ಕರ್ನಾಟಕ

karnataka

ಅರಣ್ಯ ಇಲಾಖೆ ಭೂಮಿ ಲೀಸ್​ಗೆ ಪಡೆದು ಹಣ ಪಾವತಿಸದ ಕಂಪನಿಗಳಿಂದ ಭೂಮಿ ವಾಪಸ್​ಗೆ ನಿರ್ಧಾರ: ಸಚಿವ ಖಂಡ್ರೆ

By ETV Bharat Karnataka Team

Published : Jan 9, 2024, 8:15 PM IST

Updated : Jan 9, 2024, 9:28 PM IST

ಅರಣ್ಯ ಇಲಾಖೆಯ ಭೂಮಿ ಲೀಸ್​ಗೆ ಪಡೆದು ಹಣ ಪಾವತಿಸದ ಕಂಪನಿಗಳಿಂದ ಭೂಮಿ ವಾಪಸ್ ಪಡೆಯಲು ನಿರ್ಧಾರ ಮಾಡಲಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

Minister Ishwar Khandre  ಅರಣ್ಯ ಇಲಾಖೆ  forest department  ಸಚಿವ ಈಶ್ವರ್ ಖಂಡ್ರೆ
ಅರಣ್ಯ ಇಲಾಖೆಯ ಭೂಮಿ ಲೀಸ್​ಗೆ ಪಡೆದು ಹಣ ಪಾವತಿಸದ ಕಂಪನಿಗಳಿಂದ ಭೂಮಿ ವಾಪಸ್ ಪಡೆಯಲು ನಿರ್ಧಾರ: ಸಚಿವ ಈಶ್ವರ್ ಖಂಡ್ರೆ

ಸಚಿವ ಈಶ್ವರ್ ಖಂಡ್ರೆ ಮಾತನಾಡಿದರು

ಬೆಂಗಳೂರು:ಕಾಫಿ, ಟೀ, ಮೆಣಸು, ರಬ್ಬರ್ ಬೆಳೆಯಲು ಅರಣ್ಯ ಇಲಾಖೆಯ ಭೂಮಿಯನ್ನು ಲೀಸ್​ಗೆ ಪಡೆದು ಹಣ ಪಾವತಿಸದ ಕಂಪನಿಗಳಿಂದ ಭೂಮಿಯನ್ನು ವಾಪಸ್ ಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ.

ವಿಕಾಸಸೌಧದಲ್ಲಿ ಇಂದು (ಮಂಗಳವಾರ) ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ''ಸ್ವಾತಂತ್ರ್ಯ ಪೂರ್ವದಲ್ಲಿ ಕಾಫಿ, ಟೀ, ರಬ್ಬರ್ ಬೆಳೆಯಲು ಸಾವಿರಾರು ಎಕರೆ ಭೂಮಿಯನ್ನು ಲೀಸ್​ಗೆ ನೀಡಲಾಗಿತ್ತು. ಲೀಸ್ ಹಣ ಬರದೇ ಇದ್ದ ಕಂಪನಿಗಳಿಂದ ಭೂಮಿ ವಾಪಸ್ ಪಡೆಯಲು ನಿರ್ಧಾರ ಮಾಡಲಾಗಿದೆ. ಎಕರೆಗೆ ಕೇವಲ ಎರಡು ರೂ. ನಿಂದ ಏಳು ರೂ. ಅಂತ ನಿಗದಿ ಮಾಡಿಕೊಡಲಾಗಿತ್ತು. 1997 ರಲ್ಲಿ ಹೆಕ್ಟೇರ್ ಗೆ 5 ಸಾವಿರ ರೂ. ಅಂತ ನಿಗದಿ ಮಾಡಲಾಗಿತ್ತು. ಆ ಪ್ರಕಾರ ಲೀಸ್ ಹಣ ಬಾಕಿ ಉಳಿಸಿಕೊಂಡ ಕಂಪನಿಗಳಿಂದ ಭೂಮಿ ವಾಪಸ್ ಪಡೆಯಲಾಗುತ್ತದೆ'' ಎಂದರು.

