ಕರ್ನಾಟಕ

karnataka

ಶಾಸಕರ ಅನರ್ಹತೆಯ ಬಗ್ಗೆ ಶೀಘ್ರ ನಿರ್ಧಾರ; ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ನಾರ್ವೇಕರ್

By PTI

Published : Oct 17, 2023, 4:55 PM IST

ಶಾಸಕರ ಅನರ್ಹತೆಯ ಬಗ್ಗೆ ನಿರ್ಧರಿಸುವ ಮುನ್ನ ಯಾವ ಬೆಳವಣಿಗೆಗಳು ಅಸಂವಿಧಾನಿಕ ಎಂಬುದನ್ನು ಮೊದಲಿಗೆ ನೋಡಬೇಕಿದೆ ಎಂದು ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಹೇಳಿದ್ದಾರೆ.

Maha speaker on disqualification pleas against MLAs
Maha speaker on disqualification pleas against MLAs

ಮುಂಬೈ :ಶಿವಸೇನೆಯ ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್, ಯಾವ ಬೆಳವಣಿಗೆಯನ್ನು ಅಸಾಂವಿಧಾನಿಕ ಎಂದು ಪರಿಗಣಿಸಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಾರ್ವೇಕರ್, ಸ್ಪೀಕರ್ ಅವರ ನಿಲುವನ್ನು ಸುಪ್ರೀಂ ಕೋರ್ಟ್ ಮುಂದೆ ಮಂಡಿಸಲಾಗುವುದು. ಶೀಘ್ರದಲ್ಲೇ ನಾವು ಯಾವ ಬೆಳವಣಿಗೆಯನ್ನು ಕಾನೂನುಬಾಹಿರ ಅಥವಾ ಅಸಂವಿಧಾನಿಕ ಎಂದು ಕರೆಯಬೇಕು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತೇವೆ. ಆಗ ಮಾತ್ರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅವರ ನಿಷ್ಠಾವಂತ ಶಿವಸೇನೆ ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳನ್ನು ನಿರ್ಧರಿಸುವಲ್ಲಿನ ವಿಳಂಬಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜ್ಯ ವಿಧಾನಸಭಾ ಸ್ಪೀಕರ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನಂತರ ರಾಹುಲ್ ನಾರ್ವೇಕರ್ ಪ್ರತಿಕ್ರಿಯಿಸಿದ್ದು ಗಮನಾರ್ಹ.

ಸುಪ್ರೀಂ ಕೋರ್ಟ್​ನಲ್ಲಿ ನಡೆದಿರುವ ವಿಚಾರಣೆ ಮುಗಿದ ನಂತರ ಈ ವಿಷಯದಲ್ಲಿ ಹೇಗೆ ಮುಂದುವರಿಯಬೇಕು ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಅವರು ಹೇಳಿದರು. ಅನರ್ಹತೆ ಅರ್ಜಿಗಳಿಗೆ ಸಂಬಂಧಿಸಿದಂತೆ ಶಿವಸೇನೆ (ಯುಬಿಟಿ) ಮುಖಂಡ ಸಂಜಯ್ ರಾವತ್ ಅವರ ಆರೋಪಗಳ ಬಗ್ಗೆ ಕೇಳಿದಾಗ, ಅವರ ಟೀಕೆಗಳಿಗೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಅವರಿಗೆ ಶಾಸಕಾಂಗ ಸಭೆಯ ನಡಾವಳಿಗಳು ಅರ್ಥವಾಗುವುದಿಲ್ಲ. ಸದನದ ವಿರುದ್ಧ ಅವರ ಹೇಳಿಕೆಗಳು ಸ್ಪೀಕರ್ ನಿರ್ಧಾರದ ಮೇಲೆ ಪ್ರಭಾವ ಬೀರುವ ಪ್ರಯತ್ನವಾಗಿವೆ ಎಂದು ನಾರ್ವೇಕರ್ ತಿಳಿಸಿದರು.

ಕಳೆದ ವರ್ಷ ಜೂನ್​ನಲ್ಲಿ ಏಕನಾಥ್​ ಶಿಂಧೆ ನೇತೃತ್ವದ ಶಿವಸೇನಾ ಗುಂಪಿನ ಬಂಡಾಯದಿಂದ ಶಿವಸೇನೆ ವಿಭಜನೆಯಾಗಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ಪತನವಾಗಿತ್ತು. ಆಗ ಮುಖ್ಯಮಂತ್ರಿ ಬಣಕ್ಕೆ ಸೇರಿದ ಹಲವಾರು ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಠಾಕ್ರೆ ಬಣವು ಸ್ಪೀಕರ್ ಅವರಿಗೆ ಅರ್ಜಿಗಳನ್ನು ಸಲ್ಲಿಸಿತ್ತು. ಅರ್ಜಿಗಳನ್ನು ನಿರ್ಧರಿಸುವ ಸಮಯದ ಬಗ್ಗೆ ತಿಳಿಸುವಂತೆ ಸ್ಪೀಕರ್ ನಾರ್ವೇಕರ್ ಅವರನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಸೂಚಿಸಿದೆ.

ಜೂನ್ 2022 ರಲ್ಲಿ ಹೊಸ ಸರ್ಕಾರ ರಚಿಸಲು ಭಾರತೀಯ ಜನತಾ ಪಕ್ಷ (ಬಿಜೆಪಿ) ದೊಂದಿಗೆ ಮೈತ್ರಿ ಮಾಡಿಕೊಂಡ ಶಿಂಧೆ ಮತ್ತು ಶಿವಸೇನೆ ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳ ತೀರ್ಪು ನೀಡುವ ದಿನಾಂಕವನ್ನು ತಿಳಿಸುವಂತೆ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 18 ರಂದು ಸ್ಪೀಕರ್​ಗೆ ನಿರ್ದೇಶನ ನೀಡಿತ್ತು. ಶಿಂಧೆ ಬಣಕ್ಕೆ ಸೇರಿದ ಶಾಸಕರು ಸೇರಿದಂತೆ 56 ಶಾಸಕರನ್ನು ಅನರ್ಹಗೊಳಿಸುವ ಅರ್ಜಿಗಳನ್ನು ನಿರ್ಧರಿಸಲು ಸ್ಪೀಕರ್ ನಿಗದಿಪಡಿಸಿದ ಸಮಯದ ವೇಳಾಪಟ್ಟಿಯನ್ನು ನ್ಯಾಯಪೀಠಕ್ಕೆ ತಿಳಿಸುವಂತೆ ನ್ಯಾಯಾಲಯ ಸಾಲಿಸಿಟರ್ ಜನರಲ್ ಅವರಿಗೆ ಸೂಚಿಸಿತ್ತು.

ಇದನ್ನೂ ಓದಿ : ಪಾಸ್​ವರ್ಡ್​ ರಹಿತ ಲಾಗಿನ್​; ಇದು ವಾಟ್ಸ್​ಆ್ಯಪ್​ನ ಹೊಸ ಪಾಸ್​ ಕೀ ವೈಶಿಷ್ಟ್ಯ!

ABOUT THE AUTHOR

...view details