ಕರ್ನಾಟಕ

karnataka

ನ್ಯಾಯಮೂರ್ತಿಗಳ ಕುರಿತು ನಿಂದನಾತ್ಮಕ ಹೇಳಿಕೆ: ಮಹೇಶ್ ಶೆಟ್ಟಿ ದಂಪತಿ ಖುದ್ದು ಹಾಜರಿಗೆ ಹೈಕೋರ್ಟ್ ಸೂಚನೆ

By ETV Bharat Karnataka Team

Published : Jan 4, 2024, 6:51 AM IST

High Court: ನ್ಯಾಯಮೂರ್ತಿಗಳ ಕುರಿತು ನಿಂದನಾತ್ಮಕ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ಮತ್ತವರ ಪತ್ನಿ ಜನವರಿ 5ರಂದು ಖುದ್ದು ಹಾಜರಾಗುವಂತೆ ಹೈಕೋರ್ಟ್ ಸೂಚನೆ ನೀಡಿದೆ.

high court
ಹೈಕೋರ್ಟ್

ಬೆಂಗಳೂರು :ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಪತ್ನಿ ಸರೋಜಾ ಅವರಿಗೆ ಜನವರಿ 5 ರಂದು ನ್ಯಾಯಾಲಯದ ಮುಂದೆ ಖುದ್ದು ಹಾಜರಾಗುವಂತೆ ಹೈಕೋರ್ಟ್ ಆದೇಶಿಸಿದೆ.

ಬಬ್ಬುಕಟ್ಟೆ ಉಜಿರೆ ನಿವಾಸಿ ಜಯಪ್ರಕಾಶ ಶೆಟ್ಟಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಹಿರಿಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಹಾಗೂ ನ್ಯಾ. ಟಿ. ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲರು, ಮಹೇಶ್ ಶೆಟ್ಟಿ ತಿಮರೋಡಿ ಅವರು ಹೈಕೋರ್ಟ್ ನ್ಯಾಯಮೂರ್ತಿಗಳ ಬಗ್ಗೆ ಆಡಿರುವ ನಿಂದನಾತ್ಮಕ ಮಾತುಗಳ ಮಾಹಿತಿಯನ್ನು ಪೆನ್‌ಡ್ರೈವ್‌ನಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದರು.

ಕೋರ್ಟ್‌ನ ಕಂಪ್ಯೂಟರ್ ಸೆಕ್ಷನ್‌ನಲ್ಲಿ ಮಹೇಶ್ ಶೆಟ್ಟಿ ಪರ ವಕೀಲರನ್ನು ಕರೆಯಿಸಿ ಅವರು ಆಡಿರುವ ಮಾತುಗಳನ್ನು ಕೇಳಿಸಲಾಯಿತು. ಆಗ ಆಡಿರುವ ಮಾತು ತಪ್ಪು ಎಂದು ತಿಮರೋಡಿ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು. ಹಾಗಾಗಿ, ಜನವರಿ 5 ರಂದು ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಪತ್ನಿ ಸರೋಜಾ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ನಿರ್ದೇಶನ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ಮುಂದೂಡಿತು.

ಪ್ರಕರಣದ ಹಿನ್ನೆಲೆ :ಮಹೇಶ್ ಶೆಟ್ಟಿ ತಿಮರೋಡಿ ಜಮೀನು ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಲಾಗಿತ್ತು. ಅದನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್ ಒತ್ತುವರಿ ತೆರವುಗೊಳಿಸಲು 2019 ರ ಜುಲೈ 18 ರಂದು ಆದೇಶಿಸಿತ್ತು. ಅದರಂತೆ ಉಜಿರೆ ಪಿಡಿಒ ಸ್ಥಳಕ್ಕೆ ಭೇಟಿ ಕೊಟ್ಟಾಗ ಹೈಕೋರ್ಟ್ ನ್ಯಾಯಮೂರ್ತಿಗಳ ಬಗ್ಗೆ ಮಹೇಶ್ ಶೆಟ್ಟಿ ತಿಮರೋಡಿ ನಿಂದನಾತ್ಮಕವಾಗಿ ಮಾತನಾಡಿದ್ದರು. ನ್ಯಾಯಾಲಯದ ಆದೇಶ ಪಾಲಿಸದ ಹಾಗೂ ನ್ಯಾಯಮೂರ್ತಿಗಳ ಕುರಿತು ನಿಂದನೆ ಮಾಡಿದ ಆರೋಪದಲ್ಲಿ ತಿಮರೋಡಿ ವಿರುದ್ಧ ನ್ಯಾಯಾಂಗ ನಿಂದನೆ ದಾವೆ ಹೂಡಲಾಗಿದೆ.

ಇದನ್ನೂ ಓದಿ :'ಪಾರ್ಕ್, ಆಟದ ಮೈದಾನಕ್ಕೆ ಮೀಸಲಿಟ್ಟ ಜಾಗ 5 ವರ್ಷದಲ್ಲಿ ಅಭಿವೃದ್ಧಿ ಮಾಡದಿದ್ದಲ್ಲಿ ರದ್ದಾಗಲಿದೆ'

ABOUT THE AUTHOR

...view details