ಕರ್ನಾಟಕ

karnataka

'ಬಿಜೆಪಿ ಅಂದ್ರೆ ಭ್ರಷ್ಟಾಚಾರ - 40 ಪರ್ಸೆಂಟ್​ ಕಮಿಷನ್ ಸರ್ಕಾರ'.. ಕಾಂಗ್ರೆಸ್​ನಿಂದ ಅಭಿಯಾನ ಆರಂಭ

By

Published : Sep 14, 2022, 9:04 AM IST

ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅನೇಕರು ಈ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಹೇಳಲು ಹಿಂಜರಿಯುತ್ತಾರೆ. ಹೀಗಾಗಿ, ಕಾಂಗ್ರೆಸ್ ಪಕ್ಷದ ವತಿಯಿಂದ ಸಹಾಯವಾಣಿ ಆರಂಭಿಸಿದ್ದೇವೆ. ಜನರು ಈ ಸಹಾಯವಾಣಿ ಸಂಖ್ಯೆ 8447704040ಕ್ಕೆ ಕರೆ ಮಾಡಿ ವಾಟ್ಸ್​ ಆ್ಯಪ್ ಮೂಲಕ ಅಭಿಪ್ರಾಯ ತಿಳಿಸಬಹುದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕಾಂಗ್ರೆಸ್
congress

ಬೆಂಗಳೂರು: ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಜನರ ರಕ್ತ ಹೀರುವ ಕೆಲಸ ಮಾಡುತ್ತಿದೆ. ಈ ಹಿನ್ನೆಲೆ 'ಬಿಜೆಪಿ ಅಂದ್ರೆ ಭ್ರಷ್ಟಚಾರ ಹಾಗೂ 40% ಕಮಿಷನ್ ಸರ್ಕಾರ' ಎಂದು ಕಾಂಗ್ರೆಸ್ ಅಭಿಯಾನ ಆರಂಭಿಸುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದ ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂತೋಷ್ ಪಾಟೀಲ್ ಎಂಬ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ಕೆಲಸ ಮಾಡಿ, 40% ಕಮಿಷನ್ ನೀಡದ ಕಾರಣ ಆತನ ಬಿಲ್ ಪಾಸ್ ಆಗಲಿಲ್ಲ. ಹಲವು ಬಾರಿ ಅಂದು ಸಚಿವರಾಗಿದ್ದ ಈಶ್ವರಪ್ಪನವರನ್ನು ಭೇಟಿ ಮಾಡಿದಾಗ, ಕಮಿಷನ್ ನೀಡದಿದ್ದರೆ ಬಿಲ್ ಪಾಸಾಗಲ್ಲ ಎಂದು ಹೇಳಿದ್ದಕ್ಕೆ ಜಿಗುಪ್ಸೆಗೊಂಡು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಅಧಿವೇಶನದಲ್ಲಿ ಎತ್ತಿ ಹಿಡಿದು, ಈಶ್ವರಪ್ಪನವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಅವರು ರಾಜೀನಾಮೆ ನೀಡಬೇಕು ಎಂದು ನಾವು ಆಗ್ರಹಿಸಿದ್ದೆವು.

ಇದನ್ನೂ ಓದಿ:ಕಾಂಗ್ರೆಸ್ ಗುತ್ತಿಗೆದಾರ ಪುಡಾರಿಗಳು 40 ಪರ್ಸೆಂಟ್ ಕಮಿಷನ್ ಆರೋಪ ಮಾಡುತ್ತಿದ್ದಾರೆ: ಬಿ.ವೈ ವಿಜಯೇಂದ್ರ

