ETV Bharat / bharat

ಬಲವಂತದ ಧಾರ್ಮಿಕ ಮತಾಂತರ: ಅಟಾರ್ನಿ ಜನರಲ್​ ಸಲಹೆ ಕೋರಿದ ಸುಪ್ರೀಂಕೋರ್ಟ್​

author img

By

Published : Jan 9, 2023, 5:51 PM IST

ಬಲವಂತದ ಧಾರ್ಮಿಕ ಮತಾಂತರದ ಅರ್ಜಿ- ಕೇಂದ್ರ ಸರ್ಕಾರದ ಸಲಹೆ ಕೋರಿದ ಸುಪ್ರೀಂ- ಅಟಾರ್ನಿ ಜನರಲ್​ಗೆ ಸುಪ್ರೀಂಕೋರ್ಟ್​ ಕೋರಿಕೆ - ಧಾರ್ಮಿಕ ಹಕ್ಕಿನಡಿ ಮತಾಂತರದ ಹಕ್ಕಿಲ್ಲ ಎಂದಿದ್ದ ಕೇಂದ್ರ

fraudulent-and-deceitful-religious-conversion
ಬಲವಂತದ ಧಾರ್ಮಿಕ ಮತಾಂತರ

ನವದೆಹಲಿ: ಬಲವಂತದ ಧಾರ್ಮಿಕ ಮತಾಂತರ "ಗಂಭೀರ ವಿಷಯ" ಮತ್ತು ಇದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದ ಸುಪ್ರೀಂ ಕೋರ್ಟ್, ಮತಾಂತರ ವಿರೋಧಿ ಕಾನೂನುಗಳ ಕುರಿತು ರಾಜ್ಯ ಸರ್ಕಾರಗಳಿಂದ ಮಾಹಿತಿ ಸಂಗ್ರಹಿಸಿ ವಿವರವಾದ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿತ್ತು. ಇಂದು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​, ಕೇಂದ್ರದ ಅಟಾರ್ನಿ ಜನರಲ್​ರಿಗೆ ಈ ವಿಷಯವಾಗಿ ಸಲಹೆಗಳನ್ನು ನೀಡಲು ಕೋರಿದೆ.

ಬಲವಂತದ ಧಾರ್ಮಿಕ ಮತಾಂತರ ಗಂಭೀರ ಮತ್ತು ಮಹತ್ವದ ವಿಚಾರವಾಗಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ಸೂಕ್ತ ಸಲಹೆ ಮತ್ತು ಮಾಹಿತಿ ನೀಡಿ ಎಂದು ಅಟಾರ್ನಿ ಜನರಲ್​ ಆರ್​ ವೆಂಕಟರಮಣಿ ಅವರಲ್ಲಿ ಕೋರ್ಟ್​ ಕೋರಿದೆ. ಈ ಅರ್ಜಿಯನ್ನು ವಿಚಾರಣೆ ನಡೆಸಲು ಸಹಾಯ ಮಾಡುವಂತೆ ಹೇಳಿದೆ.

ಬೆದರಿಕೆ, ಉಡುಗೊರೆಗಳು ಮತ್ತು ಆರ್ಥಿಕ ನೆರವಿನ ಹೆಸರಿನಲ್ಲಿ ಮೋಸದ ಮೂಲಕ ಬಲವಂತದ ಧಾರ್ಮಿಕ ಮತಾಂತರದ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಯುತ್ತಿದೆ.

ವಿವರವಾದ ಮಾಹಿತಿಗೆ ಸಮಯ ಬೇಕು: ಕಳೆದ ವಿಚಾರಣೆಯಲ್ಲಿ ರಾಜ್ಯಗಳಿಂದ ಧಾರ್ಮಿಕ ಮತಾಂತರದ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು. ನ್ಯಾಯಮೂರ್ತಿಗಳಾದ ಎಂ ಆರ್ ಷಾ ಮತ್ತು ಸಿ ಟಿ ರವಿಕುಮಾರ್ ಅವರ ಪೀಠದ ಮುಂದೆ ವಿಷಯದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲು ಸಮಯ ಕೋರಿದ್ದರು.

ಬಲವಂತದ ಮತಾಂತರದ ಬಗ್ಗೆ ರಾಜ್ಯಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಒಂದು ವಾರದ ಸಮಯ ನೀಡಿ ಎಂದು ಕೇಂದ್ರ ಕೇಳಿತ್ತು. ನಂಬಿಕೆಯ ಆಧಾರದ ಮೇಲೆ ವ್ಯಕ್ತಿಗಳು ಮತಾಂತರಗೊಳ್ಳುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುವುದು ಅಥವಾ ಅವರನ್ನು ಆಮಿಷಗಳಿಗೆ ಬಲಿಪಡಿಸಿ ಬದಲಿಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅದನ್ನು ಶಾಸನಬದ್ಧವಾಗಿ ನಿಯಂತ್ರಿಸುವ ಕುರಿತು ನಿರ್ಧರಿಸಲಾಗುವುದು ಎಂದು ಕೇಂದ್ರ ಹೇಳಿತ್ತು.

