ಕರ್ನಾಟಕ

karnataka

ಖಡಕ್‌ ಪೊಲೀಸ್​ ಪಾತ್ರದಲ್ಲಿ ಮಿಂಚಿದ ಡೈನಾಮಿಕ್ ಹೀರೋ ದೇವರಾಜ್ ಜನ್ಮದಿನ

By

Published : Sep 20, 2022, 12:49 PM IST

Dynamic Hero Devraj Birthday
ಡೈನಾಮಿಕ್ ಹೀರೋ ದೇವರಾಜ್ ಜನ್ಮದಿನ ()

ಕನ್ನಡ ಚಿತ್ರರಂಗದ ನಟ ದೇವರಾಜ್ 68 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಕಳೆದ ಮೂರು ದಶಕಗಳಲ್ಲಿ ಕನ್ನಡ, ತೆಲುಗು ಹಾಗು ತಮಿಳು ಚಿತ್ರಗಳಲ್ಲಿ ಅಭಿನಯಿಸಿ ಬೆಳ್ಳಿ ತೆರೆ ಮೇಲೆ ನಟ, ಖಳ ನಟ, ಪೊಲೀಸ್​ ಪಾತ್ರಕ್ಕೆ ಜೀವ ತುಂಬಿದ ಡೈನಾಮಿಕ್ ಹೀರೋ ದೇವರಾಜ್ ಅವರಿಗಿಂದು 68ನೇ ಹುಟ್ಟುಹಬ್ಬದ ಸಂಭ್ರಮ. ಕುಟುಂಬಸ್ಥರು, ಬಂಧು ಮಿತ್ರರು ಸೇರಿದಂತೆ ಚಿತ್ರರಂಗ ಮತ್ತು ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಡೈನಾಮಿಕ್ ಹೀರೋ ದೇವರಾಜ್

1953ರ ಸೆಪ್ಟೆಂಬರ್ 20ರಂದು ನಟ ದೇವರಾಜ್ ಅವರು ಬೆಂಗಳೂರಿನ ಲಿಂಗರಾಜಪುರದಲ್ಲಿ ರಾಮಚಂದ್ರಪ್ಪ ಮತ್ತು ಕೃಷ್ಣಮ್ಮ ದಂಪತಿ ಪುತ್ರನಾಗಿ ಜನಿಸಿದರು. ಮೂರು ತಿಂಗಳ ಮಗುವಾಗಿರುವಾಗಲೇ ತಂದೆಯನ್ನು ಕಳೆದುಕೊಂಡ ಇವರಿಗೆ ತಾಯಿ ಕೃಷ್ಣಮ್ಮನವರೇ ಎಲ್ಲವೂ ಆಗಿದ್ದರು. ಮನೆಯ ಕಠಿಣ ಆರ್ಥಿಕ ಪರಿಸ್ಥಿತಿಯಿಂದ ಓದನ್ನು ಅರ್ಧಕ್ಕೆ ನಿಲ್ಲಿಸಿ, ಹೆಚ್.ಎಂ.ಟಿ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿದ್ದರು. ದೇವರಾಜ್​ಗೆ 'ಹೀರೋ' ಆಗುವ ಕನಸು ಇರಲಿಲ್ಲ. ಆದರೆ ಆರ್. ನಾಗೇಶ್ ತಂಡದಲ್ಲಿದ್ದುಕೊಂಡು ನಾಟಕದಲ್ಲಿ ಪಾತ್ರವಹಿಸಿದ್ದರು. ಬಳಿಕ ಸಿನಿಮಾಗಳ ಪೋಷಕ ಪಾತ್ರ ನಿರ್ವಹಿಸಿ, ಅತ್ಯುತ್ತಮ ಹೀರೋ ಆಗಿ ಹೊರಹೊಮ್ಮಿದರು.

ದೇವರಾಜ್ ಅವರು ಅವಿನಾಶ್ ಅವರೊಂದಿಗೆ ತ್ರಿಶೂಲ ಸಿನಿಮಾದ ಆಡಿಷನ್​ನಲ್ಲಿ ಭಾಗವಹಿಸಿದರು. ಚಿತ್ರಕ್ಕೆ ಆಯ್ಕೆ ಕೂಡಾ ಆದರು. ಆದರೆ ಚಲನಚಿತ್ರೀಕರಣ ಸಂಪೂರ್ಣಗೊಳ್ಳದೇ ಬಿಡುಗಡೆಯಾಗಲಿಲ್ಲ. ನಂತರ 1986 ರಲ್ಲಿ ಬಿಡುಗಡೆಯಾದ ಅವರ ಮೊದಲ ಚಿತ್ರ 27 ಮಾವಳ್ಳಿ ಸರ್ಕಲ್. ಬಳಿಕ ಅನೇಕ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದರು. 1989ರಲ್ಲಿ ಹತ್ಯಾಕಾಂಡ ಚಿತ್ರದ ಮೂಲಕ ನಾಯಕ ನಟನಾಗಿ ಗುರುತಿಸಿಕೊಂಡರು. ಬಹುತೇಕರಿಗೆ ಗೊತ್ತಿರುವಂತೆ ಅವಿನಾಶ್ ಹಾಗೂ ದೇವರಾಜ್ ಇಂದಿಗೂ​ ಒಳ್ಳೆಯ ಸ್ನೇಹಿತರು.

