ದಾವಣಗೆರೆ:ದೇಶ ಸೇವೆಯೇ ಈಶ ಸೇವೆ ಎಂದು ನಂಬಿ 12 ವರ್ಷಗಳಿಂದ ನಿಷ್ಠಾವಂತ ಯೋಧನಾಗಿ ದೇಶದ ಸೇವೆ ಮಾಡಿದ್ದ ಯೋಧ ನಾಗರಾಜ್ ಆತ್ಮಹತ್ಯೆ ಸುದ್ದಿ ಕುಟುಂಬಕ್ಕೆ ಬರಸಿಡಿಲಿನಂತೆ ಅಪ್ಪಳಿಸಿತ್ತು. ಇಡೀ ಕುಟುಂಬಕ್ಕೆ ಯೋಧನ ಸಾವಿನ ಸುದ್ದಿ ದಿಕ್ಕು ತೋಚದಂತೆ ಮಾಡಿತ್ತು. ಛಂಡಿಗಢದಿಂದ ನೇರವಾಗಿ ತನ್ನ ಊರಿಗೆ ಬರಲು ವಿಮಾನದ ಟಿಕೆಟ್ ಬುಕ್ ಮಾಡಿಸಿದ್ದ ಸಿಐಎಸ್ಎಫ್ ಯೋಧ ನಾಗರಾಜ್ ಸ್ವಗ್ರಾಮಕ್ಕೆ ಶವವಾಗಿ ಆಗಮಿಸಿದ್ದನ್ನು ಕಂಡ ಇಡೀ ಕುಟುಂಬದ ಆಕ್ರಂಧನ ಮುಗಿಲು ಮುಟ್ಟಿತ್ತು. ಇಂದು ಗ್ರಾಮಕ್ಕೆ ಆಗಮಿಸಿದ ಯೋಧ ನಾಗರಾಜ್ ಪಾರ್ಥಿವ ಶರೀರವನ್ನು ಗ್ರಾಮಸ್ಥರು ಇಡೀ ಹದಡಿ ಗ್ರಾಮದಲ್ಲಿ ಮೆರವಣಿಗೆ ಮಾಡುವ ಮೂಲಕ ಯೋಧ ನಾಗರಾಜ್ಗೆ ಕಣ್ಣೀರಿನ ವಿದಾಯ ಹೇಳಿದ್ರು.
ಚಿಕ್ಕ ವಯಸ್ಸಿಯನಲ್ಲೇ ತಂದೆಯನ್ನು ಕಳೆದುಕೊಂಡ ಬಳಿಕ ಇಡೀ ಕುಟುಂಬಕ್ಕೆ ಆಧಾರವಾಗಿದ್ದ ಯೋಧ ನಾಗರಾಜ್ ಅವರು ಬಾರದಲೋಕಕ್ಕೆ ಪಯಣ ಬೆಳೆಸಿದ್ದಾರೆ. ಬಡ ಕುಟುಂಬದಲ್ಲಿ ಬೆಳೆದು ಕಷ್ಟಪಟ್ಟು ಶಿಕ್ಷಣ ಪಡೆದಿದ್ದ ನಾಗರಾಜ್ ಬಳಿಕ ಸೇನೆಗೆ ಸೇರಿದ್ದರು. ಒಬ್ಬನೆ ಮಗನಾದ ಸಿಐಎಸ್ಎಫ್ (ಕೇಂದ್ರ ಕೈಗಾರಿಕಾ ಭದ್ರತಾಪಡೆ) ಯೋಧ ನಾಗರಾಜ್ ಕೆಲ ದಿನಗಳ ಹಿಂದೆ ತನ್ನ ಊರಿಗೆ ಬರಲು ವಿಮಾನದ ಟಿಕೆಟ್ ಬುಕ್ ಮಾಡಿಸಿದ್ದರು. ಇತ್ತೀಚಿಗೆ ಹರಿಯಾಣದ ಸೆಕ್ರೆಟರಿಯೇಟ್ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ದುರಂತ ಅಂದ್ರೆ ಊರಿಗೆ ಬರುವ ಮುನ್ನವೇ ಅದು ಏನಾಯಿತೊ ಗೊತ್ತಿಲ್ಲ, ಯೋಧ ನಾಗರಾಜ್ ಅವರು ಭಾನುವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದರು.
ಯೋಧನ ಈ ಆತ್ಮಹತ್ಯೆ ಸುದ್ದಿ ಇಡೀ ಹದಡಿ ಗ್ರಾಮಕ್ಕೆ ಹಾಗು ಕುಟುಂಬಸ್ಥರಿಗೆ ಬರಸಿಡಿಲಿನಂತೆ ಅಪ್ಪಳಿಸಿತ್ತು. ಯೋಧ ನಾಗರಾಜ್ ಕರ್ತವ್ಯಕ್ಕೆ ನಿಯೋಜನೆಗೊಂಡು 12 ವರ್ಷಗಳೇ ಉರುಳಿದ್ರು ಕೂಡಾ ಶ್ರದ್ಧಾಭಕ್ತಿಯಿಂದ ಕೆಲಸ ಮಾಡ್ತಿದ್ದರು. ಈ ವಿಚಾರವನ್ನು ಮೃತ ಯೋಧ ನಾಗರಾಜ್ ಸ್ನೇಹಿತರು ಸಾವಿನ ವಿಚಾರವನ್ನು ಕುಟುಂಬಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು.
ಇದನ್ನೂ ಓದಿ :ಮನೆ ಮನೆಗೆ ಡಿಡಿ ತಲುಪಿಸುತ್ತಿದ್ದ ಆರೋಪ: ಕೆಜಿಎಫ್ ಬಾಬು ವಿರುದ್ಧ ಎಫ್ಐಆರ್ ದಾಖಲು
ಯೋಧ ಆರ್. ಎಂ ನಾಗರಾಜ್ (32) ಅವರಿಗೆ ಪತ್ನಿ ಶಿಲ್ಪಾ ಮತ್ತು 2, 11 ತಿಂಗಳ ಇಬ್ಬರು ಹೆಣ್ಣು ಮಕ್ಕಳಿದ್ದು, ತಂದೆ ಮಾರುತೆಪ್ಪ ಹಾಗೂ ತಾಯಿ ಹನುಮಕ್ಕ ದಂಪತಿಯ ಏಕೈಕ ಪುತ್ರನಾಗಿದ್ದ ನಾಗರಾಜ್ 12 ವರ್ಷಗಳಿಂದ ಪಂಜಾಬ್, ಹರಿಯಾಣದಲ್ಲಿ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದರು.