ಕರ್ನಾಟಕ

karnataka

ರಣರಂಗವಾಯ್ತು ದಿಲ್ಲಿ: ಅರೆಸೇನಾ ಪಡೆ ರವಾನಿಸಿದ ಕೇಂದ್ರ, ಗಡಿಗಳತ್ತ ತೆರಳುತ್ತಿರುವ ರೈತರು

By

Published : Jan 26, 2021, 7:12 AM IST

Updated : Jan 26, 2021, 8:12 PM IST

Farmers protest in Delhi
ದೆಹಲಿಯಲ್ಲಿ ರೈತರ ಪ್ರತಿಭಟನೆ

20:10 January 26

ಸಹಜ ಸ್ಥಿತಿಗೆ ರಾಷ್ಟ್ರ ರಾಜಧಾನಿ

  • ವಿಕಾಸ್ ಮಾರ್ಗ, ದೆಹಲಿ ಗೇಟ್, ಐಎಸ್​​ಬಿಟಿ ಆನಂದ್ ವಿಹಾರ್, ಉತ್ತರ ಪ್ರದೇಶದ ಕಡೆಗೆ ಸಾಗುವ ರಸ್ತೆಗಳು ಸಹಜ ಸ್ಥಿತಿಗೆ ಮರಳಿವೆ. ಪ್ರತಿಭಟನಾನಿರತರು ಮೂಲ ಪ್ರತಿಭಟನಾ ಸ್ಥಳಕ್ಕೆ ತೆರಳಿರುವ ಕಾರಣ, ಸಂಚಾರ ವ್ಯವಸ್ಥೆ ಸೇರಿ ಎಲ್ಲವೂ ಹತೋಟಿಗೆ ಬಂದಿದೆ.  
  • ಕೆಂಪುಕೋಟೆಯಲ್ಲಿ ರೈತರು ಬಾವುಟ ಹಾರಿಸಿದ ಬಳಿಕ ರೈತರು ಗಡಿಗಳತ್ತ ಮರಳಿದರು. ಪ್ರತಿಭಟನಾಕಾರರು ಕೆಂಪುಕೋಟೆಯತ್ತ ನುಗ್ಗುತ್ತಿದ್ದಂತೆ ದೆಹಲಿಯಲ್ಲಿ ಮೆಟ್ರೊ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಅಲ್ಲದೆ, ಸಂಚಾರ ದಟ್ಟಣೆಯೂ ಅಧಿಕವಾಗಿತ್ತು.

19:55 January 26

ಇಂಟರ್ನೆಟ್​ ಸೇವೆ ಸ್ಥಗಿತ

  • ನಾಳೆ ಸಂಜೆ 5ಗಂಟೆವರೆಗೆ ಸೋನಿಪತ್, ಪಾಲ್ವಾಲ್ ಮತ್ತು ಝಜ್ಜರ್ ಜಿಲ್ಲೆಗಳಲ್ಲಿ ಇಂಟರ್ನೆಟ್ ಮತ್ತು ಎಸ್‌ಎಂಎಸ್ ಸೇವೆಗಳನ್ನು ಸ್ಥಗಿತ: ಹರಿಯಾಣ ಸರ್ಕಾರ

19:46 January 26

ಹೈಅಲರ್ಟ್ ಘೋಷಿಸಿದ ಹರಿಯಾಣ ಡಿಜಿಪಿ

  • ದೆಹಲಿಯಲ್ಲಿ ನಡೆದ 'ಫಾರ್ಮರ್ಸ್ ಟ್ರ್ಯಾಕ್ಟರ್ ಮಾರ್ಚ್' ಸಂದರ್ಭದಲ್ಲಿ ನಡೆದ ಹಿಂಸಾತ್ಮಕ ಘಟನೆಗಳ ಹಿನ್ನೆಲೆಯಲ್ಲಿ ಹರಿಯಾಣ ಪೊಲೀಸ್ ಮಹಾನಿರ್ದೇಶಕ ಮನೋಜ್ ಯಾದವ್​ ಅವರು 'ಹೈ ಅಲರ್ಟ್' ಘೋಷಿಸಿದ್ದಾರೆ. ಎಲ್ಲಾ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಅತ್ಯಂತ ಜಾಗರೂಕರಾಗಿರಬೇಕು ಎಂದು ಸೂಚನೆ ಕೊಟ್ಟಿದ್ದಾರೆ.

19:31 January 26

ರೈತ ಬಲಿ

ಪೊಲೀಸ್​ ಬ್ಯಾರಿಕೇಡ್​​ಗಳನ್ನು ಮುರಿದು ನುಗ್ಗಲು ಪ್ರವೇಶಿಸಿದಾಗ ಟ್ರ್ಯಾಕ್ಟರ್​ ಪಲ್ಟಿಯಾಗಿರುವ ವಿಡಿಯೋವನ್ನು ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದು, ಉರುಳಿಬಿದ್ದ ಪ್ರತಿಭಟನಾಕಾರ ರೈತ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ.

19:14 January 26

ಪೊಲೀಸರ ಮೇಲೆ ಹಲ್ಲೆ: ಕಾನೂನು ಕ್ರಮ

ನವದೆಹಲಿ: ರೈತರ ಟ್ರ್ಯಾಕ್ಟರ್ ಮೆರವಣಿಗೆ ಮತ್ತು ಬ್ಯಾರಿಕೇಡ್​ಗಳನ್ನು ಮುರಿದು ನುಗ್ಗಿದ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿಯ ಜಂಟಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹೇಳಿದ್ದಾರೆ.

19:02 January 26

ಮತ್ತೆ ಗಡಿಗಳತ್ತ ಪ್ರತಿಭಟನಾಕಾರರು

  • ನವದೆಹಲಿ: ಕೆಂಪುಕೋಟೆಯಲ್ಲಿ ಹೋರಾಟದ ಧ್ವಜ ಹಾರಿಸಿದ ಬಳಿಕ ರೈತರು ಮತ್ತೆ ಗಡಿಗಳತ್ತ ತೆರಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ದೆಹಲಿಯಿಂದ ಮರಳಿ ಬರುವಂತೆ ಮನವಿ ಮಾಡಿದ್ದಾರೆ.
  • ಬ್ಯಾರಿಕೇಡ್‌ಗಳನ್ನು ಮುರಿದು ಪ್ರತಿಭಟನಾಕಾರರು ಎಲ್ಲೆಂದರಲ್ಲಿ ಚದುರಿ ಹೋಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅರೆಸೇನಾ ಪಡೆಯನ್ನು ರವಾನಿಸಲಾಗಿದೆ. ಪ್ರತಿಭಟನಾಕಾರರು ಹಿಂತಿರುಗಿ ಬರುತ್ತಿರುವ ಸಂದರ್ಭದಲ್ಲಿ ಹಲವೆಡೆ ಘರ್ಷಣೆಗಳು ನಡೆದಿವೆ ಎಂದು ತಿಳಿದು ಬಂದಿದೆ.
  • ಅಲ್ಲಿನ ಪರಿಸ್ಥಿತಿಯನ್ನು ಹತೋಟಿಗೆ ತರಲು ಕ್ರಮ ಕೈಗೊಳ್ಳುವಂತೆ ಉನ್ನತ ಅಧಿಕಾರಿಗಳಿಗೆ ಮತ್ತು ಪೊಲೀಸ್​ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಅರೆಸೇನಾ ಪಡೆಯನ್ನು ರವಾನಿಸಲಾಗಿದೆ. ರೈತರ ದಂಗೆಗೆ ದೆಹಲಿ ರಣಾಂಗಣವಾಗಿದ್ದರ ಕುರಿತು ಪೊಲೀಸ್​ ಅಧಿಕಾರಿಗಳಿಂದ ಅಮಿತ್ ಶಾ ಮಾಹಿತಿ ಪಡೆದುಕೊಂಡಿದ್ದರು. ದೆಹಲಿ ಮೆಟ್ರೋ ರೈಲು ಸಂಚಾರವಂತೂ ಸಂಪೂರ್ಣ ಸ್ಥಬ್ಧವಾಗಿದೆ.

18:06 January 26

'ಶಾಂತಿಯುತ ಪ್ರತಿಭಟನೆಗೆ ಒತ್ತು ನೀಡಿ'

  • ನವದೆಹಲಿ: ಕೆಲ ಸ್ಥಳಗಳಲ್ಲಿ ಪ್ರತಿಭಟನಾಕಾರರು ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿದ ಕಾರಣ ಹಲವು ಪೊಲೀಸರು ಗಾಯಗೊಂಡಿದ್ದಾರೆ. ಇಷ್ಟಾದರೂ ಪೊಲೀಸರು ಸಂಯಮ ಕಾಯ್ದುಕೊಂಡಿದ್ದಾರೆ. ಗೊತ್ತುಪಡಿಸಿದ ಮಾರ್ಗಗಳ ಮೂಲಕ ಮರಳಲು ಮತ್ತು ಶಾಂತಿಯುತ ಪ್ರತಿಭಟನೆ ನಡೆಸಬೇಕಿದೆ ಎಂದು ದೆಹಲಿ ಪೊಲೀಸ್ ಪ್ರೊ ಈಶ್ ಸಿಂಘಾಲ್ ಅವರು ಪ್ರತಿಭಟನಾಕಾರರಿಗೆ ಮನವಿ ಮಾಡಿದರು.

17:56 January 26

ಬ್ಯಾರಿಕೇಡ್​ ಮುರಿದ ರೈತರು

  • ಪೀರಗರಿ ಚೌಕ್‌ನಲ್ಲಿ ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದು ದೆಹಲಿಯ ಪಂಜಾಬ್ ಬಾಗ್ ಕಡೆಗೆ ಸಾಗಿದ ರೈತರು

17:55 January 26

ಸರ್ಕಾರ ಸರಿಯಾದ ನಿರ್ಧಾರಕ್ಕೆ ಬರಬೇಕಿದೆ: ಶರದ್​ ಪವಾರ್​

  • ನವದೆಹಲಿ: ರೈತರ ಮೇಲೆ ಇಂದು ನಡೆದ ಹಿಂಸಾಚಾರವನ್ನು ಒಪ್ಪುವಂತಹದಲ್ಲ. ಶಾಂತವಾಗಿ ನಡೆಯುತ್ತಿದ್ದ ಪ್ರತಿಭಟನೆ ಉದ್ರಿಕ್ತತೆಗೆ ಎಡಿಮಾಡಿಕೊಟ್ಟಿದೆ. ಕೇಂದ್ರ ಸರ್ಕಾರ ತನ್ನ ಜವಾಬ್ದಾರಿ ಅರಿತುಕೊಳ್ಳಬೇಕಿದೆ. ಸರ್ಕಾರ ಪ್ರಬುದ್ಧವಾಗಿ ಆಲೋಚಿಸಿ ಸರಿಯಾದ ನಿರ್ಧಾರಕ್ಕೆ ಬರಬೇಕಿದೆ ಎಂದು ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಒತ್ತಾಯಿಸಿದರು.

17:31 January 26

ರೈತರೇ ನಿಮ್ಮ ಮೂಲ ಸ್ಥಾನಕ್ಕೆ ಮರಳಿ: ಪಂಜಾಬ್​ ಸಿಎಂ

ನವದೆಹಲಿ: ದೆಹಲಿಯಲ್ಲಿ ಕಂಡು ಬಂದ ಆಘಾತಕಾರಿ ದೃಶ್ಯಗಳು ನನಗೆ ತೀವ್ರ ಘಾಸಿ ಉಂಟು ಮಾಡಿವೆ. ಅವು ಸ್ವೀಕಾರಾರ್ಹವಲ್ಲ ಎಂದು ಪಂಜಾಬ್​ ಮುಖ್ಯಮಂತ್ರಿ ಅಮರಿಂದರ್ ಸಿಂಗ್​ ವಿಷಾದ ವ್ಯಕ್ತಪಡಿಸಿದರು.

ಶಾಂತಿಯುತವಾಗಿ ಪ್ರತಿಭಟಿಸುವ ರೈತರನ್ನು ಕೇಂದ್ರ ಸರ್ಕಾರ ಕೆರಳಿಸುವಂತೆ ಮಾಡಿದೆ. ನಿಜವಾದ ಹೋರಾಟಗಾರರ ಘನತೆಗೆ ಧಕ್ಕೆ ಉಂಟು ಮಾಡಿದೆ. ಕಿಸಾನ್ ನಾಯಕರನ್ನು ಬೇರ್ಪಡಿಸುವ ಯತ್ನಕ್ಕೆ ಮುಂದಾಗಿದೆ. ಎಲ್ಲಾ ರೈತರು ದೆಹಲಿ ಬಿಟ್ಟು ಮೂಲ ಸ್ಥಾನಕ್ಕೆ ಮರಳಿ ಎಂದು ಪಂಜಾಬ್ ಸಿಎಂ ಮನವಿ ಮಾಡಿದ್ದಾರೆ.

17:20 January 26

ಕೇಂದ್ರದ ವಿರುದ್ಧ ಕಿಡಿಕಾರಿದ ಎಎಪಿ

  • ದೆಹಲಿಯಲ್ಲಿ ರೈತರ ಮೇಲೆ ನಡೆದ ಹಿಂಸಾಚಾರವನ್ನು ಖಂಡಿಸುತ್ತೇವೆ
  • ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ ಆಮ್ ಆದ್ಮಿ ಪಕ್ಷ
  • ಪರಿಸ್ಥಿತಿ ಈ ಮಟ್ಟಿಗೆ ಹದಗೆಡಲು ಕೇಂದ್ರದ ನಿರ್ಲಕ್ಷ್ಯವೇ ಕಾರಣ
  • ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯನ್ನು ದುರ್ಬಲಗೊಳಿಸಿದ ಕೇಂದ್ರ

16:07 January 26

ಪೊಲೀಸ್ ಅಧಿಕಾರಿಗಳಿಂದ ವಿವರ ಪಡೆದ ಅಮಿತ್ ಶಾ

  • ನವದೆಹಲಿ: ರೈತ ಪ್ರತಿಭಟನೆಯು ಹಿಂಸಾತ್ಮಕತೆಗೆ ತಿರುಗಿದ ಕಾರಣ, ಉನ್ನತ ಭದ್ರತೆ ಮತ್ತು ಪೊಲೀಸ್​ ಅಧಿಕಾರಿಗಳನ್ನು ಭೇಟಿಯಾಗಿ ಸಭೆ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಪರಿಸ್ಥಿತಿ ತೀವ್ರತೆ ಕುರಿತು ಮಾಹಿತಿ ಪಡೆದುಕೊಂಡರು.
  • ಉನ್ನತ ಮಟ್ಟದ ಸಭೆಯಲ್ಲಿ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಮತ್ತು ದೆಹಲಿ ಪೊಲೀಸ್ ಆಯುಕ್ತ ಎಸ್.ಎನ್.ಶ್ರೀವಾಸ್ತವ ಉಪಸ್ಥಿತರಿದ್ದರು. ಗಡಿಗಳಲ್ಲಿ ಸಾವಿರಾರು ರೈತರು ಬ್ಯಾರಿಕೇಡ್‌ಗಳನ್ನು ಉಲ್ಲಂಘಿಸಿ ತದ್ವಿರುದ್ಧವಾಗಿ ನಗರದ ಹೃದಯ ಭಾಗವನ್ನು ತಲುಪಿದ ನಂತರ ದೆಹಲಿಯ ವಿವಿಧ ಭಾಗಗಳಲ್ಲಿ ಸಂಭವಿಸಿದ ಘರ್ಷಣೆಗಳ ಕುರಿತು ಅಮಿತ್ ಶಾಗೆ ಅಧಿಕಾರಿಗಳು ವಿವರಿಸಿದರು.
  • ಈ ಸಭೆಯಲ್ಲಿ ಭದ್ರತೆಗೆ ಸಂಬಂಧಿಸಿದ ಕುರಿತು ದೊಡ್ಡ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

15:43 January 26

ದೆಹಲಿಯಲ್ಲಿ ಹೆಚ್ಚಾದ ಸಂಚಾರ ದಟ್ಟಣೆ, ಮೆಟ್ರೋ ಸಂಚಾರ ಸ್ಥಗಿತ

ನವದೆಹಲಿ: ವಾಜೀರಾಬಾದ್ ರಸ್ತೆ, ಐಎಸ್‌ಬಿಟಿ ರಸ್ತೆ, ಜಿಟಿ ರಸ್ತೆ, ಪುಷ್ಟ ರಸ್ತೆ, ವಿಕಾಸ್ ಮಾರ್ಗ, ಎನ್‌ಎಚ್ -24, ರಸ್ತೆ ನಂ.57, ನೋಯ್ಡಾ ಲಿಂಕ್ ರಸ್ತೆಯಲ್ಲಿ ಉಂಟಾದ ಸಂಚಾರ ದಟ್ಟಣೆ ಉಂಟಾಗಿದ್ದು, ದಟ್ಟಣೆ ನಿವಾರಿಸಲು ಸಂಚಾರಿ ಪೊಲೀಸರು ಹರಸಾಹಸಪಡುತ್ತಿದ್ದಾರೆ.

ದಿಲ್ಶಾದ್ ಗಾರ್ಡನ್, ಜಿಲ್ಮಿಲ್ ಮತ್ತು ಮಾನಸರೋವರ್ ಪಾರ್ಕ್‌ನ ಮೆಟ್ರೊ ನಿಲ್ದಾಣದ ಗೇಟ್‌ಗಳನ್ನು ಮುಚ್ಚಲಾಗಿದೆ ಎಂದು ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ಮಾಹಿತಿ ನೀಡಿದೆ. ಹಾಗೆಯೇ ಬೂದು ಬಣ್ಣದ ಮಾರ್ಗದಲ್ಲಿರುವ ಎಲ್ಲಾ ನಿಲ್ದಾಣಗಳಲ್ಲಿ ಮೆಟ್ರೊ ಸಂಚಾರ ನಿಲ್ಲಿಸಲಾಗಿದೆ ಎಂದು ಹೇಳಿದೆ.

15:24 January 26

ಮತ್ತಷ್ಟು ತೀವ್ರಗೊಂಡ ಹೋರಾಟ

  • ಹಿಂಸಾಚಾರಕ್ಕೆ ತಿರುಗಿದ ಅನ್ನದಾತರ ಹೋರಾಟ
  • ದೆಹಲಿಯಲ್ಲಿ ಕೈ ಮೀರಿದ ಪರಿಸ್ಥಿತಿ
  • ರೈತ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಭಾರೀ ಪ್ರತಿಭಟನೆ
  • ರೈತರಿಂದ ಕಲ್ಲು ತೂರಾಟ
  • ಕೆಂಪುಕೋಟೆ ಆವರಣದಲ್ಲಿ ಸೇರಿದ ಪ್ರತಿಭಟನಾಕಾರರನ್ನು ಸ್ಥಳಾಂತರಿಸಲು ಪೊಲೀಸರ ಹರಸಾಹಸ
  • ದೆಹಲಿಯಲ್ಲಿ ತಾತ್ಕಾಲಿಕವಾಗಿ ಇಂಟರ್ನೆಟ್​ ಸೇವೆ ಸ್ಥಗಿತಗೊಳಿಸಿದ ಕೇಂದ್ರ ಸರ್ಕಾರ

14:50 January 26

ರೈತರ ಮೇಲೆ ಆಶ್ರುವಾಯು

ದೆಹಲಿ: ನಂಗ್ಲೋಯಿ ಪ್ರದೇಶದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸರು ಅಶ್ರುವಾಯು ಬಳಸಿದ್ದಾರೆ. 

14:01 January 26

ಕೆಂಪುಕೋಟೆ ಮೇಲೆ ಬಾವುಟ ಹಾರಿಸಿದ ರೈತರು

ಕೆಂಪುಕೋಟೆ ಮೇಲೆ ರೈತರ ಬಾವುಟ

ದೆಹಲಿ ಕೆಂಪುಕೋಟೆಗೆ ಮುತ್ತಿಗೆ ಹಾಕಿದ ನೂರಾರು ರೈತರು, ತಮ್ಮ ಬಾವುಟ ಹಾರಿಸಿದರು.

13:58 January 26

ರಾಷ್ಟ್ರ ರಾಜಧಾನಿ ತಲುಪಿದ ಟ್ರ್ಯಾಕ್ಟರ್​​​ ಯಾತ್ರೆ

ಭಾರಿ ಪ್ರಮಾಣದಲ್ಲಿ ಸೇರಿರುವ ರೈತರು, ಟ್ರ್ಯಾಕ್ಟರ್​ಗಳ ಮೂಲಕ ದೆಹಲಿಯ ಹೃದಯಭಾಗವಾದ ಕೆಂಪುಕೋಟೆಯನ್ನ ತಲುಪಿದ್ದು, ಕೇಂದ್ರದ ವಿರುದ್ಧ ರಣಕಹಳೆ ಮೊಳಗಿಸಿದೆ.

12:53 January 26

ಪೊಲೀಸರ ಮೇಲೆ ಪ್ರತಿಭಟನಾನಿರತರಿಂದ ಹಲ್ಲೆ

ಮಧ್ಯ ದೆಹಲಿಯ ಐಟಿಒದಲ್ಲಿ ಪ್ರತಿಭಟನಾಕಾರರು ಬ್ಯಾರಿಕೇಡ್ ಮುರಿದು, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಪೊಲೀಸ್ ವಾಹನವನ್ನು ಧ್ವಂಸ ಮಾಡಿದ್ದಾರೆ.

12:37 January 26

ಬಸ್ ಧ್ವಂಸಗೊಳಿಸಿದ ಪ್ರತಿಭಟನಾನಿರತ ರೈತರು

ದೆಹಲಿ: ಪ್ರತಿಭಟನಾನಿರತ ರೈತರು ರಾಷ್ಟ್ರ ರಾಜಧಾನಿಯ ಐಟಿಒ ಪ್ರದೇಶದಲ್ಲಿ ಡಿಟಿಸಿ ಬಸ್ ಧ್ವಂಸ ಮಾಡಿದ್ದಾರೆ.

