ಕರ್ನಾಟಕ

karnataka

ಸರ್ಕಾರ ರಾಜ್ಯಪಾಲರಿಂದ ಸುಳ್ಳು ಹೇಳಿಸಿದೆ: ಸಿದ್ದರಾಮಯ್ಯ

By

Published : Feb 10, 2023, 9:51 PM IST

ಸರ್ಕಾರ ಧರ್ಮ-ಜಾತಿ ಸಂಘರ್ಷವನ್ನು ಬೆಳೆಸಿದ್ದು ಬಿಟ್ಟು ಬೇರೆ ಸಾಧನೆಗಳನ್ನು ಮಾಡಿಲ್ಲ ಎಂಬುದು ರಾಜ್ಯಪಾಲರ ಭಾಷಣದಿಂದ ಗೊತ್ತಾಗುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು.

siddaramaiah
ಸಿದ್ದರಾಮಯ್ಯ

ಬೆಂಗಳೂರು: ರಾಜ್ಯಪಾಲರ ಭಾಷಣಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 16 ಅಂಶಗಳ ವಿಸ್ತೃತ ವಿವರಣೆಯನ್ನು ರಾಜ್ಯಪಾಲರ ಭಾಷಣದ ಮೇಲೆ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಸರ್ಕಾರ ತನ್ನ ಭ್ರಷ್ಟಾಚಾರವನ್ನು ಮುಚ್ಚಿ ಹಾಕುವ ನಿಟ್ಟಿನಲ್ಲಿ ರಾಜ್ಯಪಾಲರ ಮೂಲಕ ಭಾಷಣ ಮಾಡಿಸಿದೆ ಎಂದು ಹೇಳದ್ದಾರೆ.

16 ಅಂಶಗಳು:

1. ಸರ್ಕಾರ ಯಾವ ಕೆಲಸವನ್ನೂ ಮಾಡದೇ ಬರೀ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬ ಜನರ ಆರೋಪವನ್ನು ಸಾಬೀತು ಮಾಡುವಂತಿದೆ.

2. ರಾಜ್ಯವು ಇಂದು ನಿರುದ್ಯೋಗ, ಬೆಲೆ ಏರಿಕೆ, ಭ್ರಷ್ಟಾಚಾರ, ಸೌಹಾರ್ದತೆಯ ಸಮಸ್ಯೆ, ಅಶಾಂತಿಯ ವಾತಾವರಣ, ಕೃಷಿ ಬಿಕ್ಕಟ್ಟು, ನೇಕಾರರ, ಮೀನುಗಾರರ ಹಾಗೂ ಸಣ್ಣ ಕೈಗಾರಿಕೆಗಳಿಗೆ ಒತ್ತು ಕೊಡದೆ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಸಮಸ್ಯೆಗಳನ್ನು ಗುರುತಿಸಿ ಹೋಗಲಾಡಿಸುವುದು ಮಾತ್ರ ನಿಜವಾದ ಸರ್ಕಾರ ಎಂದು ಕರೆಸಿಕೊಳ್ಳುತ್ತದೆ. ಆದರೆ, ಇಡಿ ರಾಜ್ಯಪಾಲರ 82 ಪ್ಯಾರಾಗಳ ಭಾಷಣದಲ್ಲಿ ಈ ಸಮಸ್ಯೆಗಳ ಕುರಿತು ಪ್ರಸ್ತಾಪವಾಗಿಲ್ಲ.

