ಕರ್ನಾಟಕ

karnataka

ಅಮೃತ ಮಹೋತ್ಸವಕ್ಕಾಗಿ ದಾವಣಗೆರೆಯತ್ತ ಸಿದ್ದರಾಮಯ್ಯ ಪಯಣ: ನಾಳೆ ಬೆಂಬಲಿಗರಿಂದ ಮಹತ್ವದ ಘೋಷಣೆ?

By

Published : Aug 2, 2022, 6:03 PM IST

ಮುಂದಿನ ವರ್ಷದಿಂದ ಸಿದ್ದರಾಮಯ್ಯ ಹುಟ್ಟುಹಬ್ಬವನ್ನು ಸಾಮಾಜಿಕ ನ್ಯಾಯದ ದಿನ ಎಂದು ಆಚರಿಸಲು ಚಿಂತನೆ ನಡೆದಿದ್ದು, ನಾಳೆ ದಾವಣಗೆರೆಯಲ್ಲಿ ನಡೆಯುವ ಅಮೃತ ಮಹೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಬೆಂಬಲಿಗರು ಈ ವಿಚಾರ ಪ್ರಸ್ತಾಪಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

tomorrow-75-years-birthday-celebration-program-ex-cm-siddaramaiah-leave-to-davanagere
ಅಮೃತ ಮಹೋತ್ಸವಕ್ಕಾಗಿ ದಾವಣಗೆರೆಯತ್ತ ಸಿದ್ದರಾಮಯ್ಯ ಪಯಣ: ನಾಳೆ ಬೆಂಬಲಿಗರಿಂದ ಆಗುತ್ತಾ ಮಹತ್ವದ ಘೋಷಣೆ?

ಬೆಂಗಳೂರು: ನಾಳೆ ದಾವಣಗೆರೆಯಲ್ಲಿ ತಮ್ಮ 75ನೇ ವರ್ಷದ ಅಮೃತ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಗಳೂರಿನಿಂದ ದಾವಣಗೆರೆಗೆ ಪ್ರಯಾಣ ಬೆಳೆಸಿದರು. ಶಿವಾನಂದ ವೃತ್ತ ಸಮೀಪದ ತಮ್ಮ ಸರ್ಕಾರಿ ನಿವಾಸದಿಂದ ಅವರು ಆಪ್ತ ಬೆಂಬಲಿಗರೊಂದಿಗೆ ತೆರಳಿದ್ದಾರೆ. ದಾವಣಗೆರೆಯ ಶಾಮನೂರು ಮಾಲ್ ಮೇಲೆ ಇಂದು ಸಂಜೆ 7 ಗಂಟೆಗೆ ಮಾಜಿ ಸಿಎಂ ಕುರಿತು ಲೇಸರ್ ಶೋ ನಡೆಯಲಿದೆ.

ಅಮೃತ ಮಹೋತ್ಸವಕ್ಕಾಗಿ ದಾವಣಗೆರೆಯತ್ತ ಸಿದ್ದರಾಮಯ್ಯ ಪಯಣ: ನಾಳೆ ಬೆಂಬಲಿಗರಿಂದ ಆಗುತ್ತಾ ಮಹತ್ವದ ಘೋಷಣೆ?

ಸಿದ್ದರಾಮಯ್ಯ ಬಯೋಗ್ರಫಿ ಕುರಿತಂತೆ ವಿಶೇಷ ಪ್ರದರ್ಶನ ಇದಾಗಿದ್ದು, ಸುದೀಪ್ ಅಭಿನಯದ 'ವಿಕ್ರಾಂತ ರೋಣ' ಚಿತ್ರದ ಪ್ರದರ್ಶನಕ್ಕೆ ಮುನ್ನ ಈ ಶೋ ನಡೆಯಲಿದೆ. ಹೈದರಾಬಾದ್ ಉದ್ಯಮಿ ಶ್ರೀಧರ್ ಇದನ್ನು ಆಯೋಜಿಸಿದ್ದಾರೆ. 8-ಡಿ ತಂತ್ರಜ್ಞಾನದಡಿ ಇದನ್ನು ಸಿದ್ಧಪಡಿಸಲಾಗಿದ್ದು ಎಬಿ ಮ್ಯಾಪಿಂಗ್ ತಂತ್ರಜ್ಞಾನ ಬಳಸಿ ಪ್ರದರ್ಶಿಸಲಾಗುತ್ತಿದೆ.