12:22 January 26

ಮಧ್ಯ ದೆಹಲಿಯತ್ತ ಸಾಗುತ್ತಿರುವ ಪ್ರತಿಭಟನಾ ನಿರತ ರೈತರು

ದೆಹಲಿ: ಪ್ರತಿಭಟನಾಕಾರರು ಗಾಜಿಪುರ ಗಡಿಯಿಂದ ಪ್ರಗತಿ ಮೈದಾನದ ಪ್ರದೇಶಕ್ಕೆ ಆಗಮಿಸಿದ್ದು, ಮಧ್ಯ ದೆಹಲಿಯತ್ತ ಸಾಗುತ್ತಿದ್ದಾರೆ.

12:04 January 26

ಸಿಕ್ರಿ ಬಾರ್ಡರ್​ನಲ್ಲಿ ರೈತರ ಮೇಲೆ ಲಾಠಿ ಚಾರ್ಜ್

ಸಿಕ್ರಿ ಬಾರ್ಡರ್​ನಲ್ಲಿ ರೈತರ ಮೇಲೆ ಲಾಠಿ ಚಾರ್ಜ್

ಸಿಕ್ರಿ ಬಾರ್ಡರ್​ನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡ ಪರಿಣಾಮ ಪೊಲೀಸರು ರೈತರ ಮೇಲೆ ಲಾಠಿ ಚಾರ್ಜ್​ ಮಾಡಿದ್ದಾರೆ.

12:04 January 26

ಕರ್ನಾಲ್ ಬೈಪಾಸ್‌ನಲ್ಲಿ ಬ್ಯಾರಿಕೇಡ್​ ಮುರಿದ ಪ್ರತಿಭಟನಾನಿರತರು

ಕರ್ನಾಲ್ ಬೈಪಾಸ್‌ನಲ್ಲಿ ಬ್ಯಾರಿಕೇಡ್​ ಮುರಿದ ಪ್ರತಿಭಟನಾನಿರತರು

ರಾಷ್ಟ್ರ ರಾಜಧಾನಿಯಲ್ಲಿ ರೈತರ ಟ್ರಾಕ್ಟರ್  ರ‍್ಯಾಲಿ ಹಿನ್ನೆಲೆ ಕರ್ನಾಲ್ ಬೈಪಾಸ್‌ನಲ್ಲಿ ಪ್ರತಿಭಟನಾಕಾರರು ದೆಹಲಿಗೆ ಪ್ರವೇಶಿಸಲು ಪೊಲೀಸ್ ಬ್ಯಾರಿಕೇಡ್​ಗಳನ್ನು ಮುರಿದರು. 

11:59 January 26

ಉದ್ವಿಗ್ನಗೊಳ್ಳುತ್ತಿರುವ ರೈತರ ಟ್ರ್ಯಾಕ್ಟರ್ ಪರೇಡ್​, ದೆಹಲಿಯಲ್ಲಿ ಲಾಠಿ ಚಾರ್ಜ್​

ದೆಹಲಿಯ ಗಾಜಿಪುರ ಗಡಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಅಶ್ರುವಾಯು ಪ್ರಯೋಗ ಮಾಡಲಾಗಿದೆ. ದೆಹಲಿಯ ಸಿಂಘುಗಡಿಯಲ್ಲಿ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್​ ನಡೆಸಿದ್ದಾರೆ. ಅಕ್ಷರಧಾಮ ಬಳಿ ಪ್ರತಿಭಟನಾನಿರತ ರೈತರ ಮೇಲೆ ಜಲಫಿರಂಗಿ ಸಿಡಿಸಲಾಗಿದೆ.

11:26 January 26

ಟಿಕ್ರಿ ಗಡಿಯಲ್ಲಿ ಟ್ರಾಕ್ಟರ್ ಪೆರೇಡ್​

ಟಿಕ್ರಿ ಗಡಿಯಲ್ಲಿ ಟ್ರಾಕ್ಟರ್ ಪೆರೇಡ್​

ದೆಹಲಿ: ಟಿಕ್ರಿ ಗಡಿಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಟ್ರಾಕ್ಟರ್ ಪೆರೇಡ್​ನಲ್ಲಿ ಭಾಗಿಯಾಗಿದ್ದಾರೆ. 

11:19 January 26

ಅಯೋಧ್ಯೆಯ ಶ್ರೀರಾಮ ಮಂದಿರದ ಸ್ತಬ್ಧಚಿತ್ರ

ಅಯೋಧ್ಯೆಯ ಶ್ರೀರಾಮ ಮಂದಿರದ ಸ್ತಬ್ಧಚಿತ್ರ

ಕರ್ನಾಟಕದ ವಿಜಯನಗರ ಸಾಮ್ರಾಜ್ಯದ ಭವ್ಯ ಪರಂಪರೆಯನ್ನು ಸಾರುವ ಸ್ತಬ್ಧಚಿತ್ರ ಹಾಗೂ ಅಯೋಧ್ಯೆಯ ಶ್ರೀರಾಮ ಮಂದಿರದ ಸ್ತಬ್ಧಚಿತ್ರ ರಾಜಪಥ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಸಾಗಿತು. 

11:04 January 26

ಯುಕೆ ಪಿಎಂ ಬೋರಿಸ್ ಜಾನ್ಸನ್ ಶುಭ ಹಾರೈಕೆ

ಯುಕೆ ಪಿಎಂ ಬೋರಿಸ್ ಜಾನ್ಸನ್ ಶುಭ ಹಾರೈಕೆ

ಇಂದು ಭಾರತವು ಗಣ ರಾಜ್ಯೋತ್ಸವ ಆಚರಿಸುತ್ತಿದೆ. ವಿಶ್ವದ ಅತಿದೊಡ್ಡ ಸಾರ್ವಭೌಮ ಪ್ರಜಾಪ್ರಭುತ್ವ ಸ್ಥಾಪಿಸಿದ ಅಸಾಧಾರಣ ಸಂವಿಧಾನದ ಜನನದ ದಿನದಂದು, ನನ್ನ ಹೃದಯಕ್ಕೆ ಬಹಳ ಹತ್ತಿರವಿರುವ ದೇಶಕ್ಕೆ ನನ್ನ ಪ್ರಾಮಾಣಿಕ ಶುಭಾಶಯಗಳನ್ನು ಅರ್ಪಿಸಲು ನಾನು ಬಯಸುತ್ತೇನೆ ಎಂದು ಯುಕೆ ಪಿಎಂ ಬೋರಿಸ್ ಜಾನ್ಸನ್ ಶುಭ ಹಾರೈಸಿದ್ದಾರೆ.

10:55 January 26

ಪರೇಡ್​ನಲ್ಲಿ ಸಾಗಿದ ಬ್ರಹ್ಮೋಸ್ ಕ್ಷಿಪಣಿ

ಪರೇಡ್​ನಲ್ಲಿ ಸಾಗಿದ ಬ್ರಹ್ಮೋಸ್ ಕ್ಷಿಪಣಿ

ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯ ಮೊಬೈಲ್ ಸ್ವಾಯತ್ತ ಲಾಂಚರ್ ಅನ್ನು ಕ್ಯಾಪ್ಟನ್ ಕ್ವಾಮ್ರುಲ್ ಜಮಾನ್ ನೇತೃತ್ವ ವಹಿಸಿದ್ದರು. ಈ ಕ್ಷಿಪಣಿಯನ್ನು ಭಾರತ ಮತ್ತು ರಷ್ಯಾ ನಡುವಿನ ಜಂಟಿ ಉದ್ಯಮವಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಗರಿಷ್ಠ 400 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ.

