ಕರ್ನಾಟಕ

karnataka

ನಿಕ್ಕಿ ಯಾದವ್ ಹತ್ಯೆ ಪ್ರಕರಣ: ಕೊಲೆಗೆ ಸಂಚು ರೂಪಿಸಿದ್ದಕ್ಕಾಗಿ ಸಾಹಿಲ್ ತಂದೆ ಸೇರಿ ಐವರ ಬಂಧನ

By

Published : Feb 18, 2023, 9:49 AM IST

Updated : Feb 18, 2023, 10:45 AM IST

ನಿಕ್ಕಿ ಯಾದವ್ ಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಕೊಲೆಗೆ ಸಂಚು ರೂಪಿಸಿದ್ದಕ್ಕಾಗಿ ಪ್ರಮುಖ ಆರೋಪಿ ಸಾಹಿಲ್ ಗೆಹ್ಲೋಟ್ ತಂದೆ ಸೇರಿ 5 ಜನರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

Representative image
ನಿಕ್ಕಿ ಯಾದವ್ ಹಾಗೂ ಸಾಹಿಲ್ ಗೆಹ್ಲೋಟ್

ನವದೆಹಲಿ:ನಿಕ್ಕಿ ಯಾದವ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಾಹಿಲ್ ಗೆಹ್ಲೋಟ್​ನನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಇದರಿಂದ ಕೊಲೆಯ ಹಿಂದಿನ ಸಂಚು ಬಯಲಿಗೆಳೆಯಲು ಅಪರಾಧ ವಿಭಾಗಕ್ಕೆ ಸಾಕಷ್ಟು ನೆರವಾಗಿದೆ. ನಿಕ್ಕಿ ಹತ್ಯೆ ಪ್ರಕರಣದಲ್ಲಿ ಸಾಹಿಲ್ ಓರ್ವನೇ ಆರೋಪಿ ಎಂಬುದು ಇಲ್ಲಿಯವರೆಗೂ ತನಿಖೆಯಲ್ಲಿ ಪತ್ತೆಯಾಗಿತ್ತು. ಆದರೆ ಈಗ ಹತ್ಯೆಯ ಸಂಚಿನಲ್ಲಿ ಇತರರು ಭಾಗಿಯಾಗಿದ್ದಾರೆ ಎಂಬುವುದನ್ನು ಅಪರಾಧ ವಿಭಾಗ ಸ್ಪಷ್ಟಪಡಿಸಿದೆ.

ಸಾಹಿಲ್ ತಂದೆ ಸೇರಿ ಐವರ ಬಂಧನ: ಪ್ರಕರಣದಲ್ಲಿ ಸಾಹಿಲ್ ತಂದೆ ಬೀರೇಂದ್ರ ಗೆಹ್ಲೋಟ್ ಹೆಸರು ಕೂಡ ಬಯಲಿಗೆ ಬಂದಿದೆ. ಕೊಲೆಗೆ ಸಂಚು ರೂಪಿಸಿದ್ದಕ್ಕಾಗಿ ಸಾಹಿಲ್ ತಂದೆ ಸೇರಿ ಒಟ್ಟು 5 ಮಂದಿಯನ್ನು ದೆಹಲಿ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಸಿಕ್ಕಿರುವ ಮಾಹಿತಿ ಪ್ರಕಾರ ಸಾಹಿಲ್ ತಂದೆಯಲ್ಲದೇ ಆತನ ಕೆಲವು ಸಂಬಂಧಿಕರು ಮತ್ತು ಸ್ನೇಹಿತರು ಕೂಡ ಈ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಶ್ರದ್ಧಾ ಮರ್ಡರ್ ರೀತಿಯ ಮತ್ತೊಂದು ಘಟನೆ: ಪ್ರೇಯಸಿ ಕೊಲೆ ಮಾಡಿ ಫ್ರಿಜ್​ನಲ್ಲಿ ಶವ ಬಚ್ಚಿಟ್ಟ ಯುವಕ!