3. ರಾಜಸ್ಥಾನ ಬಿಟ್ಟರೆ ಕರ್ನಾಟಕ ಎರಡನೇ ಅತಿ ದೊಡ್ಡ ಒಣ ಭೂಮಿ ಇರುವ ರಾಜ್ಯ. ಈಗಾಗಲೇ ತೆಲಂಗಾಣದವರು ಕೃಷ್ಣ ಮೇಲ್ದಂಡೆ ಯೋಜನೆಗೆ ಸಂಬಂಧಪಟ್ಟಂತೆ ಕರ್ನಾಟಕಕ್ಕೆ ಹಂಚಿಕೆಯಾಗಿರುವ ನೀರನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದೆ. ಆದ್ದರಿಂದ ಆ ನೀರನ್ನು ತಮಗೆ ಹಂಚಿಕೆ ಮಾಡಿ ಎಂದು ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್‍ಗಳ ಮುಂದೆ ಹೋಗಿದ್ದಾರೆ. ರಾಜ್ಯದಲ್ಲಿ ಬಹಳ ಕಾಲದಿಂದ ಮಹದಾಯಿ, ಮೇಕೆದಾಟು, ಭದ್ರಾ-ಕೃಷ್ಣ ಮೇಲ್ದಂಡೆ, ತುಂಗಭದ್ರ ಅಣೆಕಟ್ಟುಗಳ ನಿರ್ಮಾಣ ಮುಂತಾದ ಅನೇಕ ನೀರಾವರಿ ಸಮಸ್ಯೆಗಳನ್ನು ಎದುರಿಸುತ್ತಿದೆ.

ಆದರೆ, ಸರ್ಕಾರ ನೀರಾವರಿ ವಿಚಾರದಲ್ಲಿ ಏನನ್ನೂ ಮಾಡಿಲ್ಲ ಎನ್ನುವುದನ್ನು ಒಪ್ಪಿಕೊಂಡಿದೆ. ಉತ್ತರ ಕರ್ನಾಟಕದಲ್ಲಿ ಯಥೇಚ್ಚವಾಗಿ ಜಲ ಸಂಪನ್ಮೂಲದ ಲಭ್ಯತೆ ಇದ್ದರೂ ಕೊಪ್ಪಳ, ಯಾದಗಿರಿ, ಬಳ್ಳಾರಿ ಜಿಲ್ಲೆಗಳಿಗೆ ಸಮರ್ಪಕವಾಗಿ ನೀರಾವರಿ ಸೌಲಭ್ಯವನ್ನು ಒದಗಿಸಲು ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯಪಾಲರ ಭಾಷಣದಲ್ಲಿ ನೀರಾವರಿಯ ಕುರಿತು ಅಥವಾ ಈ ಯೋಜನೆಗಳ ಕುರಿತು ಯಾವುದೇ ಸ್ಪಷ್ಟ ಪ್ರಸ್ತಾಪವಿಲ್ಲ.

4. ರಾಜ್ಯದ ಆರ್ಥಿಕತೆಯನ್ನು ನಿರ್ಮಾಣ ಮಾಡುವುದರಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಬಹಳ ದೊಡ್ಡದು. ರಾಜ್ಯದಲ್ಲಿ ಸಂಘಟಿತ ಮತ್ತು ಅಸಂಘಟಿತ ಎರಡೂ ವಲಯಗಳು ಸೇರಿದಂತೆ 2 ಕೋಟಿಗೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರ ನಯಾಪೈಸೆಯ ಕಾರ್ಯಕ್ರಮಗಳನ್ನು ರೂಪಿಸಿಲ್ಲ ಎನ್ನುವುದನ್ನು ಒಪ್ಪಿಕೊಂಡಿದೆ. ಈ ಕುರಿತು ರಾಜ್ಯಪಾಲರ ಭಾಷಣದಲ್ಲಿ ಒಂದೇ ಒಂದು ಮಾತು ಕೂಡ ಪ್ರಸ್ತಾಪವಾಗಿಲ್ಲ.

5. ಹಾಗೆಯೇ ರಾಜ್ಯದಲ್ಲಿ 88 ಲಕ್ಷ ಕೃಷಿ ಕುಟುಂಬಗಳಿವೆ. ಕೃಷಿಯನ್ನು ಲಾಭದಾಯಕ ಚಟುವಟಿಕೆಯನ್ನಾಗಿಸಲು ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ರಾಜ್ಯಪಾಲರ ಭಾಷಣದಲ್ಲಿ ಸ್ಪಷ್ಟವಾಗಿದೆ. ಕೃಷಿಕರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಹೋಗಲಾಡಿಸಲು ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದನ್ನು ಸರ್ಕಾರವೇ ಒಪ್ಪಿಕೊಂಡಂತಾಗಿದೆ.

