ಕರ್ನಾಟಕ

karnataka

ವೀಸಾ ಸಮಸ್ಯೆ ಬಗೆಹರಿಸುವಂತೆ ಪ್ರಧಾನಿಗೆ ಮನವಿ ಮಾಡಿದ ಷಟ್ಲರ್ ಲಕ್ಷ್ಯ ಸೇನ್

By ETV Bharat Karnataka Team

Published : Nov 8, 2023, 5:04 PM IST

ಜಪಾನ್ ಮತ್ತು ಚೀನಾ ಓಪನ್‌ಗೆ ಪ್ರಯಾಣಿಸಬೇಕಾದ ವೀಸಾವನ್ನು ಆಯಾ ದೇಶಗಳು ಸರಿಯಾದ ಸಮಯಕ್ಕೆ ಒದಗಿಸುತ್ತಿಲ್ಲ ಇದನ್ನು ಬಗೆಹರಿಸುವಂತೆ ಭಾರತದ ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್ ಪ್ರಧಾನಿ ಮೋದಿ ಬಳಿ ಮನವಿ ಸಲ್ಲಿಸಿದ್ದಾರೆ.

Lakshya Sen
Lakshya Sen

ನವದೆಹಲಿ: ಭಾರತದ ಸ್ಟಾರ್ ಷಟ್ಲರ್ ಮತ್ತು 2022ರ ಕಾಮನ್‌ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಲಕ್ಷ್ಯ ಸೇನ್ ಜಪಾನ್ ಮತ್ತು ಚೀನಾ ಓಪನ್‌ಗಳಲ್ಲಿ ಭಾಗವಹಿಸಲು ಇರುವ ವೀಸಾ ಸಮಸ್ಯೆಗಳನ್ನು ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಬುಧವಾರ ಒತ್ತಾಯಿಸಿದ್ದಾರೆ.

ತನ್ನ ತಂಡವು ಅಕ್ಟೋಬರ್ 10 ರಂದು ಜಪಾನ್ ವೀಸಾಗೆ ಅರ್ಜಿ ಸಲ್ಲಿಸಿದೆ. ಆದರೆ, ಇನ್ನೂ ಅದನ್ನು ಸ್ವೀಕರಿಸಿಲ್ಲ ಎಂದು ವಿಶ್ವದ ನಂ 17 ಲಕ್ಷ್ಯ ಹೇಳಿದರು. "ನಾನು ಶನಿವಾರದಂದು ಜಪಾನ್ ಮತ್ತು ಚೀನಾ ಓಪನ್‌ಗೆ ಪ್ರಯಾಣಿಸಬೇಕಾಗಿದೆ. ನಾನು ಮತ್ತು ನನ್ನ ತಂಡವು 30/10/23 ರಂದು ಜಪಾನ್ ವೀಸಾಕ್ಕೆ ಅರ್ಜಿ ಸಲ್ಲಿಸಿದೆ. ನಮಗೆ ಇನ್ನೂ ವೀಸಾ ಸಿಕ್ಕಿಲ್ಲ. ನಾನು ಚೀನಾ ವೀಸಾಕ್ಕೂ ಅರ್ಜಿ ಸಲ್ಲಿಸಬೇಕಾಗಿದೆ. ತುರ್ತಾಗಿ ನನಗೆ ನನ್ನ ಕೋಚ್​ಗೆ ಮತ್ತು ನನ್ನ ಫಿಸಿಯೋಗೆ ವೀಸಾ ಬೇಕಾಗಿದೆ" ಎಂದು ಎಕ್ಸ್​ ಆ್ಯಪ್​ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಚೀನಾ ಮಾಸ್ಟರ್ಸ್ ನವೆಂಬರ್ 21 ರಿಂದ 26 ರವರೆಗೆ ಶೆನ್‌ಜೆನ್‌ನಲ್ಲಿ ನಡೆಯಲಿದೆ. ನವೆಂಬರ್​ನಲ್ಲಿ ಭಾರತದ ಬ್ಯಾಡ್ಮಿಂಟನ್ ಪ್ರತಿಭೆಗಳು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ನವೆಂಬರ್ 14 ರಿಂದ 19 ರವರೆಗೆ ಜಪಾನ್ ಮಾಸ್ಟರ್ಸ್ ಮತ್ತು ನವೆಂಬರ್ 21 ರಿಂದ 26 ರವರೆಗೆ ಚೀನಾ ಮಾಸ್ಟರ್ಸ್‌ ಸ್ಪರ್ಧೆ ನಡೆಯಲಿದೆ.