10:51 January 26

ರೈತರು ಮತ್ತು ಪೊಲೀಸರು ನಡುವೆ ಘರ್ಷಣೆ, ಅಶ್ರುವಾಯು ಸಿಂಪಡನೆ

ನವದೆಹಲಿ: ಕೃಷಿ ಕಾನೂನು ವಿರೋಧಿಸಿ ರೈತರು ನಡೆಸುತ್ತಿರುವ ಸಂದರ್ಭದಲ್ಲಿ ರೈತರು ಮತ್ತು ಪೊಲೀಸರು ನಡುವೆ ಘರ್ಷಣೆ ಉಂಟಾಗಿದ್ದು, ಪೊಲೀಸರು ಅಶ್ರುವಾಯು ಸಿಂಪಡಿಸಿದ್ದಾರೆ. ಅಕ್ಷಯಧಾಮದಲ್ಲಿ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್​ ಮಾಡಿದ್ದಾರೆ.

10:42 January 26

ವಿವಿಧ ಸ್ತಬ್ಧ ಚಿತ್ರಗಳ ಮೆರವಣಿಗೆ ಆರಂಭ

ರಾಜಪಥದಲ್ಲಿ ವಿವಿಧ ಸ್ತಬ್ಧ ಚಿತ್ರಗಳ ಮೆರವಣಿಗೆ ಆರಂಭವಾಗಿದೆ.

10:39 January 26

ಭಾರತೀಯ ಸೇನೆಯ ಮುಖ್ಯ ಯುದ್ಧ ಟ್ಯಾಂಕ್, ಟಿ- 90 ಭೀಷ್ಮಾ

54 ಆರ್ಮಡ್ ರೆಜಿಮೆಂಟ್‌ನ ಕ್ಯಾಪ್ಟನ್ ಕರಣ್ವೀರ್ ಸಿಂಗ್ ಭಂಗು ನೇತೃತ್ವದಲ್ಲಿ ಭಾರತೀಯ ಸೇನೆಯ ಮುಖ್ಯ ಯುದ್ಧ ಟ್ಯಾಂಕ್, ಟಿ- 90 ಭೀಷ್ಮಾ ರಾಜಪಥದಲ್ಲಿ ಪರೇಡ್​ನಲ್ಲಿ ಸಾಗಿದವು.  

10:34 January 26

ಚಿಲ್ಲಾ ಗಡಿಯಲ್ಲಿ ರ‍್ಯಾಲಿ ವೇಳೆ ಸ್ಟಂಟ್ ಮಾಡಲು ಹೋಗಿ ಟ್ರ್ಯಾಕ್ಟರ್ ಪಲ್ಟಿ

ನವದೆಹಲಿ/ಉತ್ತರ ಪ್ರದೇಶ: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧದ ಹೋರಾಟದ ನಿಮಿತ್ತ ದೆಹಲಿ - ನೋಯ್ಡಾ ಗಡಿಭಾಗವಾದ ಚಿಲ್ಲಾ ಗಡಿಯಲ್ಲಿ ರೈತರು ಟ್ರ್ಯಾಕ್ಟರ್ ರ‍್ಯಾಲಿ ನಡೆಸುತ್ತಿದ್ದಾರೆ. ಆದರೆ ಈ ವೇಳೆ ಟ್ರ್ಯಾಕ್ಟರ್ ಒಂದು ಸ್ಟಂಟ್​ ಮಾಡಲು ಹೋಗಿ ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಚಾಲಕ ಹಾಗೂ ಓರ್ವ ರೈತ ಗಾಯಗೊಂಡಿದ್ದಾರೆ. 

10:26 January 26

ಪಥಸಂಚಲನದಲ್ಲಿ ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯ ಮಿಂಚಿಂಗ್​

  • ಕ್ಯಾಪ್ಟನ್ ಕ್ವಾಮ್ರುಲ್ ಜಮಾನ್ ನೇತೃತ್ವದಲ್ಲಿ ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯ ಸಂಚಾರಿ ಸ್ವಾಯತ್ತ ಲಾಂಚರ್ ಕವಾಯತು
  • ಈ ಕ್ಷಿಪಣಿಯನ್ನು ಭಾರತ ಮತ್ತು ರಷ್ಯಾ ಜಂಟಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ಗರಿಷ್ಠ 400 ಕಿ.ಮೀ ವ್ಯಾಪ್ತಿಯಲ್ಲಿ ವೈರಿಗಳನ್ನ ಬೆನ್ನಟ್ಟಿ ಮಣ್ಣು ಮುಕ್ಕಿಸಲಿದೆ.
  • ಬಾಂಗ್ಲಾ ಸೇನೆಯ ಬ್ಯಾಂಡ್ #RepublicDay ಪರೇಡ್ ನಲ್ಲಿ ಭಾಗವಹಿಸಿದೆ. ಈ ತಂಡವನ್ನು ಲೆಫ್ಟಿನೆಂಟ್ ಕರ್ನಲ್ ಅಬು ಮೊಹಮ್ಮದ್ ಶಹನೂರ್ ಶಾವಾನ್ ನೇತೃತ್ವದಲ್ಲಿ ನಡೆಸಲಾಗುತ್ತಿದೆ.
  • 122 ಸದಸ್ಯರ ಬಲಿಷ್ಠ ತಂಡ ಇದೇ ಮೊದಲ ಬಾರಿಗೆ ಪರೇಡ್ ನಲ್ಲಿ ಪಾಲ್ಗೊಳ್ಳುತ್ತಿದೆ.
  • #RepublicDay: ಭಾರತೀಯ ಸೇನೆಯ ಪ್ರಮುಖ ಯುದ್ಧ ಟ್ಯಾಂಕ್ ಟಿ -90 ಭೀಷ್ಮ, 54 ಆರ್ಮರ್ಡ್ ರೆಜಿಮೆಂಟ್​​ನ ಕ್ಯಾಪ್ಟನ್ ಕರಣ್ವೀರ್ ಸಿಂಗ್ ಭಾಂಗು ಅವರ ನೇತೃತ್ವದಲ್ಲಿ ನಮಸ್ಕಾರ ಸಲ್ಲಿಕೆ ಮಾಡಲಾಯಿತು.
  • #RepublicDay: ರಾಜಪಥದಲ್ಲಿ‘ ಪರಮ್ ವೀರ್ ಚಕ್ರ ಮತ್ತು ಅಶೋಕ ಚಕ್ರಗಳ ವಿಜೇತರು ಪಾಲ್ಗೊಂಡು ಗಮನ ಸೆಳೆದರು.
  • ಶತ್ರುವಿನ ಎದುರು ಶೌರ್ಯ ಮತ್ತು ಆತ್ಮತ್ಯಾಗದ ಪ್ರತೀಕವಾಗಿ  ಪರಮ್ ವೀರ್ ಚಕ್ರ ನೀಡ  ಸಮ್ಮಾನ ಮಾಡಲಾಗುತ್ತಿದೆ. ಶೌರ್ಯ - ಆತ್ಮತ್ಯಾಗದ ಶೌರ್ಯಕ್ಕೆ ಅಶೋಕ ಚಕ್ರ ಪ್ರಶಸ್ತಿ  ನೀಡಿ ಗೌರವಿಸಲಾಗುತ್ತಿದೆ.
  • ದೆಹಲಿ: ರಾಷ್ಟ್ರಧ್ವಜ ವನ್ನು ಹಾರಿಸಿದ ನಂತರ 223 ಫೀಲ್ಡ್ ರೆಜಿಮೆಂಟ್ ನ 21 ಗನ್ ಸೆಲ್ಯೂಟ್ ಪ್ರಸ್ತುತ ಪಡಿಸಲಾಯಿತು.

