ಕರ್ನಾಟಕ

karnataka

''ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಕಂಡೀಷನ್ ಮತ್ತು ಕರಪ್ಶನ್ ಸರ್ಕಾರ'': ಮೊಹಲ್ಲಾ ಕ್ಲಿನಿಕ್ ಅವಹೇಳನಕ್ಕೆ ಮುಖ್ಯಮಂತ್ರಿ ಚಂದ್ರು ತಿರುಗೇಟು

By

Published : Aug 5, 2023, 8:48 PM IST

Updated : Aug 5, 2023, 11:04 PM IST

ರಾಜ್ಯದ ನಮ್ಮ ಕ್ಲಿನಿಕ್​​​ಗಳು ನವದೆಹಲಿ ಮೊಹಲ್ಲಾ ಕ್ಲಿನಿಕ್ ಗಳಿಗಿಂತ ಅದ್ಭುತವಾಗಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಹೇಳಿಕೆಯನ್ನು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತೀವ್ರವಾಗಿ ಖಂಡಿಸಿದ್ದಾರೆ.

Chief Minister Chandru spoke at the press conference.
ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಚಂದ್ರು ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಚಂದ್ರು ಮಾತನಾಡಿದರು.

ಬೆಂಗಳೂರು: ನವದೆಹಲಿ ಮೊಹಲ್ಲಾ ಆರೋಗ್ಯ ಕೇಂದ್ರಗಳ ಕುರಿತು ಸಚಿವ ದಿನೇಶ್ ಗುಂಡೂರಾವ್ ಅವರು ನೀಡಿದ ಹೇಳಿಕೆಯನ್ನು ಖಂಡಿಸುತ್ತೇನೆ. ಆರೋಗ್ಯ ಸಚಿವ ಗುಂಡೂರಾವ್​​ಗೆ ಕಾಮಾಲೆ ರೋಗವಿರುವ ಲಕ್ಷಣಗಳಿದ್ದು, ಪರೀಕ್ಷಿಸಿಕೊಳ್ಳುವುದು ಒಳಿತು ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕುಟುಕಿದರು.

ಬೆಂಗಳೂರಿನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ದೆಹಲಿ ಮೊಹಲ್ಲಾ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದ್ದ ದಿನೇಶ್ ಗುಂಡೂರಾವ್ ಅವರು, ರಾಜ್ಯದ ನಮ್ಮ ಕ್ಲಿನಿಕ್​​​ಗಳು ದೆಹಲಿಯ ಮೊಹಲ್ಲಾ ಕ್ಲಿನಿಕ್ ಗಳಿಗಿಂತ ಅದ್ಭುತವಾಗಿವೆ ಎಂದಿದ್ದರು. ಈ ಹೇಳಿಕೆ ಖಂಡಿಸಿದ ಮುಖ್ಯಮಂತ್ರಿ ಚಂದ್ರು ಅವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಹಾಗೂ ಗುಂಡೂರಾವ್ ಈ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಆರೋಗ್ಯ ಕೇಂದ್ರದ ವೀಕ್ಷಣೆ ವೇಳೆ ಮೆಚ್ಚಿಕೊಂಡಿದ್ದವರಿಗೆ ಹೊರಗೆ ಬರುತ್ತಿದ್ದಂತೆ ಕೆಟ್ಟದಾಗಿ ಕಂಡಿದ್ದು ಹೇಗೆಂದು ಗೊತ್ತಾಗಲಿಲ್ಲ. ಯಾವುದೋ ಫೋನ್ ಬಂದ ತಕ್ಷಣ ನಿಮ್ಮ ವರಸೆಯನ್ನು ಬದಲಿಸಿಕೊಂಡಿದ್ದು ಏಕೆ ಎಂದು ಹೇಳಬೇಕು. ಒಂದು ಫೋನ್ ಕರೆಗೆ ಹೆದರಿಕೊಂಡುಬಿಟ್ಟಿದ್ದಾರೆ. ಗಳಿಗೆಗೊಂದು ಮಾತನಾಡಬೇಡಿ ಎಂದು ತರಾಟೆಗೆ ತೆಗೆದುಕೊಂಡರು.

ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದ್ದಾಗ ಮೆಚ್ಚುಗೆ ಸೂಚಿಸಿದ್ದ ಗುಂಡೂರಾವ್ ಅವರು, ಹೊರಗೆ ಬರುತ್ತಿದ್ದಂತೆ ನಕಾರಾತ್ಮಕ ಹೇಳಿಕೆ ನೀಡಿದ್ದಾರೆ. ಗುಂಡೂರಾವ್ ಸ್ವಯಂ ಇಚ್ಛೆಯಿಂದ ನಮ್ಮ ಮೊಹಲ್ಲಾ ಕ್ಲಿನಿಕ್ ನೋಡಲು ಬಂದಿದ್ದಾಗ ದೆಹಲಿಯ ಆರೋಗ್ಯ ಮಂತ್ರಿ ಸೌರಭ್ ಭಾರಧ್ವಾಜ್ ಸ್ವತಃ ಕ್ಲಿನಿಕ್ ಗಳಿಗೆ ಕರೆದೊಯ್ದು ತೋರಿಸಿದ್ದರು. ರೋಗಿಗಳ ಜೊತೆಗೂ ಮಾತನಾಡಿಸಿದ್ದರು. ಕ್ಲಿನಿಕ್ ಬಗ್ಗೆ ಬಹಳ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತ, ನಮ್ಮ ರಾಜ್ಯದಲ್ಲೂ ಅಳವಡಿಸಿಕೊಳ್ಳುವ ಬಗ್ಗೆ ಮಾತನಾಡಿದ್ದರು.