ಬಲವಂತದ ಧಾರ್ಮಿಕ ಪರಿವರ್ತನೆಯು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನು ತರುತ್ತದೆ. ನಾಗರಿಕರ ಧಾರ್ಮಿಕ ಸ್ವಾತಂತ್ರ್ಯವನ್ನು ಹರಣ ಮಾಡುತ್ತದೆ. ಅತ್ಯಂತ ಗಂಭೀರ ಸಮಸ್ಯೆಯನ್ನು ನಿಭಾಯಿಸಲು ಕೇಂದ್ರವು ಮಧ್ಯಪ್ರವೇಶಿಸಿ, ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುವಂತೆ ಹೇಳಿದೆ.

ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಮತಾಂತರ ಹೊಂದಿಲ್ಲ: ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಜನರನ್ನು ನಿರ್ದಿಷ್ಟ ಧರ್ಮಕ್ಕೆ ಪರಿವರ್ತಿಸುವ ಮೂಲಭೂತ ಹಕ್ಕನ್ನು ಒಳಗೊಂಡಿಲ್ಲ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ಈ ಹಿಂದೆ ತಿಳಿಸಿತ್ತು. ಸಂವಿಧಾನದ 14, 21 ಮತ್ತು 25ನೇ ವಿಧಿಗಳನ್ನು ಉಲ್ಲಂಘಿಸುವ, ವಂಚನೆಯ ಮೂಲಕ ಧಾರ್ಮಿಕ ಮತಾಂತರ, ಬೆದರಿಕೆ, ಉಡುಗೊರೆಗಳು ಮತ್ತು ಆರ್ಥಿಕ ಆಮಿಷದ ಮೂಲಕ ಮಾಡುವ ಪರಿವರ್ತನೆ ಅಪರಾಧ ಎಂದು ಅಭಿಪ್ರಾಯಪಟ್ಟಿತ್ತು.

ಇಂಥ ಮತಾಂತರಗಳನ್ನು ತಡೆಯದಿದ್ದರೆ ಹಿಂದೂಗಳು ಶೀಘ್ರದಲ್ಲೇ ಭಾರತದಲ್ಲಿ ಅಲ್ಪಸಂಖ್ಯಾತರಾಗುತ್ತಾರೆ ಎಂದು ಕಳವಳ ವ್ಯಕ್ತವಾಗಿದೆ. ಇದಕ್ಕೆ ಪ್ರತಿಯಾಗಿ ಅಫಿಡವಿಟ್‌ ಸಲ್ಲಿಸಿದ್ದ ಕೇಂದ್ರ ಗೃಹ ಸಚಿವಾಲಯ, ಧರ್ಮದ ಸ್ವಾತಂತ್ರ್ಯದ ಹಕ್ಕು ಇತರ ಜನರನ್ನು ನಿರ್ದಿಷ್ಟ ಧರ್ಮಕ್ಕೆ ಪರಿವರ್ತಿಸುವ ಮೂಲಭೂತ ಹಕ್ಕನ್ನು ಒಳಗೊಂಡಿಲ್ಲ. ಹೇಳಲಾದ ಹಕ್ಕು ಖಂಡಿತವಾಗಿಯೂ ವ್ಯಕ್ತಿಯೊಬ್ಬನನ್ನು ವಂಚನೆ, ಬಲಾತ್ಕಾರ, ಆಮಿಷ ಅಥವಾ ಇತರ ವಿಧಾನಗಳ ಮೂಲಕ ಮತಾಂತರಿಸುವ ಹಕ್ಕನ್ನು ಒಳಗೊಳ್ಳುವುದಿಲ್ಲ ಎಂದು ತಿಳಿಸಿತ್ತು.

ಮೋಸ, ವಂಚನೆ, ಬಲಾತ್ಕಾರ, ಆಮಿಷ ಅಥವಾ ಇತರ ವಿಧಾನಗಳ ಮೂಲಕ ದೇಶದಲ್ಲಿನ ಅಮಾಯಕ ನಾಗರಿಕರನ್ನು ಸಂಘಟಿತವಾಗಿ, ವ್ಯವಸ್ಥಿತವಾಗಿ ಮತ್ತು ಅತ್ಯಾಧುನಿಕ ರೀತಿಯಲ್ಲಿ ಮತಾಂತರ ಮಾಡುವ ಅನೇಕ ನಿದರ್ಶನಗಳನ್ನು ಅರ್ಜಿದಾರರು ಎತ್ತಿ ತೋರಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಓದಿ: ಬಲವಂತದ ಧಾರ್ಮಿಕ ಮತಾಂತರ ನಿಷೇಧ; ಸುಪ್ರೀಂಕೋರ್ಟ್​ಗೆ ಹೊಸ ಅರ್ಜಿ ಸಲ್ಲಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.