10:19 January 26

ಲೆಫ್ಟಿನೆಂಟ್ ಜನರಲ್ ವಿಜಯ್ ಕುಮಾರ್ ಮಿಶ್ರಾ ನೇತೃತ್ವದಲ್ಲಿ ಪೆರೇಡ್

ದೆಹಲಿ: ಲೆಫ್ಟಿನೆಂಟ್ ಜನರಲ್ ವಿಜಯ್ ಕುಮಾರ್ ಮಿಶ್ರಾ ನೇತೃತ್ವದಲ್ಲಿ ಪೆರೇಡ್ ಸಾಗುತ್ತಿದೆ.

10:15 January 26

ದೆಹಲಿಯ ರಾಜಪಥದಲ್ಲಿ ಪರೇಡ್​

ಭಾರತೀಯ ಸೇನಾಶಕ್ತಿ ಅನಾವರಣಗೊಂಡಿತು. ರಾಕೆಟ್ ಲಾಂಚರ್ ಪಿnಆಕ, ಬ್ರಹ್ಮೋಸ್​ ಕ್ಷಿಪಣಿ ಪ್ರದರ್ಶನಗೊಂಡವು. ಹೊಸದಾಗಿ ಖರೀದಿಸಿದ ರಫೆಲ್ ಫೈಟರ್ ಜೆಟ್‌ಗಳು ಮೊದಲ ಬಾರಿಗೆ ಪರೇಡ್​ನಲ್ಲಿ ಭಾಗವಹಿಸಲಿದ್ದು, ಸಶಸ್ತ್ರ ಪಡೆ ಟಿ -90 ಟ್ಯಾಂಕ್‌ಗಳು, ಸಂವಿಜಯ್ ಎಲೆಕ್ಟ್ರಾನಿಕ್ ವಾರ್​ಫೇರ್ ಸಿಸ್ಟಮ್, ಸುಖೋಯ್ -30 ಎಂಕೆಐ ಫೈಟರ್ ಜೆಟ್‌ಗಳನ್ನು ಪ್ರದರ್ಶಿಸಲಾಗುತ್ತಿದೆ. ಬಾಂಗ್ಲಾದೇಶದ ಸಶಸ್ತ್ರ ಪಡೆಗಳ 122 ಸದಸ್ಯರ ದಳವೂ ರಾಜ್‌ಪಾಥದಲ್ಲಿ ಮೆರವಣಿಗೆ ನಡೆಸುತ್ತಿವೆ.

10:06 January 26

21 ಗನ್ ಸೆಲ್ಯೂಟ್ ಪ್ರಸ್ತುತಪಡಿಸಿದ ಫೀಲ್ಡ್ ರೆಜಿಮೆಂಟ್‌ನ ಸೆರೆಮೋನಿಯಲ್ ಬ್ಯಾಟರಿ

ದೆಹಲಿ:ರಾಷ್ಟ್ರಧ್ವಜವನ್ನು ಹಾರಿಸಿದ ನಂತರ 223 ಫೀಲ್ಡ್ ರೆಜಿಮೆಂಟ್‌ನ ಸೆರೆಮೋನಿಯಲ್ ಬ್ಯಾಟರಿ 21 ಗನ್ ಸೆಲ್ಯೂಟ್ ಪ್ರಸ್ತುತಪಡಿಸಿದರು.

21 ಗನ್ ಸೆಲ್ಯೂಟ್ ಅನ್ನು ಸ್ವಾತಂತ್ರ್ಯ ದಿನಾಚರಣೆ ಮತ್ತು ವಿದೇಶಿ ರಾಷ್ಟ್ರಗಳ ಭೇಟಿಗಳ ಸಂದರ್ಭದಲ್ಲಿ ಸಹ ಪ್ರಸ್ತುತಪಡಿಸಲಾಗುತ್ತದೆ.

09:51 January 26

ರಾಜಪಥದಲ್ಲಿ ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್

ರಾಜಪಥದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಧ್ವಜಾರೋಹಣ ನೆರವೇರಿಸಿದರು.

09:45 January 26

ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಸೈನಿಕರಿಗೆ ಪ್ರಧಾನಿ ಮೋದಿ ಶ್ರದ್ಧಾಂಜಲಿ

ಹುತಾತ್ಮ ಸೈನಿಕರಿಗೆ ಪ್ರಧಾನಿ ಮೋದಿ ಶ್ರದ್ಧಾಂಜಲಿ

ಗಣರಾಜ್ಯೋತ್ಸವ ಅಂಗವಾಗಿ ಇಂಡಿಯಾ ಗೇಟ್‌ನಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಹುತಾತ್ಮ ಸೈನಿಕರಿಗೆ  ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದರು. ರಕ್ಷಣಾ ಸಚಿವ ರಾಜನಾಥ ಸಿಂಗ್​ ಸಹ ಭಾಗಿಯಾಗಿದ್ದರು.

09:36 January 26

ದೆಹಲಿ ತಲುಪಿದ ಟಿಕ್ರಿ ಗಡಿ ರೈತರ ಟ್ರ್ಯಾಕ್ಟರ್ ರ‍್ಯಾಲಿ

ಟಿಕ್ರಿ ಗಡಿಯಿಂದ ಟ್ರ್ಯಾಕ್ಟರ್ ಹೊರಟ ರೈತರ ಟ್ರ್ಯಾಕ್ಟರ್​ ಪರೇಡ್​ ದೆಹಲಿ ತಲುಪಿದೆ.

09:35 January 26

ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಧ್ವಜಾರೋಹಣ

ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾನ್ ರೇವಾದಲ್ಲಿನ ಎಸ್ಎಎಫ್ ಮೈದಾನದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು.

09:35 January 26

ತಮ್ಮ ನಿವಾಸದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ

ದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ತಮ್ಮ ನಿವಾಸದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

09:29 January 26

ಜಮ್ಮು ಮತ್ತು ಕಾಶ್ಮೀರದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ತಾತ್ಕಾಲಿಕ ಸ್ಥಗಿತ

ಜಮ್ಮು ಮತ್ತು ಕಾಶ್ಮೀರ: ಗಣರಾಜ್ಯೋತ್ಸವವನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ಕ್ರಮವಾಗಿ ಕಾಶ್ಮೀರ ಕಣಿವೆಯಾದ್ಯಂತ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

09:22 January 26

ಬಿಹಾರ ಸಿಎಂ ನಿತೀಶ್ ಕುಮಾರ್ ಧ್ವಜಾರೋಹಣ

ಬಿಹಾರ ಸಿಎಂ ನಿತೀಶ್ ಕುಮಾರ್ ಧ್ವಜಾರೋಹಣ

ಪಾಟ್ನಾ: ಬಿಹಾರ ಸಿಎಂ ನಿತೀಶ್ ಕುಮಾರ್ ತಮ್ಮ ನಿವಾಸದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿದರು.

09:19 January 26

ಧನ್ಸಾ ಗಡಿಯಲ್ಲಿ ಟ್ರಾಕ್ಟರ್ ರ‍್ಯಾಲಿ ಪ್ರಾರಂಭ

ಧನ್ಸಾ ಗಡಿಯಲ್ಲಿ ಟ್ರಾಕ್ಟರ್ ರ‍್ಯಾಲಿ ಪ್ರಾರಂಭ

ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯ ಧನ್ಸಾ ಗಡಿಯಲ್ಲಿ ಟ್ರಾಕ್ಟರ್ ರ‍್ಯಾಲಿ  ಪ್ರಾರಂಭವಾಗಿದೆ.  

