ಕರ್ನಾಟಕ

karnataka

ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ರಮೇಶ್ ಜಾರಕಿಹೊಳಿ‌: ಫಡ್ನವಿಸ್ ನೀಡಿದ ಅಭಯವೇನು?

By

Published : Jun 22, 2021, 10:51 PM IST

ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಅವರೀಗ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಸಿಡಿ ಪ್ರಕರಣದಿಂದ ಪಾರಾಗಲು ಸಹಾಯ ಮಾಡುವಂತೆ ಕೋರಿ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್​ ಅವರನ್ನು ಭೇಟಿಯಾಗಿದ್ದ ಜಾರಕಿಹೊಳಿಗೆ ಫಡ್ನವೀಸ್,ತಮಗೆ ಪಕ್ಷದ ನಾಯಕರಿಂದ ಸಹಕಾರ ‌ಸಿಗಲಿದ್ದು, ರಾಜೀನಾಮೆ ‌ನಿರ್ಧಾರ ಬೇಡ ಎಂದು ಅಭಯ ನೀಡಿದ್ದಾರೆ ಎನ್ನಲಾಗಿದೆ.

ramesh
ramesh

ಬೆಳಗಾವಿ: ರಾಸಲೀಲೆ ‌ಸಿಡಿ ಜಾಲದಿಂದ ಪಾರಾಗಲು ಮುಂಬೈ ಯಾತ್ರೆ ಕೈಗೊಂಡಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಅವರೀಗ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ನಾಲ್ಕು ದಿನಗಳ ‌ಕಾಲ ಮುಂಬೈನಲ್ಲಿ ಬೀಡುಬಿಟ್ಟಿದ್ದ ‌ರಮೇಶ್ ಜಾರಕಿಹೊಳಿ‌ ಎರಡು ಸಲ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದರು.

ಸಿಡಿ ಪ್ರಕರಣದಲ್ಲಿ ರಾಜ್ಯದ ನಾಯಕರು ತೋರುತ್ತಿರುವ ನಿರ್ಲಕ್ಷ್ಯದ ಬಗ್ಗೆ ಫಡ್ನವಿಸ್ ಎದುರು ರಮೇಶ್ ಅಳಲು ತೋಡಿಕೊಂಡಿದ್ದರು. ಸಿಡಿ ಪ್ರಕರಣದಿಂದ ಪಾರಾಗಲು ಸಹಾಯ ಮಾಡಬೇಕೆಂದು ಅವರ ಬಳಿ ರಮೇಶ್ ಮನವಿ ಮಾಡಿದ್ದಾರೆ. ಫಡ್ನವಿಸ್ ಕೂಡ ರಮೇಶ್ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮೂಲಗಳು ಈಟಿವಿ ‌ಭಾರತಕ್ಕೆ ಖಚಿತಪಡಿಸಿವೆ.

ರಮೇಶ್​ ಜಾರಕಿಹೊಳಿಗೆ ಫಡ್ನವಿಸ್ ಅಭಯವೇನು?

ಮೈತ್ರಿ ಸರ್ಕಾರದ ಪತನದ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್​ನ ಅತೃಪ್ತ ಶಾಸಕರು ಮುಂಬೈನಲ್ಲಿ ತಂಗಿದ್ದರು. ಆಗ ದೇವೇಂದ್ರ ಫಡ್ನವಿಸ್ ಅವರು ಮಹಾರಾಷ್ಟ್ರ ಸಿಎಂ ಆಗಿದ್ದರು. ಅತೃಪ್ತ ಶಾಸಕರ ವಾಸ್ತವ್ಯಕ್ಕೆ ಫಡ್ನವಿಸ್ ಮುಂಬೈನಲ್ಲಿ ವ್ಯವಸ್ಥೆ ಕಲ್ಪಿಸಿದ್ದರು. ಅಲ್ಲದೇ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಅಸ್ತಿತ್ವದಲ್ಲಿ ಫಡ್ನವಿಸ್ ಪಾತ್ರವೂ ಮುಖ್ಯವಾಗಿತ್ತು. ಈ ಕಾರಣಕ್ಕೆ ರಮೇಶ್‌ ಉಪಚುನಾವಣೆಯಲ್ಲಿ ಗೆದ್ದು ಸಚಿವರಾದಾಗ ಮುಂಬೈ, ದೆಹಲಿಯಲ್ಲಿ ಫಡ್ನವಿಸ್ ಅವರನ್ನು ಪದೇ ಪದೆ ಭೇಟಿಯಾಗುತ್ತಿದ್ದರು.

