ಕರ್ನಾಟಕ

karnataka

ದೆಹಲಿ ತಲುಪಿದ ರಾಜ್ಯ ನಾಯಕರು: ನಡ್ಡಾ ನಿವಾಸದಲ್ಲಿ ಮಹತ್ವದ ಸಭೆ..!

By

Published : Apr 8, 2023, 6:37 AM IST

Updated : Apr 8, 2023, 7:50 AM IST

ವಿಧಾನಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚಿಸಲು ರಾಜ್ಯದ ಬಿಜೆಪಿ ನಾಯಕರು ದೆಹಲಿಗೆ ತೆರಳಿದ್ದಾರೆ.

J P Nadda and Basavaraja Bommai
ಜೆಪಿ ನಡ್ಡಾ ಹಾಗೂ ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಷಯ ಹೈಕಮಾಂಡ್ ಅಂಗಳ ತಲುಪಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನಿವಾಸದಲ್ಲಿ ರಾಜ್ಯ ಬಿಜೆಪಿ ನಾಯಕರ ಮಹತ್ವದ ಸಭೆ ನಡೆಯಿತು. ಅಭ್ಯರ್ಥಿಗಳ ಆಯ್ಕೆ ಕುರಿತ ಪೂರ್ವಭಾವಿ ಸಮಾಲೋಚನೆ ನಡೆಸಲಾಯಿತು.

ಕೇಂದ್ರ ಚುನಾವಣಾ ಸಮಿತಿ ಸಭೆ ಹಾಗೂ ಸಂಸದೀಯ ಮಂಡಳಿ ಸಭೆ ಹಿನ್ನೆಲೆಯಲ್ಲಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹಾಗು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ದೆಹಲಿಯಲ್ಲಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ರಾಜ್ಯದಿಂದ ಆಗಮಿಸಿದ ನಾಯಕರನ್ನು ನಿವಾಸಕ್ಕೆ ಕರೆಸಿಕೊಂಡು ಮಾತುಕತೆ ನಡೆಸಿದರು. ಬಿಎಸ್​ವೈ, ಸಿಎಂ, ಕಟೀಲ್ ಜೊತೆ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಸಭೆಯಲ್ಲಿ ಭಾಗಿಯಾಗಿದ್ದರು.

ಹಾಲಿ ಶಾಸಕರ ಕ್ಷೇತ್ರದಲ್ಲಿನ ಸ್ಥಿತಿಗತಿ, ಸೋತ ಕ್ಷೇತ್ರಗಳಲ್ಲಿ ಸಂಘಟನಾತ್ಮಕ ಚಟುವಟಿಕೆ ಯಾವ ರೀತಿ ಇದೆ ಎನ್ನುವ ಕುರಿತು ಸಮಾಲೋಚನೆ ನಡೆಸಲಾಯಿತು. ಟಿಕೆಟ್ ಆಕಾಂಕ್ಷಿಗಳು, ಸಮೀಕ್ಷಾ ವರದಿ, ಜಿಲ್ಲಾ ಸಮಿತಿಗಳ ಅಭಿಪ್ರಾಯದ ಕುರಿತು ನಡ್ಡಾ ಸಮಗ್ರವಾದ ಮಾಹಿತಿಯನ್ನು ರಾಜ್ಯ ನಾಯಕರಿಂದ ಪಡೆದುಕೊಂಡರು. ಟಿಕೆಟ್ ಆಯ್ಕೆ ಸಂಬಂಧ ಕೆಲ ಕ್ಷೇತ್ರಗಳ ಗೊಂದಲ, ಬಂಡಾಯ ಸಾಧ್ಯತೆ ಕುರಿತೂ ಅವಲೋಕನ ನಡೆಸಲಾಯಿತು.

