ಕರ್ನಾಟಕ

karnataka

ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಸಾರಾಂಶ ಸಲ್ಲಿಸದ ಎಸ್​ಐಟಿ, ಸರ್ಕಾರ: ಹೈಕೋರ್ಟ್ ಅಸಮಾಧಾನ

By

Published : Sep 26, 2022, 8:50 PM IST

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ. ಎಸ್​ಐಟಿ ಮತ್ತು ಸರ್ಕಾರ ಸಂಕ್ಷಿಪ್ತ ಸಾರಾಂಶ ಸಲ್ಲಿಸದ ಕಾರಣಕ್ಕೆ ಹೈಕೋರ್ಟ್​ ಅಸಮಾಧಾನ.

ರಮೇಶ್ ಜಾರಕಿಹೊಳಿ ಪ್ರಕರಣ
ರಮೇಶ್ ಜಾರಕಿಹೊಳಿ ಪ್ರಕರಣ

ಬೆಂಗಳೂರು:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಎಸ್‌ಐಟಿ ಈವರೆಗೂ ಲಿಖಿತ ವಾದ ಮತ್ತು ಪ್ರಕರಣದ ಸಂಕ್ಷಿಪ್ತ ಸಾರಾಂಶ (ಸಿನಾಪ್ಸಿಸ್) ಸಲ್ಲಿಸದ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದನ್ನು ಪ್ರಶ್ನಿಸಿ ಹಾಗೂ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಜಾರಕಿಹೊಳಿ ದಾಖಲಿಸಿರುವ ಬ್ಲ್ಯಾಕ್‌ಮೇಲ್ ಪ್ರಕರಣದ ಎಫ್‌ಐಆರ್ ರದ್ದು ಕೋರಿ ಸಂತ್ರಸ್ತೆ, ಆರೋಪಿಗಳಾದ ಎಸ್. ಶ್ರವಣ್ ಕುಮಾರ್ ಹಾಗೂ ಬಿ.ಎಂ.ನರೇಶ್ ಸಲ್ಲಿಸಿರುವ ಪ್ರತ್ಯೇಕ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರ ಪೀಠ, ಲಿಖಿತ ವಾದ ಹಾಗೂ ಸಿನಾಪ್ಸಿಸ್ ಸಲ್ಲಿಸುವವರೆಗೂ ವಾದ - ಪ್ರತಿವಾದ ಆಲಿಸುವುದಿಲ್ಲ ಎಂದು ತಿಳಿಸಿದೆ.

ವಿಚಾರಣೆ ವೇಳೆ ಸಂತ್ರಸ್ತೆ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಹಾಜರಾಗಿ, ಲಿಖಿತ ವಾದಾಂಶ ಮತ್ತು ಸಿನಾಪ್ಸಿಸ್ ಸಲ್ಲಿಸುವಂತೆ ಪಕ್ಷಕಾರರಿಗೆ (ಅರ್ಜಿದಾರರು ಮತ್ತು ಪ್ರತಿವಾದಿಗಳು) ಸೆ.5 ರಂದು ನ್ಯಾಯಾಲಯ ಸೂಚಿಸಿತ್ತು. ತಮ್ಮ ಕಕ್ಷಿದಾರರ ಪರವಾದ ಲಿಖಿತ ವಾದವನ್ನು ಸಲ್ಲಿಸಲಾಗಿದೆ.

ಆದರೆ, ಸರ್ಕಾರ, ಎಸ್‌ಐಟಿ, ಅಮೈಕಸ್ ಕ್ಯೂರಿ ಸೇರಿದಂತೆ ಪ್ರತಿವಾದಿಗಳು ಯಾರು ಲಿಖಿತ ವಾದ ಸಲ್ಲಿಸಿಲ್ಲ. ಹಾಗಾಗಿ, ಅವರ ಮಂಡಿಸಲಿರುವ ಕಾನೂನಾತ್ಮಕ ಅಂಶಗಳ ಬಗ್ಗೆ ನಮಗೆ ಯವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಈಗಾಗಲೇ ಹಲವು ಬಾರಿ ಕಾಲಾವಕಾಶ ನೀಡಿದ್ದರೂ ಸರ್ಕಾರ, ಎಸ್‌ಐಟಿ ಮತ್ತು ರಮೇಶ್ ಜಾರಕಿಹೊಳಿ ಸೇರಿದಂತೆ ಇತರ ಪ್ರತಿವಾದಿಗಳು ತಮ್ಮ ಲಿಖಿತ ವಾದ ಸಲ್ಲಿಸಿಲ್ಲ. ಲಿಖಿತ ವಾದ ಸಲ್ಲಿಸದ ಹೊರತು ವಾದ - ಪ್ರತಿವಾದ ಆಲಿಸುವುದಿಲ್ಲ. ಹಾಗಾಗಿ, ಮತ್ತೊಮ್ಮೆ 10 ದಿನ ಕಾಲಾವಕಾಶ ನೀಡಲಾಗುವುದು. ಅಷ್ಟರೊಳಗೆ ಎಲ್ಲರೂ ಲಿಖಿತ ವಾದ ಸಲ್ಲಿಸಬೇಕು. ಮತ್ತಷ್ಟು ವಿಳಂಬ ಮಾಡಬಾರದು ಎಂದು ತಿಳಿಸಿತು.

ಅಲ್ಲದೆ, ಲಖಿತ ವಾದ ಸಲ್ಲಿಸಿದರೆ, ಅದರಿಂದ ಯಾರು ಯಾವೆಲ್ಲಾ ಕಾನೂನಾತ್ಮಕ ಅಂಶದ ಮೇಲೆ ವಾದ ಮಂಡಿಸಲಿದ್ದಾರೆ ಎಂಬುದು ತಿಳಿಯುತ್ತದೆ. ಹಾಗೆಯೇ, ದಿನಗಟ್ಟಲೆ-ಗಂಟೆಗಟ್ಟಲೆ ವಾದ ಮಂಡಿಸುವುದನ್ನು ತಪ್ಪಿಸಬಹುದು ಎಂದು ತಿಳಿಸಿದ ಪೀಠ ವಿಚಾರಣೆ ಮುಂದೂಡಿತು.

(ಓದಿ: 'ಡಿ ಕೆ ಶಿವಕುಮಾರ್​ ಹೇಳಿದಂಗ್‌ ಕೇಳ್ಬೇಕು, ರೊಕ್ಕ ಕೊಟ್ಟು ಗೋವಾಗೆ ಕಳುಹಿಸ್ತಿದ್ದಾರೆ'.. ಸಿಡಿ ಲೇಡಿ 2ನೇ ಆಡಿಯೋ ಲೀಕ್​)

ABOUT THE AUTHOR

...view details