ಕರ್ನಾಟಕ

karnataka

ವಿಧಾನಸಭೆಯಲ್ಲಿ ಎಸ್​ಸಿ, ಎಸ್​ಟಿ ಮೀಸಲಾತಿ ಹೆಚ್ಚಳ ಪ್ರತಿಪಕ್ಷ - ಆಡಳಿತ ಪಕ್ಷ ನಡುವೆ ಕ್ರೆಡಿಟ್ ವಾರ್!

By

Published : Feb 14, 2023, 8:08 PM IST

ಬಿಜೆಪಿ ಸರ್ಕಾರ ಮೂಗಿಗೆ ತುಪ್ಪ ಸವರಿದರೆ ವಾಸನೆ‌ ಬರುತ್ತೆ ಎಂದು ಹಣೆಗೆ ಹಾಕುವ ಕೆಲಸ ಮಾಡ್ತಿದ್ದಾರೆ - 9ನೇ ಶೆಡ್ಯೂಲ್ ತಿದ್ದುಪಡಿ ಮಾಡಿ ಕೇಂದ್ರದಲ್ಲಿ ಆದೇಶ ಮಾಡಿಸಿ - ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹ.

Credit war between the opposition and the ruling party
ವಿಧಾನಸಭೆಯಲ್ಲಿ ಎಸ್​ಸಿ, ಎಸ್​ಟಿ ಮೀಸಲಾತಿ ಹೆಚ್ಚಳ ಪ್ರತಿಪಕ್ಷ - ಆಡಳಿತ ಪಕ್ಷ ನಡುವೆ ಕ್ರೆಡಿಟ್ ವಾರ್!

ಬೆಂಗಳೂರು: ವಿಧಾನಸಭೆ ಎಸ್​ಸಿ, ಎಸ್​ಟಿ ಮೀಸಲಾತಿ ಹೆಚ್ಚಳ ವಿಚಾರ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳ ನಡುವೆ ಕ್ರೆಡಿಟ್ ವಾರ್​ಗೆ ಸಾಕ್ಷಿಯಾಯಿತು. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಮಾತನಾಡಿದ ಸಿದ್ದರಾಮಯ್ಯ, ಎಸ್​ಸಿ, ಎಸ್​ಟಿ ಮೀಸಲಾತಿ ಹೆಚ್ಚಳಕ್ಕೆ ಶೆಡ್ಯುಲ್ ಬದಲಾಗಬೇಕು. 9ನೇ ಶೆಡ್ಯುಲ್​ಗೆ ಸೇರಿಸಿ ತಿದ್ದುಪಡಿ ಮಾಡುವ ಅಗತ್ಯ ಇದೆ ಎಂದು ನಾವು ಹೇಳಿದ್ದೆವು. ಸ್ವಾಮಿಜಿಗಳು 205 ದಿನ ಧರಣಿ ಮಾಡಿದ ಮೇಲೆ ನೀವು ಮಾಡಿದ್ದು. ಆದರೆ ಶೆಡ್ಯುಲ್ ಬದಲಾವಣೆಗೆ ಕೇಂದ್ರಕ್ಕೆ ನೀವು ಶಿಫಾರಸು ಮಾಡಿಲ್ಲ ಅಂದ್ರೆ ಏನು?. ಈಗ ಏನೋ ತೀರ್ಮಾನ ಮಾಡಿದ್ರಂತೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಸದನದಲ್ಲಿ ಕ್ರೆಡಿಟ್ ವಾರ್ ಆರಂಭವಾಯಿತು. ಬಿಜೆಪಿ ಸರ್ಕಾರ ಮೂಗಿಗೆ ತುಪ್ಪ ಸವರಿದರೆ ವಾಸನೆ‌ ಬರುತ್ತೆ ಎಂದು ಹಣೆಗೆ ಹಾಕುವ ಕೆಲಸ ಮಾಡ್ತಿದ್ದಾರೆ. 9ನೇ ಶೆಡ್ಯೂಲ್ ತಿದ್ದುಪಡಿ ಮಾಡಿ ಕೇಂದ್ರದಲ್ಲಿ ಆದೇಶ ಮಾಡಿಸಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು. ಈ ವೇಳೆ ಎದ್ದು ನಿಂತ ಸಚಿವ ಆರ್.ಅಶೋಕ್, ನೀವು ಏನೇ ಹೇಳಿದರು ಅದರ ಕ್ರೆಡಿಟ್ ನಮಗೇ ಬರುವುದು. ನೀವು ಅಧಿಕಾರದಲ್ಲಿ ಇದ್ದಾಗ ನೆತ್ತಿಗೆ ತುಪ್ಪ ಸವರುವ ಕೆಲಸ ಮಾಡಿದ್ದಿರಿ ಎಂದು ತಿರುಗೇಟು ನೀಡಿದರು.

