ಕರ್ನಾಟಕ

karnataka

ಮೆಡಿಕಲ್ ಕಾಲೇಜುಗಳಿಗೆ ಏಕರೂಪ ಸಿ ಅಂಡ್ ಆರ್ ರೂಲ್ : ಸಚಿವ ಡಾ ಶರಣಪ್ರಕಾಶ್ ಪಾಟೀಲ್

By ETV Bharat Karnataka Team

Published : Dec 11, 2023, 4:34 PM IST

c-and-r-rule-for-medical-colleges-says-minister-dr-sharanprakash-patil
ಮೆಡಿಕಲ್ ಕಾಲೇಜುಗಳಿಗೆ ಏಕರೂಪ ಸಿ ಅಂಡ್ ಆರ್ ರೂಲ್ : ಸಚಿವ ಡಾ ಶರಣಪ್ರಕಾಶ್ ಪಾಟೀಲ್

ಸರ್ಕಾರಿ ವೈದ್ಯಕೀಯ ವಿಜ್ಞಾನ ಕಾಲೇಜುಗಳಲ್ಲಿ ಏಕರೂಪ ಸಿ ಅಂಡ್ ಆರ್ ರೂಲ್ ತರುವ ಪ್ರಕ್ರಿಯೆ ಆರಂಭವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಮೆಡಿಕಲ್ ಕಾಲೇಜುಗಳಿಗೆ ಏಕರೂಪ ಸಿ ಅಂಡ್ ಆರ್ ರೂಲ್ : ಸಚಿವ ಡಾ ಶರಣಪ್ರಕಾಶ್ ಪಾಟೀಲ್

ಬೆಂಗಳೂರು/ ಬೆಳಗಾವಿ : ರಾಜ್ಯದ ಎಲ್ಲ ಸ್ವಾಯತ್ತ ಸರ್ಕಾರಿ ವೈದ್ಯಕೀಯ ವಿಜ್ಞಾನ ಕಾಲೇಜುಗಳಲ್ಲಿ ಏಕರೂಪ ಸಿ ಅಂಡ್ ಆರ್ ರೂಲ್ ತರುವ ಪ್ರಕ್ರಿಯೆ ಆರಂಭಿಸಿದ್ದು, ಗ್ರೂಪ್ ಎಗೆ ಅನ್ವಯವಾಗುವಂತೆ ಏಕರೂಪ ಸಿ ಅಂಡ್ ಆರ್ ರೂಲ್ ಆರಂಭಿಸಲಾಗಿದೆ. ಗ್ರೂಪ್ ಬಿ, ಸಿ ಮತ್ತು ಡಿಗೆ ಸಂಬಂಧಿಸಿದಂತೆ ಕಾನೂನು ಮತ್ತು ಆರ್ಥಿಕ ಇಲಾಖೆ ಒಪ್ಪಿಗೆ ನಂತರ ಜಾರಿಗೊಳಿಸಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಮರಿತಿಬ್ಬೇಗೌಡ ಹಾಗೂ ಬಿಜೆಪಿ ಸದಸ್ಯ ಎಸ್.ವಿ ಸಂಕನೂರು ಪ್ರಶ್ನೆಗೆ ಉತ್ತರಿಸಿದ ಸಚಿವರು, ಸ್ವಾಯತ್ತ ಸರ್ಕಾರಿ ವೈದ್ಯಕೀಯ ವಿಜ್ಞಾನ ಕಾಲೇಜುಗಳಲ್ಲಿ ಸಿ ಅಂಡ್ ಆರ್ ಜಾರಿ ಮಾಡುವ ಬಗ್ಗೆ ನಾವು ಸಭೆ ಮಾಡಿದ್ದೇವೆ. ಬೋಧಕ, ಬೋಧಕೇತರ ಸಿಬ್ಬಂದಿ ನೇಮಕಾತಿ, ಜೇಷ್ಠತೆ, ಕಾಲಮಿತಿ ಪದೋನ್ನತಿ ಹಾಗೂ ಬಡ್ತಿ ಸಂಬಂಧ ಎನ್.ಎಂ.ಸಿ ನಿಯಮಗಳಿಗೆ ಪೂರಕವಾಗಿ ವೃಂದ ಮತ್ತು ನೇಮಕಾತಿ ನಿಯಮ ಸಂಬಂಧ ಕಾಮನ್ ಸಿ ಅಂಡ್ ಆರ್ ರೂಲ್ ರೂಪಿಸಲಾಗುತ್ತಿದೆ. ಈಗಾಗಲೇ ಗ್ರೂಪ್ ಎಗೆ ಸಂಬಂಧಿಸಿದಂತೆ ಪ್ರಕ್ರಿಯೆ ಮುಕ್ತಾಯ ಆಗಿದೆ. ಬಿ,ಸಿ,ಡಿ ಗೆ ಸಮಿತಿ ರಚಿಲಾಗಿದೆ ಎಂದು ಹೇಳಿದರು.

