ಕರ್ನಾಟಕ

karnataka

ಹಮಾಸ್​- ಇಸ್ರೇಲ್​ ಕದನ ವಿರಾಮಕ್ಕೆ ವಿಶ್ವಸಂಸ್ಥೆ ನಿರ್ಣಯ: ಮತದಾನದಿಂದ ದೂರ ಉಳಿದ ಭಾರತ

By ETV Bharat Karnataka Team

Published : Oct 28, 2023, 9:01 PM IST

ಇಸ್ರೇಲ್​ ಯುದ್ಧವನ್ನು ಟೀಕಿಸಿದ್ದ ವಿಶ್ವಸಂಸ್ಥೆ, ಇಂದು ತಕ್ಷಣ ಕದನ ವಿರಾಮಕ್ಕೆ ನಿರ್ಣಯವನ್ನು ಕೈಗೊಂಡಿತು. ಆದರೆ, ಭಾರತ ಸೇರಿದಂತೆ 45 ರಾಷ್ಟ್ರಗಳು ಮತದಾನದಿಂದ ದೂರ ಉಳಿದಿವೆ.

ಹಮಾಸ್​- ಇಸ್ರೇಲ್​ ಕದನ ವಿರಾಮಕ್ಕೆ ವಿಶ್ವಸಂಸ್ಥೆ ನಿರ್ಣಯ
ಹಮಾಸ್​- ಇಸ್ರೇಲ್​ ಕದನ ವಿರಾಮಕ್ಕೆ ವಿಶ್ವಸಂಸ್ಥೆ ನಿರ್ಣಯ

ನವದೆಹಲಿ:ಇಸ್ರೇಲ್-ಹಮಾಸ್ ಯುದ್ಧಕ್ಕೆ ತಕ್ಷಣವೇ ಕದನ ವಿರಾಮ ಹಾಕಬೇಕು. ಮಾನವೀಯ ಒಪ್ಪಂದಕ್ಕೆ ಮುಂದಾಗಬೇಕು ಎಂಬ ವಿಶ್ವಸಂಸ್ಥೆಯ ನಿರ್ಣಯ ಮತದಾನದಿಂದ ಭಾರತ ದೂರ ಉಳಿದಿದೆ. ಸಾಮಾನ್ಯ ಸಭೆಯಲ್ಲಿ ಇಂದು ನಡೆದ ಮತದಾನದಲ್ಲಿ ಭಾರತ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.

ನಾಗರಿಕರ ರಕ್ಷಣೆ, ಕಾನೂನು ಮತ್ತು ಮಾನವೀಯ ನೆರವನ್ನು ಎತ್ತಿಹಿಡಿಯುವುದು ಎಂಬ ಶೀರ್ಷಿಕೆಯ ವಿಶ್ವಸಂಸ್ಥೆ ನಿರ್ಣಯವನ್ನು ತೆಗೆದುಕೊಂಡಿತು. ಈ ವೇಳೆ ನಡೆದ ಮತದಾನದಲ್ಲಿ ಭಾರತ ಸೇರಿದಂತೆ 45 ರಾಷ್ಟ್ರಗಳು ತಟಸ್ಥ ನಿಲುವು ತಳೆದರೆ, 120 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದವು. ಅಮೆರಿಕ, ಇಸ್ರೇಲ್ ಸೇರಿದಂತೆ ಇತರ 14 ದೇಶಗಳು ನಿರ್ಣಯದ ವಿರುದ್ಧ ಮತ ಹಾಕಿದವು.

