ತಿರುವನಂತಪುರಂ/ಚೆನ್ನೈ: ಕಳೆದ ಕೆಲ ದಿನಗಳ ಹಿಂದೆ ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ಅನೇಕ ದಕ್ಷಿಣ ಭಾರತದ ರಾಜ್ಯಗಳಲ್ಲಿ ಅಕಾಲಿಕ ಮಳೆ ಸುರಿದಿದೆ. ಇದರಿಂದ ತರಕಾರಿ ಸೇರಿದಂತೆ ಅನೇಕ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಪ್ರಮುಖವಾಗಿ ಪ್ರತಿ ದಿನ ಬಳಕೆಯಾಗುವ ಟೊಮೆಟೊ ಬೆಲೆ 100ರ ಗಡಿ ದಾಟಿದ್ದು, ಈಗಲೂ ಕೆಲವೊಂದು ರಾಜ್ಯಗಳಲ್ಲಿ ಇದೇ ಬೆಲೆಗೆ ಮಾರಾಟವಾಗ್ತಿದೆ.
ಅಕಾಲಿಕ ಮಳೆಯಿಂದಾಗಿ ರೈತರು ಬೆಳೆದ ಟೊಮೆಟೊ ಬೆಳೆ ಸಂಪೂರ್ಣವಾಗಿ ಹಾಳಾಗಿರುವ ಕಾರಣ ಕರ್ನಾಟಕ, ತೆಲಂಗಾಣ, ಕೇರಳ, ಆಂಧ್ರಪ್ರದೇಶದಲ್ಲಿ ಕಳೆದ ಕೆಲ ದಿನಗಳ ಹಿಂದೆ ಟೊಮೆಟೊ ಪ್ರತಿ ಕೆಜಿಗೆ 100ರಿಂದ 180ರೂವರೆಗೆ ಮಾರಾಟವಾಗಿತ್ತು. ಇದೀಗ ಕರ್ನಾಟಕ, ತೆಲಂಗಾಣದಲ್ಲಿ ಇದರ ಬೆಲೆಯಲ್ಲಿ ಸ್ವಲ್ಪ ಮಟ್ಟದ ಇಳಿಕೆ ಕಂಡು ಬಂದಿದೆ. ಆದರೆ, ತಮಿಳುನಾಡು ಹಾಗೂ ಕೇರಳದಲ್ಲಿ ಈಗಲೂ ಪ್ರತಿ ಕೆಜಿ ಟೊಮೆಟೊ 100ರಿಂದ 160ರೂವರೆಗೆ ಮಾರಾಟವಾಗುತ್ತಿದೆ.
ಕೇರಳದ ತಿರುವನಂತಪುರಂನಲ್ಲಿ ಚಿಲ್ಲರೆ ವ್ಯಾಪಾರಿಗಳು ಪ್ರತಿ ಕೆಜಿಗೆ 140ರಿಂದ 160 ರೂಪಾಯಿಗೆ ಮಾರಾಟ ಮಾಡ್ತಿದ್ದು, ಹೋಲ್ಸೇಲ್ ಮಾರುಕಟ್ಟೆಯಲ್ಲಿ 120 ರೂಗೆ ಕೆಜಿ ಮಾರಾಟ ಮಾಡ್ತಿದ್ದಾರೆ. ತಮಿಳುನಾಡಿನಲ್ಲೂ ಟೊಮೆಟೊ ಬೆಲೆ ಪ್ರತಿ ಕೆಜಿಗೆ 80ರಿಂದ 90 ರೂ. ಆಗಿದ್ದು, ಇದೀಗ ಖರೀದಿ ಮಾಡಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಉಳಿದಂತೆ ಕರ್ನಾಟಕದಲ್ಲಿ ಪ್ರತಿ ಕೆಜಿಗೆ 40ರಿಂದ 70 ರೂ. ಆಗಿದ್ದು, ತೆಲಂಗಾಣದಲ್ಲಿ 40ರಿಂದ 60 ರೂಗೆ ಮಾರಾಟವಾಗುತ್ತಿದೆ.