ಕರ್ನಾಟಕ

karnataka

ವಿಜಯನಗರ ವೈಭವದ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಿದೆ: ಶಶಿಕಲಾ ಜೊಲ್ಲೆ

By

Published : Jan 30, 2023, 7:30 AM IST

Updated : Jan 30, 2023, 8:33 AM IST

ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಕಳೆದ ಮೂರು ದಿನಗಳಿಂದ ಆಯೋಜಿಸಲಾಗಿದ್ದ ಹಂಪಿ ಉತ್ಸವ- 2023ಕ್ಕೆ ಭಾನುವಾರ ಸಂಭ್ರಮದ ತೆರೆಬಿತ್ತು.

Hampi Festival
ಹಂಪಿ ಉತ್ಸವ

ಹಂಪಿ ಉತ್ಸವಕ್ಕೆ ತೆರೆ

ವಿಜಯನಗರ :ವಿಜಯನಗರ ಜಿಲ್ಲೆ ಘೋಷಣೆಯಾದ ನಂತರ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ಹಂಪಿ ಉತ್ಸವಕ್ಕೆ ಭಾನುವಾರ ತೆರೆ ಎಳೆಯಲಾಯಿತು. ವಿಜಯನಗರದ ಗತವೈಭವವನ್ನು ನೆನಪಿಸುವಂತೆ ಅದ್ದೂರಿ, ವೈವಿಧ್ಯಮಯವಾಗಿ ಉತ್ಸವ ನಡೆದಿದೆ. ಜನವರಿ 27 ರಿಂದ 29 ರವರೆಗೆ ಮೂರು ದಿನಗಳ ಕಾಲ ಹಂಪಿಯಲ್ಲಿ ವೈಭವ ಕಳೆಗಟ್ಟಿತ್ತು. ಗಾಯತ್ರಿ ಪೀಠ ವೇದಿಕೆ, ಬಸವಣ್ಣ ವೇದಿಕೆ, ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆ ಹಾಗೂ ಸಾಸಿವೆಕಾಳು ಗಣಪ ವೇದಿಕೆ ಸೇರಿದಂತೆ ಒಟ್ಟು ನಾಲ್ಕು ವೇದಿಕೆಗಳಲ್ಲಿ ಏಕಕಾಲಕ್ಕೆ ಪರಂಪರೆಯ ಬೆಳಕಿನಲ್ಲಿ ಸಂಸ್ಕೃತಿಯ ಸೊಬಗು ಅನಾವರಣವಾಯಿತು.

ಹಂಪಿ ಉತ್ಸವದಲ್ಲಿ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶ ಸೇರಿದಂತೆ ವಿದೇಶಿ ಪ್ರವಾಸಿಗರೂ ಅತ್ಯುತ್ಸಾಹದಿಂದ ಪಾಲ್ಗೊಂಡರು. ವಿಜಯನಗರ ವಸಂತ ವೈಭವ, ಸಾಹಸ ಕ್ರೀಡೆಗಳು, ಜಲ ಕ್ರೀಡೆಗಳು, ಸಾಮ್ರಾಜ್ಯದ ಕುರಿತು ಧ್ವನಿ ಮತ್ತು ಬೆಳಕು ಪ್ರದರ್ಶನವೂ ಸೇರಿದಂತೆ ವಿವಿಧ ವಿಶೇಷ ಕಾರ್ಯಕ್ರಮಗಳು ನಡೆದವು. ಕೊನೆಯ ದಿನ ಗಾಯಕ ವಿಜಯ್‌ ಪ್ರಕಾಶ್‌ ಮತ್ತು ಬಾಲಿವುಡ್ ಗಾಯಕ ಕೈಲಾಶ್ ಖೇರ್ ಮತ್ತು ತಂಡ ಕನ್ನಡ, ಹಿಂದಿ, ಚಿತ್ರಗೀತೆಗಳನ್ನು ಒಂದು ಗಂಟೆಗೂ ಹೆಚ್ಚು ಕಾಲ ಹಾಡಿ ಜನರನ್ನು ರಂಜಿಸಿದರು.

ಮುಜರಾಯಿ, ಹಜ್, ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾ ಸಾಹೇಬ ಜೊಲ್ಲೆ ಮಾತನಾಡಿ, "ವಿಜಯನಗರ ಸಾಮ್ರಾಜ್ಯದ ವೈಭವದ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಹಂಪಿ ಉತ್ಸವ ಯಶಸ್ವಿಯಾಗಿದೆ" ಎಂದರು. ಭಾನುವಾರ ಗಾಯಿತ್ರಿ ವೇದಿಕೆಯಲ್ಲಿ ಜರುಗಿದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

"ಅದ್ಧೂರಿ ಹಂಪಿ ಉತ್ಸವ ಆಯೋಜನೆಗೆ ಸರ್ಕಾರ ಶ್ರಮಿಸಿದೆ. ನೆಲ, ಜಲ, ನಮ್ಮ ದೇಶದ ಸಂಸ್ಕೃತಿ, ಭಾಷೆ, ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಮೂಲಕ ರಾಷ್ಟ್ರಪ್ರೇಮ ಮೂಡಿಸಲು ಉತ್ಸವ ಸಹಕಾರಿಯಾಗಿದೆ. ನಮ್ಮ ಪರಂಪರೆ ಮರೆಯಬಾರದು" ಎಂದರು.

