ಕರ್ನಾಟಕ

karnataka

ಚಂದ್ರನಲ್ಲಿ ಮಾನವ ವಾಸ ಮಾಡಬಹುದಾದ ವಾತಾವರಣ ಇರಬಹುದು.. ಇಸ್ರೋ ಚಂದ್ರಯಾನ ಮಿಷನ್​ಗಳ ಮಾಹಿತಿ: ವಿಜ್ಞಾನಿ ದುವಾರಿ ಮೆಚ್ಚುಗೆ

By ETV Bharat Karnataka Team

Published : Sep 12, 2023, 3:44 PM IST

ಇಸ್ರೋ ಕೈಗೊಂಡಿರುವ ಚಂದ್ರಯಾನ ಮಿಷನ್​ಗಳು ಭಾರತಕ್ಕೆ ಮಾತ್ರವಲ್ಲ, ವಿಶ್ವಕ್ಕೇ ಅತ್ಯಮೂಲ್ಯ ವಿಷಯಗಳನ್ನು ರವಾನೆ ಮಾಡಿದೆ. ಇದು ಈವರೆಗೂ ಕಂಡು ಕೇಳರಿಯದ ಮಾಹಿತಿಗಳಾಗಿವೆ ಎಂದು ಖ್ಯಾತ ವಿಜ್ಞಾನಿಯೊಬ್ಬರು ಹೇಳಿದ್ದಾರೆ.

ಇಸ್ರೋ ಚಂದ್ರಯಾನ ಮಿಷನ್​ಗಳು
ಇಸ್ರೋ ಚಂದ್ರಯಾನ ಮಿಷನ್​ಗಳು

ಕೋಲ್ಕತ್ತಾ (ಪಶ್ಚಿಮ ಬಂಗಾಳ):ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗ್ರಹವನ್ನು ಲ್ಯಾಂಡ್​ ಮಾಡುವುದರ ಜೊತೆಗೆ, ಇಸ್ರೋ ಕೈಗೊಂಡ ಚಂದ್ರಯಾನ ಮಿಷನ್​ಗಳು ವೈಜ್ಞಾನಿಕ ಸಮುದಾಯಕ್ಕೆ ರಹಸ್ಯ ಮಾಹಿತಿಯನ್ನು ಕಲೆಹಾಕುತ್ತಿದೆ. ಇದು ಭವಿಷ್ಯದಲ್ಲಿ ಮಾನವ ವಾಸ ಸೇರಿದಂತೆ ಎಲ್ಲ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಲು ದಾರಿ ಮಾಡಿಕೊಟ್ಟಿದೆ ಎಂದು ಖ್ಯಾತ ವಿಜ್ಞಾನಿ ದೇಬಿಪ್ರಸಾದ್ ದುವಾರಿ ಹೇಳಿದ್ದಾರೆ.

ಇಸ್ರೋದ ಮೂರು ಚಂದ್ರಯಾನ ಮಿಷನ್‌ಗಳು ಚಂದ್ರನಲ್ಲಿ ನೀರಿನ ಮಂಜುಗಡ್ಡೆಯ ಇರುವಿಕೆ, ಖನಿಜಗಳು ಮತ್ತು ತಾಪಮಾನ ಬದಲಾವಣೆಯ ಮೇಲೆ ಹೆಚ್ಚಿನ ಬೆಳಕನ್ನು ಚೆಲ್ಲಿವೆ. ಎಲ್ಲ ಯೋಜನೆಗಳು ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಯಾವತ್ತೂ ತಿಳಿಯದ ಮಾಹಿತಿಯನ್ನು ರವಾನಿಸಿವೆ. ಚಂದ್ರಯಾನ-1 ಮಿಷನ್​ನಲ್ಲಿ ಚಂದ್ರನ ಖನಿಜಶಾಸ್ತ್ರವನ್ನು ಅಧ್ಯಯನ ಮಾಡುವ 'ಮ್ಯಾಪರ್' (ನಾಸಾ ಮತ್ತು ಇಸ್ರೋ ನಡುವಿನ ಸಹಯೋಗದ ಸಾಧನ) ಬಳಸಲಾಯಿತು. ಮೊದಲ ಬಾರಿಗೆ ಧ್ರುವ ಪ್ರದೇಶದ ಬಳಿ 60,000 ಕೋಟಿ ಲೀಟರ್ ನೀರಿನ ಮಂಜುಗಡ್ಡೆ ಇರುವುದನ್ನು ಪತ್ತೆ ಮಾಡಿತು. ಇದು ಚಂದ್ರನ ಮೇಲೆ ಮಾನವನ ವಾಸಕ್ಕಾಗಿ ಸಿಂಥೆಟಿಕ್ ಬಯೋಸ್ಪಿಯರ್ ರಚಿಸುವ ಸಾಧ್ಯತೆ ಬಗ್ಗೆ ಆಸೆ ಚಿಗುರಿಸಿದೆ ಎಂದು ಹೇಳಿದ್ದಾರೆ.

