ಕರ್ನಾಟಕ

karnataka

ಫಿರೋಜಾಬಾದ್ ಇನ್ನು ಚಂದ್ರನಗರ: ಮರುನಾಮಕರಣಕ್ಕೆ ಬಹುಮತದ ಒಪ್ಪಿಗೆ

By ETV Bharat Karnataka Team

Published : Dec 1, 2023, 9:48 PM IST

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಫಿರೋಜಾಬಾದ್ ಅನ್ನು ಚಂದ್ರನಗರ ಎಂದು ಹೆಸರು ಬದಲಾಯಿಸಲು ಒಪ್ಪಿದೆ ಎಂದು ಮೂಲಗಳು ತಿಳಿಸಿವೆ.

Uttar Pradesh
Uttar Pradesh

ಫಿರೋಜಾಬಾದ್ (ಉತ್ತರ ಪ್ರದೇಶ): ಪರಕೀಯರ ಆಳ್ವಿಕೆಗೆ ಒಳಪಟ್ಟ ಭಾರತ ಹಲವಾರು ಹೆಸರುಗಳಿಂದ ಕರೆಯಲ್ಪಟ್ಟಿತು. ಆಡಳಿತದಲ್ಲಿ ಪ್ರಾಬಲ್ಯ ಸಾಧಿಸಿದ ರಾಜರು ತಮ್ಮ ಇಚ್ಛೆಯ ಹೆಸರುಗಳನ್ನು ಊರುಗಳಿಗೆ ಇಡುತ್ತಾ ಬಂದರು. ಅವುಗಳಲ್ಲಿ ಕೆಲವು ಹಾಗೇ ಉಳಿದರೆ, ಭಾರತ ಸ್ವಾತಂತ್ರ್ಯಗೊಂಡ ನಂತರ ಕೆಲ ಸರ್ಕಾರಗಳು ಅದನ್ನು ಬದಲಾಯಿಸಿದವು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೆಲ ಪ್ರಮುಖ ನಗರಗಳ ಹೆಸರುಗಳನ್ನು ಹಿಂದಿನ ಕಾಲಕ್ಕೆ ಬದಲಾಯಿಸಿದೆ. ಈಗ ಮತ್ತೆ ಕೆಲ ನಗರಗಳ ಹೆಸರುಗಳನ್ನು ಬದಲಾಯಿಸುವ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದೆ.

ಅಲಿಗಢವನ್ನು ಹರಿಘರ್ ಎಂದು ಮರುನಾಮಕರಣ ಮಾಡಲು ಯೋಜಿಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಗಾಜಿನ ಜಿಲ್ಲೆ ಫಿರೋಜಾಬಾದ್ ಹೆಸರನ್ನು ಚಂದ್ರನಗರ ಎಂದು ಬದಲಾಯಿಸಲು ಅಧಿಕಾರಿಗಳು ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಫಿರೋಜಾಬಾದ್ ಹೆಸರನ್ನು ಚಂದ್ರನಗರ ಎಂದು ಬದಲಾಯಿಸುವ ಪ್ರಸ್ತಾವನೆಗೆ ಜಿಲ್ಲಾ ಪಂಚಾಯಿತಿ ಮತ್ತು ನಗರಸಭೆ ಅನುಮೋದನೆ ನೀಡಿದೆ ಎಂದು ತಿಳಿದು ಬಂದಿದೆ.

ಈ ಹೆಸರು ಏಕೆ?: ಫಿರೋಜಾಬಾದ್ ಗೆಜೆಟಿಯರ್ ಪ್ರಕಾರ, ಈ ನಗರದ ಹೆಸರು ಪ್ರಾಚೀನ ಕಾಲದಲ್ಲಿ ಚಂದ್ರಾವರ ಎಂದು ಇತ್ತು. 1566 ರಲ್ಲಿ, ಅಕ್ಬರನ ಆಳ್ವಿಕೆಯಲ್ಲಿ ಈ ನಗರವನ್ನು ಫಿರೋಜಾಬಾದ್ ಎಂದು ಹೆಸರಿಸಿದ ಎಂದು ಫಿರೋಜಾಬಾದ್ ಗೆಜೆಟಿಯರ್ ಹೇಳಿಕೊಂಡಿದೆ.

ನಗರದಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿ ದಕ್ಷಿಣದಲ್ಲಿ ಯಮುನಾ ನದಿಯ ದಡದಲ್ಲಿ ಜಿಲ್ಲೆಯ ಚಂದ್ರವಾರ್ ಎಂಬ ಹೆಸರಿನ ಗ್ರಾಮವಿದೆ. ಪುರಾತನ ಮತ್ತು ಪಾಳುಬಿದ್ದ ಮನೆಗಳು ಮತ್ತು ಪಾಳುಬಿದ್ದ ಕೋಟೆ ಇಂದಿಗೂ ಗ್ರಾಮದಲ್ಲಿವೆ. ರಾಜ ಚಂದ್ರಸೇನನ ಆಳ್ವಿಕೆಯಲ್ಲಿ ಗ್ರಾಮದಲ್ಲಿ ಸಮೃದ್ಧಿ ಇತ್ತು ಎಂದು ಹೇಳಲಾಗುತ್ತದೆ. ಅವರ ಕಾಲದ ಅನೇಕ ಜೈನ ದೇವಾಲಯಗಳೂ ಈ ಗ್ರಾಮದಲ್ಲಿವೆ. ಈ ಗ್ರಾಮಕ್ಕೆ ಹೋಗುವ ರಸ್ತೆಯು ಚಂದ್ರವಾರ್ ಗೇಟ್ ಎಂಬ ಪ್ರವೇಶ ದ್ವಾರವನ್ನು ಹೊಂದಿದೆ.

ಸರ್ಕಾರಕ್ಕೆ ಪ್ರಸ್ತಾವನೆ:ಫಿರೋಜಾಬಾದ್ ಪುರಸಭೆಯ ಮೇಯರ್ ಕಾಮಿನಿ ರಾಥೋಡ್ ಮಾತನಾಡಿ, 2021ರ ಆಗಸ್ಟ್‌ನಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿ ನಿರ್ಣಯ ಅಂಗೀಕರಿಸಲಾಗಿದ್ದು, ಫಿರೋಜಾಬಾದ್ ಹೆಸರನ್ನು ಚಂದ್ರನಗರ ಎಂದು ಬದಲಾಯಿಸಲು ಅನುಮೋದಿತ ನಿರ್ಣಯವನ್ನು ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಪ್ರಸ್ತಾವನೆ ಇನ್ನೂ ಸರ್ಕಾರದ ಬಳಿ ಬಾಕಿ ಇದೆ ಎಂದು ಹೇಳಿದರು.

ಗುರುವಾರ ನಡೆದ ನಗರಸಭೆ ಕಾರ್ಯಕಾರಿಣಿ ಸಭೆಯಲ್ಲಿ ಫಿರೋಜಾಬಾದ್ ಹೆಸರನ್ನು ಚಂದ್ರನಗರ ಎಂದು ಬದಲಾಯಿಸುವ ಪ್ರಸ್ತಾವನೆಯನ್ನು ಮುಖ್ಯಾಧಿಕಾರಿ ಲಕ್ಷ್ಮೀನಾರಾಯಣ ಯಾದವ್ ಮುಂದಿಟ್ಟರು. ಕಾರ್ಯಕಾರಿಣಿಯ 12 ಸದಸ್ಯರಲ್ಲಿ 11 ಸದಸ್ಯರು ಪ್ರಸ್ತಾವನೆ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈಗಾಗಲೇ ಬದಲಿಸಲಾದ ಹೆಸರುಗಳು:ಉತ್ತರ ಪ್ರದೇಶ ಸರ್ಕಾರವು ಈಗಾಗಲೇ ಜಿಲ್ಲೆ ಮತ್ತು ಸ್ಥಳಗಳ ಹೆಸರನ್ನು ಅಲಹಾಬಾದ್ ಅನ್ನು ಪ್ರಯಾಗ್‌ರಾಜ್, ಫೈಜಾಬಾದ್ ಅನ್ನು ಅಯೋಧ್ಯೆ, ಮೊಘಲ್‌ಸರಾಯ್ ರೈಲು ನಿಲ್ದಾಣವನ್ನು ಪಂಡಿತ್ ದೀನದಯಾಳ್ ಉಪಾಧ್ಯಾಯ ನಿಲ್ದಾಣ ಎಂದು ಗೋರಖ್‌ಪುರದ ಉರ್ದು ಮಾರುಕಟ್ಟೆಯನ್ನು ಹಿಂದಿ ಮಾರುಕಟ್ಟೆ, ಹುಮಾಯೂನ್‌ಪುರವನ್ನು ಹನುಮಾನ್ ನಗರ ಎಂದು ಬದಲಾಯಿಸಿದೆ.

ಅಲಿಘರ್, ಸಂಭಾಲ್, ಫರೂಕಾಬಾದ್, ಸುಲ್ತಾನ್‌ಪುರ, ಶಹಜಹಾನ್‌ಪುರ, ಆಗ್ರಾ, ಮೈನ್‌ಪುರಿ ಮತ್ತು ದಿಯೋಬಂದ್ ಜಿಲ್ಲೆಗಳನ್ನು ಮರುನಾಮಕರಣ ಮಾಡಲು ಯುಪಿ ಸರ್ಕಾರ ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಹೊಸದಾಗಿ ನೇಮಕವಾದ ಸರ್ಕಾರಿ ಶಿಕ್ಷಕನ ಕಿಡ್ನಾಪ್ ಮಾಡಿ, ಬಲವಂತದಿಂದ ಮದುವೆ ಮಾಡಿಸಿದ್ರು!

ABOUT THE AUTHOR

...view details