ಕರ್ನಾಟಕ

karnataka

ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಬರಗೂರು ರಾಮಚಂದ್ರಪ್ಪರ 'ಚಿಣ್ಣರ ಚಂದ್ರ' ಸಿನಿಮಾ ಸದ್ದು

By ETV Bharat Karnataka Team

Published : Nov 18, 2023, 12:29 PM IST

chinnara chandra movie

ಅಹಮದಾಬಾದ್ ಅಂತಾರಾಷ್ಟ್ರೀಯ ಮಕ್ಕಳ ಚಿತ್ರೋತ್ಸವಕ್ಕೆ ಕನ್ನಡದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ "ಚಿಣ್ಣರ ಚಂದ್ರ" ಚಿತ್ರ ಅಧಿಕೃತವಾಗಿ ಆಯ್ಕೆಯಾಗಿದೆ.

ಕನ್ನಡದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮಕ್ಕಳ ಸಿನಿಮಾವೊಂದನ್ನು ಮಾಡಿದ್ದಾರೆ. ತಮ್ಮ ರಚನೆಯ 'ಅಡಗೂಲಜ್ಜಿ' ಶೀರ್ಷಿಕೆಯ ಕಾದಂಬರಿ ಆಧರಿಸಿದ ಚಿತ್ರಕ್ಕೆ 'ಚಿಣ್ಣರ ಚಂದ್ರ' ಎಂದು ಹೆಸರಿಡಲಾಗಿದೆ. ಬಹುತೇಕ ಚಿತ್ರೀಕರಣ ಮುಗಿಸಿರೋ ಚಿಣ್ಣರ ಚಂದ್ರ ಬಿಡುಗಡೆ ಸಜ್ಜಾಗಿದೆ. ಇದೀಗ ಅಹಮದಾಬಾದ್ ಅಂತಾರಾಷ್ಟ್ರೀಯ ಮಕ್ಕಳ ಚಿತ್ರೋತ್ಸವಕ್ಕೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ "ಚಿಣ್ಣರ ಚಂದ್ರ" ಚಿತ್ರ ಅಧಿಕೃತವಾಗಿ ಆಯ್ಕೆಯಾಗಿದೆ. ಸ್ಪರ್ಧಾ ವಿಭಾಗದಲ್ಲಿ ಪ್ರವೇಶ ಪಡೆದಿದೆ.

ಈ 'ಚಿಣ್ಣರ ಚಂದ್ರ' ಚಿತ್ರವು ಈಗಾಗಲೇ ಮೆಲ್ಬರ್ನ್ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿ, ಸ್ಪರ್ಧೆಯ ಅಂತಿಮ ಹಂತ ತಲುಪಿದೆ. ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿರುವ ಈ ಸಿನಿಮಾ ಸಮಾಜದಲ್ಲಿ ಸದಭಿರುಚಿ, ಸೌಹಾರ್ದತೆ ಮತ್ತು ಸಮಾನತೆ ಅಗತ್ಯ ಎಂಬುದನ್ನೂ ಮಕ್ಕಳ ಮೂಲಕ ಅಭಿವ್ಯಕ್ತಪಡಿಸುತ್ತದೆ. ಜೊತೆಗೆ ಜನಪದ ಕಥೆಗಳು ಮಕ್ಕಳ ಮನಸ್ಸಿನ ಭಾಗವಾಗುವುದನ್ನು ಚಿತ್ರಿಸಿದೆ.

ಬರಗೂರು ರಾಮಚಂದ್ರಪ್ಪ ಅವರ ಮೊಮ್ಮಗ ಆಕಾಂಕ್ಷ್ ಬರಗೂರು ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಹಿಂದೆ ಬಯಲಾಟದ ಭೀಮಣ್ಣ ಮತ್ತು ತಾಯಿ ಕಸ್ತೂರ್ ಗಾಂಧಿ ಚಿತ್ರಗಳಲ್ಲಿ ಪುಟ್ಟ ಪಾತ್ರ ನಿರ್ವಹಿಸಿದ್ದ ಆಕಾಂಕ್ಷ್​​ ಚಿಣ್ಣರ ಚಂದ್ರ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಕಾಂಕ್ಷ್ ಬರಗೂರ್ ಜೊತೆ ನಿಕ್ಷೇಪ, ಷಡ್ಜ, ಈಶಾನ್, ಅಭಿನವ್ ನಾಗ್, ಸುಂದರರಾಜ್, ರೇಖಾ, ವತ್ಸಲ ಮೋಹನ್, ರಾಧ ರಾಮಚಂದ್ರ, ರಾಘವ, ರಾಜಪ್ಪ ದಳವಾಯಿ, ಸುಂದರರಾಜ್ ಅರಸು, ವೆಂಕಟರಾಜು, ಹಂಸ ಮುಂತಾದವರು ಅಭಿನಯಿಸಿದ್ದಾರೆ.