6. ಅನೇಕ ವಿಚಾರಗಳಲ್ಲಿ ಉತ್ತರ ಕರ್ನಾಟಕವು ಹಿಂದೆ ಉಳಿದಿದೆ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಮತ್ತು ಕರ್ನಾಟಕದ ಅಭಿವೃದ್ಧಿಗೆ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಯಾವುದೇ ಉಲ್ಲೇಖಗಳಿಲ್ಲ. ಸರ್ಕಾರ ಯಾವುದೇ ಕಾರ್ಯಕ್ರಮಗಳನ್ನು ರೂಪಿಸಿಲ್ಲ ಎನ್ನುವುದು ಸ್ಪಷ್ಟವಾಗಿದೆ.

7. ರಾಜ್ಯವು ಇಂದು ಅನುಭವಿಸುತ್ತಿರುವ ದೊಡ್ಡ ಸಮಸ್ಯೆ ಭ್ರಷ್ಟಾಚಾರದ್ದು. ಈ ಸಮಸ್ಯೆಯನ್ನು ಹೋಗಲಾಡಿಸಲು ಸರ್ಕಾರ ಏನು ಕ್ರಮ ಕೈಗೊಂಡಿದೆ ಎನ್ನುವ ಬಗ್ಗೆ ಒಂದೂ ಮಾತು ಪ್ರಸ್ತಪವಿಲ್ಲ. ಆದ್ದರಿಂದ ಸರ್ಕಾರ ಭ್ರಷ್ಟಾಚಾರದ ಪರವಾಗಿರುವುದನ್ನು ರಾಜ್ಯಪಾಲರ ಭಾಷಣವು ದೃಢೀಕರಿಸುತ್ತಿದೆ.

8. ರಾಜ್ಯದ ಆದಾಯಕ್ಕೆ ಬೆಂಗಳೂರಿನ ಕೊಡುಗೆ ಶೇ70 ಕ್ಕಿಂತ ಹೆಚ್ಚು. ಆದರೆ, ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಪಟ್ಟಂತೆ ರಾಜ್ಯಪಾಲರ ಭಾಷಣದಲ್ಲಿ ಸ್ಪಷ್ಟವಾದ ಯಾವುದೇ ಕಾರ್ಯಕ್ರಮಗಳು ಇಲ್ಲ. ರಾಜ್ಯಪಾಲರು ತಮ್ಮ ಭಾಷಣದ ಪ್ಯಾರಾ ಸಂಖ್ಯೆ 39 ರಲ್ಲಿ ನಾಡಪ್ರಭು ಕೆಂಪೇಗೌಡ, ಅರ್ಕಾವತಿ, ಡಾ.ಶಿವರಾಮ ಕಾರಂತ ಬಡಾವಣೆಗಳ ಪ್ರಸ್ತಾಪ ಮಾಡಿದ್ದು, ಇವೆಲ್ಲವೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರಾರಂಭಗೊಂಡ ಬಡಾವಣೆಗಳಾಗಿವೆ.

9. ತುಮಕೂರು ರಸ್ತೆಯಿಂದ ಹೊಸೂರುವರೆಗಿನ 100 ಮೀಟರ್ ಅಗಲದ ಫೆರಿಫೆರಲ್ ರಸ್ತೆ ಮತ್ತು ಸಬ್ ಅರ್ಬನ್ ರೈಲು ಯೋಜನೆಯ ಮಾತನ್ನು ಕಳೆದ ನಾಲ್ಕು ವರ್ಷಗಳಿಂದ ನಾನು ಈ ಬಿಜೆಪಿಯವರ ಬಾಯಲ್ಲಿ ಕೇಳಿ ಕೇಳಿ ಸಾಕಾಗಿದೆ. ಯೋಜನೆ ಆರಂಭವೂ ಆಗುತ್ತಿಲ್ಲ. ಇವರು ಭಾಷಣವನ್ನೂ ನಿಲ್ಲಿಸುತ್ತಿಲ್ಲ. ಹೀಗಾಗಿ ರಾಜ್ಯಪಾಲರ ಬಾಯಲ್ಲಿ ಹಲವು ಸುಳ್ಳುಗಳನ್ನು ಹೇಳಿಸಲಾಗಿದೆ.

