ಕರ್ನಾಟಕ

karnataka

ತಂಡದಲ್ಲಿ ಸಂಜು ಸ್ಯಾಮ್ಸನ್​ಗೆ ಸ್ಥಾನ ಏಕಿಲ್ಲ?; ಬಿಸಿಸಿಐ ವಿರುದ್ಧ ನೆಟ್ಟಿಗರ ಕಿಡಿ

By ETV Bharat Karnataka Team

Published : Nov 21, 2023, 4:29 PM IST

ಆಸ್ಟ್ರೇಲಿಯಾ ವಿರುದ್ಧದ 5 ಟಿ-20 ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಸೂರ್ಯಕುಮಾರ್ ಯಾದವ್ ಅವರನ್ನು ಈ ತಂಡಕ್ಕೆ ನಾಯಕರನ್ನಾಗಿ ಮಾಡಲಾಗಿದೆ. ಈ ಸರಣಿಗೆ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡದಿರುವ ಬಗ್ಗೆ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ.

Sanju Samson
Sanju Samson

ಹೈದರಾಬಾದ್​: 2023ರ ಏಕದಿನ ವಿಶ್ವಕಪ್​ ಬೆನ್ನಲ್ಲೇ ಭಾರತ ಆಸ್ಟ್ರೇಲಿಯಾದ ಜೊತೆಗೆ 5 ಟಿ20 ಪಂದ್ಯಗಳ ಸರಣಿಯನ್ನು ಆಡುತ್ತಿದೆ. ಇದಕ್ಕೆ ಬಿಸಿಸಿಐ ಸೂರ್ಯಕುಮಾರ್​ ಯಾದವ್​ ನೇತೃತ್ವದಲ್ಲಿ ತಂಡವನ್ನು ಪ್ರಕಟಿಸಿದೆ. ಐರ್ಲೆಂಡ್​ ವಿರುದ್ಧ ಭಾರತ ಜಸ್ಪ್ರೀತ್​ ಬುಮ್ರಾ ನಾಯಕತ್ವದ ಅಡಿ ಆಡಿತ್ತು. ಹೆಚ್ಚು ಕಡಿಮೆ ಇದೇ ತಂಡ ಮುಂದುವರಿಸಲಾಗಿದೆ. ಆದರೆ, ಅದರಲ್ಲಿದ್ದ ಅನುಭವಿ ಆಟಗಾರ ಸಂಜು ಸ್ಯಾಮ್ಸನ್​ ಅವರನ್ನು ಕೈಬಿಡಲಾಗಿದೆ. 3 ಪಂದ್ಯಗಳಿಗೆ ರುತುರಾಜ್ ಗಾಯಕ್ವಾಡ್ ಹಾಗೇ ಕೊನೆಯ ಎರಡು ಪಂದ್ಯಗಳಿಗೆ ಶ್ರೇಯಸ್​ ಅಯ್ಯರ್​ ಉಪನಾಯಕ ಆಗಿರಲಿದ್ದಾರೆ.

ಬಿಸಿಸಿಐ ತಂಡ ಪ್ರಕಟಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಎಕ್ಸ್​ ಆ್ಯಪ್​ನಲ್ಲಿ ಸಂಜು ಸ್ಯಾಮ್ಸನ್ ಹ್ಯಾಷ್​​ಟ್ಯಾಗ್​ ಮುನ್ನೆಲೆಗೆ ಬಂತು. ಆಸ್ಟ್ರೆಲಿಯಾ ವಿರುದ್ಧದ ತವರಿನ ಸರಣಿಗೆ ಸಂಜು ಅವರನ್ನು ಏಕೆ ಆಯ್ಕೆ ಮಾಡಿಲ್ಲ ಎಂಬ ಪ್ರಶ್ನೆಗಳು ಬಂದವು. ಏಷ್ಯಾಕಪ್​ ಮತ್ತು ವಿಶ್ವಕಪ್​ ಮುನ್ನ ನಡೆದ ಐರ್ಲೆಂಡ್​ ಸರಣಿಗೆ ಸಂಜು ಆಯ್ಕೆ ಆಗಿದ್ದರು. ಇದರಿಂದ ಮುಂದಿನ ಪ್ರಮುಖ ತಂಡದಲ್ಲಿ ಸ್ಥಾನಸಿಗುವ ನಿರೀಕ್ಷೆ ಇತ್ತು.

