ಕರ್ನಾಟಕ

karnataka

ದೇಶಾದ್ಯಂತ 'ರಾಷ್ಟ್ರೀಯ ಕ್ರೀಡಾ ದಿನಾಚರಣೆ' ಸಂಭ್ರಮ: ಈ ದಿನದ ಮಹತ್ವ ಗೊತ್ತೇ?

By

Published : Aug 29, 2021, 3:53 PM IST

National Sports Day
ಮೇಜರ್​ ಧ್ಯಾನ್ ‌ಚಂದ್​ ()

2012ರಲ್ಲಿ ಭಾರತ ಸರ್ಕಾರ ಮೊದಲ ಬಾರಿಗೆ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಪರಿಚಯಿಸಿತ್ತು. ಇದು ದೇಶದಲ್ಲಿ ಕ್ರೀಡಾಭಿಮಾನಿಗಳನ್ನು ಆಕರ್ಷಿಸುವಲ್ಲಿ ಯಶಸ್ಸು ಕಾಣುತ್ತಿದೆ. ಕ್ರೀಡೆಯಿಂದಾಗುವ ಅನುಕೂಲಗಳನ್ನು ತಿಳಿಸಿ ಯುವಜನತೆಯಲ್ಲಿ ಕ್ರೀಡಾಪ್ರೇಮ ಹೆಚ್ಚಿಸುವುದೇ ಈ ದಿನದ ಉದ್ದೇಶ.

ನವದೆಹಲಿ: ದೇಶಾದ್ಯಂತ ಇಂದು ರಾಷ್ಟ್ರೀಯ ಕ್ರೀಡಾದಿನ ಆಚರಿಸಲಾಗುತ್ತಿದೆ. ಪ್ರತಿ ವರ್ಷ ಆಗಸ್ಟ್​​ 29ರಂದು ಈ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ದಿನವನ್ನೇ ಕ್ರೀಡಾ ದಿನವಾಗಿ ಆಯ್ಕೆ ಮಾಡಿರುವುದಕ್ಕೆ ಒಂದು ವಿಶೇಷವಾದ ಕಾರಣವಿದೆ.

ರಾಷ್ಟ್ರೀಯ ಕ್ರೀಡಾ ದಿನ ಆಚರಣೆ ಏಕೆ?

ಭಾರತದ ಹಾಕಿ ದಂತಕತೆ ಮೇಜರ್​ ಧ್ಯಾನ್ ‌ಚಂದ್​ ಅವರು ಆಗಸ್ಟ್​ 29 ರಂದು ಜನಿಸಿರುವುದರಿಂದ, ಅವರ ಹುಟ್ಟುಹಬ್ಬವನ್ನು ಪ್ರತಿವರ್ಷ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಆಗಸ್ಟ್​​ 29, 1905ರಂದು ಮೇಜರ್​ ಧ್ಯಾನ್‌ ಚಂದ್​ ಅಹಮದಾಬಾದ್​​ನಲ್ಲಿ ಜನ್ಮ ತಾಳಿದರು. ವಿಶ್ವ ಕಂಡ ಅಪರೂಪದ, ಅತ್ಯುತ್ತಮ ಹಾಕಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅವರು ಸುಮಾರು 400ಕ್ಕೂ ಅಧಿಕ ಅಂತಾರಾಷ್ಟ್ರೀಯ ಗೋಲು ಗಳಿಸಿ ವಿಶೇಷ ದಾಖಲೆಯನ್ನೂ ತನ್ನ ಹೆಸರಿಗೆ ಬರೆದುಕೊಂಡಿದ್ದರು.

2012 ರಲ್ಲಿ ಭಾರತ ಸರ್ಕಾರ ಮೊದಲ ಬಾರಿಗೆ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಪರಿಚಯಿಸಿತ್ತು. ಇದು ದೇಶದಲ್ಲಿ ಕ್ರೀಡಾಭಿಮಾನಿಗಳನ್ನು ಆಕರ್ಷಿಸುತ್ತಿದೆ. ಕ್ರೀಡೆಯಿಂದಾಗುವ ಅನುಕೂಲಗಳನ್ನು ತಿಳಿಸಿ ಯುವಜನತೆಯಲ್ಲಿ ಕ್ರೀಡಾಪ್ರೇಮ ಹೆಚ್ಚಿಸುವುದೇ ಈ ದಿನದ ಉದ್ದೇಶ..

