ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಗುಂಡಿಗೆ ಬಿದ್ದು ಬಾಲಕಿ ಸಾವನಪ್ಪಿರುವ ಘಟನೆ ಬೆಂಗಳೂರಿನ ಸುಲ್ತಾನ್ ಪೇಟೆ ಬಳಿ ತಡರಾತ್ರಿ ನಡೆದಿದೆ. ಮಹೇಶ್ವರಿ (6) ಮೃತ ಬಾಲಕಿ. ಈಕೆ ಕಟ್ಟಡ ಕಾಮಗಾರಿಗಾಗಿ ಬಂದಿದ್ದ ದಂಪತಿಯ ಮಗಳು. ಐದು ಅಂತಸ್ತಿನ ಕಟ್ಟಡದ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ, ಬಾಲಕಿ ಆಟವಾಡುತ್ತಾ ಲಿಫ್ಟ್ ನಿರ್ಮಾಣಕ್ಕೆ ತೋಡಲಾಗಿದ್ದ ಗುಂಡಿಗೆ ಬಿದ್ದಿದ್ದಾಳೆ ಎನ್ನಲಾಗಿದೆ. ಕೆ.ಆರ್ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:ಕಾರಿನಡಿ ಬಿದ್ದರೂ ಗಮನಿಸದ ಚಾಲಕ: ಪುಟ್ಟ ಬಾಲಕಿ ದುರ್ಮರಣ
ಡಿಸಿಪಿ ಪ್ರತಿಕ್ರಿಯೆ:ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸುಲ್ತಾನ್ ಪೇಟೆ ಬಳಿ ನಿನ್ನೆ(ಶುಕ್ರವಾರ) ಕಟ್ಟಡದ ಕಾಮಾಗಾರಿ ನಡೆಯುತ್ತಿತ್ತು. ಇದು ಸುಮಾರು ಐದರಿಂದ ಆರು ಅಂತಸ್ತಿನ ಕಟ್ಟಡ. ನೆಲ ಮಹಡಿಯಿಂದ ಲಿಫ್ಟ್ ಮಾಡಲು ಗುಂಡಿ ತೆಗೆದು ನೀರು ತುಂಬಿಸಿದ್ದರು. ಅಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆಯಿರಲಿಲ್ಲ. ಜತೆಗೆ ನೀರು ತುಂಬಿಸಿದ ಗುಂಡಿ ನೆಲಕ್ಕೆ ಸಮತಟ್ಟಾಗಿರುವಂತೆ ಕಾಣುತ್ತದೆ. ನಿನ್ನೆ ಉಮೇಶ್ ಎಂಬ ಮೇಸ್ತ್ರಿಯನ್ನು ಭೇಟಿ ಮಾಡಲು ಮಲ್ಲಪ್ಪ ಎಂಬ ಕಾರ್ಮಿಕ ತನ್ನ ಹೆಂಡತಿ ಮಕ್ಕಳೊಂದಿಗೆ ಬಂದಿದ್ದರು. ಈ ವೇಳೆ, ಆಟವಾಡುತ್ತಾ ಬಾಲಕಿ ಮಹೇಶ್ವರಿ ಆ ಗುಂಡಿಯ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾಳೆ. ಈ ಹಿನ್ನೆಲೆ ನಿರ್ಲಕ್ಷ್ಯ ಪ್ರಕರಣ ದಾಖಲಾಗಿದೆ. 32/23 ಐಪಿಸಿ ಸೆಕ್ಷನ್ 302 ಅಡಿ ಕೇಸ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.