ಪ್ರತಿಭಟನಾ ರೈತರು ದೆಹಲಿ-ಹರಿಯಾಣ ಟಿಕ್ರಿ ಗಡಿಯಲ್ಲಿ ಪೊಲೀಸ್ ಬ್ಯಾರಿಕೇಡ್​ಗಳನ್ನು ಮುರಿದು ರೈತರು ಮುನ್ನುಗ್ಗಿದ್ದಾರೆ. ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಇಂದು ಟ್ರ್ಯಾಕ್ಟರ್ ರ‍್ಯಾಲಿ ನಡೆಸುತ್ತಿದ್ದಾರೆ.

09:09 January 26

ದೆಹಲಿಯ ರಾಜಪಥದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಆರಂಭ

ಗಣರಾಜ್ಯೋತ್ಸವ ಕಾರ್ಯಕ್ರಮ ಆರಂಭ

ದೆಹಲಿಯ ರಾಜಪಥದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಆರಂಭವಾಗಿದೆ. ಎಲ್ಲಾ ಕೊರೊನಾ  ಪ್ರೋಟೋಕಾಲ್‌ಗಳನ್ನು ಅನುಸರಿಸಿ ಕಾರ್ಯಕ್ರಮ ಆಯೋಜಿಸಲಾಗಿದೆ. 

08:45 January 26

ಒಡಿಶಾ ರಾಜ್ಯಪಾಲರಿಂದ ಧ್ವಜಾರೋಹಣ

ಒಡಿಶಾ ರಾಜ್ಯಪಾಲರಿಂದ ಧ್ವಜಾರೋಹಣ
  • ಭುವನೇಶ್ವರದಲ್ಲಿ ಗಣರಾಜ್ಯೋತ್ಸವ ನಿಮಿತ್ತ
  • ಧ್ವಜಾರೋಹಣ ನೆರವೇರಿಸಿದ  ಒಡಿಶಾ ರಾಜ್ಯಪಾಲ ಗಣೇಶಿ ಲಾಲ್
  • ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೂಡ ಉಪಸ್ಥಿತಿ

08:31 January 26

ಇಂಡೋ-ಟಿಬೆಟಿಯನ್ ಬಾರ್ಡರ್ಸ್ ಪೊಲೀಸ್ ಪಡೆಯಿಂದ ಪರೇಡ್

ಇಂಡೋ-ಟಿಬೆಟಿಯನ್ ಬಾರ್ಡರ್ಸ್ ಪೊಲೀಸ್ ಪಡೆಯಿಂದ ಪರೇಡ್

ಲಡಾಖ್​ನಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಯ ಸೈನಿಕರು ಹೆಪ್ಪುಗಟ್ಟಿದ ನೀರಿನ ಮೇಲೆ ರಾಷ್ಟ್ರ ಧ್ವಜದೊಂದಿಗೆ  ಪರೇಡ್ ಮಾಡಿದರು.

08:29 January 26

ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ ಪರೇಡ್

ಲಡಾಖ್​ನಲ್ಲಿ ಹೆಪ್ಪುಗಟ್ಟಿದ ನೀರಿನ ಮೇಲೆ ರಾಷ್ಟ್ರ ಧ್ವಜದೊಂದಿಗೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ತಂಡದ ಸೈನಿಕರು ಪರೇಡ್ ಮಾಡಿದರು.

08:25 January 26

ಪ್ರತಿಯೊಬ್ಬ ನಾಗರಿಕನು ದೇಶದ ಭವಿಷ್ಯವನ್ನು ನಿರ್ಧರಿಸುತ್ತಾನೆ- ರಾಹುಲ್ ಗಾಂಧಿ

ಭಾರತದ ಪ್ರತಿಯೊಬ್ಬ ನಾಗರಿಕನು ದೇಶದ ಭವಿಷ್ಯವನ್ನು ನಿರ್ಧರಿಸುತ್ತಾನೆ. ಅದು ಸತ್ಯಾಗ್ರಹಿ ರೈತ-ಕಾರ್ಮಿಕ ಅಥವಾ ಸಣ್ಣ-ಮಧ್ಯಮ ಉದ್ಯಮಿ, ಉದ್ಯೋಗವನ್ನು ಬಯಸುವ ಯುವಕರು ಅಥವಾ ಹಣದುಬ್ಬರದಿಂದ ತೊಂದರೆಗೀಡಾದ ಗೃಹಿಣಿ ಇರಬಹುದು. ಪ್ರತಿಯೊಬ್ಬ ನಾಗರಿಕನು ದೇಶದ ಭವಿಷ್ಯವನ್ನು ನಿರ್ಧರಿಸುತ್ತಾನೆ ಎಂದು ಟ್ವೀಟ್​ ಮಾಡುವ ಮೂಲಕ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ದೇಶದ ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ. 

08:08 January 26

ಟ್ರ್ಯಾಕ್ಟರ್​ಗಳಿಗೆ ರಾಷ್ಟ್ರ ಧ್ವಜ ಕಟ್ಟಿ ರ‍್ಯಾಲಿಗೆ ಸಿದ್ಧತೆ

ಟ್ರ್ಯಾಕ್ಟರ್​ಗಳಿಗೆ ರಾಷ್ಟ್ರ ಧ್ವಜ ಕಟ್ಟಿ ರ‍್ಯಾಲಿಗೆ ಸಿದ್ಧತೆ

ಟ್ರ್ಯಾಕ್ಟರ್​ಗಳಿಗೆ ರಾಷ್ಟ್ರ ಧ್ವಜ ಕಟ್ಟಿ ರ‍್ಯಾಲಿಗೆ ರೈತರು ಸಿದ್ಧರಾಗಿದ್ದಾರೆ. ದೆಹಲಿ-ನೋಯ್ಡಾ ಲಿಂಕ್ ರಸ್ತೆಯ ಚಿಲ್ಲಾ ಗಡಿಯಲ್ಲಿ ರೈತರು ಟ್ರ್ಯಾಕ್ಟರ್ ಪರೇಡ್​ಗೆ ಸಿದ್ಧರಾಗಿದ್ದಾರೆ.

ಟ್ರಾಕ್ಟರ್ ರ‍್ಯಾಲಿಯಲ್ಲಿ ಭಾಗಿಯಾಗಲು ನೂರಾರು ರೈತರು ತಮ್ಮ ಟ್ರಾಕ್ಟರ್​ಗಳೊಂದಿಗೆ ಸಿಂಘು ಗಡಿಯಿಂದ ದೆಹಲಿ ಕಡೆಗೆ ಹೋಗುತ್ತಿದ್ದಾರೆ.

08:04 January 26

ಅಹಮದಾಬಾದ್‌ನ ಆರ್‌ಎಸ್‌ಎಸ್ ಕಚೇರಿಯಲ್ಲಿ ಧ್ವಜಾರೋಹಣ

ಅಹಮದಾಬಾದ್‌ನ ಆರ್‌ಎಸ್‌ಎಸ್ ಕಚೇರಿಯಲ್ಲಿ ಧ್ವಜಾರೋಹಣ

ಗುಜರಾತ್: ಅಹಮದಾಬಾದ್‌ನ ಆರ್‌ಎಸ್‌ಎಸ್ ಕಚೇರಿಯಲ್ಲಿ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ನಡೆಯಿತು. ಸಂಸ್ಥೆಯ ಮುಖ್ಯಸ್ಥ ಮೋಹನ್ ಭಾಗವತ್ ಉಪಸ್ಥಿತರಿದ್ದರು.  