ಸಂಜು ಸ್ಯಾಮ್ಸನ್‌ ಅವರನ್ನು ಏಷ್ಯಾಕಪ್‌ಗಾಗಿ ತಂಡದಲ್ಲಿ ಸೇರಿಸಲಾಗಿಲ್ಲ ಅಥವಾ ವಿಶ್ವಕಪ್‌ಗೆ ಮುನ್ನ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಅವರನ್ನು ಸೇರಿಸಿಕೊಳ್ಳಲಾಗಿಲ್ಲ. ಇದೀಗ ವಿಶ್ವಕಪ್ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲೂ ಸ್ಥಾನ ಪಡೆದಿಲ್ಲ. ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ಐಪಿಎಲ್‌ನಲ್ಲಿ ಫೈನಲ್ ತಲುಪಿತ್ತು. ಅಲ್ಲದೇ ಅವರ ಐಪಿಎಲ್ ಅಂಕಿ- ಅಂಶಗಳು ಸಹ ಉತ್ತಮವಾಗಿವೆ. ಐರ್ಲೆಂಡ್​ನಲ್ಲಿ ಸಿಕ್ಕ ಒಂದು ಅವಕಾಶದಲ್ಲಿ 26 ಬಾಲ್​ನಲ್ಲಿ 40 ರನ್​ ಗಳಿಸಿ ಸಾಬೀತು ಮಾಡಿಕೊಂಡಿದ್ದರು.

ಸಂಜು ಸ್ಯಾಮ್ಸನ್ ಐಪಿಎಲ್‌ನ 148 ಇನ್ನಿಂಗ್ಸ್‌ಗಳಲ್ಲಿ 3,888 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕಗಳೂ ಸೇರಿವೆ. ಈ ಅವಧಿಯಲ್ಲಿ ಅವರು 20 ಅರ್ಧಶತಕಗಳನ್ನು ಕೂಡ ಗಳಿಸಿದ್ದಾರೆ. ಸಂಜು ಸ್ಯಾಮ್ಸನ್‌ಗೆ ಇದುವರೆಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚಿನ ಅವಕಾಶ ಸಿಕ್ಕಿಲ್ಲ. 24 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದು, 21 ಇನ್ನಿಂಗ್ಸ್​ನಿಂದ 19.68ರ ಸರಾಸರಿಯಲ್ಲಿ 133.57ರ ಸ್ಟ್ರೈಕ್​ರೇಟ್​ನಿಂದ 374 ರನ್​ ಕಲೆಹಾಕಿದ್ದಾರೆ. 77 ರನ್ ಅವರ ಅತ್ಯುತ್ತಮ ಸ್ಕೋರ್​​​ ಆಗಿದೆ. 13 ಏಕದಿನ ಪಂದ್ಯಗಳಲ್ಲಿ ಮಾತ್ರ ಅವಕಾಶ ನೀಡಲಾಗಿದೆ.

ಸಂಜು ಸ್ಯಾಮ್ಸನ್​ ವಿಕೆಟ್​ ಕೀಪರ್​ ಮತ್ತು ಬ್ಯಾಟರ್​​ ಆಗಿ ತಂಡಕ್ಕೆ ಉತ್ತಮ ಕೊಡುಗೆ ನೀಡಬಲ್ಲರು. ಆದರೆ, ಬಿಸಿಸಿಐನ ಆಯ್ಕೆ ಸಮಿತಿ ಮಾತ್ರ ಇತರರಿಗೆ​ ನೀಡಿದಂತೆ ಹೆಚ್ಚಿನ ಅವಕಾಶ ನೀಡುತ್ತಿಲ್ಲ ಎಂದು ನೆಟ್ಟಿಗರು ನೇರವಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ:ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಗೆ ಸೂರ್ಯ ನಾಯಕ; ಸ್ಥಾನ ಕಳೆದುಕೊಂಡ ಸಂಜು ಸ್ಯಾಮ್ಸನ್

ABOUT THE AUTHOR

...view details