ಅತ್ಯಮೂಲ್ಯ ವಿಷಯಗಳ ರವಾನೆ:ಚಂದ್ರಯಾನ - 2 ಮಿಷನ್‌ನಲ್ಲಿ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆಗಲು ವಿಫಲವಾಗಿದ್ದರೂ, ಆರ್ಬಿಟರ್​ ನಾಲ್ಕು ವರ್ಷಗಳ ಕಾಲ ಚಂದ್ರನ ಸುತ್ತ ಸುತ್ತಿ ಅಲ್ಲಿನ ಮಾಹಿತಿ, ಚಿತ್ರಗಳನ್ನು ಸೆರೆಹಿಡಿದು ಕಳುಹಿಸಿದೆ. ಇನ್ನು ಈಚೆಗೆ ಕೈಗೊಂಡ ಚಂದ್ರಯಾನ-3 ಮಿಷನ್ ಸಾಫ್ಟ್ ಲ್ಯಾಂಡ್​ ಆಗಿ ಚಂದ್ರನ ದಕ್ಷಿಣ ಧ್ರುವದ ಬಳಿ ಸಲ್ಫರ್ ಇರುವಿಕೆಯ ಬಗ್ಗೆ ಈಗಾಗಲೇ ಮಾಹಿತಿ ಕಳುಹಿಸಿದೆ ಎಂದು ತಿಳಿಸಿದರು.

ಈ ಬೆಳವಣಿಗೆ ಚಂದ್ರನ ಮೇಲೆ ಇದುವರೆಗೆ ಪತ್ತೆಯಾಗದ ಇತರ ಖನಿಜಗಳು ಮತ್ತು ವಿಷಯಗಳ ಮೇಲೆ ಕುತೂಹಲ ಮೂಡಿಸಿದ್ದು, ಚಂದ್ರನ ಮೇಲಿನ ತಾಪಮಾನದ ಬಗ್ಗೆಯೂ ಆಸಕ್ತಿದಾಯಕ ಮಾಹಿತಿಯನ್ನೂ ಒದಗಿಸಿದೆ. ಮೇಲ್ಮೈಯಲ್ಲಿ ತಾಪಮಾನವು ಸುಮಾರು 10 ಡಿಗ್ರಿ ಸೆಲ್ಸಿಯಸ್ ಇದೆ. ಗರ್ಭದಲ್ಲಿ ಕೇವಲ 8 ಸೆಂ.ಮೀ ಒಳಗೆ -60 ಡಿಗ್ರಿ ಸೆಲ್ಸಿಯಸ್​ನಷ್ಟಿದೆ. ಇಂತಹ ಆಸಕ್ತಿದಾಯಕ ಮಾಹಿತಿಯು ಇನ್ನಷ್ಟು ಅಧ್ಯಯನ ಮಾಡುವ ಅವಕಾಶ ನೀಡಿದೆ ಎಂದರು.

ಮಾನವ ವಾಸ ಸಾಧ್ಯತೆ:ಈ ಎಲ್ಲ ಮಾಹಿತಿಯನ್ನು ಲೆಕ್ಕಾಚಾರ ಹಾಕಿದಾಗ ಚಂದ್ರನಲ್ಲಿ ಮಾನವ ವಾಸ ಮಾಡಬಹುದು ಎಂದು ಕಾಣಿಸುತ್ತದೆ. ಇಂತಹ ಅತ್ಯಮೂಲ್ಯ ಮಾಹಿತಿಯನ್ನು ಚಂದ್ರಯಾನ -3 ಉಪಕರಣಗಳು ಕಳುಹಿಸಿವೆ. ಇಸ್ರೋದ ಮಹತ್ವಾಕಾಂಕ್ಷೆಯ ಗಗನ್‌ಯಾನ್ ಮಿಷನ್‌ ಕೂಡ ದೇಶದ ತಂತ್ರಜ್ಞಾನ ವಿಷಯದಲ್ಲಿ ಗೇಮ್ ಚೇಂಜರ್ ಆಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಕಾರ, ಗಗನಯಾನ ಯೋಜನೆಯು ಭವಿಷ್ಯದಲ್ಲಿ ಉದ್ದೇಶಿಸಿರುವ ಮೂವರು ಸದಸ್ಯರ ಮಾನ ಸಹಿತ ಬಾಹ್ಯಾಕಾಶ ಯಾನಕ್ಕೆ ಬಲ ನೀಡಿದೆ. ಭೂಮಿಯ ಮೇಲ್ಮೈಯಿಂದ 400 ಕಿಮೀ ಎತ್ತರದ ಕಕ್ಷೆಯಲ್ಲಿ ಮಾನವ ಸಹಿತ ಉಪಗ್ರಹವನ್ನು ಉಡಾವಣೆ ಮಾಡುವುದಕ್ಕೆ ಶಕ್ತಿ ತುಂಬಿದೆ ಎಂದಿದೆ. (ಪಿಟಿಐ)

ಇದನ್ನೂ ಓದಿ:ಹೊಸ ಎತ್ತರ ತಲುಪಿದ ಆದಿತ್ಯ ಎಲ್-1 ನೌಕೆ; ಇಸ್ರೋದ 3ನೇ ಕಸರತ್ತು ಯಶಸ್ವಿ

ABOUT THE AUTHOR

...view details