ಶಾರ್ಜಾ: ಬೌಲರ್ಗಳ ಅಮೋಘ ಪ್ರದರ್ಶನ ಮತ್ತು ಇಶಾನ್ ಕಿಶನ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಪ್ರವೇಶಿಸಲು ಮಾಡು ಇಲ್ಲವೇ ಮಡಿ ಎಂಬಂತಿದ್ದ ಪಂದ್ಯದಲ್ಲಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 90 ರನ್ಗಳಿಸಿದರೆ, ಇದಕ್ಕುತ್ತರವಾಗಿ ಮುಂಬೈ ಇಂಡಿಯನ್ಸ್ 8.2 ಓವರ್ಗಳಲ್ಲಿ 94 ರನ್ಗಳಿಸಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ರಾಜಸ್ಥಾನ್ ನೀಡಿದ್ದ 91 ರನ್ಗಳ ಸಣ್ಣ ಮೊತ್ತದ ಗುರಿಯನ್ನು ಬೆನ್ನಟ್ಟಿದ ಮುಂಬೈಗೆ ನಾಯಕ ರೋಹಿತ್ ಭರ್ಜರಿ ಆರಂಭ ಒದಿಗಿಸಿಕೊಟ್ಟರು. ರನ್ರೇಟ್ ಉತ್ತಮಗೊಳಿಸಿಕೊಳ್ಳುವ ದೃಷ್ಟಿಯಿಂದ ಬಿರುಸಿನ ಬ್ಯಾಟಿಂಗ್ ನಡೆಸಿದ ಅವರು ಕೇವಲ13 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ಗಳ ನೆರವಿನಿಂದ 22ರನ್ಗಳಿಸಿ ಔಟಾದರು. ನಂತರದ ಬಂದ ಸೂರ್ಯಕುಮಾರ್ 8 ಎಸೆತಗಳಲ್ಲಿ 3 ಬೌಂಡರಿ ಸಹಿತ 13 ರನ್ಗಳಿಸಿ ಮುಸ್ತಫಿಜುರ್ಗೆ ವಿಕೆಟ್ ಒಪ್ಪಿಸಿದರು.
ಆದರೆ ಫಾರ್ಮ್ ಕಳೆದುಕೊಂಡು ತಂಡದಿಂದಲೇ ಹೊರಬಿದ್ದಿದ್ದ ಇಶಾನ್ ಆರಂಭಿಕನಾಗಿ ಅಮೋಘವಾಗಿ ಕಮ್ಬ್ಯಾಕ್ ಮಾಡಿದರು. ಕೇವಲ 25 ಎಸೆತಗಳಲ್ಲಿ 5 ಬೌಂಡರಿ ಮತ್ತು ಭರ್ಜರಿ 3 ಸಿಕ್ಸರ್ಗಳ ನೆರವಿನಿಂದ ಅಜೇಯ 50 ರನ್ಗಳಿಸಿ ತಂಡವನ್ನು 10 ಓವರ್ ಒಳಗೆ ಗೆಲುವಿನ ಗಡಿ ದಾಟಿಸುವಲ್ಲಿ ಸಫಲರಾದರು. ಪಾಂಡ್ಯ ಅಜೇಯ 5 ರನ್ಗಳಿಸಿದರು.
ಇದಕ್ಕೂ ಮುನ್ನ ಟಾಸ್ ಸೋತು ನಿರ್ಣಾಯಕ ಪಂದ್ಯದಲ್ಲಿ ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ಬ್ಯಾಟ್ಸ್ಮನ್ಗಳು ಶಾರ್ಜಾದ ನಿಧಾನಗತಿಯ ಪಿಚ್ ಅನ್ನು ಅರಿಯುವಲ್ಲಿ ವಿಫಲರಾದರು. ಆರಂಭದಿಂದ ಕೊನೆಯ 20 ಓವರ್ಗಳವರೆಗೆ ರಾಜಸ್ಥಾನದ ಯಾವೊಬ್ಬ ಬ್ಯಾಟ್ಸ್ಮನ್ ಮುಂಬೈ ಬೌಲರ್ಗಳ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಾಗಲಿದೆ. ಇಡೀ ಪಂದ್ಯದಲ್ಲಿ ಕೇವಲ 7 ಬೌಂಡರಿಗಳು ಮತ್ತು 2 ಸಿಕ್ಸರ್ ಮಾತ್ರ ಬಂವರು. ಆರಂಭಿಕ ಬ್ಯಾಟರ್ ಎವಿನ್ ಲೂಯಿಸ್(24) ಮಾತ್ರ 20ರ ಗಡಿ ದಾಟಿದರು.
