ಬೆಂಗಳೂರು:ನಾಡಿನ ಜನತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಭಾರತೀಯ ಸಂವಿಧಾನ ದಿನಾಚರಣೆಯ ಶುಭಾಶಯ ಕೋರಿದ್ದು, ಸಂವಿಧಾನಕ್ಕೆ ಸದಾ ಬದ್ಧರಾಗಿರುವ ಸಂಕಲ್ಪವನ್ನು ಪುನರುಚ್ಛರಿಸೋಣ ಎಂದು ಕರೆ ನೀಡಿದ್ದಾರೆ.
1949ರ ನವೆಂಬರ್ 26ರಂದು ಭಾರತದ ಸಂವಿಧಾನವನ್ನು ಅಂದಿನ ಸಂವಿಧಾನ ಸಭೆ ಅಂಗೀಕರಿಸಿತು. ನಮ್ಮ ಸಂವಿಧಾನದ ಸದಾಶಯಗಳನ್ನು ಸಂರಕ್ಷಿಸುವ ಹಾಗೂ ಪಾಲಿಸುವ ದೃಢನಿಶ್ಚಯದೊಂದಿಗೆ ನಮ್ಮ ಎಲ್ಲ ಸಂವಿಧಾನ ಕರ್ತೃಗಳನ್ನು ಸ್ಮರಿಸೋಣ, ಸಂವಿಧಾನಕ್ಕೆ ಸದಾ ಬದ್ಧರಾಗಿರುವ ಸಂಕಲ್ಪವನ್ನು ಪುನರುಚ್ಚರಿಸೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಸಂವಿಧಾನವೇ ನಮ್ಮ ರಾಷ್ಟ್ರಧರ್ಮ. ಪ್ರತಿಯೊಬ್ಬ ಭಾರತೀಯನ ಸ್ವಾತಂತ್ರ್ಯ, ಹಕ್ಕು, ಘನತೆಯನ್ನು ಸಂವಿಧಾನ ರಕ್ಷಿಸುತ್ತದೆ. ಸಮಾನತೆಯೊಂದಿಗೆ ನಮ್ಮ ವಿಚಾರ, ಅಭಿವ್ಯಕ್ತಿ, ಶ್ರದ್ಧೆ, ಉಪಾಸನೆಯ ಸ್ವಾತಂತ್ರ್ಯವೂ ಸಂವಿಧಾನದತ್ತವಾಗಿದ್ದು, ಇದರೊಂದಿಗೆ ಸಂವಿಧಾನದ ಸದಾಶಯಗಳನ್ನು ಸಂರಕ್ಷಿಸುವ ಕರ್ತವ್ಯಗಳನ್ನೂ ನಾವು ನಿರ್ವಹಿಸೋಣ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಭಾರತೀಯ ಸಂವಿಧಾನ ದಿನಾಚರಣೆಯ ಶುಭಾಶಯಗಳು. ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಲು ನಾವೆಲ್ಲರೂ ಶ್ರಮಿಸೋಣ ಎಂದು ಬಿಜೆಪಿ ಟೀಟ್ ಮಾಡಿದೆ.