ಈಶ್ವರಪ್ಪನವರು ರಾಜೀನಾಮೆ ಕೊಟ್ಟರೂ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಿಲ್ಲ. ಕಾನೂನು ಎಲ್ಲರಿಗೂ ಒಂದೇ, ಈಶ್ವರಪ್ಪನವರಿಗೆ ಬೇರೆ ಕಾನೂನು ಇರಲು ಸಾಧ್ಯವಿಲ್ಲ. ಈ ಪ್ರಕರಣದ ತನಿಖೆ ಮಾಡಿಸುವುದಾಗಿ ಸರ್ಕಾರ ಬಿ ರಿಪೋರ್ಟ್ ಸಲ್ಲಿಸಿದೆ. ಪೊಲೀಸ್ ತನಿಖೆಯಿಂದ ನ್ಯಾಯ ಸಿಗುವುದಿಲ್ಲ, ನ್ಯಾಯಾಂಗ ತನಿಖೆಯಿಂದ ನ್ಯಾಯ ಸಿಗುತ್ತದೆ ಎಂದು ಆಗ್ರಹಿಸಿದ್ದೆವು. ಆದರೆ, ಸರ್ಕಾರ ಒಪ್ಪಲಿಲ್ಲ. ಸರ್ಕಾರ ಬಿ ರಿಪೋರ್ಟ್ ಸಲ್ಲಿಸಿದ ನಂತರ ಸಂತೋಷ್ ಪಾಟೀಲ್ ಪತ್ನಿ ರಾಜ್ಯಪಾಲರಿಗೆ ಪತ್ರ ಬರೆದು ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ ಎಂದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಮಿಷನ್ ವಿಚಾರವಾಗಿ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಈ ಸರ್ಕಾರ ಮಠಗಳಿಗೆ ನೀಡುವ ಹಣದಲ್ಲಿ 30% ಕಮಿಷನ್, ಬಿಬಿಎಂಪಿಯಲ್ಲಿ 50% ಕಮಿಷನ್, ಸರ್ಕಾರಿ ಹುದ್ದೆಗಳಿಗೆ ದರ ನಿಗದಿ ಮಾಡಿದ್ದಾರೆ. ಮೋದಿ ಅವರು ನಾಖಾವೂಂಗಾ ನಾ ಖಾನೇದೂಂಗ ಎನ್ನುತ್ತಾರೆ. ಆದರೆ, ಈ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡಿದೆ. ಅನೇಕರು ಈ ಸರ್ಕಾರದ ಭ್ರಷ್ಟಾಚಾರ ಹೇಳಲು ಹಿಂಜರಿಯುತ್ತಾರೆ. ಹೀಗಾಗಿ, ಕಾಂಗ್ರೆಸ್ ಪಕ್ಷದ ವತಿಯಿಂದ ಸಹಾಯವಾಣಿ ಆರಂಭಿಸಿದ್ದೇವೆ. ಜನರು ಈ ಸಹಾಯವಾಣಿ ಸಂಖ್ಯೆ 8447704040ಕ್ಕೆ ಕರೆ ಮಾಡಿ ವಾಟ್ಸ್​ ಆ್ಯಪ್ ಮೂಲಕ ತಿಳಿಸಬಹುದು ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ:ಶೇ 40 ಕಮಿಷನ್‌ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿ: ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ಜನರಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ. ನಾವು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ರಹಿತ ಸರ್ಕಾರ ನೀಡುತ್ತೇವೆ. ಈ ಭ್ರಷ್ಟಾಚಾರದಿಂದ ಎಲ್ಲರೂ ತತ್ತರಿಸಿದ್ದು, ರಾಜ್ಯವನ್ನು ಹಾಗೂ ಜನರನ್ನು ಇದರಿಂದ ಮುಕ್ತಗೊಳಿಸಬೇಕಿದೆ. ಹೀಗಾಗಿ, ಈ ಅಭಿಯಾನ ಆರಂಭಿಸಿದ್ದೇವೆ ಎಂಬ ಮಾಹಿತಿ ನೀಡಿದರು.