ಜೈಸ್ವಾಲ್ 12, ಮಿಲ್ಲರ್ 15 ಮತ್ತು ರಾಹುಲ್ ತೆವಾಟಿಯಾ 12ರನ್ ಎರಡಂಕಿ ಮೊತ್ತ ದಾಟಿದ ಬ್ಯಾಟರ್ಗಳು. ನಾಯಕ ಸಾಮ್ಸನ್ ಸೇರಿದಂತೆ ಉಳಿದೆಲ್ಲಾ ಬ್ಯಾಟರ್ಗಳು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.
ನೇಥನ್ ಕೌಲ್ಟರ್ ನೈಲ್ 14ಕ್ಕೆ4, ಜಿಮ್ಮಿ ನೀಶಮ್ 12ಕ್ಕೆ 3 ಮತ್ತು ಬುಮ್ರಾ 14ಕ್ಕೆ 2 ವಿಕೆಟ್ ಪಡೆದು ರಾಜಸ್ಥಾನ್ಗೆ ಆರಂಭದಿಂದ ಅಂತ್ಯದವರೆಗೆ ಚೇತರಿಸಿಕೊಳ್ಳಲಾಗದಂತೆ ಮಾಡಿದರು ಜೊತೆ 100ರ ಗಡಿದಾಟದಂತೆ ತಡೆಯುವಲ್ಲಿ ಸಫಲರಾದರು.
ಈ ಗೆಲುವಿನ ಬಳಿಕ ಮುಂಬೈ 12 ಅಂಕದೊಡನೆ 5ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೂಡ 12 ಅಂಕಪಡೆದಿದ್ದರೂ ರನ್ರೇಟ್ ಆಧಾರದಲ್ಲಿ ಮುಂಬೈಗಿಂತ ಉತ್ತಮವಾಗಿರುವುದರಿಂದ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಎರಡೂ ತಂಡಕ್ಕೂ ಇನ್ನೊಂದು ಪಂದ್ಯ ಬಾಕಿ ಉಳಿದಿದ್ದು , ಗೆದ್ದ ತಂಡ ಪ್ಲೇ ಆಫ್ಗೆ ತೆರಳಲಿದೆ. ಸೋತ ತಂಡ ಅಭಿಯಾನ ಅಂತ್ಯಗೊಳಿಸಲಿದೆ.
ಗುರುವಾರ ಕೆಕೆಆರ್ ತನ್ನ ಕೊನೆಯ ಪಂದ್ಯದಲ್ಲಿ ರಾಜಸ್ಥಾನದ ವಿರುದ್ಧ ಮತ್ತು ಶುಕ್ರವಾರ ಮುಂಬೈ ಇಂಡಿಯನ್ಸ್ ತನ್ನ ನಿರ್ಣಾಯಕ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ. ಒಂದು ವೇಳೆ ಕೆಕೆಆರ್ ಗೆದ್ದರೆ, ಮುಂಬೈ ಇಂದಿನ ಪಂದ್ಯ ಗೆದ್ದಂತೆಯೇ ದೊಡ್ಡ ಜಯವನ್ನೇ ಸಾಧಿಸಬೇಕಾಗಿದೆ.
ಇದನ್ನು ಓದಿ: ಪಾಂಡ್ಯ ಬೌಲಿಂಗ್ ಮಾಡದಿರುವುದು ಮುಂಬೈಗಷ್ಟೇ ಅಲ್ಲ, ಭಾರತಕ್ಕೂ ದೊಡ್ಡ ನಷ್ಟ: ಗವಾಸ್ಕರ್