ಮುಂದಿನ ವರ್ಷದಿಂದ ಸಾಮಾಜಿಕ ನ್ಯಾಯದ ದಿನ?:ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಬೆಂಬಲಿಗರಿಂದ‌ ಮಹತ್ವದ ವಿಚಾರ ಪ್ರಸ್ತಾಪ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮುಂದಿನ ವರ್ಷದಿಂದ ಸಿದ್ದರಾಮಯ್ಯ ಹುಟ್ಟು ಹಬ್ಬವನ್ನು ಸಾಮಾಜಿಕ ನ್ಯಾಯದ ದಿನ ಎಂದು ಆಚರಿಸಲು ಚಿಂತನೆ ನಡೆದಿದ್ದು, ಈ ಮೂಲಕ ಅಹಿಂದ ಸಂದೇಶ ಸಾರುವ ಪ್ರಯತ್ನವನ್ನು ಅಭಿಮಾನಿಗಳು ನಡೆಸಿದ್ದಾರೆ ಎಂದು ಹೇಳಲಾಗುತ್ತದೆ.

ಅಹಿಂದ ಎಂದು ನೇರವಾಗಿ ಘೋಷಣೆ ಮಾಡಿದರೆ ವಿವಾದ ಸೃಷ್ಟಿ ಆಗಬಹುದು. ಪಕ್ಷ ಹಾಗೂ ಸಿದ್ದರಾಮಯ್ಯನವರಿಗೂ ತೊಂದರೆ ಆಗಬಹುದು. ಆದ್ದರಿಂದ ಅಹಿಂದ ಎನ್ನುವ ಬದಲು ಸಾಮಾಜಿಕ ನ್ಯಾಯ ದಿನ ಎಂದು ಆಚರಣೆ ಮಾಡುವಂತೆ ಪ್ರಸ್ತಾಪ ಸಾಧ್ಯತೆ ಇದೆ. ಭಾಷಣ ಮಾಡುವ ಸಂದರ್ಭದಲ್ಲಿ ಸಹಜವಾಗಿ ಪ್ರಸ್ತಾಪ ಮಾಡಲು ಆಪ್ತರು ಯೋಜನೆ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ.

ನಿವಾಸದ ಸುತ್ತಮುತ್ತ ಬ್ಯಾನರ್ ಅಳವಡಿಕೆ:ಸಿದ್ದರಾಮಯ್ಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಅವರು ಬೆಂಗಳೂರಿನ ನಿವಾಸದ ಅಕ್ಕ-ಪಕ್ಕದಲ್ಲಿ ಹಾಗೂ ಪ್ರವೇಶ ದ್ವಾರದಲ್ಲಿ ಬ್ಯಾನರ್​ಗಳನ್ನು ಅಳವಡಿಸಲಾಗಿದೆ. ಹೈಕೋರ್ಟ್ ನಿರ್ಬಂಧದ ನಡುವೆಯೂ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ರಾಜಕೀಯ ನಾಯಕರ ಹುಟ್ಟು ಹಬ್ಬಕ್ಕೆ ಫ್ಲೆಕ್ಸ್ ಹಾಗೂ ಬ್ಯಾನರ್ ಅಳವಡಿಕೆ ಸಾಮಾನ್ಯ ಅನ್ನುವಂತಾಗಿದೆ. ಈಗ ಸಿದ್ದರಾಮಯ್ಯ ಅಭಿಮಾನಿಗಳು ಅಳವಡಿಸಿರುವ ಬ್ಯಾನರ್​ಗಳ ಬಗ್ಗೆಯೂ ಆಕ್ಷೇಪವಾಗಿದೆ. ಈಗಾಗಲೇ ಬಿಜೆಪಿ ನಾಯಕರು ಹಾಗೂ ಪರಿಸರ ಸ್ನೇಹಿಗಳು ಮತ್ತು ಸಿದ್ದರಾಮಯ್ಯ ನಿವಾಸ ಸುತ್ತಮುತ್ತ ವಾಸವಾಗಿರುವ ನಾಗರಿಕರಿಂದಲೂ ಅಸಮಾಧಾನ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ:ಮದುವೆಗೆ ಮೊದಲೇ ಹುಟ್ಟುವ ಮಗುವಿಗೆ ನಾನೇ ಅಪ್ಪ ಎಂಬಂತಿದೆ ಕಾಂಗ್ರೆಸ್​ ನಡವಳಿಕೆ: ಈಶ್ವರಪ್ಪ

ABOUT THE AUTHOR

...view details