'ಲಾಲಿ' ಸಿನಿಮಾಗೆ​ ಹೀರೋ ಆಗಿದ್ದ ಸಂದರ್ಭದಲ್ಲಿ ಚಂದ್ರಲೇಖನ ಅವರನ್ನು ಪ್ರೀತಿಸತೊಡಗಿದರು. ನಂತರ 'ಕೆಂಡದ ಮಳೆ' ಶೂಟಿಂಗ್ ವೇಳೆ ರಿಜಿಸ್ಟ್ರಾರ್​ ಮ್ಯಾರೇಜ್ ಆಗಿ ವೈವಾಹಿಕ ಬಂಧನಕ್ಕೆ ಒಳಗಾದರು. ಇವರ ಮಕ್ಕಳಾದ ಪ್ರಜ್ವಲ್​ ದೇವರಾಜ್ ಹಾಗೂ ಪ್ರಣಮ್​ ದೇವರಾಜ್​ ಇಬ್ಬರೂ ಸದ್ಯ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.

ಇದನ್ನೂ ಓದಿ:ಕಾರ್ತಿಕ್ ಆರ್ಯನ್: ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸಿ ಗಮನ ಸೆಳೆದ ಸೆಲೆಬ್ರಿಟಿ

ಅಗ್ರೇಸಿವ್​ ಪೊಲೀಸ್​ ಪಾತ್ರಗಳಿಂದ ಸಾಕಷ್ಟು ಚಿತ್ರಗಳಲ್ಲಿ ಯಶಸ್ಸು ಕಂಡ ದೇವರಾಜ್​ ನಂತರ ಕೌಟುಂಬಿಕ ಚಿತ್ರಗಳಲ್ಲಿ ನಟಿಸಿದ ವೇಳೆ ಕೊಂಚ ಹಿನ್ನೆಡೆಯಾಯಿತು. ಜನ ನನ್ನನ್ನು ಖಾಕಿವೇಷದಲ್ಲಿ ಮಾತ್ರ ಸ್ವೀಕರಿಸುತ್ತಾರೆಂದು ಅರಿತ ದೇವರಾಜ್​ಗೆ ಮತ್ತೆ ಸ್ಟಾರ್​ ಪಟ್ಟ ತಂದುಕೊಟ್ಟ ಸಿನಿಮಾ ಸಾಂಗ್ಲಿಯಾನ ಭಾಗ-2.

ಇದಲ್ಲದೇ, ಪ್ರೀತಿ, ಆಘಂತುಕ, ಅಂತಿಮ ತೀರ್ಪು, ರಾವಣ ರಾಜ್ಯ, ಸಂಗ್ರಾಮ, ಡ್ಯಾನ್ಸ್​ ರಾಜ ಡ್ಯಾನ್ಸ್, ಯಜಮಾನ, ಅಮರ್​, ಒಡೆಯ, ಪ್ರೇಮ ರಾಜ್ಯ, ಜೇನುಗೂಡು, ಕಾನೂನು, ಸತ್ಯಮೇವ ಜಯತೆ, ನೀಲಾಂಬರಿ, ಕಾನೂನು, ಐಪಿಸಿ ಸೆಕ್ಷನ್ 300, ದಶಮುಖ, ಕಾವೇರಿ ನಗರ, ಅಪರಾಧಿ, ಮೇಷ್ಟ್ರು ಹೀಗೆ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿನ ಪಾತ್ರವನ್ನು ನಿರ್ವಹಿಸಿದ್ದಾರೆ. ದೇವರಾಜ್ ಅವರ ಕಲಾಸೇವೆಯನ್ನು ಗುರುತಿಸಿ 2021ರಲ್ಲಿ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸಹ ನೀಡಿ ಗೌರವಿಸಿದೆ.

ABOUT THE AUTHOR

...view details