ನಂತರ ಉಭಯ ನಾಯಕರ ನಡುವಿನ ಸ್ನೇಹವೂ ಉತ್ತಮವಾಗಿತ್ತು. ಸಿಡಿ ಪ್ರಕರಣದಲ್ಲಿ ರಾಜ್ಯ ನಾಯಕರು ಕೈಕೊಟ್ಟಾಗ ರಮೇಶ್ ತಕ್ಷಣವೇ ದೇವೇಂದ್ರ ಫಡ್ನವಿಸ್ ಮನೆ ಬಾಗಿಲು ತಟ್ಟಿದ್ದರು. ನಾಲ್ಕು ದಿನಗಳ ಮುಂಬೈ ಪ್ರವಾಸದಲ್ಲಿ ದೇವೇಂದ್ರ ಫಡ್ನವಿಸ್- ರಮೇಶ್ ಜಾರಕಿಹೊಳಿ‌ ಎರಡು ಸಲ ಭೇಟಿ ಆಗಿ ಚರ್ಚಿಸಿದ್ದಾರೆ. ಕರ್ನಾಟಕದಲ್ಲಿ ಸರ್ಕಾರದ ರಚನೆಯಲ್ಲಿ ತಮ್ಮ ಪಾತ್ರ ಮುಖ್ಯ. ತಮಗೆ ಪಕ್ಷದ ನಾಯಕರಿಂದ ಸಹಕಾರ ‌ಸಿಗಲಿದ್ದು, ರಾಜೀನಾಮೆ ‌ನಿರ್ಧಾರ ಬೇಡ ಎಂದು ಅಭಯ ನೀಡಿದ್ದಾರೆ ಎನ್ನಲಾಗಿದೆ.

ಜಾರಕಿಹೊಳಿ ಮುಂಬೈ ಯಾತ್ರೆ ಅಂತ್ಯ:

ನಾಲ್ಕು ದಿನಗಳ ರಮೇಶ್ ಜಾರಕಿಹೊಳಿ‌ ಅವರ ಮುಂಬೈ ಯಾತ್ರೆ ನಾಳೆ ಅಂತ್ಯಗೊಳ್ಳಲಿದೆ. ಮುಂಬೈನಿಂದ ರಸ್ತೆ ಮಾರ್ಗವಾಗಿ ರಮೇಶ್ ಜಾರಕಿಹೊಳಿ‌ ಬೆಳಗಾವಿಗೆ ಬರಲಿದ್ದಾರೆ. ಮುಂಬೈನಲ್ಲಿ ದೇವೇಂದ್ರ ಫಡ್ನವಿಸ್ ಜೊತೆಗೆ ನಡೆದ ಮಾತುಕತೆ ಬಗ್ಗೆ ಸಹೋದರ ಬಾಲಚಂದ್ರ ಜಾರಕಿಹೊಳಿ‌ ಜೊತೆಗೆ ರಮೇಶ್ ಜಾರಕಿಹೊಳಿ‌ ಚರ್ಚೆ ನಡೆಸಿ, ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚೆ ಯೋಜನೆ ರೂಪಿಸಲಿದ್ದಾರೆ. ಅಲ್ಲದೇ ನಾಡಿದ್ದು ರಮೇಶ್ ಜಾರಕಿಹೊಳಿ‌ ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿಯೂ ಇದೆ. ಆದರೆ ಈ ಬಗ್ಗೆ ಇನ್ನೂ ಖಚಿತವಾಗಿಲ್ಲ.

ಇದನ್ನೂ ಓದಿ:CD Case​​: ಯುವತಿ ಹೇಳಿಕೆ ರದ್ದು ಕೋರಿ ಪೋಷಕರು ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಹೈಕೋರ್ಟ್

ABOUT THE AUTHOR

...view details