ETV Bharat / state

ಫೆ.24 ವಿಧಾನಸಭೆ ಕಲಾಪಕ್ಕೆ ಕೊನೆ ದಿನ, ಫೆ.17ಕ್ಕೆ ಬಜೆಟ್ ಮಂಡನೆ: ಸ್ಪೀಕರ್ ಪ್ರಕಟಣೆ

author img

By

Published : Feb 14, 2023, 5:31 PM IST

ವಿಧಾನಸಭೆ ಕಲಾಪ ಫೆ.24ರವರೆಗೆ ಜರುಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಫೆ.17ರಂದು ಬೆಳಗ್ಗೆ 10.15ಕ್ಕೆ ಪ್ರಸಕ್ತ ಸಾಲಿನ ಆಯವ್ಯಯ ಮಂಡನೆ - ವಿಧಾನಸಭೆಯಲ್ಲಿ ಪ್ರಕಟಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ.

State budget
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು: ''ವಿಧಾನಸಭೆ ಕಲಾಪ ಫೆ.24ರವರೆಗೆ ನಡೆಯಲಿದೆ. ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೆ.17ರಂದು ಶುಕ್ರವಾರ ಬೆಳಗ್ಗೆ 10.15ಕ್ಕೆ 2023-24ನೇ ಸಾಲಿನ ಬಜೆಟ್​ ಮಂಡಿಸಲಿದ್ದಾರೆ'' ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿ ಮಂಗಳವಾರ ಪ್ರಕಟಿಸಿದ್ದಾರೆ. ಶೂನ್ಯ ವೇಳೆಯ ನಂತರ ಸದನದ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಧಾರವನ್ನು ಸ್ಪೀಕರ್ ಸದನದಲ್ಲಿ ತಿಳಿಸಿದರು.

ಫೋಟೋ ತೆಗೆಸಿಕೊಳ್ಳುವ ಕಾರ್ಯಕ್ರಮ: ''ಫೆ. 20ರಂದು ಸಂಜೆ 4.30ಕ್ಕೆ ವಿಧಾನಸೌಧದ ಮುಂಭಾಗ 15ನೇ ವಿಧಾನಸಭೆಯ ಸದಸ್ಯರ ಛಾಯಾಚಿತ್ರ ತೆಗೆಸಿಕೊಳ್ಳುವ ಕಾರ್ಯಕ್ರಮ ನಿಗದಿಯಾಗಿದೆ. ಕೊನೆ ಅಧಿವೇಶನವಾಗಿರುವ ಕಾರಣ ಪ್ರತಿಯೊಬ್ಬ ಶಾಸಕರು ಕಡ್ಡಾಯವಾಗಿ ಛಾಯಾಚಿತ್ರ ತೆಗೆಸಿಕೊಳ್ಳಲು ಭಾಗವಹಿಸಬೇಕು'' ಎಂದು ಮನವಿ ಮಾಡಿದರು. ನಿಗದಿತ ಕಾರ್ಯಕ್ರಮಗಳು ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಇದ್ದರೆ, ಒಂದು ದಿನದ ಮಟ್ಟಿಗೆ ಮುಂದೂಡಿ, ಕಾರಣ ನೀಡಿ ಗೈರು ಹಾಜರಾಗಬಾರದು. ಇದು ಕೊನೆಯ ಅಧಿವೇಶನ ಆಗಿರುವುದರಿಂದ ಸದಸ್ಯರು ಕಡೇ ಪಕ್ಷ ಫೋಟೊ ತೆಗೆಸಿಕೊಳ್ಳುವ ಕಾರ್ಯಕ್ರಮಕ್ಕಾದರೂ ಬನ್ನಿ ಎಂದು ಸಲಹೆ ಮಾಡಿದರು.

ಇಂದು ಮತ್ತು ನಾಳೆ ರಾಜ್ಯಪಾಲರು ಭಾಷಣದ ಮೇಲೆ ಚರ್ಚೆಗೆ ಸಮಯ ನಿಗದಿ ಮಾಡಲಾಗಿದೆ. ಫೆ.16ರಂದು ಪ್ರಶ್ನೋತ್ತರ ಅವಧಿ ಮುಗಿದ ನಂತರ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಮುಖ್ಯಮಂತ್ರಿಗಳು ಉತ್ತರ ನೀಡಲಿದ್ದಾರೆ.