ನಿಮಗೆ ಕ್ರೆಡಿಟ್ ಸಿಕ್ಕಿಲ್ಲ. ಜನರಿಗೆ ಗೊತ್ತಾಗಿದೆ. ಅದು ಊರ್ಜಿತ ಆಗಿಲ್ಲ. ಸಮ್ಮಿಶ್ರ ಸರ್ಕಾರದ ಸಮಯದಲ್ಲಿ ನಾಗಮೋಹನ್ ದಾಸ್ ಆಯೋಗ ರಚನೆ ಮಾಡಿದ್ದು ಪ್ರಿಯಾಂಕಾ ಖರ್ಗೆ ಎಂದು ಸಿದ್ದರಾಮಯ್ಯ ತಿಳಿಸಿದರು. ಆಗ ಎದ್ದು ನಿಂತ ಜೆಡಿಎಸ್ ಶಾಸಕ ಸಾ.ರಾ.ಮಹೇಶ್, ಅದಕ್ಕೆ ಅನುಮೋದನೆ ನೀಡಿದ್ದು ಕುಮಾರಸ್ವಾಮಿ ಎಂದರು. ಸ್ವಾಮೀಜಿ 200 ದಿನಗಳಿಗೂ ಅಧಿಕ ಕಾಲ ಪ್ರತಿಭಟನೆ ಕೂತರು. ಬಳಿಕ ನಮ್ಮ ಶಾಸಕರು ಸದನದಲ್ಲಿ ಧರಣಿ ಮಾಡಿದರು. ನಿಗದಿತ ಸಮಯದಲ್ಲಿ ಮೀಸಲಾತಿ ಕೊಡಿ ಎಂದು ಒತ್ತಾಯ ಮಾಡಿದ್ದೆವು‌. ಇವತ್ತಿನವರೆಗೂ ನೀವು ಯಾವುದೇ ಕ್ರಮ ಕೈಗೊಂಡಿಲ್ಲ. ನೀವು ಇದ್ದಾಗ ಮಾಡಲಿಲ್ಲ ಎಂದರು.

ನಾನು ರಾಜೀನಾಮೆ ಕೊಡಲು ಸಿದ್ಧ:ಮೀಸಲಾತಿ ಚರ್ಚೆ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ರಾಜೀನಾಮೆ ಬಗ್ಗೆ ಪ್ರಸ್ತಾಪ ಮಾಡಿದರು. ಒಬಿಸಿಗೆ ದೊಡ್ಡ ಅನ್ಯಾಯ ಆಗಿದೆ. ಒಬಿಸಿ ಅಂದರೆ ಕುರುಬರು, ಈಡಿಗರು, ಬೆಸ್ತರು, ಗೊಲ್ಲರು, ಮಡಿವಾಳರು ಅಷ್ಟೇ ಅಲ್ಲ. ಒಬಿಸಿಗೆ ಒಕ್ಕಲಿಗರೂ, ಲಿಂಗಾಯತರೂ, ಇತರ ವರ್ಗದವರೂ ಸೇರ್ತಾರೆ ಎಂದರು.