'ಚಿಣ್ಣರ ಚಂದ್ರ' ಚಿತ್ರತಂಡ

ಇದನ್ನೂ ಓದಿ:ಬುರ್ಜ್ ಖಲೀಫಾದಲ್ಲಿ 'ಅನಿಮಲ್'​​ ಸ್ಪೆಷಲ್​ ಪ್ರಮೋಶನ್​​ ವಿಡಿಯೋ ಪ್ರದರ್ಶನಕ್ಕೆ ಸಿದ್ಧತೆ!

ಸಂಕಲನಕಾರರಾಗಿ ಸುರೇಶ್ ಅರಸು, ಛಾಯಾಗ್ರಾಹಕರಾಗಿ ನಾಗರಾಜ್ ಆದವಾನಿ, ಸಂಗೀತ ನಿರ್ದೇಶಕರಾಗಿ ಶಮಿತ ಮಲ್ನಾಡ್ ಕೆಲಸ ಮಾಡಿದ್ದಾರೆ. ನಟರಾಜ್ ಶಿವ ಮತ್ತು ಪ್ರವೀಣ್ ಅವರು ಸಹ ನಿರ್ದೇಶಕರಾಗಿ ಈ ಚಿತ್ರತಂಡದ ಭಾಗವಾಗಿದ್ದಾರೆ. ಈ ಚಿತ್ರವನ್ನು ಜಿ ಎಸ್ ಗೋವಿಂದರಾಜು (ರಾಜಶೇಖರ್) ನಿರ್ಮಿಸಿದ್ದಾರೆ. ಚಿಣ್ಣರ ಚಂದ್ರ ಚಿತ್ರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಲ್ಲದೇ, ಶಾಲಾ ಮಕ್ಕಳಿಗೆ ರಾಜ್ಯಾದ್ಯಂತ ಪ್ರದರ್ಶಿಸುವ ಉದ್ದೇಶ ಹೊಂದಲಾಗಿದೆ. ಸದ್ಯ ಅಹಮದಾಬಾದ್ ಅಂತಾರಾಷ್ಟ್ರೀಯ ಮಕ್ಕಳ ಚಿತ್ರೋತ್ಸವಕ್ಕೆ ಆಯ್ಕೆ ಆಗಿ ಗಮನ ಸೆಳೆದಿದೆ.

ಇದನ್ನೂ ಓದಿ:ಭಾರತದ ಸೌಂದರ್ಯ ಪಸರಿಸಿದ ಶ್ವೇತಾ ಶಾರ್ದಾ: ಆಕರ್ಷಕ ವೇಷಭೂಷಣದಲ್ಲಿ ಭುವನ ಸುಂದರಿ ಸ್ಪರ್ಧಿಗಳು

ಕಂಟೆಂಟ್​ ಸಲುವಾಗಿ ಕನ್ನಡ ಚಿತ್ರಗಳು ಗಮನ ಸೆಳೆಯುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಚಿತ್ರೋತ್ಸವಗಳಲ್ಲಿ ಭಾಗಿಯಾಗಿ ಗಮನ ಸೆಳೆಯುತ್ತಿದೆ. ಕಥೆಯೇ ಸಿನಿಮಾದ ನಾಯಕ ಎಂಬುದನ್ನು ಈಗಾಗಲೇ ಹಲವು ಚಿತ್ರಗಳು ಸಾಬೀತುಪಡಿಸಿವೆ. ಇದೀಗ ಬರಗೂರು ರಾಮಚಂದ್ರಪ್ಪ ಅವರ 'ಚಿಣ್ಣರ ಚಂದ್ರ' ಸಿನಿಮಾ ಅಹಮದಾಬಾದ್ ಅಂತಾರಾಷ್ಟ್ರೀಯ ಮಕ್ಕಳ ಚಿತ್ರೋತ್ಸವದಲ್ಲಿ ಭಾಗಿಯಾಗುತ್ತಿದ್ದು, ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲಿ ಎಂದು ಹಾರೈಸೋಣ.

ABOUT THE AUTHOR

...view details