ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಲು ತಂತ್ರಗಾರಿಕೆಯಲ್ಲಿ ನಿರತವಾಗಿರುವ ವಿರೋಧ ಪಕ್ಷಗಳು ತಮ್ಮ ಮೈತ್ರಿಕೂಟವನ್ನು 'I.N.D.I.A.' ಎಂದು ಕರೆದುಕೊಂಡಿವೆ. ನಿನ್ನೆ ಬೆಂಗಳೂರಿನಲ್ಲಿ ನಡೆದ ಪ್ರತಿಪಕ್ಷಗಳ ಸಭೆಗೆ 26 ಪಕ್ಷಗಳು ಭಾಗಿಯಾಗಿದ್ದವು. ಈ ಸಭೆಯಲ್ಲಿ ಹೊಸ ಮೈತ್ರಿಗೆ 'I.N.D.I.A' ಹೆಸರನ್ನು ಅಂತಿಮಗೊಳಿಸಲಾಗಿದೆ.
ಆದರೆ ಸಭೆ ನಡೆದು ಒಂದು ದಿನದ ನಂತರ, ಮೈತ್ರಿಯಲ್ಲಿ ಬಿರುಕು ಮೂಡಿದೆ ಎಂಬ ವದಂತಿ ಹರಡಿತ್ತು. ವರದಿಗಳನ್ನು ಕಾಂಗ್ರೆಸ್ ಬುಧವಾರ ತಳ್ಳಿಹಾಕಿದೆ ಮತ್ತು ಟೀಮ್ ಇಂಡಿಯಾ ಒಗ್ಗೂಡಿದೆ ಎಂದು ಹೇಳಿದೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್, ಪ್ರಧಾನಿ ಮೋದಿ ಎಷ್ಟೇ ಪ್ರಯತ್ನಿಸಿದರೂ ಪ್ರತಿಪಕ್ಷಗಳ ಮೈತ್ರಿ ಒಗ್ಗಟ್ಟಾಗಿಯೇ ಇರುತ್ತದೆ ಎಂದು ಹೇಳಿದೆ.
ಜೆಡಿಯು ನಾಯಕ ನಿತೀಶ್ ಕುಮಾರ್ ಹೊಸ ಮೈತ್ರಿ ಹೆಸರಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ "ನಾವೆಲ್ಲರೂ ಒಂದೇ. ಟೀಮ್ ಇಂಡಿಯಾದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಮ್ಮ ಘೋಷಣೆ 'ಜೀತೇಗ ಭಾರತ್' (ಭಾರತ ಗೆಲ್ಲುತ್ತದೆ). ಟೀಮ್ ಇಂಡಿಯಾವನ್ನು ಪ್ರಶ್ನಿಸುವವರು ಭಾರತವನ್ನು ಪದಗಳ ಮೂಲಕ ವಿಭಜಿಸಲು ಬಯಸುತ್ತಾರೆ" ಎಂದು ತಿರುಗೇಟು ನೀಡಿದರು. "ಬಿಜೆಪಿ ನಿತೀಶ್ ವಿರುದ್ಧ ಅಸಭ್ಯ ಭಾಷೆ ಬಳಸುತ್ತಿದೆ. ಈಗ ಅವರ ಬಗ್ಗೆ ವದಂತಿಗಳನ್ನು ಹರಡುತ್ತಿದ್ದಾರೆ. ಮೋದಿ ಎಷ್ಟೇ ಪ್ರಯತ್ನಿಸಿದರೂ ಟೀಮ್ ಇಂಡಿಯಾದಲ್ಲಿ ಯಾವುದೇ ಬಿರುಕುಗಳಿಲ್ಲ. ಬಿಜೆಪಿ ತನ್ನ ಪಿತೂರಿ ಸಿದ್ಧಾಂತಗಳೊಂದಿಗೆ ಮುಂದುವರಿಯಬಹುದು" ಎಂದು ಅವರು ಹೇಳಿದರು.
9 ವರ್ಷಗಳಲ್ಲಿ ಈ ಎನ್ಡಿಎ ಎಲ್ಲಿತ್ತು?: "ಪ್ರತಿಪಕ್ಷಗಳು ಒಗ್ಗೂಡುವ ಭೀತಿಯಿಂದ ಜು.18 ರಂದು ಎನ್ಡಿಎ ಸಭೆ ನಡೆಸಲಾಗಿದೆ. ನಾನು ಕೇಳಲು ಬಯಸುತ್ತೇನೆ, ಕಳೆದ 9 ವರ್ಷಗಳಲ್ಲಿ ಈ ಎನ್ಡಿಎ ಎಲ್ಲಿತ್ತು? ಮೊದಲಿಗೆ ಒಬ್ಬರು ಸಾಕು ಎಂದು ಹೇಳುತ್ತಿದ್ದರು. ಏಕಾಏಕಿ ಗಾಬರಿಗೊಂಡು ಎನ್ಡಿಎ ಬಗ್ಗೆ ಮಾತನಾಡತೊಡಗಿದರು. ಇದ್ದಕ್ಕಿದ್ದಂತೆ ಅವರು 38 ಪಕ್ಷಗಳನ್ನು ಸೇರಿಸಿದರು. ಅವರಲ್ಲಿ ಹಲವರು ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಂಡಿಲ್ಲ. ಕೇವಲ 12 ಪಕ್ಷಗಳು ಸಂಸದರನ್ನು ಹೊಂದಿದ್ದು, ಎರಡು ಪಕ್ಷಗಳು ಮಾತ್ರ 2 ಕ್ಕಿಂತ ಹೆಚ್ಚು ಸಂಸದರನ್ನು ಹೊಂದಿವೆ. ಇದು ಕೇವಲ ಪಕ್ಷ ಸ್ಥಾಪಿಸಿ ಎನ್ಡಿಎ ಸೇರುವಂತೆ ಜನರಿಗೆ ಮುಕ್ತ ಆಹ್ವಾನ ನೀಡಿದಂತಿದೆ" ಎಂದು ಸುರ್ಜೇವಾಲಾ ಕುಟುಕಿದರು.