10. ಅಡಕೆ, ತೆಂಗು, ಮೆಣಸು ಬೆಳೆಯುವ ಕರಾವಳಿ ಮತ್ತು ಮಲೆನಾಡಿನ ರೈತರು ಹಾಗೂ ರಾಗಿ ಭತ್ತ, ಜೋಳ, ತೊಗರಿ ಮುಂತಾದವುಗಳನ್ನು ಬೆಳೆಯುವ ಉತ್ತರ ಕರ್ನಾಟಕ ಮತ್ತು ಬಯಲು ಸೀಮೆಯ ರೈತರಿಬ್ಬರೂ ಸಂಕಷ್ಟದಲ್ಲಿದ್ದಾರೆ. ಈ ಸಂಕಷ್ಟಗಳನ್ನು ಹೋಗಲಾಡಿಸುವ ಕುರಿತು ಯಾವುದೇ ಕಾರ್ಯಕ್ರಮಗಳನ್ನು ಕೊಟ್ಟಿಲ್ಲ ಎನ್ನುವುದನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ.

11. ನಮ್ಮ ಸರ್ಕಾರ ಇದ್ದಾಗ ಐದು ವರ್ಷದಲ್ಲಿ 15 ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಿರ್ಮಾಣ ಮಾಡಿದ್ದೆವು. ಆದರೆ, ಈ ಸರ್ಕಾರ ಕೇವಲ 4.93 ಲಕ್ಷ ಮನೆಗಳನ್ನು ಮಾತ್ರ ನಿರ್ಮಿಸಿದ್ದೇವೆ ಎಂದು ಹೇಳುವ ಮೂಲಕ ತಾನೊಂದು ವಿಫಲಗೊಂಡ ಸರ್ಕಾರ, ಜನರ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಸೋತ ಸರ್ಕಾರ ಎನ್ನುವುದನ್ನು ಸರ್ಕಾರ ಸ್ವತಃ ಒಪ್ಪಿಕೊಂಡಿದೆ.

12. ರಾಜ್ಯದಲ್ಲಿ ಪ್ರತಿ ವರ್ಷ 15-20 ಲಕ್ಷ ಯುವಕರು ದುಡಿಯುವ ವಯಸ್ಸಿಗೆ ಬರುತ್ತಾರೆ. ಆ ಯುವಕರಿಗೆ ಉದ್ಯೋಗ ನೀಡುವ ಒಂದೇ ಒಂದು ಕಾರ್ಯಕ್ರಮವನ್ನೂ ನೀಡಿಲ್ಲ ಎನ್ನುವುದನ್ನು ಈ ಸರ್ಕಾರ ಒಪ್ಪಿಕೊಂಡಿದೆ.

13. ರಾಜ್ಯಪಾಲರ ಬಾಯಲ್ಲಿ ಸರ್ಕಾರ ಹೇಳಿಸಿರುವ ಅನೇಕ ಕಾರ್ಯಕ್ರಮಗಳು ಕಾಂಗ್ರೆಸ್ ಸರ್ಕಾರದ ಅವಧಿಯದ್ದಾಗಿದೆ. ಕೌಶಲ್ಯ ಅಭಿವೃದ್ಧಿ, ಸೋಲಾರ್ ಮತ್ತು ವಿಂಡ್ ಎಂಬ ರಿನೀವಬಲ್ ಎನರ್ಜಿ ಯೋಜನೆ ನಮ್ಮ ಸರ್ಕಾರದ್ದು. ನಾವು ವಿದ್ಯುತ್ ಉತ್ಪಾದನೆಯಲ್ಲಿ ದಾಖಲೆ ನಿರ್ಮಿಸಿದ್ದೆವು. ಈ ಸರ್ಕಾರ ಅದನ್ನು ಮಾರಾಟ ಮಾಡಿ ಲಾಭ ಮಾಡುವುದರಲ್ಲೂ ಶಕ್ತವಾಗಿಲ್ಲ.

