ಕರ್ನಾಟಕ

karnataka

ಬಲವಂತದ ಮತಾಂತರ: ಆರೋಪಿಗಳ ವಿರುದ್ಧದ ಪ್ರಕರಣ ರದ್ದು ಮಾಡಲು ಹೈಕೋರ್ಟ್ ನಿರಾಕರಣೆ

By

Published : Feb 18, 2023, 9:17 PM IST

ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿಯಲ್ಲಿ ನಡೆದ ಬಲವಂತದ ಮತಾಂತರ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ರದ್ದು ಮಾಡಲು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

forced-conversion-case-karnataka-high-court-refuses-to-quash-case-against-accused
ಬಲವಂತದ ಮತಾಂತರ: ಆರೋಪಿಗಳ ವಿರುದ್ಧದ ಪ್ರಕರಣ ರದ್ದು ಮಾಡಲು ಹೈಕೋರ್ಟ್ ನಿರಾಕರಣೆ

ಬೆಂಗಳೂರು:ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿಯ ಮನೆಯೊಂದರಲ್ಲಿ ಹಿಂದೂ ವ್ಯಕ್ತಿಯನ್ನು ಕ್ರೈಸ್ತ ಧರ್ಮಕ್ಕೆ ಬಲವಂತದ ಮತಾಂತರಕ್ಕೆ ಯತ್ನಿಸಿದ ಆರೋಪ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ವಿರುದ್ಧದ ಪ್ರಕರಣ ರದ್ದು ಮಾಡಲು ಹೈಕೋರ್ಟ್ ನಿರಾಕರಿಸಿದೆ.

ಇದನ್ನೂ ಓದಿ:ರಾಮನಗರ: ಮತಾಂತರ ಯತ್ನ ಆರೋಪ.. ದೂರು

ಬಲವಂತದ ಮತಾಂತರ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಆರೋಪಿಗಳಾದ ಕೆ.ಜೆ.ಕುಂಜುಮೋನ್, ಸೈನು ಪಿ.ಜೆ., ಲೇನಿ ಕುಂಜುಮೋನ್, ಮೇರಿ ಕೆ.ಜಾನ್ ಉಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ಪೀಠವು ಅರ್ಜಿಯನ್ನು ಶುಕ್ರವಾರ ವಜಾಗೊಳಿಸಿದೆ.

ನ್ಯಾಯಪೀಠ ಹೇಳಿದ್ದೇನು?: ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಲು ಏಕೆ ವಿಳಂಬವಾಗಿದೆ ಎಂದರೆ ದೂರು ಸ್ವೀಕರಿಸಿದ ಎರಡು ವರ್ಷದೊಳಗೆ ತನಿಖಾ ಸಂಸ್ಥೆ ಚಾರ್ಜ್‌ಶೀಟ್ ಸಲ್ಲಿಕೆಗೆ ಅನುಮತಿ ಕೋರಿ ಗೃಹ ಇಲಾಖೆಗೆ ಮನವಿ ಸಲ್ಲಿಸಿದೆ. ಆದರೆ, ಗೃಹ ಇಲಾಖೆ ಬಹುತೇಕ 3-4 ವರ್ಷಗಳ ನಂತರ 2017ರ ಮಾ.22ಕ್ಕೆ ಅನುಮತಿ ನೀಡಿದೆ. ಆದಾದ ಒಂದೇ ವಾರಕ್ಕೆ ಅಂದರೆ 2017ರ ಮಾ.30ಕ್ಕೆ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ. ಹೀಗಾಗಿ ಆರೋಪಪಟ್ಟಿ ಸಲ್ಲಿಕೆ ವಿಳಂಬ ಕಾರಣಕ್ಕೆ ಇಡೀ ಪ್ರಕರಣವನ್ನು ರದ್ದುಗೊಳಿಸಲಾಗದು ಎಂದು ನ್ಯಾಯಪೀಠ ತಿಳಿಸಿದೆ.

