ಕರ್ನಾಟಕ

karnataka

ಭೂಕಂಪಪೀಡಿತ ನೇಪಾಳಕ್ಕೆ ಪರಿಹಾರ ಸಾಮಗ್ರಿ ಕಳುಹಿಸಿದ ಭಾರತ

By PTI

Published : Nov 6, 2023, 9:02 AM IST

India sends emergency relief materials to Nepal: ಭಾರತೀಯ ವಾಯುಪಡೆ (ಐಎಎಫ್) ವಿಮಾನದ ಮೂಲಕ ಭೂಕಂಪ ಸಂತ್ರಸ್ತ ನೇಪಾಳಕ್ಕೆ ಔಷಧ ಮತ್ತು ಇತರೆ ಪರಿಹಾರ ಸಾಮಗ್ರಿಗಳನ್ನು ಭಾರತ ಕಳುಹಿಸಿದೆ.

emergency relief
ನೇಪಾಳಕ್ಕೆ ಪರಿಹಾರ ಸಾಮಗ್ರಿ ಕಳುಹಿಸಿದ ಭಾರತ

ಕಠ್ಮಂಡು: ಭೂಕಂಪಪೀಡಿತ ನೆರೆ ದೇಶ ನೇಪಾಳಕ್ಕೆ ತುರ್ತು ಪರಿಹಾರ ಸಾಮಗ್ರಿಗಳನ್ನು ಭಾರತ ಹಸ್ತಾಂತರಿಸಿದೆ. ಟೆಂಟ್‌ಗಳು, ಹೊದಿಕೆ, ಟಾರ್ಪಾಲಿನ್ ಶೀಟ್‌ಗಳು, ಅಗತ್ಯ ಔಷಧ ಮತ್ತು ವೈದ್ಯಕೀಯ ಉಪಕರಣಗಳನ್ನು ಒಳಗೊಂಡ 10 ಕೋಟಿ ರೂಪಾಯಿ ಮೌಲ್ಯದ ತುರ್ತು ಪರಿಹಾರ ಸಾಮಗ್ರಿಗಳನ್ನು ಹೊತ್ತ ಮೊದಲ ಭಾರತೀಯ ವಾಯುಪಡೆಯ ವಿಶೇಷ ಸಿ-130 ವಿಮಾನ ಭಾನುವಾರ ನೇಪಾಳಕ್ಕೆ ಆಗಮಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಕಠ್ಮಂಡುವಿನಲ್ಲಿನ ಭಾರತೀಯ ರಾಯಭಾರ ಕಚೇರಿ, "ತುರ್ತು ಪರಿಹಾರ ಸಾಮಗ್ರಿಗಳ ಮೊದಲ ರವಾನೆಯು ಭಾನುವಾರ ನೇಪಾಲ್‌ಗುಂಜ್‌ಗೆ ಆಗಮಿಸಿತು" ಎಂದು ತಿಳಿಸಿದೆ. ವಿಶೇಷ ಭಾರತೀಯ ವಾಯುಪಡೆ ವಿಮಾನವು ಟೆಂಟ್‌ ಮತ್ತು ಟಾರ್ಪಾಲಿನ್ ಶೀಟ್‌ಗಳು, ಹೊದಿಕೆಗಳು, ಮಲಗುವ ಚಾಪೆ ಸೇರಿದಂತೆ ಅಗತ್ಯ ಔಷಧಿಗಳು ಮತ್ತು ಸಂತ್ರಸ್ತಪೀಡಿತ ಜನರಿಗೆ ಪೋರ್ಟಬಲ್ ವೆಂಟಿಲೇಟರ್‌ಗಳಂತಹ ವೈದ್ಯಕೀಯ ಉಪಕರಣಗಳನ್ನು ಒಳಗೊಂಡಿರುವ ತುರ್ತು ಪರಿಹಾರ ಸಾಮಗ್ರಿಗಳನ್ನು ಸಾಗಿಸಿದೆ ಎಂದು ಹೇಳಿಕೆಯಲ್ಲಿ ಮಾಹಿತಿ ನೀಡಿದೆ.

ಭಾರತ ಸರ್ಕಾರದ ಪರವಾಗಿ ಭಾರತೀಯ ರಾಯಭಾರಿ ನವೀನ್ ಶ್ರೀವಾಸ್ತವ ಅವರು ನೇಪಾಳದ ಉಪ ಪ್ರಧಾನಿ ಮತ್ತು ರಕ್ಷಣಾ ಸಚಿವ ಪೂರ್ಣ ಬಹದ್ದೂರ್ ಖಡ್ಕಾ ಅವರಿಗೆ ಕರ್ನಾಲಿ ಮುಖ್ಯಮಂತ್ರಿ ರಾಜ್ ಕುಮಾರ್ ಶರ್ಮಾ ಸಮ್ಮುಖದಲ್ಲಿ ಪರಿಹಾರ ಸಾಮಗ್ರಿಗಳನ್ನು ಹಸ್ತಾಂತರಿಸಿದರು. ಭೂಕಂಪಪೀಡಿತರಿಗೆ ಸಾಧ್ಯವಿರುವ ಎಲ್ಲಾ ಸಹಾಯ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿದ ಭರವಸೆಗೆ ಅನುಗುಣವಾಗಿ ಭಾರತವು ನೆರವು ಒದಗಿಸಿದೆ.

ಇದನ್ನೂ ಓದಿ:ನೇಪಾಳದಲ್ಲಿ ಪ್ರಬಲ ಭೂಕಂಪ : ಸಾವಿನ ಸಂಖ್ಯೆ 140ಕ್ಕೆ ಏರಿಕೆ

ಮುಂದಿನ ದಿನಗಳಲ್ಲಿ ಭಾರತದಿಂದ ಮತ್ತಷ್ಟು ಪರಿಹಾರ ಸಾಮಗ್ರಿಗಳನ್ನು ಕಳುಹಿಸುವ ನಿರೀಕ್ಷೆಯಿದೆ. ಆಪ್ತ ಸ್ನೇಹಿತ ಮತ್ತು ನೆರೆಹೊರೆಯವರಾಗಿ, ನೇಪಾಳದಲ್ಲಿ ಭೂಕಂಪದಿಂದ ಹಾನಿಗೊಳಗಾದವರಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲು ಭಾರತ ಬದ್ಧವಾಗಿದೆ ಎಂದು ಭಾರತೀಯ ಮಿಷನ್ ಹೇಳಿದೆ.

ಶುಕ್ರವಾರ ಮಧ್ಯರಾತ್ರಿ ನೇಪಾಳದಲ್ಲಿ 6.4 ತೀವ್ರತೆಯ ಭೂಕಂಪನ ಸಂಭವಿಸಿದ್ದು, 157 ಜನರನ್ನು ಬಲಿ ತೆಗೆದುಕೊಂಡಿದೆ. 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಇದನ್ನೂ ಓದಿ:ನೇಪಾಳ ಭೂಕಂಪದಲ್ಲಿ ಮೃತರ ಸಂಖ್ಯೆ 157ಕ್ಕೆ ಏರಿಕೆ: ಮತ್ತೆ ನಡುಗಿದ ಭೂಮಿ

ABOUT THE AUTHOR

...view details