ಬ್ರಾಹ್ಮಣರು, ವೈಶ್ಯರು, ನಗರ್ತರು, ಮೊದಲಿಯಾರ್ ಇವರು ಒಬಿಸಿಗೆ ಸೇರಲ್ಲ. ಮೀಸಲಾತಿ ಬಿಸಿಎಂ ಪ್ರವರ್ಗ ಎ, ಪ್ರವರ್ಗ 2ಎ, ಪ್ರವರ್ಗ 2ಬಿ, ಪ್ರವರ್ಗ 3ಎ, ಪ್ರವರ್ಗ 3ಬಿ ಇವರಿಗೆಲ್ಲ ಸಿಗುತ್ತದೆ. ಆದರೆ ಮಂಡಲ್ ಕಮೀಷನ್ ವರದಿಯಲ್ಲಿ ಈ ವರ್ಗಗಳ ಜತೆಗೆ ಗ್ರಾಮೀಣ ಒಕ್ಕಲಿಗರೂ ಸಹ ಒಬಿಸಿ ಪಟ್ಟಿಗೆ ಸೇರ್ತಾರೆ. ಬ್ರಾಹ್ಮಣರಿಗೆ, ನಗರ್ತರಿಗೆ, ಮೊದಲಿಯಾರ್ ರಿಗೂ ಈಗ 10ರಷ್ಟು ಮೀಸಲಾತಿ ಕೊಟ್ಟಿದ್ದಾರೆ. ಉಳಿದವರು ಯಾರು.? ಸುಮ್ನೆ ಹಿಂದುಳಿದವರಿಗೆ ಮೀಸಲಾತಿ ಕೊಟ್ಡಿದೀವಿ ಅಂತಿದೀರ ಎಂದು ಪ್ರಶ್ನಿಸಿದರು.

ಹಿಂದುಳಿದ ಜಾತಿಯವರಿಗೆ ಮೀಸಲಾತಿ ಕೊಟ್ಡಿದ್ದೇವೆ ಅಂದರೆ ಒಬಿಸಿ ಪಟ್ಟಿಯಲ್ಲಿ ಇರುವ ಎಲ್ಲರಿಗೂ ಅನ್ಯಾಯ ಮಾಡಿದ ಹಾಗೆ. ಕರ್ನಾಟಕ ಒಬಿಸಿ ಪಟ್ಟಿಯಡಿ 3ಎ ಪ್ರವರ್ಗದ ಒಕ್ಕಲಿಗರಿಗೆ ಮೀಸಲಾತಿಗೆ ನಗರದ ಒಕ್ಕಲಿಗರು ಬರ್ತಾರೆ, ಹಳ್ಳಿಯವರೂ ಬರ್ತಾರೆ. 3ಬಿ ನಲ್ಲಿ ಲಿಂಗಾಯತರಿಗೆ ನಗರದವರಿಗೂ ಮೀಸಲಾತಿ ಬರುತ್ತೆ, ಹಳ್ಳಿಯವರಿಗೂ ಬರುತ್ತೆ ಅಂದ ಸಿದ್ದರಾಮಯ್ಯ. ಆದರೆ ಮಂಡಲ್ ಕಮೀಷನ್ ನಲ್ಲಿ ಮಾತ್ರ ಗ್ರಾಮೀಣ ಒಕ್ಕಲಿಗರಿಗೆ ಮೀಸಲಾತಿ ಕೊಡಿ ಅಂತ ಇದೆ, ನಗರದ ಒಕ್ಕಲಿಗರಿಗೆ ಇಲ್ಲ. ಇಲ್ಲ ಅಂದರೆ ನಾನು ರಾಜೀನಾಮೆ ಕೊಟ್ಟು ಬಿಡುತ್ತೇನೆ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ಆಗ ಸಚಿವ ಆರ್.ಅಶೋಕ್, ಒಕ್ಕಲಿಗ ಸಮುದಾಯದ ವಕೀಲರು ಒಂದು ಮನವಿ ಕೊಟ್ರು. ಅದರಲ್ಲಿ ಶೇ10ರಷ್ಟು ಮೀಸಲಾತಿ ನಗರದ ಒಕ್ಕಲಿಗರಿಗೆ ಸಿಕ್ತಿಲ್ಲ, ನಮ್ಮನ್ನೂ ಸೇರಿಸಿ ಅಂತ ಹೇಳಿದ್ದಾರೆ, ಹಾಗಾಗಿ ನಾನು ಹೇಳಿದೆ ಎಂದು ಸ್ಪಷ್ಟಪಡಿಸಿದರು.