"ವಿಜಯನಗರ ಸಾಮ್ರಾಜ್ಯದ ಮಾರುಕಟ್ಟೆಯಲ್ಲಿ ಮುತ್ತು, ರತ್ನ, ವಜ್ರ, ವೈಢೂರ್ಯಗಳನ್ನು ಮಾರಾಟ ಮಾಡಲಾಗುತ್ತಿತ್ತು. ಅಂದಿನ ರಾಜರು ದೂರದೃಷ್ಟಿಯಿಂದ ಹಂಪಿಯಲ್ಲಿ ವ್ಯಾಪಾರ, ವಾಣಿಜ್ಯ ಚಟುವಟಿಕೆಗಳಿಗೆ ಒತ್ತು ನೀಡಿದ್ದರು. ರಾಜರು ನಾಡಿನ ರಕ್ಷಣೆಗಾಗಿ ಹೋರಾಟ ನಡೆಸಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಈ ಇತಿಹಾಸವನ್ನು ಮಕ್ಕಳಿಗೆ ಹೇಳಿಕೊಡಬೇಕು" ಎಂದು ಹೇಳಿದರು.

ಸಚಿವ ಆನಂದ್ ಸಿಂಗ್ ಮಾತನಾಡಿ, "ವಿಜಯನಗರದ ಹೆಸರು ಕೇಳಿದೊಡನೆ ರೋಮಾಂಚನ ಆಗುತ್ತದೆ. ಜಿಲ್ಲೆಗೆ ಈಗ ಶಕ್ತಿ ಬಂದಿದೆ. ಮುಂದೆ ಅದ್ಭುತ ಭವಿಷ್ಯವಿದೆ" ಎಂದರು. "ಹಂಪಿ ಉತ್ಸವವನ್ನು ಮೈಸೂರು ದಸರಾ ಉತ್ಸವ ನವರಾತ್ರಿ ಆದಮೇಲೆ ಆಚರಿಸಿದರೆ ಪ್ರವಾಸಿಗರಿಗೆ ಇಲ್ಲಿಗೆ ಬರಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಉತ್ಸವವನ್ನು ಯಾವಾಗ ಆಚರಿಸಿದರೆ ಸೂಕ್ತ ಎಂಬುದನ್ನು ತಜ್ಞರು ಮತ್ತು ಹಿರಿಯರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು" ಎಂದರು.

ಹೊಸಪೇಟೆ ನಗರಸಭೆ ಅಧ್ಯಕ್ಷೆ ಸುಂಕಮ್ಮ, ಕೃಷಿ ಇಲಾಖೆ ಸರ್ಕಾರ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಕಳಸದ್, ಹಂಪಿ ಗ್ರಾ.ಪಂ. ಅಧ್ಯಕ್ಷ ಬಿ.ಡಿ.ಹೇಮಗರಿ, ಹೊಸಪೇಟೆ ನಗರಸಭೆ ಉಪಾಧ್ಯಕ್ಷ ಎಲ್.ಎಸ್.ಆನಂದ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ತಾರೆಹಳ್ಳಿ ಜಂಬುನಾಥ, ಜಿಲ್ಲಾಧಿಕಾರಿ ವೆಂಕಟೇಶ್.ಟಿ. ಜಿ.ಪಂ.ಸಿಇಒ ಬೋಯರ್ ಹರ್ಷಲ್ ನಾರಾಯಣರಾವ್, ಅಪರ ಜಿಲ್ಲಾಧಿಕಾರಿ ಅನುರಾಧಾ ಸೇರಿದಂತೆ ಮತ್ತಿತರರು ಇದ್ದರು.

ಇದನ್ನೂ ಓದಿ :'ವಿಜಯನಗರ ವಸಂತ ವೈಭವ' ಕಲಾ ಪ್ರದರ್ಶನ: ತಾಯಿ ಭುವನೇಶ್ವರಿ ಹೊತ್ತ ವಾಹನ ಚಲಾಯಿಸಿದ ಆನಂದ್ ಸಿಂಗ್‌

Last Updated :Jan 30, 2023, 8:33 AM IST

ABOUT THE AUTHOR

...view details