ಈ ವಿಚಾರವನ್ನು ತಿಳಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೆಚ್ಚುಗೆಯ ಮಾತನ್ನಾಡಿದ್ದರು. ಪಕ್ಷಭೇದವಿಲ್ಲದೆ ಪರಸ್ಪರ ಸರ್ಕಾರಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದರೆ ಜನತೆಗೆ ಉತ್ತಮ ಎಂದಿದ್ದರು. ಆದರೆ ನಂತರ ಗುಂಡೂರಾವ್ ಕೃತಜ್ಞತೆಯೇ ಇಲ್ಲದೆ ನಡೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ನಮಗೆ ಬೇಕಿರುವುದು ಅರವಿಂದ ಕೇಜ್ರಿವಾಲ್ ತರಹದ ಕಮಿಟ್ಮೆಂಟ್ ಸರ್ಕಾರ, ಭ್ರಷ್ಟಾಚಾರ ಮುಕ್ತ ಸರ್ಕಾರ. ಆದರೆ ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಕಂಡೀಷನ್ ಮತ್ತು ಕರಪ್ಶನ್ ಸರ್ಕಾರ. ನಮ್ಮ ಕ್ಲಿನಿಕ್ ಆರಂಭಿಸಿದ್ದು ಬಿಜೆಪಿ ಸರ್ಕಾರ. 450 ಆರೋಗ್ಯ ಕೇಂದ್ರಗಳನ್ನು ತೆರೆಯುತ್ತೇವೆ ಎಂದಿದ್ದವರು. ಕೇವಲ 114 ಕ್ಲಿನಿಕ್ ಗಳನ್ನು ತೆರೆದಿದ್ದರು. ಒಂದು ಕಟ್ಟಡಕ್ಕೂ ಸರಿಯಾದ ವ್ಯವಸ್ಥೆಯಿಲ್ಲ. ನೀವು ಯಾರನ್ನು ಶ್ಲಾಘಿಸುತ್ತಿದ್ದೀರಿ, ತಿಳಿಯುತ್ತಿಲ್ಲ ಎಂದು ಪ್ರಶ್ನಿಸಿದರು.

ದಿನೇಶ್ ಗುಂಡೂರಾವ್ ಕ್ಷೇತ್ರದ, ಅವರದೇ ವಾರ್ಡ್​ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ನಮ್ಮ ಕ್ಲಿನಿಕ್ ನಲ್ಲೇ ಅವ್ಯವಸ್ಥೆ ತಾಂಡವವಾಡುತ್ತಿದೆ. ಆರೋಗ್ಯ ಸಚಿವರಾಗಿದ್ದುಕೊಂಡು ಬೋರಿಂಗ್ ಆಸ್ಪತ್ರೆಗಳಿಗೆ, ಕೆ ಸಿ ಜೆನರಲ್ ಆಸ್ಪತ್ರೆಗೆ, ವಿಕ್ಟೋರಿಯಾ ಆಸ್ಪತ್ರೆಗೆ ನೀವು ಯಾವತ್ತಾದರೂ ಭೇಟಿ ನೀಡಿದ್ದೀರಾ? ಸರ್ಕಾರಿ ಆಸ್ಪತ್ರೆಗಳೆಂದರ ಉಚಿತ ಸೌಲಭ್ಯಗಳು ಸಿಗುವಂತಿರಬೇಕು. ಆದರೆ ದುಡ್ಡಿಲ್ಲದೆ ಯಾವ ಚಿಕಿತ್ಸೆಯೂ ಇಲ್ಲಿನ ಆಸ್ಪತ್ರೆಗಳಲ್ಲಿ ಸಿಗುತ್ತಿಲ್ಲ. ಬೋರಿಂಗ್ ಆಸ್ಪತ್ರೆಗಳಲ್ಲಿ ಬಿಬಿಎಂಪಿ ನೌಕರರಿಂದಲೂ ಚಿಕಿತ್ಸೆ ವೆಚ್ಚಕ್ಕೆ ಸಾವಿರಾರು ರೂಪಾಯಿ ತೆಗೆದುಕೊಳ್ಳಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಈ ವೇಳೆ ಪಕ್ಷದ ರಾಜ್ಯ ಖಜಾಂಚಿ ಪ್ರಕಾಶ್ ಬೆಳಂದೂರು, ಮಾಧ್ಯಮ ವಕ್ತಾರೆ ಉಷಾ ಮೋಹನ್, ಸಾಮಾಜಿಕ ಜಾಲತಾಣಗಳ ಮುಖ್ಯಸ್ಥ ದರ್ಶನ್ ಜೈನ್ ಇದ್ದರು.

ಇದನ್ನೂಓದಿ:ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹೈಕಮಾಂಡ್ ನನಗೆ ಹೇಳಿಲ್ಲ: ಸಚಿವ ಸತೀಶ ಜಾರಕಿಹೊಳಿ

Last Updated : Aug 5, 2023, 11:04 PM IST

ABOUT THE AUTHOR

...view details