ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದೆ. ದಿನಕ್ಕೊಂದು ಟ್ವಿಸ್ಟ್, ಹೊಸ ಕಥೆ, ಪ್ರೀತಿ, ಸ್ನೇಹ, ಮನಸ್ತಾಪ ಹೀಗೆ ನಾನಾ ವಿಷಯಗಳ ಸಲುವಾಗಿ ದೊಡ್ಮನೆ ಹೆಚ್ಚು ಸಖತ್ ಸದ್ದು ಮಾಡುತ್ತಿದೆ. ಎರಡು ದಿನಗಳ ಹಿಂದೆಯಷ್ಟೇ ದೀಪಾವಳಿ ಹಬ್ಬದ ಖುಷಿಗಾಗಿ ಮನೆ ಮಂದಿಗೆ ಬಿಗ್ ಬಾಸ್ ಮನೆಯಡುಗೆಯನ್ನು ತರಿಸಿಕೊಟ್ಟಿದ್ದರು. ಇದನ್ನು ತಿಂದು ತೃಪ್ತಿಪಟ್ಟ ಸ್ಪರ್ಧಿಗಳು ಮನೆಯವರನ್ನು ನೆನೆದು ಭಾವುಕರಾಗಿದ್ದರು.
ಇದೀಗ ಮನೆಯವರಿಂದ ಸ್ಪರ್ಧಿಗಳಿಗೆ ಪತ್ರವೂ ಬಂದಿದೆ. ಆದರೆ ಇದು ಅಷ್ಟು ಸುಲಭವಾಗಿ ಮನೆ ಮಂದಿ ಕೈಗೆ ಸಿಗುತ್ತಿಲ್ಲ. ಒಂದೊಂದು ಪತ್ರಕ್ಕೂ ಒಂದಿಷ್ಟು ಟಾಸ್ಕ್ಗಳನ್ನು ಕೊಟ್ಟು ಅದರಲ್ಲಿ ಗೆದ್ದವರಿಗೆ ಮಾತ್ರವೇ ಬಿಗ್ ಬಾಸ್ ಪತ್ರವನ್ನು ಕೊಡುವುದಾಗಿ ಹೇಳಿದ್ದಾರೆ. ಈಗಾಗಲೇ ವಿನಯ್ ಗೌಡ ಮತ್ತು ನಮ್ರತಾ ಗೌಡ ಮನೆಯಿಂದ ಬಂದ ಪತ್ರಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವು ಸದಸ್ಯರು ಪತ್ರವನ್ನು ಪಡೆದುಕೊಳ್ಳಲು ವಿಫಲರಾಗಿದ್ದಾರೆ. ಇನ್ನುಳಿದ ಸ್ಪರ್ಧಿಗಳ ಅದೃಷ್ಟ ಪರೀಕ್ಷೆ ಇನ್ನಷ್ಟೇ ನಡೆಯಬೇಕಿದೆ.
ಇಂದಿನ ಟಾಸ್ಕ್: ಇಂದು ಬಿಗ್ ಬಾಸ್ ಮನೆಯಲ್ಲಿ ಇನ್ನಷ್ಟು ಜನರಿಗೆ ಪತ್ರ ಪಡೆದುಕೊಳ್ಳಲು ಟಾಸ್ಕ್ ನೀಡಿದ್ದಾರೆ. ಟಾಸ್ಕ್ ಏನೋ ತುಂಬಾ ಸಿಂಪಲ್ ಆಗಿ ಕಾಣಿಸುತ್ತಿದೆ. ಕನ್ಫೆಷನ್ ರೂಮಲ್ಲಿ ಕೂತ ಇಬ್ಬರು, ಬಿಗ್ ಬಾಸ್ ಮನೆಯ ಕುರಿತಾಗಿಯೇ ಕೇಳುವ ಸರಳವಾದ ಪ್ರಶ್ನೆಗಳಿಗೆ ಉತ್ತರಿಸಬೇಕು. ಆ ಪ್ರಶ್ನೆಗಳು ಎಷ್ಟು ಸರಳವಾಗಿವೆಯೆಂದರೆ, ಪ್ರತಿದಿನವೂ ಅದನ್ನು ನೋಡುತ್ತ, ಬಳಸುತ್ತಲೇ ಇದ್ದರೂ ಅದು ಸ್ಪರ್ಧಿಗಳ ಗಮನಕ್ಕೆ ಬಂದಿಲ್ಲ. ಹಾಗಾಗಿಯೇ ಉತ್ತರ ಕೊಡುವುದೂ ಕಷ್ಟವಾಗಿದೆ. ಕಲರ್ಸ್ ಕನ್ನಡ ಹಂಚಿಕೊಂಡಿರುವ ಪ್ರೋಮೋದಲ್ಲಿ ಈ ಎಲ್ಲಾ ಸನ್ನಿವೇಶಗಳು ಸೆರೆಯಾಗಿವೆ.