ಕರ್ನಾಟಕ

karnataka

ಬೆಂಗಳೂರು: ಕೈಮಗ್ಗ ಮೇಳ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

By

Published : Aug 5, 2022, 5:30 PM IST

exhibition and sale of hand loom products

ಕರ್ನಾಟಕ ಸರ್ಕಾರ ಕೋವಿಡ್ ನಂತರ ರಾಜ್ಯದಲ್ಲಿ ಪ್ರಪ್ರಥಮವಾಗಿ ಆಯೋಜನೆ ಮಾಡುತ್ತಿರುವ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಇದಾಗಿದೆ.

ಬೆಂಗಳೂರು:75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ 8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಕರ್ನಾಟಕ ಚಿತ್ರಕಲಾ ಪರಿಷತ್​ನಲ್ಲಿ ಮೂರು ದಿನಗಳ ‘ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ'ವನ್ನು ಮುಖ್ಯಮಂತ್ರಿ ಬೊಮ್ಮಾಯಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಸಿಎಂ, ಕೈಮಗ್ಗ ಅಂದ್ರೆ ಸ್ವಾವಲಂಬನೆ ಸಂಕೇತ. ಇದು ಸ್ವಾತಂತ್ರ್ಯ ಹೋರಾಟದಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದೆ. ಕೈಮಗ್ಗದ ಚರಕದ ಬಗ್ಗೆ ಮಹಾತ್ಮ ಗಾಂಧಿ ಅವರು ಮಹತ್ವ ತಿಳಿಸಿದ್ದು, ನಮ್ಮ ಬಟ್ಟೆಯನ್ನು ನಾವೇ ತಯಾರು ಮಾಡಬೇಕೆಂದು ಕರೆ ಕೊಟ್ಟವರು. ಕೇಂದ್ರ ಹಾಗೂ ರಾಜ್ಯ ಸರ್ಕಾರ 'ಆತ್ಮ ನಿರ್ಭರ್ ಭಾರತ್' ಎಂದು ಕರೆ ಕೊಟ್ಟಿದೆ. ಇದರಲ್ಲಿ ಕೈಮಗ್ಗ ಕೂಡ ಒಂದು. ನೇಕಾರರು, ಕೂಲಿಕಾರರು ಲಾಭಗಳಿಸುವ ಉದ್ದೇಶಕ್ಕೆ ಈ ಮೇಳ ಆಯೋಜಿಸಲಾಗಿದೆ. ನೇಕಾರರ ಮಕ್ಕಳಿಗೆ ವಿದ್ಯಾನಿಧಿಯನ್ನು ರಾಜ್ಯ ಸರ್ಕಾರ ನೀಡುತ್ತಿದ್ದು, ಅನೇಕ ಯೋಜನೆಗಳನ್ನು ಕೈಮಗ್ಗಕ್ಕೆ ಮೀಸಲಿಟ್ಟಿದ್ದೇವೆ ಎಂದರು.

ಇಂದಿನಿಂದ ಆಗಸ್ಟ್​ 7ರವರೆಗೆ ನಡೆಯಲಿರುವ ಕೈಮಗ್ಗ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಅನೇಕ ಸಹಕಾರ ಸಂಘ-ಸಂಸ್ಥೆಗಳು ಭಾಗವಹಿಸಿದ್ದು, ಮಳಿಗೆಗಳು ಬೆಳಗ್ಗೆ 11ರಿಂದ ಸಂಜೆ 7.30ರವರೆಗೆ ತೆರೆದಿರಲಿವೆ. ಅಲ್ಲದೆ, ಆಗಸ್ಟ್​ 7ರಂದು ಬೆಳಗ್ಗೆ 11.30ಕ್ಕೆ 8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾಗೂ ನೇಕಾರರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಕೈಮಗ್ಗ ಮತ್ತು ಜವಳಿ, ಸಕ್ಕರೆ ಸಚಿವ ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ ಉದ್ಘಾಟಿಸಲಿದ್ದಾರೆ.

ಇದನ್ನೂ ಓದಿರಿ:ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಕೈಮಗ್ಗ ಮೇಳ: ನೇಕಾರರಿಗೆ ಸರ್ಕಾರದ ಬೆಂಬಲ

ಕೈಮಗ್ಗ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನದಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ (ಕೆಎಚ್​ಡಿಸಿ)ದ ರೇಷ್ಮೆ ಸೀರೆಗಳು, ಕಾಟನ್ ಬೆಡ್ ಶೀಟ್, ಟವೆಲ್, ಲುಂಗಿ; ತುಮಕೂರು, ಚಿತ್ರದುರ್ಗ, ಹಾಸನ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರದ ರೇಷ್ಮೆ ಸೀರೆಗಳು; ದಾವಣಗೆರೆಯ ಟವೆಲ್, ಲುಂಗಿ, ಕರವಸ್ತ್ರ, ಬೆಡ್ಶೀಟ್; ಶಿವಮೊಗ್ಗದ ಕಾಟನ್ ಶರ್ಟ್, ಕಾಟನ್ ಕೋಟ್, ಕುರ್ತಾ, ಮಕ್ಕಳ ಉಡುಗೆ, ಸೀರೆ; ಚಿಕ್ಕಮಗಳೂರು, ಹಾವೇರಿಯ ಕರ್ಚೀಫ್ ಸಹಿತ ಇತರ ಉತ್ಪನ್ನಗಳು ಇವೆ.

ಅಲ್ಲದೆ, ಉಡುಪಿ ಸೀರೆ; ಬೀದರ್ ನ ರಗ್ಗು; ಕಲಬುರಗಿಯ ಶಾಲು, ಕಂಬಳಿ; ಬಳ್ಳಾರಿಯ ಕಸೂತಿ ಉತ್ಪನ್ನಗಳು; ಧಾರವಾಡದ ಜಮಖಾನ; ಬೆಳಗಾವಿಯ ಸೀರೆ, ಧೋತಿ, ದುಪಟ್ಟಾ, ನ್ಯಾಪ್ಕಿನ್; ಗದಗದ ಪಟ್ಟೆದಂಚು ಸೀರೆ, ಗಾಡಿಧಡಿ ಕಾಟನ್ ಸೀರೆ, ಗೋಮಿಧಡಿ ಸೀರೆ, ಚಿಕ್ಕಿಫರಾಸ್ ಕಾಟನ್ ಸೀರೆ; ವಿಜಯಪುರದ ಜಾಕೆಟ್; ಹಾಗೂ ಬಾಗಲಕೋಟೆಯ ಗುಳೇದಗುಡ್ಡ ಖಣ ಬಟ್ಟೆ, ಖಣ ನೋಟ್ ಬುಕ್, ಖಣ ಶಾಲು, ಇಲಕಲ್ಲ ಸೀರೆಗಳು ದೊರೆಯುತ್ತವೆ.

ABOUT THE AUTHOR

...view details