ನಾಗರಿಕರು ಮತ್ತು ಗಾಜಾದ ರಕ್ಷಣೆಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ಅಡಿಯಲ್ಲಿ ಇಸ್ರೇಲ್​ ತಕ್ಷಣವೇ ಯುದ್ಧ ನಿಲ್ಲಿಸಬೇಕು. ಯುದ್ಧದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವಾಗಲು ನೆರವು ಸಿಬ್ಬಂದಿ, ಮಾನವೀಯ ಸೌಲಭ್ಯಗಳು, ಅಗತ್ಯ ವಸ್ತುಗಳ ಸರಬರಾಜಿಗೆ ಅವಕಾಶ ನೀಡಬೇಕು. ವಿಶ್ವಸಂಸ್ಥೆಯ ಅಧಿಕಾರಿಗಳು ಮತ್ತು ನೆರವು ಸಿಬ್ಬಂದಿಗೆ ಗಾಜಾ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ನಿರ್ಣಯದಲ್ಲಿ ಕೋರಲಾಗಿದೆ.

ಭಯೋತ್ಪಾದಕ ದಾಳಿ ನಡೆಸಿದ ಪ್ಯಾಲೆಸ್ಟೈನಿಯನ್​ ಉಗ್ರಗಾಮಿ ಗುಂಪಾದ ಹಮಾಸ್ ಅನ್ನು ಖಂಡಿಸಲು ವಿಶ್ವಸಂಸ್ಥೆ ವಿಫಲವಾದ ಕಾರಣ, ಭಾರತ ನಿರ್ಣಯದ ಮೇಲೆ ನಡೆದ ಮತದಾನದಿಂದ ದೂರವಿತ್ತು. ಇದರ ಜೊತೆಗೆ ಹಮಾಸ್​ ವಿರುದ್ಧ ಭಾರತ ಸಲ್ಲಿಸಿದ ಪ್ರಸ್ತಾಪನೆಯನ್ನೂ ಸಭೆ ತಿರಸ್ಕರಿಸಿತು.

ಭಾರತದ ಮೇಲೆ ಪ್ರಭಾವವೇನು?:ಯುದ್ಧದಲ್ಲಿ ಭಾರತ ಈಗಾಗಲೇ ಇಸ್ರೇಲ್​ಗೆ ಬೆಂಬಲ ಘೋಷಿಸಿದೆ. ಈಗ ವಿಶ್ವಸಂಸ್ಥೆಯಲ್ಲಿ ನಡೆದ ನಿರ್ಣಯದಿಂದ ತಟಸ್ಥ ಧೋರಣೆ ತಳೆಯಲಾಗಿದೆ. ಈ ಎಲ್ಲಾ ಬೆಳವಣಿಗೆಗಳು ದೇಶದ ಮೇಲೆ ಪ್ರಭಾವ ಬೀರುತ್ತವೆಯೇ ಎಂಬ ಊಹಾಪೋಹ ಮೂಡಿದೆ. ಆದರೆ, ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಯಾವುದೇ ಸಮಸ್ಯೆಗೆ ದೇಶ ಒಳಗಾಗದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇರಾಕ್ ಮತ್ತು ಜೋರ್ಡಾನ್‌ನ ರಾಯಭಾರಿ ಆಗಿದ್ದ ಆರ್. ದಯಾಕರ್ ಅವರ ಪ್ರಕಾರ, ಇಂದಿನ ನಿರ್ಣಯದಿಂದ ಭಾರತ ದೂರವಿದ್ದುದು ಯಾವುದೇ ಪರಿಣಾಮ ಬೀರುವುದಿಲ್ಲ. ಪಶ್ಚಿಮ ಏಷ್ಯಾದ ರಾಷ್ಟ್ರಗಳೊಂದಿಗಿನ ಭಾರತದ ಸಂಬಂಧಗಳಿಗೆ ಇದು ತೊಡಕಾಗದು ಎಂದು ಹೇಳಿದ್ದಾರೆ. ಇದಕ್ಕೆ ಪ್ರಮುಖವಾಗಿ ಮೂರು ಕಾರಣಗಳಿವೆ.