''ವಿರಾಜಪೇಟೆಯ ಮರ್ಕೆರಾ ಕಂಪನಿ 1,575 ಎಕರೆ ಭೂಮಿಯನ್ನು ಲೀಸ್​ಗೆ ಪಡೆದುಕೊಂಡಿದ್ದು, ಥಾಮ್ಸನ್ ರಬ್ಬರ್ ಲಿ. 625 ಎಕರೆ ಗುತ್ತಿಗೆ ಪಡೆದಿದ್ದು, 2015 ರವರೆಗೆ 91.29 ಕೋಟಿ ರೂ. ಪಾವತಿಸಬೇಕಿದೆ. ನಿಲಂಬೂರ್ ರಬ್ಬರ್ ಕಂಪನಿ ಲಿಮಿಟೆಡ್​ 713 ಎಕರೆ ಗುತ್ತಿಗೆ ಪಡೆದಿದ್ದು, 130.22 ಕೋಟಿ ರೂ. ಪಾವತಿಸಬೇಕಿದೆ. ಪೋರ್ಟ್ ಲ್ಯಾಂಡ್ ರಬ್ಬರ್ ಎಸ್ಟೇಟ್ ಲಿಮಿಟೆಡ್​ 1288 ಎಕರೆ ಗುತ್ತಿಗೆ ಪಡೆದಿದ್ದು 2022 ರವರೆಗೆ 536.66 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಗ್ಲೆನ್ ಲಾರೆನ್ಸ್ ಪ್ರೈ.ಲಿ. ಮತ್ತು ಟಾಟಾ ಕಂಪನಿ 943 ಎಕರೆ ಅರಣ್ಯ ಭೂಮಿ ಗುತ್ತಿಗೆ ಪಡೆದಿದ್ದು, 524 ಕೋಟಿ ರೂ. ಬಾಕಿ ಪಾವತಿಸಿಬೇಕಿದೆ.

ಚಾಮರಾಜನಗರದ ಹೊನ್ನಮಟ್ಟಿ ನೀಲಗಿರಿ ಪ್ಲಾಂಟೇಷನ್ ಲಿ. ಮತ್ತಿತರರಿಂದ 2015 ರವರೆಗೆ 25.36 ಕೋಟಿ ರೂ. ಎಕರೆ ಭೂಮಿಯನ್ನು ಗುತ್ತಿಗೆಗೆ ಪಡೆದಿದೆ. ಒಟ್ಟಾರೆ ಎರಡು ಸಾವಿರ ಕೋಟಿ ರೂ.ಗೂ ಹೆಚ್ಚು ಲೀಸ್ ಹಣವನ್ನು ಕಂಪನಿಗಳು ಅರಣ್ಯ ಇಲಾಖೆಗೆ ಪಾವತಿ ಮಾಡಬೇಕಿದೆ. ಈ ಪೈಕಿ ಕೆಲವರು ಬಾಕಿ ಪಾವತಿಸುವ ಬದಲಿಗೆ ಕೋರ್ಟ್ ಮೊರೆ ಹೋಗಿದ್ದರು'' ಎಂದು ಹೇಳಿದರು.

ಬಡ್ಡಿ ಸಹಿತ ಬಾಕಿ ವಸೂಲಿಗೆ ಕ್ರಮ:''ಇದರಲ್ಲಿ ಥಾಮ್ಸನ್ ರಬ್ಬರ್ ಅರಣ್ಯ ಗುತ್ತಿಗೆ ಭೂಮಿಯನ್ನೇ ಬ್ಯಾಂಕ್​ನಲ್ಲಿ ಅಡಮಾನ ಇಟ್ಟು ಸಾಲ ಪಡೆದಿದ್ದು, ಸಾಲ ಕಟ್ಟದ ಕಾರಣ ಬ್ಯಾಂಕ್​​ನವರು ಅದನ್ನು ಹರಾಜು ಹಾಕಿದ್ದಾರೆ. ಇದರ ಜೊತೆಗೆ ವಿರಾಜಪೇಟೆ ಒಂದರಿಂದಲೇ ಸಂಬಂಧಿಸಿದಂತೆ ಆಡಿಟ್ ವರದಿಯಲ್ಲಿ ಇಲಾಖೆಗೆ ಗುತ್ತಿಗೆ ಮೊತ್ತ 1,601 ಕೋಟಿ ರೂಪಾಯಿ ಬರಬೇಕು ಎಂದು ತಿಳಿಸಿದೆ. ಈ ಪೈಕಿ ಬಾಕಿ ಪಾವತಿಸುವಂತೆ ನೋಟಿಸ್ ನೀಡಿದ ಕೂಡಲೇ ಕೆಲವರು ನ್ಯಾಯಾಲಯಕ್ಕೆ ಹೋಗಿದ್ದು, ಕೆಲವು ಪ್ರಕರಣ ಬಾಕಿ ಇದೆ. ಇದೆಲ್ಲ ಪ್ರಕರಣದಲ್ಲಿ ಕಾನೂನು ಹೋರಾಟ ನಡೆಸಲು ಒಂದು ವಿಶೇಷ ತಂಡ ರಚಿಸಲಾಗುವುದು. ಗುತ್ತಿಗೆ ಪಡೆದಿರುವ ಕಂಪನಿಗಳಿಂದ ಬರಬೇಕಿರುವ ಬಾಕಿ ವಸೂಲಿಗೆ ಒಂದು ವಿಶೇಷ ಪಿಸಿಸಿಎಫ್ ಅಥವಾ ಎಪಿಸಿಸಿಎಫ್ ದರ್ಜೆಯ ಅಧಿಕಾರಿಗೆ ಇದರ ಹೊಣೆ ನೀಡಲಾಗುವುದು. ಒಂದು ವರ್ಷದಲ್ಲಿ ಈ ಎಲ್ಲ ಬಾಕಿ, ದಂಡ ಶುಲ್ಕ ಮತ್ತು ಬಡ್ಡಿ ಸಹಿತ ಬಾಕಿ ವಸೂಲಿ ಮಾಡಲು ಕ್ರಮ ವಹಿಸಲಾಗುವುದು'' ಎಂದು ತಿಳಿಸಿದರು.