ನಿಮ್ಮದು ಜನಬೆಂಬಲದ ಸರ್ಕಾರ ಅಲ್ಲ:ರಾಜ್ಯದಲ್ಲಿ ಬಿಜೆಪಿಗೆ ಜನ ಯಾವಾಗಲೂ ಆಶೀರ್ವಾದ ಮಾಡಿಲ್ಲ? ಕೋಟಿಗಟ್ಟಲೇ ಹಣ ಕರ್ಚು ಮಾಡಿ ಆಪರೇಷನ್ ಕಮಲ ಮೂಲಕ‌ ಬಿಜೆಪಿ ಅಧಿಕಾರಕ್ಕೆ ಬಂದಿದೆ ಅಷ್ಟೇ. ಎರಡೂ‌ ಸಲವೂ ಬಿಜೆಪಿ ಅನೈತಿಕ ಸರ್ಕಾರ ರಚಿಸಿದೆ ಎಂದು ಸಿದ್ದರಾಮಯ್ಯ ಗುಡುಗಿದರು. 2008 ರಲ್ಲಿ, 2018 ರಲ್ಲಿ ಬಿಜೆಪಿಗೆ ಬಹುಮತ ಬರಲಿಲ್ಲ, ಅನೈತಿಕವಾಗಿ ಸರ್ಕಾರ ರಚಿಸಿದ್ದು. ಯಡಿಯೂರಪ್ಪ ಅವರಿಗೆ ಸರ್ಕಾರ ರಚಿಸಲು ಆಹ್ವಾನ ಕೊಟ್ಟರು. ಯಡಿಯೂರಪ್ಪ ಬಹುಮತ ಸಾಬೀತು ಮಾಡಕ್ಕಾಗಲಿಲ್ಲ. 2019 ರಲ್ಲಿ 17 ಜನ ಶಾಸಕರನ್ನು ಅನೈತಿಕವಾಗಿ ಸೇರಿಸಿಕೊಂಡು ಸರ್ಕಾರ ಮಾಡಿದ್ದೀರಿ. ಬಿಜೆಪಿಯವರಿಗೆ ಸ್ವಲ್ಪನೂ ಮಾನ ಮರ್ಯಾದೆ ಇಲ್ಲ. ಜನ ಏನಂತಾರೋ ಅನ್ನೋ ಹಿಂಜರಿಕೆ ಇಲ್ಲ ಎಂದು ಟೀಕಿಸಿದರು.

ಆಗ ಎದ್ದುನಿಂತ ಸಚಿವ ಆರ್.ಅಶೋಕ್ ದೇಶ ವ್ಯಾಪಿ ನಮ್ಮ ಸರ್ಕಾರ, ನಮ್ಮ ಪಕ್ಷ ಅಧಿಕಾರದಲ್ಲಿದೆ ಎಂದು ಪ್ರತಿಕ್ರಿಯೆ ನೀಡಿದರು. ಅದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಕೇರಳ, ತಮಿಳುನಾಡು,‌ ಆಂಧ್ರ ಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್ ಗಢ,‌ಪಂಜಾಬ್ ನಲ್ಲಿ‌ ನಿಮ್ಮ ಸರ್ಕಾರ ಇದೆಯಾ.? ಮಹಾರಾಷ್ಟ್ರ ದಲ್ಲಿ ಜನ ನಿಮಗೆ ಆಶೀರ್ವಾದ ಮಾಡಿದ್ದರಾ? ಕರ್ನಾಟಕದಲ್ಲಿ ನಿಮಗೆ ಜನಾಶೀರ್ವಾದ ಮಾಡಿದ್ರಾ? ಅನೈತಿಕವಾಗಿ ಆಪರೇಷನ್ ಕಮಲದ ಮೂಲಕ‌ ಸರ್ಕಾರ ರಚನೆ ಮಾಡಿ‌ ಅಧಿಕಾರಕ್ಕೆ‌ ಬಂದವರು ನೀವು. ಕೋಟಿಗಟ್ಟಲೇ ಹಣ‌ಖರ್ಚು ಮಾಡಿ ನೀವು ಸರ್ಕಾರ ರಚನೆ ಮಾಡ್ತೀರಿ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಫೆ.24 ವಿಧಾನಸಭೆ ಕಲಾಪಕ್ಕೆ ಕೊನೆ ದಿನ, ಫೆ.17ಕ್ಕೆ ಬಜೆಟ್ ಮಂಡನೆ: ಸ್ಪೀಕರ್ ಪ್ರಕಟಣೆ

ABOUT THE AUTHOR

...view details