ಕರ್ನಾಟಕ

karnataka

Tremors jolt Delhi: ಅಫ್ಘಾನಿಸ್ತಾನದಲ್ಲಿ 5.8 ತೀವ್ರತೆಯ ಭೂಕಂಪನ.. ದೆಹಲಿಯಲ್ಲೂ ನಡುಗಿದ ಭೂಮಿ

By

Published : Aug 6, 2023, 7:58 AM IST

Updated : Aug 6, 2023, 9:04 AM IST

ನೆರೆಯ ರಾಷ್ಟ್ರ ಅಫ್ಘಾನಿಸ್ತಾನದಲ್ಲಿ ಭೂಕಂಪನ ಉಂಟಾಗಿದ್ದು, ಇದರ ಅನುಭವ ದೆಹಲಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಜನರಿಗೂ ಆಗಿದೆ.

Tremors jolt Delhi
ಭೂಕಂಪನ

ನವದೆಹಲಿ: ನಿನ್ನೆ ರಾತ್ರಿ ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಇತರೆ ಭಾಗಗಳಲ್ಲಿ ಲಘು ಭೂಕಂಪನದ ಅನುಭವವಾಗಿದೆ. ಅಫ್ಘಾನಿಸ್ತಾನದ ಹಿಂದೂಕುಶ್ ಪ್ರದೇಶದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದೆ. ಇತ್ತ ದೆಹಲಿ ಸೇರಿದಂತೆ ಸೇರಿದಂತೆ ಉತ್ತರ ಭಾರತದ ಹಲವು ಕಡೆಗಳಲ್ಲೂ ಭೂಮಿ ನಡುಗಿದೆ. ಶನಿವಾರ ರಾತ್ರಿ 9:31 ಕ್ಕೆ ಅಫ್ಘಾನಿಸ್ತಾನದ ಪರ್ವತ ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ. ದೆಹಲಿಯ ಜನರಿಗೂ ಭೂಮಿಯಲ್ಲಾದ ತಲ್ಲಣದ ಅನುಭವ ಉಂಟಾಗಿದೆ.

"ರಾತ್ರಿ 9:30 ರ ಸುಮಾರಿಗೆ ಎರಡು ಬಾರಿ ಭೂಕಂಪ ಸಂಭವಿಸಿದೆ" ಎಂದು ನೋಯ್ಡಾದ ಬಹುಮಹಡಿ ಅಪಾರ್ಟ್ಮೆಂಟ್ನಲ್ಲಿ ವಾಸಿಸುವ ಪ್ರೀತಿ ಶಂಕರ್ ಎಂಬುವರು ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ. ಭೂಕಂಪದ ಕೇಂದ್ರಬಿಂದುವು ಅಕ್ಷಾಂಶದಲ್ಲಿ 36.38 ಡಿಗ್ರಿ ಉತ್ತರದಲ್ಲಿ ಮತ್ತು ಅಫ್ಘಾನಿಸ್ತಾನದ ಹಿಂದೂಕುಶ್ ಪ್ರದೇಶದಲ್ಲಿ ರೇಖಾಂಶದಲ್ಲಿ 70.77 ಡಿಗ್ರಿ ಪೂರ್ವದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.

ಈ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಟ್ವೀಟ್‌ ಮಾಡಿದ್ದು, "ದಿಲ್ಲಿಯಲ್ಲೂ ಭೂಕಂಪನದ ಅನುಭವವಾಗಿದೆ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಭಾವಿಸುತ್ತೇವೆ" ಎಂದು ಹೇಳಿದ್ದಾರೆ. " ದೆಹಲಿಯ ನಾಗರಿಕರೆಲ್ಲರೂ ಸುರಕ್ಷಿತವಾಗಿದ್ದೀರಿ ಎಂದು ನಾವು ಭಾವಿಸುತ್ತೇವೆ! ಯಾವುದೇ ತುರ್ತು ಸಹಾಯಕ್ಕಾಗಿ, 112 ಅನ್ನು ಡಯಲ್ ಮಾಡಿ" ಎಂದು ದೆಹಲಿ ಪೊಲೀಸರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಕಳೆದ ಜುಲೈನಲ್ಲಿ, ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಕನಿಷ್ಠ ಮೂರು ಸರಣಿ ಲಘು ಭೂಕಂಪನ ಸಂಭವಿಸಿತ್ತು. ಆದ್ರೆ ಅದೃಷ್ಟವಶಾತ್​ ಎಲ್ಲಿಯೂ ಯಾವುದೇ ರೀತಿಯ ಹಾನಿ ಅಥವಾ ಸಾವು ನೋವಿನ ಬಗ್ಗೆ ವರದಿಯಾಗಿರಲಿಲ್ಲ. ಅರ್ಧ ಗಂಟೆಯ ಅಂತರದಲ್ಲಿ ಗುಲಾಬಿ ನಗರದಲ್ಲಿ ಈ ಕಂಪನದ ಅನುಭವವಾಗಿತ್ತು. ಎನ್‌ಸಿಎಸ್ ಪ್ರಕಾರ, 10 ಕಿಲೋ ಮೀಟರ್ ಆಳದಲ್ಲಿ ಬೆಳಗ್ಗೆ 4.09 ಕ್ಕೆ 4.4 ತೀವ್ರತೆಯ ಭೂಕಂಪ ಸಂಭವಿಸಿತ್ತು.

ವಿಜಯಪುರದಲ್ಲೂ ಕಂಪಿಸಿದ್ದ ಭೂಮಿ.. ಕಳೆದ ಜುಲೈ 25 ರಂದು ವಿಜಯಪುರ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಭೂಕಂಪನ ಉಂಟಾದ ಅನುಭವ ಜನರಿಗೆ ಆಗಿತ್ತು. ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ಭೂಮಿ ನಡುಗಿತ್ತು. ಇದರಿಂದ ಜನರು ಆತಂಕಕ್ಕೀಡಾಗಿದ್ದರು. ಆಲಮಟ್ಟಿ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವ ಕಾರಣ ಭೂಕಂಪನದ ಅನುಭವ ಜನರಿಗೆ ಆಗಿರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದರು.

ಈ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.4ರಷ್ಟು ದಾಖಲಾಗಿತ್ತು. ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಆಗಾಗ ಭೂಕಂಪನದ ಅನುಭವ ಆಗುತ್ತಿದೆ. ಜಿಲ್ಲಾಡಳಿತ ಭೂಕಂಪ ಮಾಪನ ತಜ್ಞರನ್ನು ಕರೆಯಿಸಿ ಪರಿಶೀಲನೆ ಸಹ ನಡೆಸಿತ್ತು. 'ಆಲಮಟ್ಟಿ ಜಲಾಶಯವಿರುವ ಕಾರಣ ಅಂತರ್ಜಲ ಹೆಚ್ಚಾದಾಗ ಭೂಮಿ ಕಂಪಿಸುವುದು ಸಹಜವಾಗಿರುತ್ತದೆ. ಆದರೆ ದೊಡ್ಡ ಪ್ರಮಾಣದಲ್ಲಿ ಭೂಕಂಪನ ಆಗುವುದಿಲ್ಲ. ಜನರು ಭಯಭೀತರಾಗುವ ಅವಶ್ಯಕತೆ ಇಲ್ಲ' ಎಂದು ತಿಳಿಸಿದ್ದರು.

ಇದನ್ನೂ ಓದಿ:ವಿಜಯಪುರ: ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ವೃದ್ಧೆ ಸಾವು.. ಜಿಲ್ಲೆಯಲ್ಲಿ ಮತ್ತೆ ಭೂಕಂಪನ

Last Updated : Aug 6, 2023, 9:04 AM IST

ABOUT THE AUTHOR

...view details