14. ತಾಂಡಾ, ಗೊಲ್ಲರ ಹಟ್ಟಿ ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದೂ ಸಹ ನಮ್ಮ ಸರ್ಕಾರದ ಯೋಜನೆ ಮತ್ತು ಸಾಧನೆ.

15. ಬೆಂಗಳೂರಿನ ಮೆಟ್ರೋ ನಮ್ಮ ಸರ್ಕಾರದ ಸಾಧನೆ. ರಾಜ್ಯದಲ್ಲಿ ಪ್ರಾರಂಭವಾದ ಜವಳಿ ಪಾರ್ಕ್‍ಗಳು, ವಿಮಾನ ನಿಲ್ದಾಣಗಳು ನಮ್ಮ ಸರ್ಕಾರದ ಸಾಧನೆಗಳು. ನಮ್ಮ ಸಾಧನೆಗಳನ್ನು ಬಿಜೆಪಿ ಸರ್ಕಾರ ತಮ್ಮ ಸಾಧನೆಗಳು ಎಂದು ಹೇಳಿಕೊಳ್ಳಲು ಹೊರಟಿರುವುದು ನಾಚಿಕೆಗೇಡು.

16. ಒಟ್ಟಾರೆ ರಾಜ್ಯಪಾಲರ ಭಾಷಣ ತೌಡು ಕುಟ್ಟಿದಂತೆ ಕಾಣಿಸುತ್ತಿದೆ. ಭತ್ತ ಕುಟ್ಟಿದರೆ ಅಕ್ಕಿ ಬರುತ್ತದೆ. ತೌಡು ಕುಟ್ಟಿದರೆ ಬರಿ ಉಬ್ಬಲು ಬರುತ್ತದೆ. ಸರ್ಕಾರ ಯಾವ ಸಾಧನೆಯನ್ನೂ ಮಾಡದಿರುವುದನ್ನು ಸ್ವತಃ ಒಪ್ಪಿಕೊಂಡಿರುವುದರಿಂದ ಸರ್ಕಾರವು ತಯಾರು ಮಾಡಿದ ಈ ಭಾಷಣವನ್ನು ನಾನು ಭೂಸಾ ಅಥವಾ ತೌಡು ಕುಟ್ಟುವ ಭಾಷಣ ಎಂದು ಕರೆಯ ಬಯಸುತ್ತೇನೆ.

ಬಿಜೆಪಿ ಸರ್ಕಾರವು ನಾಲ್ಕು ವರ್ಷಗಳಲ್ಲಿ ತಾನು ಏನನ್ನೂ ಮಾಡಿಲ್ಲ. ಭ್ರಷ್ಟಾಚಾರವನ್ನು ಬಿಟ್ಟು, ರಾಜ್ಯದ ಧರ್ಮ-ಜಾತಿ ಸಂಘರ್ಷವನ್ನು ಬೆಳೆಸಿದ್ದು ಬಿಟ್ಟು ಬೇರೆ ಸಾಧನೆಗಳನ್ನು ಮಾಡಿಲ್ಲ ಎನ್ನುವುದನ್ನು ರಾಜ್ಯಪಾಲರ ಭಾಷಣದಲ್ಲಿ ಒಪ್ಪಿಕೊಂಡಿದೆ. ಹೀಗೆ ತನ್ನ ವೈಫಲ್ಯವನ್ನು ಒಪ್ಪಿಕೊಂಡಿರುವುದಕ್ಕೆ ರಾಜ್ಯಪಾಲರನ್ನು ಮತ್ತು ಸರ್ಕಾರವನ್ನು ಅಭಿನಂದಿಸುತ್ತೇನೆ.

ಇದನ್ನೂ ಓದಿ:ದೇಶದಲ್ಲೇ ಕರ್ನಾಟಕ ಪ್ರಗತಿಪರ ರಾಜ್ಯ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ABOUT THE AUTHOR

...view details