ಫೆ.20, 21, 22ಕ್ಕೆ ಬಜೆಟ್ ಮೇಲಿನ ಚರ್ಚೆ: ''ಬಜೆಟ್ ಮಂಡನೆಯಾದ ನಂತರ ಫೆ.20, 21, 22ರಂದು ಬಜೆಟ್ ಮೇಲಿನ ಚರ್ಚೆ ನಡೆಯಲಿದೆ. ಫೆ.23ರಂದು ಪ್ರಶ್ನೋತ್ತರ ಅವಧಿ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಲಿದ್ದಾರೆ. ಬಜೆಟ್​ಗೆ ಅಂಗೀಕಾರ ಪಡೆಯುವ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ನಿಗದಿಯಾಗಿರುವಂತೆ ಫೆ.24 ಅಧಿವೇಶನದ ಕೊನೆಯ ದಿನ'' ಎಂದು ತಿಳಿಸಿದರು.

''ನಾಳೆ ಕೆಲವು ಮಸೂದೆಗಳನ್ನು ಮಂಡನೆ ಮಾಡಲಾಗುವುದು. ಒಟ್ಟು 7 ವಿಧೇಯಕಗಳಿವೆ. ಇನ್ನೂ ಕೆಲವು ವಿಧೇಯಕ ಬರಬಹುದು ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ'' ಎಂದು ಸ್ಪೀಕರ್ ಹೇಳಿದರು. ಎಲ್ಲ ಸದಸ್ಯರು ಕಲಾಪಕ್ಕೆ ಬರಬೇಕು ಎಂದು ಹೇಳಿದಾಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿ, ''ಫೆ.21ರಿಂದ ಸದನಕ್ಕೆ ಬರಲಾಗುವುದಿಲ್ಲ. ನೀವು ಅನುಮತಿ ಕೊಟ್ಟರೂ ಸರಿ, ಕೊಡದಿದ್ದರೂ ಸರಿ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ'' ಎಂದು ಸ್ಪಷ್ಟಪಡಿಸಿದರು.

ಸಿಎಂಯಿಂದ ಜನಪರ ಬಜೆಟ್ ಮಂಡನೆ ಸಾಧ್ಯತೆ: ''ಕಳೆದ ಸಾಲಿನಲ್ಲಿ ಜನಪರ ಬಜೆಟ್ ನೀಡಿರುವಂತೆಯೇ ಈ ಬಾರಿ ಕೂಡಾ ಜನಪರ ಬಜೆಟ್ ನೀಡಲಾಗುವುದು. ಇಡೀ ರಾಜ್ಯವೇ ಉತ್ತಮವಾದ ಬಜೆಟ್​ನ್ನು ನಿರೀಕ್ಷೆ ಮಾಡಬಹುದು'' ಎಂದು ಇತ್ತೀಚೆಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು.

ಫೆಬ್ರವರಿ 17ಕ್ಕೆ ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಈ ನಿಟ್ಟಿನಲ್ಲಿಈ ಬಾರಿಯ ಬಜೆಟ್‌ ಕುರಿತು ಅನೇಕ ನಿರೀಕ್ಷೆಗಳು ಇವೆ. ಹೀಗಾಗಿ ಈ ಬಾರಿ ಜನಪರ ಬಜೆಟ್ ಮಂಡನೆಯಾಗಲಿದೆ ಎನ್ನುವ ಭರವಸೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಟ್ಟಿದ್ದಾರೆ.

ಇದನ್ನೂ ಓದಿ: ರಾಜ್ಯಪಾಲರ ಭಾಷಣದಲ್ಲಿ ಸರ್ಕಾರದಿಂದ ತೌಡು ಕುಟ್ಟುವ ಕೆಲಸವಾಗಿದೆ: ಸಿದ್ದರಾಮಯ್ಯ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.