ಇನ್ನು ಎರಡು ದಿನಗಳ ಕಾಲ ದೆಹಲಿಯಲ್ಲಿ ಪಕ್ಷದ ಚುನಾವಣಾ ಸಮಿತಿ ಸಭೆ ಮತ್ತು ಕೇಂದ್ರ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ. ಅದಕ್ಕಿಂತ ಮುನ್ನ ಪೂರ್ವಭಾವಿಯಾಗಿ ರಾಜ್ಯ ನಾಯಕರಿಂದ ನಡ್ಡಾ ಅಭಿಪ್ರಾಯ ಸಂಗ್ರಹ ಮಾಡಿದರು.

ಕಾಂಗ್ರೆಸ್​ ಹಾಗೂ ಜೆಡಿಎಸ್​ ಪಕ್ಷಗಳು ಈಗಾಗಲೇ ಬಹುತೇಕ ವಿಧಾನಸಭಾ ಕ್ಷೇತ್ರಗಳ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಬಿಜೆಪಿ ಇನ್ನೂ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ನಾಳೆ ಅಂದರೆ ಏಪ್ರಿಲ್​ 9ರಂದು ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮೊನ್ನೆಯಷ್ಟೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಆ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ದೆಹಲಿಯಲ್ಲಿ ಹೈಕಮಾಂಡ್​ ಜೊತೆ ರಾಜ್ಯದ ನಾಯಕರು ಮಾತುಕತೆ ನಡೆಸುತ್ತಿದ್ದಾರೆ.

ಕಾಂಗ್ರೆಸ್​ ಹಾಗೂ ಜೆಡಿಎಸ್​ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೆ ಕೆಲವು ಟಿಕೆಟ್​ ಆಕಾಂಕ್ಷಿಗಳು ಅಸಮಾಧಾನದಿಂದ ಪಕ್ಷ ತೊರೆದ ಸನ್ನಿವೇಶಗಳೂ ನಡೆದಿವೆ. ಅಂತಹ ಯಾವುದೇ ಸಮಸ್ಯೆಗಳು ಬರಬಾರದು ಎನ್ನುವ ನಿಟ್ಟಿನಲ್ಲಿ ಬಿಜೆಪಿ ಅಳೆದು ತೂಗಿ ಪಟ್ಟಿ ಸಿದ್ಧಪಡಿಸುತ್ತಿದೆ. ಕ್ಷೇತ್ರ ಮಟ್ಟದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ನಂತರ ಜಿಲ್ಲಾ ಮಟ್ಟದಲ್ಲಿ ಅಭಿಪ್ರಾಯ ಪಡೆಯಲಾಗಿತ್ತು. ಅಭ್ಯರ್ಥಿಗಳ ಪಟ್ಟಿ ರಾಜ್ಯದ ನಾಯಕರ ಕೈಗೆ ಬಂದ ಮೇಲೆ ನಗರದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್​ನಲ್ಲಿ ರಾಜ್ಯ ಚುನಾವಣಾ ಸಮಿತಿಯವರು ಚರ್ಚೆ ನಡೆಸಿದ್ದಾರೆ. ಬಳಿಕ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್​ಗೆ ಕಳುಹಿಸಿದೆ. ಅಲ್ಲಿಯೂ ಹೈಕಮಾಂಡ್​ ಜೊತೆ ರಾಜ್ಯದ ನಾಯಕರು ಚರ್ಚಿಸಿ, ಕೇಂದ್ರ ಚುನಾವಣಾ ಸಮಿತಿಯವರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಪಟ್ಟಿ ಬಿಡುಗಡೆ ಮಾಡಲಿದ್ದಾರೆ.

ಇದನ್ನೂ ಓದಿ:ಹೈಕಮಾಂಡ್ ತಲುಪಿದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ: ನಾಳೆಯಿಂದ 2 ದಿನ ದೆಹಲಿಯಲ್ಲಿ ಮಹತ್ವದ ಸಭೆ

Last Updated : Apr 8, 2023, 7:50 AM IST

ABOUT THE AUTHOR

...view details