ಅಲ್ಲದೇ, ಅರ್ಜಿದಾರರು ಮತ್ತು ದೂರು ನೀಡಿದವರು ಇಬ್ಬರ ವಿರುದ್ಧ ಆರೋಪ ಪತ್ಯಾರೋಪಗಳಿದ್ದು, ಇಬ್ಬರೂ ಪರಸ್ಪರರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಆ ಬಗ್ಗೆ ವಿಚಾರಣಾ ನ್ಯಾಯಾಲಯ ವಿಚಾರಣೆ ನಡೆಸಿ ತೀರ್ಪು ನೀಡಬೇಕಿದೆ. ಈ ಹಂತದಲ್ಲಿಯೇ ಪ್ರಕರಣವನ್ನು ರದ್ದುಗೊಳಿಸಲಾಗದು ಎಂದು ಉಚ್ಛ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಗೃಹ ಇಲಾಖೆ ವಿಚಾರಣೆಗೆ ಅನುಮತಿ ನೀಡುವಾಗ ವಿವೇಚನೆ ಬಳಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಆದರೆ, ಆ ಆರೋಪದಲ್ಲಿ ಅರ್ಥವೇ ಇಲ್ಲ. ಅಪರಾಧ ದಂಡ ಸಂಹಿತೆ ಸೆಕ್ಷನ್ 196ರಡಿಯಲ್ಲಿ ಅನುಮತಿ ನೀಡಲಾಗಿದ್ದು, ಅದು ಕಾನೂನುಬದ್ಧವಾಗಿಯೇ ಇದೆ ಎಂದೂ ನ್ಯಾಯಪೀಠವು ಹೇಳಿದೆ.

ಪ್ರಕರಣದ ಹಿನ್ನೆಲೆ ಏನು?:ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿಯ ಮನೆಯೊಂದರಲ್ಲಿ ಆರೋಪಿಗಳು ಹಿಂದೂ ವ್ಯಕ್ತಿಯ ಮತಾಂತರ ಯತ್ನಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಬೈಬಲ್ ನೀಡಿ ಕ್ರಿಸ್ತನೊಬ್ಬನೇ ದೇವರೆಂದು ಬೋಧನೆ ಮಾಡಿದ್ದಲ್ಲದೆ, ಹಿಂದೂ ದೇವರನ್ನು ನಂಬದಂತೆ ಹೇಳಿದ್ದರು ಎಂದೂ ಹೇಳಲಾಗಿತ್ತು. ಜೊತೆಗೆ ಮತಾಂತರ ಪ್ರಶ್ನಿಸಿದಾಗ ಹಲ್ಲೆ ನಡೆಸಿದ ಆರೋಪದಡಿ 2011ರಲ್ಲಿ ಉಪ್ಪಿನಂಗಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಂತರ ಈ ಪ್ರಕರಣವನ್ನು ರದ್ದು ಮಾಡಬೇಕೆಂದು ಕೋರಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಕೆ ವಿಳಂಬ ಮಾಡಲಾಗಿದೆ. ಆದ್ದರಿಂದ ಪ್ರಕರಣ ರದ್ದುಗೊಳಿಸಬೇಕೆಂದು ಮನವಿ ಮಾಡಿದ್ದರು. ಆದರೆ, ಈ ಮನವಿ ತಳ್ಳಿ ಹಾಕಿರುವ ಹೈಕೋರ್ಟ್​ ಪ್ರಕರಣ ರದ್ದು ಪಡಿಸಲು ನಿರಾಕರಿಸಿದೆ.

ಇದನ್ನೂ ಓದಿ:ಬಲವಂತದ ಧಾರ್ಮಿಕ ಮತಾಂತರ: ಅಟಾರ್ನಿ ಜನರಲ್​ ಸಲಹೆ ಕೋರಿದ ಸುಪ್ರೀಂಕೋರ್ಟ್​

ABOUT THE AUTHOR

...view details