ಪಂಜಾಬ್​ -ಹರಿಯಾಣದಲ್ಲಿ ಹಬ್ಬ

ಪಂಜಾಬ್​ ಮತ್ತು ಹರಿಯಾಣದಲ್ಲಿ ಧ್ಯಾನ್​ಚಂದ್​ ಜನ್ಮದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸುತ್ತಾರೆ. ಈ ದಿನ ಆ ರಾಜ್ಯಗಳಲ್ಲಿ ಕಬಡ್ಡಿ, ಮ್ಯಾರಥಾನ್​, ಕುಸ್ತಿ, ಬಾಕ್ಸಿಂಗ್​, ಬಾಸ್ಕೆಟ್​ ಬಾಲ್​, ಟೆನ್ನಿಸ್​, ಫುಟ್ಬಾಲ್ ಹಾಗೂ ಕ್ರಿಕೆಟ್​ ಆಟಗಳನ್ನು ಏರ್ಪಡಿಸಲಾಗುತ್ತದೆ. ಈ ದಿನ ರಾಜ್ಯದಲ್ಲಿನ ಉತ್ತಮ ಕ್ರೀಡಾಪಟುಗಳನ್ನು ಸಹ ಗುರುತಿಸಿ ಅವರಿಗೆ ಅಗತ್ಯ ನೆರವು ನೀಡಲಾಗುತ್ತದೆ. ಈ ಕಾರಣಕ್ಕೆೇನೋ ಅಲ್ಲಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಯಶಸ್ವಿ ಕ್ರೀಡಾಪಟುಗಳ ಉದಯವಾಗುತ್ತಿದೆ. ಈ ಬಾರಿ ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿದ್ದ ಶೇಕಡಾ 40ರಷ್ಟು ಕ್ರೀಡಾಪಟುಗಳು ಆ ಎರಡು ರಾಜ್ಯದವರೇ ಎನ್ನುವುದು ವಿಶೇಷ. ಅದರಲ್ಲೂ ನೂರು ವರ್ಷಗಳ ಭಾರತೀಯ ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಚಿನ್ನದ ಪದಕ ಗೆದ್ದುಕೊಟ್ಟ ನೀರಜ್​ ಚೋಪ್ರಾ ಕೂಡ ಹರಿಯಾಣದವರೇ.

ಧ್ಯಾನ್​ ಚಂದ್​

3 ಬಂಗಾರ ಗೆದ್ದುಕೊಟ್ಟಿದ್ದ ಧ್ಯಾನ್ ಚಂದ್

ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮೂರು ಸಲ ಬಂಗಾರದ ಪದಕ ಗೆಲ್ಲುವಲ್ಲಿ ಮೇಜರ್​ ಧ್ಯಾನ್​​ ಚಂದ್​ ನೇತೃತ್ವದ ಹಾಕಿ ತಂಡ ಯಶಸ್ವಿಯಾಗಿತ್ತು. 1928, 1932 ಹಾಗೂ 1936ರಲ್ಲಿ ಭಾರತ ಸತತ ಮೂರು ಬಾರಿ ಈ ಗೌರವಕ್ಕೆ ಪಾತ್ರವಾಗಿತ್ತು. ಹಾಕಿ ಕ್ರೀಡೆಯಲ್ಲಿ ಮಹತ್ತರ ಸಾಧನೆ ಮಾಡಿರುವ ಧ್ಯಾನ್​ ಚಂದ್​ ಅವರ ಜನ್ಮದಿನದ ಸವಿನೆನಪಿಗಾಗಿ ದೇಶಾದ್ಯಂತ ಈ ದಿನವನ್ನು ರಾಷ್ಟ್ರೀಯ ಕ್ರೀಡಾ ದಿನದಂದು ಆಚರಿಸಲಾಗುತ್ತದೆ. ಇದೇ ಕ್ರೀಡಾ ಸಾಧಕರಿಗೆ ಅರ್ಜುನ​, ರಾಜೀವ್‌ ಗಾಂಧಿ ಖೇಲ್​ ರತ್ನ ಹಾಗೂ ದ್ರೋಣಾಚಾರ್ಯ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ. ಆದರೆ ಈ ವರ್ಷ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್​ ಆಯೋಜನೆಯಾಗಿರುವುದರಿಂದ ಅಲ್ಲಿನ ಕ್ರೀಡಾಪಟುಗಳನ್ನು ಗಣನೆಗೆ ತೆಗೆದುಕೊಳ್ಳಲು ಕ್ರೀಡಾ ಸಚಿವಾಲಯ ಬಯಸಿದ್ದು, ಪ್ರಶಸ್ತಿಯನ್ನು ತಡವಾಗಿ ಘೋಷಿಸಲಿದೆ.

ಧ್ಯಾನ್‌ ಚಂದ್‌ ಆಟಕ್ಕೆ ಬೆರಗಾಗಿದ್ದ ಹಿಟ್ಲರ್‌

1936ರ ಬರ್ಲಿನ್ ಒಲಿಂಪಿಕ್ಸ್ ವೇಳೆ ಧ್ಯಾನ್ ‌ಚಂದ್​ ಆಟ ನೋಡಿ ಬೆಕ್ಕಸ ಬೆರಗಾಗಿದ್ದ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್‌ ಹಿಟ್ಲರ್, ಧ್ಯಾನ್ ​ಚಂದ್​ರಿಗೆ ಜರ್ಮನ್ ಪೌರತ್ವ ಮತ್ತು ಸೇನೆಯಲ್ಲಿ ದೊಡ್ಡ ಹುದ್ದೆ ನೀಡುವುದಾಗಿ ಘೋಷಿಸಿದ್ದರು. ಆದರೆ ಅಪ್ಪಟ ದೇಶಪ್ರೇಮಿ ಭಾರತದ ಹೆಮ್ಮೆಯ ಸೈನಿಕ ಧ್ಯಾನ್‌ ಚಂದ್ ಅದನ್ನು ನಯವಾಗಿಯೇ ನಿರಾಕರಿಸಿದ್ದರು.

ABOUT THE AUTHOR

...view details