ಕರ್ನಾಟಕ

karnataka

ಅಭಿವೃದ್ಧಿ ಕಾರ್ಯಸೂಚಿ ಆಧರಿಸಿ ಜನಾಶೀರ್ವಾದ ಬಯಸುತ್ತೇವೆ: ಕನ್ನಡದಲ್ಲಿ ಮೋದಿ ಟ್ವೀಟ್​

By

Published : Mar 30, 2023, 7:21 AM IST

ಅಭಿವೃದ್ಧಿ ಕಾರ್ಯಸೂಚಿ ಆಧರಿಸಿ ಜನಾಶೀರ್ವಾದ ಬಯಸುತ್ತೇವೆ ಎಂದು ಕರ್ನಾಟಕ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಪ್ರಧಾನಿ ಮೋದಿ ಕನ್ನಡದಲ್ಲಿ ಟ್ವೀಟ್​ ಮಾಡಿದ್ದಾರೆ.

PM Modi tweet in Kannada  ಅಭಿವೃದ್ಧಿ ಕಾರ್ಯಸೂಚಿ ಆಧರಿಸಿ ಜನಾಶೀರ್ವಾದ ಬಯಸುತ್ತೇವೆ  ಕನ್ನಡದಲ್ಲಿ ಪ್ರಧಾನಿ ಟ್ವೀಟ್​ Karnataka assembly election  Karnataka assembly election 2023  ಪ್ರಧಾನಿ ಮೋದಿ ಕನ್ನಡದಲ್ಲಿ ಟ್ವೀಟ್​ ಮಾಡಿ ಗಮನ  ರಾಜ್ಯದಲ್ಲಿ ನೀತಿ ಸಂಹಿತೆ ಜಾರಿ  ಕರ್ನಾಟಕದಲ್ಲಿ ಚುನಾವಣೆ ಘೋಷಣೆ
ಕನ್ನಡದಲ್ಲಿ ಪ್ರಧಾನಿ ಟ್ವೀಟ್​

ಬೆಂಗಳೂರು:ಕರ್ನಾಟಕ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಮಾರ್ಚ್​ 29 ರಿಂದಲೇ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಪಕ್ಷಗಳು ಮತದಾರರನ್ನು ಸೆಳೆಯಲು ನಾನಾ ರೀತಿಯಲ್ಲಿ ತಂತ್ರಗಳನ್ನು ರೂಪಿಸುತ್ತಿವೆ. ಇದರ ಮಧ್ಯೆ ನರೇಂದ್ರ ಪ್ರಧಾನಿ ಮೋದಿ ಅವರು ಕನ್ನಡದಲ್ಲಿ ಟ್ಟೀಟ್​ ಮಾಡಿ ಗಮನ ಸೆಳೆದಿದ್ದಾರೆ.

ಕರ್ನಾಟಕ ಅಭಿವೃದ್ಧಿಯ ಶಕ್ತಿಕೇಂದ್ರ. ಕಷ್ಟಪಟ್ಟು ದುಡಿಯುವ ರಾಜ್ಯದ ಜನರಿಗೆ ಧನ್ಯವಾದಗಳು. ಕರ್ನಾಟಕದ ಬೆಳವಣಿಗೆಯ ಪಯಣವನ್ನು ವೇಗಗೊಳಿಸಲು ಹಾಗು ಬಡವರು, ಸಮಾಜದಲ್ಲಿ ಮೂಲೆಗುಂಪಾದವರು, ದಮನಿತರನ್ನು ಸಶಕ್ತಗೊಳಿಸಲು ಬಿಜೆಪಿ ಬದ್ಧವಾಗಿದೆ. ನಾವು ನಮ್ಮ ಅಭಿವೃದ್ಧಿಯ ಕಾರ್ಯಸೂಚಿ ಆಧರಿಸಿ ಜನಾಶೀರ್ವಾದ ಬಯಸುತ್ತೇವೆ ಎಂದು ಮೋದಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಬಿಜೆಪಿ ಕರ್ನಾಟಕ ಟ್ವಿಟರ್​ ಹ್ಯಾಂಡಲ್​ ಟ್ವೀಟ್​ವೊಂದನ್ನು ಮಾಡಿತ್ತು. ರಾಜ್ಯದಲ್ಲಿ ಕಮಲ ಅರಳುವ ದಿನಾಂಕ ನಿಶ್ಚಯವಾಗಿದೆ. ಸ್ಪಷ್ಟ ಬಹುಮತದೊಂದಿಗೆ ಆಶೀರ್ವಾದ ಮಾಡಲು ಕನ್ನಡಿಗರು ಉತ್ಸುಕರಾಗಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರಲು ಇಂದಿನಿಂದ ಹಗಲಿರುಳು ಶ್ರಮಿಸಲು ಕಾರ್ಯಕರ್ತರ ಪಡೆ ಸಜ್ಜಾಗಿದೆ. ಕರ್ನಾಟಕ ಗೆಲ್ಲಲಿದೆ ಎಂದು ಹೇಳಿದೆ. ಈ ಟ್ವೀಟ್​ ಅನ್ನು ಮೋದಿ ರೀಟ್ವೀಟ್​ ಮಾಡಿ ಕರ್ನಾಟಕದ ಜನತೆಯ ಬಗ್ಗೆ ಮಾತನಾಡಿದ್ದಾರೆ.

ಮಾರ್ಚ್​ 28 ರಂದು ಪ್ರಧಾನಿ ಮೋದಿ ಅವರು ಕನ್ನಡದಲ್ಲಿ ಮತ್ತೊಂದು ಟ್ವೀಟ್​ ಮಾಡಿದ್ದರು. ಇದರಲ್ಲಿ, ಕಲಬುರಗಿಯಲ್ಲಿ ಪಿಎಂ ಮಿತ್ರ ಮೆಗಾ ಜವಳಿ ಪಾರ್ಕ್ ಸ್ಥಾಪನೆಗಾಗಿ ಕರ್ನಾಟಕದ ನನ್ನ ಸಹೋದರ ಸಹೋದರಿಯರಿಗೆ ಅಭಿನಂದನೆಗಳು. ಈ ಪಾರ್ಕ್ ರಾಜ್ಯದ ಶ್ರೀಮಂತ ಜವಳಿ ಪರಂಪರೆಯನ್ನು ಸಂಭ್ರಮಿಸುತ್ತದೆ. ರಾಜ್ಯದ ಜನರಿಗೆ ಉದ್ಯೋಗಾವಕಾಶ ಸೃಷ್ಟಿಸುತ್ತದೆ ಎಂದಿದ್ದರು.

ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆ ಚುನಾವಣೆ 2023ರ ದಿನಾಂಕವನ್ನು ನಿನ್ನೆ ಪ್ರಕಟಿಸಿದೆ. ಮೇ 10, 2023 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 13 ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾ ದಿನಾಂಕಗಳ ಘೋಷಣೆಯೊಂದಿಗೆ, ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಅಂದರೆ ರಾಜಕೀಯ ನಾಯಕರು, ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲರೂ ಈ ಸಂಹಿತೆಗೆ ಬದ್ಧರಾಗಿರುತ್ತಾರೆ.

ಇದನ್ನೂ ಓದಿ:Explained: ಚುನಾವಣಾ ನೀತಿ ಸಂಹಿತೆ ಎಂದರೇನು? ತಿಳಿಯಬೇಕಾದ 10 ನಿಯಮಗಳು

ಚುನಾವಣೆ ದಿನಾಂಕ ಘೋಷಣೆಯಾಗುವ ಮೂಲಕ ರಾಜ್ಯ ಚುನಾವಣಾ ಅಖಾಡ ಗರಿಗೆದರಿ ಸಜ್ಜಾಗಿದೆ. ಪಕ್ಷಗಳು ಮೈಕೊಡವಿಕೊಂಡು ಸ್ಪರ್ಧೆಗೆ ಸಿದ್ಧವಾಗುತ್ತಿದ್ದು, ಸದ್ಯ ವಿಧಾನಸಭೆಯ ಬಲಾಬಲ‌ ಹೀಗಿದೆ.

ಪಕ್ಷಗಳ ಬಲಾಬಲ: ರಾಜ್ಯದಲ್ಲಿ ಒಟ್ಟು 224 ವಿಧಾನಸಭಾ ಕ್ಷೇತ್ರಗಳಿವೆ. ಪಕ್ಷ ಅಧಿಕಾರಕ್ಕೇರಲು ಗಳಿಸಬೇಕಾದ ಶಾಸಕರ ಸಂಖ್ಯೆ -113. ಸದ್ಯ ಬಿಜೆಪಿ 118, ಕಾಂಗ್ರೆಸ್ 69, ಜೆಡಿಎಸ್ 32, ಬಿಎಸ್​ಪಿ 1, ಪಕ್ಷೇತರರು 2 ಹಾಗು 2 ಸ್ಥಾನಗಳು ತೆರವಾಗಿವೆ.

2018 ರ ಚುನಾವಣಾ ಫಲಿತಾಂಶ: 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಗಳಿಗೂ ಬಹುಮತ ಸಿಕ್ಕಿರಲಿಲ್ಲ. ಬಿಜೆಪಿ ಏಕಮಾತ್ರ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಮೇ 12, 2018ರಲ್ಲಿ ಒಟ್ಟು 222 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಎರಡು ಕ್ಷೇತ್ರಗಳಾದ ರಾಜರಾಜೇಶ್ವರಿ ನಗರ ಹಾಗೂ ಜಯನಗರ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿತ್ತು. ಮತಚೀಟಿ ಅಕ್ರಮ ಆರೋಪ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರ ಹಾಗೂ ಬಿಜೆಪಿ ಅಭ್ಯರ್ಥಿ ವಿಜಯಕುಮಾರ್ ನಿಧನದಿಂದ ಜಯನಗರ ಕ್ಷೇತ್ರದ ಚುನಾವಣೆ ಮೇ 28 ರಂದು ನಡೆದಿತ್ತು.

ಮೇ 15 ರಂದು ನಡೆದ ಮತ ಎಣಿಕೆಯಲ್ಲಿ 222 ಕ್ಷೇತ್ರಗಳ ಪೈಕಿ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 38, ಪಕ್ಷೇತರರು 2 ಸ್ಥಾನದಲ್ಲಿ ವಿಜಯ ಪತಾಕೆ ಹಾರಿಸಿದ್ದರು. ಆದರೆ ಯಾವ ಪಕ್ಷವೂ 113 ಮ್ಯಾಜಿಕ್ ನಂಬರ್ ತಲುಪುವಲ್ಲಿ ಸಫಲವಾಗಿರಲಿಲ್ಲ. ಮೇ 28 ರಂದು ಬಾಕಿ ಇದ್ದ ಎರಡು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಆ ಮೂಲಕ 2018 ರಲ್ಲಿ ಕಾಂಗ್ರೆಸ್ ಒಟ್ಟು 71 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು.

2018 ರ ಕಣದಲ್ಲಿ 2,622 ಅಭ್ಯರ್ಥಿಗಳಿಂದ ಸ್ಪರ್ಧೆ:ರಾಜ್ಯದ 224 ಕ್ಷೇತ್ರಗಳಲ್ಲಿ 36 ಎಸ್​ಸಿ ಮೀಸಲು ಕ್ಷೇತ್ರವಾಗಿದ್ದರೆ, 15 ಎಸ್​ಟಿ ಮೀಸಲು ಕ್ಷೇತ್ರವಾಗಿವೆ. 2018 ರ ಚುನಾವಣೆಯಲ್ಲಿ 2,622 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಈ ಪೈಕಿ 217 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ABOUT THE AUTHOR

...view details