ಕರ್ನಾಟಕ

karnataka

ಹೈಕಮಾಂಡ್‌ ಟಿಕೆಟ್‌ ನೀಡಿದರೆ ಚಾಮರಾಜನಗರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆ: ಎನ್​.ಮಹೇಶ್

By ETV Bharat Karnataka Team

Published : Dec 25, 2023, 9:54 PM IST

ಕೊಳ್ಳೇಗಾಲದ ಮಾಜಿ ಶಾಸಕ ಎನ್​.ಮಹೇಶ್ ಅವರು ಬಿಜೆಪಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ರಾಜ್ಯ ನಾಯಕರನ್ನು ಇಂದು ಭೇಟಿ ಮಾಡಿ ಮಾತುಕತೆ ನಡೆಸಿದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್
ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್

ಬೆಂಗಳೂರು: ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹಿರಿಯ ನಾಯಕ ಶ್ರೀನಿವಾಸ ಪ್ರಸಾದ್ ಪ್ರತಿನಿಧಿಸುವ ಚಾಮರಾಜನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ನಾನಲ್ಲ. ಆದರೆ ಪಕ್ಷದ ವರಿಷ್ಠರು ಟಿಕೆಟ್ ನೀಡಿದರೆ ಸ್ಪರ್ಧೆ ಮಾಡುತ್ತೇನೆ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ದ ಎಂದು ಮಾಜಿ ಸಚಿವ ಹಾಗು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ತಿಳಿಸಿದ್ದಾರೆ.

ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮಲ್ಲೇಶ್ವರದಲ್ಲಿರುವ ಬಿಜೆಪಿ ಕೇಂದ್ರ ಕಛೇರಿಯಲ್ಲಿ ಇಂದು ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿ ಮಾಡಿದ ಎನ್.ಮಹೇಶ್ ಪಕ್ಷ ಸಂಘಟನೆಯ ಬಗ್ಗೆ ಚರ್ಚಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಟೀಮ್​ ಬಿಜೆಪಿ ರಚನೆಯಾಗಿದೆ. ನನ್ನನ್ನು ಚಾಮರಾಜನಗರ ಭಾಗದಿಂದ ರಾಜ್ಯ ಉಪಾಧ್ಯಕ್ಷರಾಗಿ ನೇಮಿಸಿದ್ದಾರೆ. ಅದಕ್ಕಾಗಿ ರಾಜ್ಯಾಧ್ಯಕ್ಷರು, ರಾಜ್ಯ- ಕೇಂದ್ರದ ನಾಯಕರಿಗೆ ಜಿಲ್ಲೆಯ, ರಾಜ್ಯದ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಈ ಟೀಮ್​ ಬಿಜೆಪಿ, ಸಾಮಾಜಿಕ, ಭೌಗೋಳಿಕ, ಬಹಳ ವ್ಯವಸ್ಥಿತವಾಗಿ ರಚನೆಯಾಗಿದೆ. ಯಾವ ಗೊಂದಲವೂ ಇಲ್ಲ. 2024ರ ಲೋಕಸಭಾ ಚುನಾವಣೆಯನ್ನು ನಮ್ಮ ತಂಡ ಸಮರ್ಥವಾಗಿ ಎದುರಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಎನ್.ಮಹೇಶ್

ಈ ತಂಡಕ್ಕೆ ಇನ್ಯಾರನ್ನು ನೇಮಿಸಬೇಕೆಂಬ ವಿಷಯ ಸೂಕ್ತ ಸಮಯದಲ್ಲಿ ತೀರ್ಮಾನ ಆಗಲಿದೆ. ಚುನಾವಣೆ ವೇಳೆಗೆ ಗಟ್ಟಿಯಾದ ಟೀಮ್​ ಫೀಲ್ಡಿಗೆ ಇಳಿಯಲಿದೆ. ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತ ಕಲ್ಪನೆಗೆ, 2047ರವೇಳಗೆ ಭಾರತ ಅತ್ಯಂತ ಅಭಿವೃದ್ಧಿ ಹೊಂದಿದ ದೇಶ ಎನಿಸಬೇಕೆಂಬ ಸಂಕಲ್ಪಕ್ಕೆ ಪ್ರಥಮ ಹೆಜ್ಜೆಯಾಗಿ 2024ರ ಚುನಾವಣೆ ಬರಲಿದೆ ಎಂದು ಮಹೇಶ್ ವಿಶ್ಲೇಷಿಸಿದರು.

ಚುನಾವಣೆಯಲ್ಲಿ ಮೋದಿ ಟೀಮ್​ ಗೆಲ್ಲಿಸಿ ಮತ್ತೆ ಎನ್‍ಡಿಎ, ಬಿಜೆಪಿ ಸರಕಾರ ರಚನೆ ಆಗಬೇಕೆಂಬ ಸಂಕಲ್ಪ ನಮ್ಮದು. ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ಆದರೆ ನಾನೇನೂ ಆಕಾಂಕ್ಷಿ ಅಲ್ಲ. ಕೇಂದ್ರದ ವರಿಷ್ಠರು ತೀರ್ಮಾನ ಮಾಡಿದರೆ ಅವರ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಆದರೆ ಚಾಮರಾಜನಗರ ಲೋಕಸಭಾ ಕ್ಷೇತ್ರ ಶ್ರೀನಿವಾಸ ಪ್ರಸಾದ್ ಅವರು ಪ್ರತಿನಿಧಿಸುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಬಿಜೆಪಿ ಖಚಿತವಾಗಿ ಗೆಲ್ಲಲಿದೆ ಎಂದು ಅಭಿಪ್ರಾಯ ಹೇಳಿದರು.

ರಾಜ್ಯ ನಾಯಕರ ಜೊತೆ ಮಹೇಶ್ ಸಮಾಲೋಚನೆ:ಡಾಲರ್ಸ್ ಕಾಲೊನಿಯಲ್ಲಿರುವ ದವಳಗಿರಿ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಎನ್.ಮಹೇಶ್ ಪಕ್ಷ ಸಂಘಟನೆಯ ಬಗ್ಗೆ ಚರ್ಚಿಸಿದ್ದು, ಯಡಿಯೂರಪ್ಪ ಮಾರ್ಗದರ್ಶನ ಕೋರಿ ಸಲಹೆ ಪಡೆದುಕೊಂಡರು.

ಶ್ರೀನಿವಾಸ್ ಪ್ರಸಾದ್ ಮನೆಗೆ ಎನ್.ಮಹೇಶ್ ಭೇಟಿ

ನಂತರ ಮಾಜಿ ಕೇಂದ್ರ ಸಚಿವರು ಹಾಗು ಚಾಮರಾಜನಗರ ಲೋಕಸಭಾ ಸದಸ್ಯ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿ ಮಾಡಿದ ಮಹೇಶ್ ಪಕ್ಷ ಸಂಘಟನೆಯ ಬಗ್ಗೆ ಚರ್ಚಿಸಿದರು. ಕ್ಷೇತ್ರದಲ್ಲಿ ಈ ಬಾರಿ ಶ್ರೀನಿವಾಸ್ ಪ್ರಸಾದ್ ಕಣಕ್ಕಿಳಿಯದ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಇದರ ನಂತರ ಆರ್.ಟಿ.ನಗರಕ್ಕೆ ತೆರಳಿದ ಮಹೇಶ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದಾರೆ.

ಇದನ್ನೂ ಓದಿ:ಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ; ಬೆಲ್ಲದ್​ಗೆ ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಸ್ಥಾನ

ABOUT THE AUTHOR

...view details