1) ಯುದ್ಧಕ್ಕೆ ಹಮಾಸ್​ ಕೂಡ ಕಾರಣವಾಗಿದೆ. ಅದನ್ನು ನಿರ್ಣಯದಲ್ಲಿ ನಮೂದಿಸದೇ ಇರುವುದು ಭಾರತದ ಆಕ್ಷೇಪಕ್ಕೆ ಕಾರಣ. ವಾಸ್ತವಿಕ ನಿಲುವಿನಿಂದಾಗಿ ಭಾರತ ಮತ ಹಾಕಿಲ್ಲ. ನಿರ್ಣಯ ವಿರೋಧಿಸುವ, ಬೆಂಬಲಿಸುವ ಹಕ್ಕನ್ನು ಭಾರತ ಹೊಂದಿದೆ.

ಅಕ್ಟೋಬರ್ 7 ರಂದು ಇಸ್ರೇಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗಳು ಆಘಾತಕಾರಿ ಮತ್ತು ಖಂಡನೆಗೆ ಅರ್ಹವಾಗಿವೆ ಎಂದು ವಿಶ್ವಸಂಸ್ಥೆಯ ಭಾರತದ ಉಪ ಖಾಯಂ ಪ್ರತಿನಿಧಿ ಯೋಜನಾ ಪಟೇಲ್ ಹೇಳಿದ್ದಾರೆ. ಭಯೋತ್ಪಾದಕ ಕೃತ್ಯಗಳನ್ನು ಯಾರೂ ಸಮರ್ಥಿಸಿಕೊಳ್ಳಬಾರದು. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದಾಗಿ ಭಯೋತ್ಪಾದನೆಯನ್ನು ಹತ್ತಿಕ್ಕಬೇಕು ಎಂದು ಹೇಳಿದ್ದರು.

2) ಕೆಲ ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳು ನಿರ್ಣಯದ ಮೇಲಿನ ಮತದಾನದಿಂದ ದೂರ ಉಳಿದಿವೆ. ಇರಾಕ್ ಮತ್ತು ಟುನೀಶಿಯಾ ರಾಷ್ಟ್ರಗಳು ಮತದಾನದಲ್ಲಿ ಪಾಲ್ಗೊಂಡಿಲ್ಲ. ಇರಾಕ್ ತನ್ನ ಸ್ವತಂತ್ರ ವಿದೇಶಾಂಗ ನೀತಿಯ ಭಾಗವಾಗಿ ಅಮೆರಿಕ ಮತ್ತು ಇರಾನ್ ಎರಡರಿಂದಲೂ ಸಮಾನ ಅಂತರ ಕಾಯ್ದುಕೊಂಡಿದೆ. ಅಚ್ಚರಿಯ ಸಂಗತಿಯೆಂದರೆ ಟುನೀಶಿಯಾ ಮತದಾನದಿಂದ ದೂರ ಉಳಿದಿರುವುದು. ಟುನೀಶಿಯಾ ಒಮ್ಮೆ ಪ್ಯಾಲೆಸ್ಟೈನ್ ಲಿಬರೇಶನ್ ಆರ್ಗನೈಸೇಶನ್‌ನ ಭಾಗವಾಗಿತ್ತು.

3) ಭಾರತ ಯಾವಾಗಲೂ ಏಕಪಕ್ಷೀಯ ನಿರ್ಣಯಗಳ ಮೇಲೆ ನಡೆಯುವ ಮತದಾನದಿಂದ ದೂರವುಳಿದಿದೆ. ಇಂತಹ ನಿರ್ಣಯಗಳಲ್ಲಿ ಸಮತೋಲನದ ಕೊರತೆಯನ್ನು ಸರಿಪಡಿಸಲು ಪ್ರಯತ್ನಿಸಿದೆ. ಹೀಗಾಗಿ ಈ ಕಾರಣಕ್ಕಾಗಿ ದೇಶದ ಮೇಲೆ ಈ ನಿರ್ಧಾರ ತೊಡಕಾಗದು ಎಂದಿದ್ದಾರೆ.

ಇದನ್ನೂ ಓದಿ:ಇಸ್ರೇಲ್​ - ಹಮಾಸ್​ ಸಂಘರ್ಷ: ಗಾಜಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್ ಸಿಬ್ಬಂದಿಯ ಸಂಪರ್ಕ ಕಡಿತ

ABOUT THE AUTHOR

...view details