ದೆಹಲಿ ಅಪರಾಧ ವಿಭಾಗದಿಂದ ಬಂದಿರುವ ಮಾಹಿತಿ ಪ್ರಕಾರ, ಸಾಹಿಲ್ ತಂದೆ ಈ ಕೊಲೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ಫೆ.9ರ ರಾತ್ರಿ ನಿಕ್ಕಿಯನ್ನು ಭೇಟಿಯಾಗಲು ಸಾಹಿಲ್ ಬಂದು ಕಾರಿನಲ್ಲಿ ಸುಮಾರು 40 ಕಿ. ಮೀ ಪ್ರಯಾಣಿಸುವುದು ಕೂಡ ಪೂರ್ವ ಯೋಜಿತ ತಂತ್ರವಾಗಿತ್ತು. ಸಾಹಿಲ್ ತಂದೆ ವೀರೇಂದ್ರ ಗೆಹ್ಲೋಟ್ ಅವರನ್ನು ವಿಚಾರಣೆ ನಡೆಸಿದಾಗ ನಿಕ್ಕಿ ಹತ್ಯೆಯ ವಿಚಾರ ತಿಳಿದಿತ್ತು. ಆರಂಭದಲ್ಲಿ ಅವರು ಇದನ್ನು ನಿರಾಕರಿಸಿದರೂ ಬಳಿಕ ತನಿಖೆಯಲ್ಲಿ ಈ ರಹಸ್ಯ ಬಹಿರಂಗಗೊಂಡಿದೆ.

ಏನಿದು ಪ್ರಕರಣ?:ಶ್ರದ್ಧಾ ವಾಕರ್ ಕೊಲೆ ಪ್ರಕರಣವನ್ನೇ ಹೋಲುವ ಮತ್ತೊಂದು ಘಟನೆ ಫೆ.13ರಂದು ದೆಹಲಿಯ ಹರಿದಾಸ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿತ್ತು. ಯುವಕನೊಬ್ಬ ತನ್ನ ಪ್ರೇಯಸಿಯನ್ನು ಕೊಂದು ಢಾಬಾದ ಫ್ರಿಡ್ಜ್​​​ನಲ್ಲಿಟ್ಟಿದ್ದ. ದೆಹಲಿ ಅಪರಾಧ ವಿಭಾಗದ ಪೊಲೀಸರ ತಂಡವು ಪಶ್ಚಿಮ ಹರಿದಾಸ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಢಾಬಾದಿಂದ ಯುವತಿಯ ಶವವನ್ನು ವಶಪಡಿಸಿಕೊಂಡಿತ್ತು. ಪ್ರಕರಣ ಸಂಬಂಧ ಮಿತ್ರಾನ್ ಗ್ರಾಮದ ನಿವಾಸಿ ಸಾಹಿಲ್ ಗೆಹ್ಲೋಟ್​​ನನ್ನು ಬಂಧಿಸಿತ್ತು.

ಪ್ರಕರಣದ ಹಿನ್ನೆಲೆ:ನಿಕ್ಕಿ ಯಾದವ್ ಮತ್ತು ಸಾಹಿಲ್ ಗೆಹ್ಲೋಟ್ ಇಬ್ಬರೂ ಪ್ರೇಮ ಸಂಬಂಧ ಹೊಂದಿದ್ದರು. ಆದರೆ, ಮದುವೆಯಾಗಲು ಸಾಹಿಲ್ ಗೆಹ್ಲೋಟ್ ಒಪ್ಪಿರಲಿಲ್ಲ. ಇದೇ ವಿಷಯಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದೇ ಕಾರಣಕ್ಕೆ ಸಾಹಿಲ್ ನಿಕ್ಕಿಯನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದ. ಬಳಿಕ ಮೃತ ದೇಹವನ್ನು ಮಿತ್ರಾನ್ ಗ್ರಾಮದ ಢಾಬಾದಲ್ಲಿ ಬಚ್ಚಿಟ್ಟಿದ್ದ.

ತಂದೆಯಿಂದ ಮರಣ ದಂಡನೆಗೆ ಆಗ್ರಹ:ನಿಕ್ಕಿ ಹತ್ಯೆಯನ್ನು ಯಾವ ರೀತಿಯಲ್ಲಿ ನಡೆಸಲಾಗಿದೆಯೋ ಅದೇ ರೀತಿ ಆರೋಪಿ ಸಾಹಿಲ್‌ಗೂ ಕಠಿಣ ಶಿಕ್ಷೆಯಾಗಬೇಕು ಎಂದು ಸಂಬಂಧಿಕರು ಆಗ್ರಹಿಸಿದ್ದಾರೆ. ಜತೆಗೆ ನಿಕ್ಕಿ ತಂದೆಯು ಕೂಡಾ ಆರೋಪಿಗೆ ಮರಣ ದಂಡನೆ ವಿಧಿಸುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ನಿಕ್ಕಿ ಯಾದವ್ ಕತ್ತು ