ ಬಳಿಕ ಹೈಸ್ಪೀಡ್ ಹಡಗು ಲಕ್ಷದ್ವೀಪದಿಂದ ಆಗಮಿಸಿದ್ದು, ಇದರಿಂದ ಮತ್ತೆ ಮಂಗಳೂರು ಹಾಗೂ ಲಕ್ಷದ್ವೀಪದ ನಡುವಿನ ಬಾಂಧವ್ಯ ಬೆಸೆಯುವ ಆಶಾದಾಯಕ ಬೆಳವಣಿಗೆ ಆದಂತಾಗಿದೆ.

ಸಾಮಾನ್ಯ ಹಡಗು ಲಕ್ಷದ್ವೀಪದಿಂದ ಮಂಗಳೂರು ತಲುಪಲು ಸರಾಸರಿ 13 ತಾಸುಗಳು ಅವಧಿ ಅವಶ್ಯಕ. ಆದರೆ, ಪರೇಲಿ ಎಂಬ ಈ ಹೈಸ್ಪೀಡ್ ಹಡಗು ಏಳು ತಾಸಿನಲ್ಲಿ ಮಂಗಳೂರು ತಲುಪಿದೆ. ಗುರುವಾರ ಬೆಳಗ್ಗೆ 8 ಗಂಟೆಗೆ ಲಕ್ಷದ್ವೀಪದ ಕ್ಲಿಂಟನ್​​ನಿಂದ ಹೊರಟ ಹಡಗು ಸಂಜೆ 5 ಗಂಟೆಯ ವೇಳೆಗೆ ಬಂದರಿಗೆ ಬಂದು ತಲುಪಿದೆ. ಪ್ರತಿ ಪ್ರಯಾಣಿಕರಿಗೆ 450 ರೂ. ಪ್ರಯಾಣ ದರ ಇತ್ತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.

2020ರ ಬಳಿಕ ಲಕ್ಷದ್ವೀಪದಿಂದ ಮಂಗಳೂರಿಗೆ ಪ್ರಯಾಣಿಕರ ಹಡಗು ಸಂಚಾರ ಸ್ಥಗಿತಗೊಂಡಿತ್ತು. ಆ ಬಳಿಕ ಇಲ್ಲಿನ ಹಡಗು ಕೇರಳದ ಕೊಚ್ಚಿ, ಕಲ್ಲಿಕೋಟೆಯತ್ತ ಸಂಚರಿಸುತ್ತಿತ್ತು. ಅಲ್ಲಿಂದ ರೈಲಿನಲ್ಲಿ ಮಂಗಳೂರು ತಲುಪಬೇಕಾಗಿತ್ತು. ಲಕ್ಷದ್ವೀಪದಿಂದ ಜನತೆ ಶಿಕ್ಷಣ, ವೈದ್ಯಕೀಯ ಸೇವೆ ಉದ್ಯೋಗ, ಸಂಬಂಧಿಕರಲ್ಲಿಗೆ ಸೇರಿದಂತೆ ಇನ್ನಿತರ ಕಾರಣಗಳಿಂದ ಮಂಗಳೂರಿಗೆ ಪ್ರಯಾಣಿಕರು ಆಗಮಿಸಿದ್ದಾರೆ.

ಕೇರಳದ ಮಾಜಿ ಸಂಸದ ಹಮದುಲ್ಲಾ ಸಯ್ಯದ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್, ಸ್ಪೀಕರ್ ಯು.ಟಿ.ಖಾದರ್ ಇವರೆಲ್ಲರ ಪ್ರಯತ್ನದಿಂದ ಈ ಸೇವೆ ಪುನಾರಂಭ ಸಾಧ್ಯವಾಗಿದೆ. ಕೋಲ್ಕತ್ತಾಗೆ ಹೋಗುವ ಹಡಗನ್ನು ಮಂಗಳೂರು ಮಾರ್ಗವಾಗಿ ಬರುವಂತೆ ಮಾಡಲಾಗಿದೆ. ಈ ಜಲಮಾರ್ಗ ಸೇವೆಯಿಂದ ಸ್ಥಳೀಯ ವ್ಯಾಪಾರ, ವಹಿವಾಟು ವೃದ್ಧಿಗೊಳ್ಳಲಿದೆ.

ಪ್ರಯಾಣಿಕೆ‌ ಜಮೀಲಾ ಮಾತನಾಡಿ, ನಾನು ಮಂಗಳೂರಿನವಳಾಗಿದ್ದು, ಕೊಚ್ಚಿಯಿಂದ ಲಕ್ಷದ್ವೀಪಕ್ಕೆ ತೆರಳಿದ್ದೆ. ಅಲ್ಲಿಂದ ಮಂಗಳೂರಿಗೆ ಬರಲು ನೇರ ಹಡಗು ಪ್ರಯಾಣ ಸಿಕ್ಕಿದ್ದು ಖುಷಿಯಾಯಿತು ಎಂದರು. ಪ್ರಯಾಣಿಕ ನಸೀಬ್ ಖಾನ್ ಮಾತನಾಡಿ, ಲಕ್ಷದ್ವೀಪದಿಂದ‌ ಚಿಕಿತ್ಸೆಗಾಗಿ ಮಂಗಳೂರಿಗೆ ಬಂದಿದ್ದೇನೆ. ಕಡಿಮೆ ಅವಧಿಯಲ್ಲಿ ಬಂದು ತಲುಪಿದ್ದು ಖುಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮಂಗಳೂರು ದಕ್ಷಿಣ ಮಾಜಿ ಶಾಸಕ ಜೆ ಆರ್ ಲೋಬೋ ಮಾತನಾಡಿ, 'ಮಂಗಳೂರಿಗೆ ಇದು ಸಂತಸದ ಸುದ್ದಿ. 7 ವರ್ಷಗಳ ನಂತರ ಈ ಹಡಗು ಆರಂಭವಾಗಿದೆ. ಕರ್ನಾಟಕದ ಉನ್ನತ‌ಮಟ್ಟದ ಸಮಿತಿಯನ್ನು ಕರೆದುಕೊಂಡು ಹೋಗಿ ಲಕ್ಷದ್ವೀಪಕ್ಕೆ ಭೇಟಿ ಮಾಡಿ ಈ ಸಂಪರ್ಕ ವ್ಯವಸ್ಥೆ ಮಾಡುವಂತೆ ಗಮನ ಸೆಳೆದಿದ್ದೆ' ಎಂದರು.

ಇದನ್ನೂ ಓದಿ: ಝೀರೋ ಬ್ಯಾಕ್ಟೀರಿಯ ಸಂಸ್ಕರಿಸಿದ ನೀರು: ಜಲಮಂಡಳಿಯಿಂದ ವಿಪ್ರೋ ಕಂಪನಿಗೆ ಸರಬರಾಜು - Zero bacteria water

Last Updated :May 3, 2024, 2:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.