ಎಲ್ಲ ಸಂಸ್ಥೆಗಳಿಗೆ ಕಾಮನ್ ಸಭೆ ನಡೆಸಿ ಕಾಮನ್ ಸಿ ಅಂಡ್ ಆರ್ ರೂಲ್ ಮಾಡಲು ಮುಂದಾಗಿದ್ದೇವೆ. ಕಾನೂನು ಇಲಾಖೆ ಒಪ್ಪಿಗೆ ಪಡೆದು ಆರ್ಥಿಕ ಇಲಾಖೆಗೆ ಕಳಿಸಿದ್ದೇವೆ. ನಂತರ ಗ್ರೂಪ್ ಎ ಗೆ ಕಾಮನ್ ಬೈಲಾ ಅಳವಡಿಸಿಕೊಳ್ಳಲಿದ್ದೇವೆ. ಇನ್ನೆರಡು ತಿಂಗಳಿನಲ್ಲಿ ಗ್ರೂಪ್ ಎ ಕಾರ್ಯ ಆಗಲಿದೆ. ಬಿ.ಸಿ ಮತ್ತು ಡಿ ಕುರಿತು ರಚಿಸಲಾಗಿರುವ ಸಮಿತಿಯಿಂದ ವರದಿ ಪಡೆದು ಕೆಲವೊಂದು ಆಕ್ಷೇಪಣೆ ಕರೆಯಲಾಗಿದೆ. ಅದಕ್ಕೂ ಆರ್ಥಿಕ ಮತ್ತು ಕಾನೂನು ಇಲಾಖೆ ಸಮ್ಮತಿ ಪ್ರಕ್ರಿಯೆಯಲ್ಲಿವೆ. ಸಮ್ಮತಿ ನಂತರ ಅದರ ಸಿ ಅಂಡ್ ಆರ್ ರೂಲ್ ಕಾಮನ್ ಗೊಳಿಸಲಾಗುತ್ತದೆ ಎಂದರು.

ಹೊಸ ಸಿ ಅಂಡರ್ ಆರ್ ರೂಲ್​ನಲ್ಲಿ ರೊಟೇಷನ್ ಅಳವಡಿಸಿಕೊಳ್ಳಲಾಗಿದೆ. ಇಲಾಖಾ ವ್ಯಾಪ್ತಿಯಲ್ಲಿ ಬರುವ ಎಲ್ಲ ವೈದ್ಯಕೀಯ ಆಸ್ಪತ್ರೆಗಳಿಗೂ ಹೊಸದಾಗಿ ಕಾಮನ್ ಸಿ ಅಂಡ್ ಆರ್ ರೂಲ್ ಅನ್ವಯ ಮಾಡಲಾಗುತ್ತದೆ ಎಂದರು.

ಹಿಮೋಫಿಲಿಗೆ ಉಚಿತ ಚಿಕಿತ್ಸೆ :ಹುಟ್ಟಿನಿಂದಲೇ ಬರುವ ಹಿಮೋಫಿಲಿ ಎಂಬ ಕಾಯಿಲೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ವಿಕ್ಟೋರಿಯಾ ಮತ್ತು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿರುವ ಮೇಲ್ಮಟ್ಟದ ಚಿಕಿತ್ಸಾ ಸೌಲಭ್ಯ ವಿಸ್ತರಿಸುವ ಚಿಂತನೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರುದ್ರೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹುಟ್ಟಿನಿಂದಲೇ ಬರುವ ಹಿಮೋಫಿಲಿ ಎಂಬ ಕಾಯಿಲೆ, ರಕ್ತ ಸಂಬಂಧಿತ ಕಾಯಿಲೆಯಾಗಿದೆ. ಅನುವಂಶಿಕವಾಗಿ ಬರಲಿದೆ, ಇದಕ್ಕೆ ಯಾವುದೇ ರೀತಿಯ ವ್ಯಾಕ್ಸಿನ್ ಇಲ್ಲ. ನಮ್ಮ ಸಿಬ್ಬಂದಿಯಿಂದ ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಚಿಕಿತ್ಸೆ ಆರೈಕೆ ಬಗ್ಗೆ ತರಬೇತಿ ಕೊಡಿಸಲಾಗುತ್ತಿದೆ. ಈ ರೋಗದ ಪತ್ತೆಗೆ ಲ್ಯಾಬ್ ಗಳು ಬೇಕಿದೆ. ಎಲ್ಲಾ ಆಸ್ಪತ್ರೆಗಳಲ್ಲಿ ರೋಗ ಪತ್ತೆಗೆ ಬೇಕಾದ ಉಪಕರಣ ನೀಡಲು ಕ್ರಮ ವಹಿಸಲಾಗುತ್ತದೆ.

ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಉಚಿತವಾಗಿ ಎಲ್ಲ ಔಷಧ ಕೊಡಲಾಗುತ್ತಿದೆ. ವರ್ಷಕ್ಕೆ ನಮಗೆ 20-30 ಕೋಟಿ ವೆಚ್ಚವಾಗುತ್ತಿದೆ. ಈ ಚಿಕಿತ್ಸೆ ಬಹಳ ದುಬಾರಿ ಇದೆ. ನಮ್ಮ ಆಶಾ ಕಾರ್ಯಕರ್ತೆಯರು ಕೂಡ ಇದರ ಬಗ್ಗೆ ಜಾಗೃತಿ ವಹಿಸಿ ರೋಗಿಗಳ ಗುರುತಿಸಿ ಆಸ್ಪತ್ರೆಗೆ ಕರೆತರುವ ಕೆಲಸ ಮಾಡುತ್ತಿದ್ದಾರೆ. ವಿಕ್ಟೋರಿಯಾ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಮೇಲ್ಮಟ್ಟದ ಚಿಕಿತ್ಸಾ ವ್ಯವಸ್ಥೆ ಇದೆ. ಅದನ್ನು ವಿಸ್ತರಿಸಲು ಚಿಂತನೆ ನಡೆಸಲಾಗಿದೆ ಎಂದರು.

ಎಲ್ಲ ಆಯುಷ್ ಆಸ್ಪತ್ರೆಗಳಲ್ಲಿ ಬಯೋಮೆಟ್ರಿಕ್ : ರಾಜ್ಯದ ಎಲ್ಲಾ ಆಯುಷ್ ಆಸ್ಪತ್ರೆಗಳಲ್ಲಿ ಸಮರ್ಪಕ ಚಿಕಿತ್ಸೆ ಲಭ್ಯವಾಗಲು ಮತ್ತು ಸಿಬ್ಬಂದಿ ಅಲಭ್ಯತೆ ಸಮಸ್ಯೆ ತಪ್ಪಿಸಲು ಬಯೋಮೆಟ್ರಿಕ್ ವ್ಯವಸ್ಥೆ ಪರಿಚಯಿಸಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಪಿ.ಹೆಚ್ ಪೂಜಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಮಟ್ಟದ ಆಯುಷ್ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಇರಬೇಕಾದ ಚಿಕಿತ್ಸೆ ಮತ್ತು ನಮ್ಮ ಆಸ್ಪತ್ರೆಯಲ್ಲಿ ಒಳರೋಗಿಗಳನ್ನು ದಾಖಲಿಸಿಕೊಂಡು ಆರೋಗ್ಯ ಸೇವೆ ನೀಡುವಲ್ಲಿ ಇಲಾಖೆ ಕಾರ್ಯಪ್ರವೃತ್ತವಾಗಿದೆ.

ಎಲ್ಲ ಒಳರೋಗಿಗಳಿಗೆ ಚಿಕಿತ್ಸೆಗಾಗಿ 80 ಆಸ್ಪತ್ರೆಗಳಿವೆ. ಅದರಲ್ಲಿ 55ರಲ್ಲಿ ಒಳರೋಗಿಗಳಿಗೆ ದಾಖಲಾತಿ ಇದೆ. ಉಳಿದ 25ರಲ್ಲಿ ಸಭೆ ನಡೆಸಿ 5ರಲ್ಲಿ ಆರಂಭಿಸಿದ್ದೇವೆ. 20ರಲ್ಲಿ ಇನ್ನೂ ಆರಂಭ ಆಗಬೇಕಾಗಿದೆ. ಇದಕ್ಕೆ ಸಿಬ್ಬಂದಿಗಳ ಅವಶ್ಯಕತೆ ಇದೆ. ಡಿಸಿ ಇತರ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಿದ್ದೇವೆ. ನೇಮಕಾತಿಗೆ ಸೂಚಿಸಿದ್ದೇವೆ. ಇನ್ನೆರಡು ತಿಂಗಳಿನಲ್ಲಿ ನೇಮಕಾತಿ ಆದಲ್ಲಿ ಆಯುಷ್ ಆಯುರ್ವೇದ ಚಿಕಿತ್ಸೆ ಕೊಡಲು ವ್ಯವಸ್ಥೆ ಮಾಡಲಾಗುತ್ತದೆ ಎಂದರು. ಆಸ್ಪತ್ರೆಗಳಲ್ಲಿ ಸಿಬ್ಬಂದಿ ಲಭ್ಯ ಇರುವುದಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ. ಹಾಗಾಗಿ ಬಯೋಮೆಟ್ರಿಕ್ ಅಳವಡಿಕೆ ಕುರಿತು ಪರಿಶೀಲನೆ ನಡೆಸಲಾಗುತ್ತದೆ. ಆದಷ್ಟು ಬೇಗ ಈ ಬಗ್ಗೆ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ :ಸ್ಪೀಕರ್ ಸ್ಥಾನದ ಕುರಿತು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ವಿಚಾರ: ವಿಧಾನಸಭೆಯಲ್ಲಿ ಕೋಲಾಹಲ

ABOUT THE AUTHOR

...view details