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಬಿಜೆಪಿಯ 40% ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಇಂಡಿಯಾ ಅಗೈನ್ಸ್ಟ್ ಕರಪ್ಷನ್ ಎಂದು ಕಾಂಗ್ರೆಸ್ ವಿರುದ್ಧ ಜನರನ್ನು ಎತ್ತಿಕಟ್ಟಿದರು. 8 ವರ್ಷವಾದರೂ ಇದುವರೆಗೂ ಯಾವುದೇ ಪ್ರಕರಣ ಸಾಬೀತು ಮಾಡಲು ಆಗಿಲ್ಲ. ನಮ್ಮ ಮೇಲೆ ಭ್ರಷ್ಟಾಚಾರ ಆರೋಪ ಮಾಡಲು ಸಾಂವಿಧಾನಿಕ ಸಂಸ್ಥೆಗಳ ಮುಖ್ಯಸ್ಥರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿಯವರು ಜನರ ಹಿತಕ್ಕೆ ಯಾವುದೇ ಕಾರ್ಯಕ್ರಮ ಮಾಡಿಲ್ಲ. ಇವರು ಕೋಮುವಾದದ ಮೇಲೆ ರಾಜಕೀಯ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಬೆಂಗಳೂರು ಹಾಗೂ ಕರ್ನಾಟಕ ಎಂದರೆ ಪ್ರಗತಿಪರ ರಾಜ್ಯ ಹಾಗೂ ನಗರವಾಗಿದೆ. ಇತ್ತೀಚೆಗೆ ಬಂದ ಮಾಹಿತಿ ಪ್ರಕಾರ, ನವೋದ್ಯಮದಲ್ಲಿ ವಿಶ್ವದಲ್ಲೇ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಸಿಲ್ಕ್, ಸೈನ್, ಮಿಲ್ಕ್ ನಿಂದ ಸಿಲಿಕಾನ್ ಸಿಟಿ ಆಗಿ ಬೆಳೆಯುವವರೆಗೆ ನೆಹರೂ ಅವರಿಂದ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ನೆರವಿನಿಂದ ಬೆಂಗಳೂರಿಗೆ ಬಂಡವಾಳ ಹೂಡಿಕೆ ಆಗಿದೆ. ಯಾವುದೇ ಒಂದು ಭ್ರಷ್ಟಾಚಾರದ ಆರೋಪ ನಮ್ಮ ಮೇಲೆ ಬಂದಿರಲಿಲ್ಲ. ಆದರೆ, ಈಗ ಸಾರ್ವಜನಿಕ ಉದ್ದಿಮೆಗಳನ್ನು ಮಾರಲು ಹೊರಟಿದ್ದಾರೆ. ಕೇವಲ ಇಬ್ಬರು ಉದ್ಯಮಿಗಳಿಗೆ ಸಹಾಯ ಮಾಡಲು ಸರ್ಕಾರ ಕೆಲಸ ಮಾಡುತ್ತಿದೆ. ಡಬಲ್ ಇಂಜಿನ್ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಹೇಳಿದರು.

ಇದನ್ನೂ ಓದಿ:ಕೆಂಪಣ್ಣ ಮಾಡಿರುವ 40 ಪರ್ಸೆಂಟ್​ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಲಿ: ಉಗ್ರಪ್ಪ

ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಲೋಕಪಾಲ್ ಮಸೂದೆ ತಂದಿಲ್ಲ ಎಂದು ಹೋರಾಟ ಮಾಡಿದ್ದ ಅಣ್ಣಾ ಹಜಾರೆ ಇನ್ನೂ ನಿದ್ದೆಯಿಂದ ಎದ್ದಿಲ್ಲ. ಅವರಿಗೆ ಈಗ ಲೋಕಪಾಲ್ ಮಸೂದೆ ಎಲ್ಲಿದೆ ಅಂತಲೇ ಗೊತ್ತಿಲ್ಲ. ಕೆಂಪಣ್ಣ ಅವರು ಬಿಜೆಪಿ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದು, ಇದಕ್ಕೆ ಕಾರಣ ಆಪರೇಷನ್ ಕಮಲ. ಬಿಜೆಪಿ ಸರ್ಕಾರದಲ್ಲಿ ವಿಜಯೇಂದ್ರ ತೆರಿಗೆ ಎಂದು ಸಂಗ್ರಹಿಸಲಾಗಿದೆ. ಆತ ಯಾವುದೇ ಶಾಸಕರಲ್ಲ. ಕೇವಲ ಬಿಜೆಪಿ ಪದಾಧಿಕಾರಿ. ಇವರ ಬಗ್ಗೆ ಕಾಂಗ್ರೆಸ್ ಪಕ್ಷ ಪ್ರಶ್ನೆ ಮಾಡಿದರೆ, ಮರುದಿನವೇ ಇಡಿ, ಐಟಿ, ಸಿಬಿಐ ದಾಳಿ ಆಗುತ್ತವೆ. ಬಿಜೆಪಿ ಪರವಾಗಿದ್ದ ದೊಡ್ಡ ಉದ್ಯಮಿಯೋಬ್ಬರು ಬೆಂಗಳೂರು ಪ್ರವಾಹದ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಕ್ಕೆ ಅವರ ಸಂಘ ಸಂಸ್ಥೆಗಳ ಮೇಲೆ ದಾಳಿ ಮಾಡಿಸಿದ್ದಾರೆ. ಇದರ ವಿರುದ್ಧ ಜನಜಾಗೃತಿ ಮೂಡಿಸಲು, ಬಿಜೆಪಿ ಹೇಗೆ ಕರ್ನಾಟಕಕ್ಕೆ ಮಸಿ ಬಳಿದಿದೆ ಎಂದು ತಿಳಿಸಲು ಈ ಅಭಿಯಾನ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ABOUT THE AUTHOR

...view details