ಬ್ಯಾಡ್ಮಿಂಟನ್​ನಲ್ಲಿ ದಾಖಲೆ ನಿರ್ಮಿಸುತ್ತಿದೆ ಭಾರತ:ಬ್ಯಾಡ್ಮಿಂಟನ್​ನಲ್ಲಿ ಭಾರತ ಇತ್ತಿಚಿನ ವರ್ಷಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಬ್ಯಾಡ್ಮಿಂಟನ್ ವರ್ಲ್ಡ್​ ಫೆಡರೇಶನ್​ನ ವಾರ್ಷಿಕ ಪ್ರವಾಸದಲ್ಲಿ ಎಚ್‌ಎಸ್ ಪ್ರಣಯ್, ಲಕ್ಷ್ಯ ಸೇನ್, ಕಿಡಂಬಿ ಶ್ರೀಕಾಂತ್, ಪಿವಿ ಸಿಂಧು, ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಮಹಿಳಾ ಡಬಲ್ಸ್ ಜೋಡಿ ಗಾಯತ್ರಿ ಗೋಪಿಚಂದ್ ಮತ್ತು ಟ್ರೀಸಾ ಜಾಲಿ ಗಮನಾರ್ಹ ಪ್ರದರ್ಶನ ನೀಡುತ್ತಾ ಬರುತ್ತಿದ್ದಾರೆ.

ಪ್ರಸ್ತುತ ವರ್ಷದಲ್ಲಿ ಭಾರತೀಯ ಬ್ಯಾಡ್ಮಿಂಟನ್ ಆಟಗಾರರು ಉತ್ತಮ ಪ್ರದರ್ಶನ ನೀಡಿ ಶ್ರೇಯಾಂಕದಲ್ಲೂ ಏರಿಕೆ ಕಂಡಿದ್ದಾರೆ. ಬಿಡಬ್ಲ್ಯೂಎಫ್ ಪ್ರವಾಸದಲ್ಲಿ ಎಚ್‌ಎಸ್ ಪ್ರಣಯ್ ಮತ್ತು ಲಕ್ಷ್ಯ ಸೇನ್ ಹಾಗೇ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಉತ್ತಮ ಪ್ರದರ್ಶನವನ್ನು ನೀಡುತ್ತಾ ಬಂದಿದ್ದಾರೆ.

ಈ ವರ್ಷದ ಮಲೇಷ್ಯಾ ಓಪನ್​ನಲ್ಲಿ ಪ್ರಶಸ್ತಿ ಗೆದ್ದ ಪ್ರಣಯ್​ ತಮ್ಮ ಜರ್ನಿಯನ್ನು ಉತ್ತಮವಾಗಿ ಮುಂದುವರೆಸಿದರು. ನಂತರ ಇಂಡೋನೇಷ್ಯಾ ಓಪನ್​ ಸೆಮಿಫೈನಲ್​, ಚೈನೀಸ್​ ತೈಪೆ ಓಪನ್​ ಮತ್ತು ಜಪಾನ್​ ಓಪನ್​ನಲ್ಲಿ ಕ್ವಾರ್ಟ್​ರ್​ ಫೈನಲ್​ವರೆಗೆ ಸ್ಪರ್ಧಿಸಿದ್ದರು. ಲಕ್ಷ್ಯ ಸೇನ್​ ಕೆನಡಾ, ಯುಎಸ್​ ಮತ್ತು ಜಪಾನ್​ ಓಪನ್​ನಲ್ಲಿ ಸೆಮಿಫೈನಲ್​ವರೆಗೆ ತಲುಪಿ ಉತ್ತಮ ಪ್ರದರ್ಶನ ನೀಡಿದ್ದರು. ​ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸ್ವಿಸ್​, ಇಂಡೋನೇಷ್ಯಾ ಮತ್ತು ಕೊರಿಯಾ ಓಪನ್​ನಲ್ಲಿ ಫೈನಲ್​ನಲ್ಲಿ ಗೆದ್ದರೆ, ಜಪಾನ್​ ಓಪನ್​ನಲ್ಲಿ ಕ್ವಾರ್ಟರ್​ ಫೈನಲ್​ನಲ್ಲಿ ಎಡವಿದರು.

ಇದನ್ನೂ ಓದಿ:ದ್ರಾವಿಡ್​ ಮಾರ್ಗದರ್ಶನ, ರೋಹಿತ್​ ಚಾಣಾಕ್ಷ ನಡೆ ಭಾರತದ ಗೆಲುವಿನ ಸೂತ್ರ: ರಾಜೇಶ್ ಚೌಹಾಣ್

ABOUT THE AUTHOR

...view details