ತುಮಕೂರು: ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ, ಯುಕೆಜಿ ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಮ್ಮಿಕೊಳ್ಳಲಾಗಿದ್ದ ಬೆಂಗಳೂರು ಚಲೋ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.
ಬೆಂಗಳೂರು ಚಲೋ ಮುಷ್ಕರ ತಾತ್ಕಾಲಿಕವಾಗಿ ಹಿಂಪಡೆದ ಅಂಗನವಾಡಿ ಕಾರ್ಯಕರ್ತೆಯರು
ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ, ಯುಕೆಜಿ ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಮ್ಮಿಕೊಳ್ಳಲಾಗಿದ್ದ ಬೆಂಗಳೂರು ಚಲೋ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.
![ಬೆಂಗಳೂರು ಚಲೋ ಮುಷ್ಕರ ತಾತ್ಕಾಲಿಕವಾಗಿ ಹಿಂಪಡೆದ ಅಂಗನವಾಡಿ ಕಾರ್ಯಕರ್ತೆಯರು Bangalore Chalo strike](https://etvbharatimages.akamaized.net/etvbharat/prod-images/768-512-5342757-thumbnail-3x2-lek.jpg)
ನಿನ್ನೆ ತುಮಕೂರಿನಿಂದ ಬೆಂಗಳೂರಿಗೆ ಅಂಗನವಾಡಿ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರು ಚಲೋ ಹಮ್ಮಿಕೊಂಡಿದ್ದರು. ಈ ಬೃಹತ್ ಪಾದಯಾತ್ರೆಗೆ ಪೊಲೀಸ್ ತಡೆ ಒಡ್ಡಿದ ಹಿನ್ನೆಲೆ ನಗರದ ಗಾಜಿನಮನೆಯಲ್ಲಿ ನಿನ್ನೆಯಿಂದ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತುಮಕೂರಿನಲ್ಲಯೇ ಮುಷ್ಕರ ಮುಂದುವರೆಸಿದರು. ಈ ಹಿನ್ನೆಲೆಯಲ್ಲಿ ಇಂದು ಸರ್ಕಾರದ ರಾಜ್ಯ ಪ್ರಧಾನ ಕಾರ್ಯದರ್ಶಿಯಿಂದ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಲಿಖಿತ ರೂಪದ ಪತ್ರ ಬಂದ ಹಿನ್ನೆಲೆ ಇದೇ ತಿಂಗಳ 16 ರವರೆಗೂ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿದೆ.
ಈ ವೇಳೆ ಮಾತನಾಡಿದ ಅಂಗನವಾಡಿ ಕಾರ್ಯಕರ್ತೆಯರ ಸಂಘದ ರಾಜ್ಯಾಧ್ಯಕ್ಷೆ ವರಲಕ್ಷ್ಮಿ, ಲಿಖಿತ ರೂಪದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅವರಿಂದ ಪತ್ರ ಬಂದ ಹಿನ್ನೆಲೆ ಈ ಹೋರಾಟವನ್ನು ಮುಂದೂಡಲಾಗಿದೆ. ನಮಗೆ ಪ್ರಥಮ ಹಂತದ ಜಯ ದೊರೆತಂತಾಗಿದೆ. ಮುಂದೆ ಬರುವಂತಹ ಆದೇಶ ಸಕಾರಾತ್ಮಕವಾಗಿರುತ್ತದೆ ಇಂದು ನಾವು ನಂಬಿದ್ದೇವೆ. ಹಾಗಾಗಿ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇದೇ ತಿಂಗಳ 16 ರವರೆಗೂ ಕಾಯುತ್ತೇವೆ. 16 ರಂದು ಸರಿಯಾದ ನಿರ್ದೇಶನ ಬರಲಿಲ್ಲವೆಂದರೆ 17 ರಿಂದ ಮತ್ತೆ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.