''ಮರ ಕಡಿದ ಪ್ರಕರಣದಲ್ಲಿ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಮ್ ಸಿಂಹ ಅವರನ್ನು ಬಂಧಿಸಲಾಗಿತ್ತು. ಆದರೆ, ಅವರ ಹೆಸರು ಎಫ್​ಐಆರ್​ನಲ್ಲಿ ಇಲ್ಲದಿರುವುದು ಮೈಸೂರು ಜಿಲ್ಲೆಯಲ್ಲಿ ರಾಜಕೀಯ ಕೆಸರೆರಚಾಟ ನಡೆಯುತ್ತಿದೆ. ಪ್ರಕರಣದ ಬಗ್ಗೆ ಮಾತನಾಡಿದ ಸಚಿವರು, ಈ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ, ನನ್ನ ಪ್ರಭಾವ ಇರುವುದಿಲ್ಲ'' ಎಂದರು.

''ವಿರಾಜಪೇಟೆಯಲ್ಲಿ ಮರ ಕಡಿದ ಬಗ್ಗೆ ಆರೋಪ ಇದೆ. ಕಾನೂನು ಕ್ರಮ ಜರುಗಿಸಿ ಡಿಸಿಎಫ್ ಅಮಾನತು ಮಾಡಿದೆ. ಹಿಂದಿನ ಸರ್ಕಾರದಲ್ಲಿ ಆದಂತಹ ಪಾಪದ ಕೆಲಸಗಳನ್ನ ನಾವು ತೊಳಿಯುತ್ತಿದ್ದೇವೆ. ತರೀಕೆರೆಯಲ್ಲಿ ಮರ ಕಡಿದ ಆರೋಪ ಇದೆ. ಮೂವರನ್ನ ಅಮಾನತು ಮಾಡಿದ್ದೇವೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ಮಾಡುವ ಮೊದಲೇ ನಾವೂ ಕ್ರಮ ಕೈಗೊಂಡಿದ್ದೇವೆ. ಪಾಪ ಅವರಿಗೆ ಮಾಹಿತಿ ಇಲ್ಲಾ ಅನಿಸುತ್ತದೆ'' ಎಂದು ಸಚಿವರು ಸವಾಲು ಹಾಕಿದ್ದಾರೆ.

ಅಧಿಕಾರಿಗಳಿಗೆ ಸೂಚನೆ:ಅರಣ್ಯ ಹಕ್ಕು ಕಾಯಿದೆ ಅಡಿ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಆದಿವಾಸಿಗಳಿಗೆ ಅವಕಾಶ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿಕಾಸಸೌಧದಲ್ಲಿ ಇಂದು ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವರು, ''ಹುಲಿ ಸಂರಕ್ಷಿತ ಪ್ರದೇಶದ ಹೊರತಾಗಿ ಇತರ ಕಾಡುಗಳಲ್ಲಿ ಆದಿವಾಸಿಗಳಿಗೆ ದನಕರು ಮೇಯಿಸಲು ಅವಕಾಶವಿದ್ದಲ್ಲಿ ಮಾನವ, ವನ್ಯಜೀವಿ ಸಂಘರ್ಷ ಆಗುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ರೂಪುರೇಷೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಬಾರಿ ಮಳೆಯ ಕೊರತೆಯೂ ಇದ್ದು, ಬೇಸಿಗೆಯಲ್ಲಿ ಕಾಳ್ಗಿಚ್ಚಿನ ಅಪಾಯ ಹೆಚ್ಚು ಇರುವ ಹಿನ್ನೆಲೆಯಲ್ಲಿ ಅರಣ್ಯದಲ್ಲೇ ಇರುವ ಆದಿವಾಸಿಗಳು ಅರಣ್ಯ ರಕ್ಷಿಸಲು, ಬೆಂಕಿ ನಂದಿಸಲು ಶ್ರಮಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ. ಆದಿವಾಸಿಗಳ ನಿಯೋಗದ ನೇತೃತ್ವವನ್ನು ಗಿರೀಶ್ ವಹಿಸಿದ್ದರು. ಸಭೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ನಾಳೆಯಿಂದ ಬಂಕ್​ಗಳಲ್ಲಿ ಪೆಟ್ರೋಲ್ ಡೀಸೆಲ್ ದರಪಟ್ಟಿ ಕನ್ನಡದಲ್ಲಿ ಪ್ರಕಟ: ಹರ್ದೀಪ್ ಸಿಂಗ್ ಪುರಿ

Last Updated :Jan 9, 2024, 9:28 PM IST

ABOUT THE AUTHOR

...view details