08:03 January 26

ಲೋಣಿಯಲ್ಲಿ ಬ್ಯಾರಿಕೇಡ್‌ಗಳನ್ನು ಮುರಿದು ದೆಹಲಿಗೆ ಪ್ರವೇಶಿಸಲು ಪ್ರಯತ್ನಿಸಿದ ರೈತರು

ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಿದ ಹಲವಾರು ರೈತರು ಬ್ಯಾರಿಕೇಡ್‌ಗಳನ್ನು ಮುರಿದು ಉತ್ತರ ಪ್ರದೇಶದ ಲೋನಿ ಗಡಿಯಲ್ಲಿ ದೆಹಲಿಗೆ ಪ್ರವೇಶಿಸಲು ಪ್ರಯತ್ನಿಸಿದರು. ಆದರೆ ಅವರನ್ನು ಪೊಲೀಸರು ತಡೆದರು. ಏತನ್ಮಧ್ಯೆ, ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ಕೂಡ ನಡೆಯಿತು.

07:54 January 26

'ಶಿವಲಿಂಗ'ಕ್ಕೆ ತ್ರಿವರ್ಣ ಬಣ್ಣಗಳ ಅಲಂಕಾರ

'ಶಿವಲಿಂಗ'ಕ್ಕೆ ತ್ರಿವರ್ಣ ಬಣ್ಣಗಳ ಅಲಂಕಾರ

ಉತ್ತರಾಖಂಡ: ಋಷಿಕೇಶದ ಚಂದ್ರೇಶ್ವರ ಮಹಾದೇವ್ ದೇವಸ್ಥಾನದಲ್ಲಿರುವ 'ಶಿವಲಿಂಗ'ವನ್ನು ತ್ರಿವರ್ಣ ಬಣ್ಣಗಳಲ್ಲಿ ಅಲಂಕರಿಸಲಾಗಿದೆ.

07:51 January 26

ಕರ್ನಾಲ್ ಬೈಪಾಸ್‌ಬಳಿ ತಾತ್ಕಾಲಿಕ ಗೋಡೆ ನಿರ್ಮಾಣ

ಕರ್ನಾಲ್ ಬೈಪಾಸ್‌ಬಳಿ ತಾತ್ಕಾಲಿಕ ಗೋಡೆ ನಿರ್ಮಾಣ

ನವದೆಹಲಿ: ರಾಷ್ಟ್ರ ರಾಜಧಾನಿಗೆ ವಾಹನಗಳ ಪ್ರವೇಶವನ್ನು ತಡೆಯಲು ಕರ್ನಾಲ್ ಬೈಪಾಸ್‌ಬಳಿ ತಾತ್ಕಾಲಿಕ ಗೋಡೆ ನಿರ್ಮಿಸಲಾಗಿದೆ.

07:51 January 26

ಜೈಪುರದ ಸಿಎಂ ನಿವಾಸದಲ್ಲಿ ಧ್ವಜಾರೋಹಣ

ಜೈಪುರದ ಸಿಎಂ ನಿವಾಸದಲ್ಲಿ ಧ್ವಜಾರೋಹಣ

ರಾಜಸ್ಥಾನ: ಜೈಪುರದ ಸಿಎಂ ನಿವಾಸದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಿದರು.

07:39 January 26

ರಾಷ್ಟ್ರ ರಾಜಧಾನಿಯಾದ್ಯಂತ ಬಿಗಿ ಭದ್ರತೆ

ರಾಷ್ಟ್ರ ರಾಜಧಾನಿಯಾದ್ಯಂತ ಬಿಗಿ ಭದ್ರತೆ

ನವದೆಹಲಿ: ಗಣರಾಜ್ಯೋತ್ಸವ ದಿನದ ಹಿನ್ನೆಲೆ ರಾಷ್ಟ್ರ ರಾಜಧಾನಿಯಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

07:15 January 26

ಭಾರತದ ಜನತೆಗೆ ಮೋದಿ ಶುಭಾಶಯ

  • ಭಾರತದ ಎಲ್ಲ ಜನತೆಗೆ ಮೋದಿ ಶುಭಾಶಯ
  • ಗಣರಾಜ್ಯೋತ್ಸವದ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ
  • ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಶುಭಾಶಯ

07:03 January 26

ವಾಸ್ತವಿಕವಾಗಿ  ರೈತ ಕ್ರಾಂತಿಯ ಕಹಳೆ ದೆಹಲಿಯಲ್ಲಿ ಮೊಳಗಿದೆ.  ರಾಷ್ಟ್ರ ರಾಜಧಾನಿಯಲ್ಲಿ ಟ್ರ್ಯಾಕ್ಟರ್ ಪ್ರತಿಭಟನೆ ಶುರುವಾಗಲಿದೆ. ಭಾರತದ ಇತಿಹಾಸದಲ್ಲಿ, ಗಣರಾಜ್ಯೋತ್ಸವದ ದಿನ ಹಸಿರು ಸೇನಾನಿಗಳು ಕಂಡು ಕೇಳರಿಯದಂಥಾ ಪ್ರತಿಭಟನಾ ರ‍್ಯಾಲಿ ನಡೆಸಲಿದ್ದಾರೆ. ದೆಹಲಿಯ ರಾಜಪಥದಲ್ಲಿ ನಡೆಯಲಿರೋ ಗಣರಾಜ್ಯೋತ್ಸವ ಪರೇಡ್​ಗೆ ಸಿದ್ಧತೆ ಪೂರ್ಣಗೊಂಡಿದೆ. ಜೊತೆ ಜೊತೆಗೆ ರೈತರ ಟ್ರ್ಯಾಕ್ಟರ್ ಪರೇಡ್​ಗೆ ಭರ್ಜರಿ ಸಿದ್ಧತೆ ನಡೆದಿದೆ. 

ಇಂದು ಗಣರಾಜ್ಯೋತ್ಸವ ಪರೇಡ್ ಮುಗಿದ ಕೆಲವೇ ಕ್ಷಣಗಳಲ್ಲಿ ರೈತರ ಟ್ರಾಕ್ಟರ್ ಪರೇಡ್ ಆರಂಭವಾಗಲಿದೆ. ದೆಹಲಿಯ ಹೊರವಲಯದಲ್ಲಿ 2 ಲಕ್ಷಕ್ಕೂ ಅಧಿಕ ಟ್ರಾಕ್ಟರ್ ಬಂದು ಸೇರಿದ್ದು, ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರಪ್ರದೇಶದಿಂದ‌ ಲಕ್ಷಾಂತರ ಟ್ರ್ಯಾಕ್ಟರ್​ಗಳು ದೆಹಲಿ ಗಡಿಯಲ್ಲಿ ಜಮಾವಣೆಯಾಗಿವೆ.

07:00 January 26

ಇಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲಿರುವ ರೈತರು

  • ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಟ್ರ್ಯಾಕ್ಟರ್ ರ‍್ಯಾಲಿ
  • ಇಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲಿರುವ ರೈತರು

06:36 January 26

ದೇಶದಲ್ಲಿ ಗಣರಾಜ್ಯೋತ್ಸವ ಮತ್ತು ರೈತರ ಟ್ರ್ಯಾಕ್ಟರ್​ ರ‍್ಯಾಲಿ- LIVE UPDATES

ಭಾರತವು ತನ್ನ 72 ನೇ ಗಣರಾಜ್ಯೋತ್ಸವವನ್ನು ಇಂದು ಆಚರಿಸುತ್ತಿದೆ. ಸಂವಿಧಾನ ಜಾರಿಗೆ ಬಂದ ನಂತರ ದೇಶವು ಸ್ವತಂತ್ರ ಗಣರಾಜ್ಯವಾಗುವತ್ತ ಪರಿವರ್ತನೆಗೊಂಡ ಐತಿಹಾಸಿಕ ದಿನಾಂಕವನ್ನು ಗೌರವಿಸಲು ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.

Last Updated :Jan 26, 2021, 8:12 PM IST

ABOUT THE AUTHOR

...view details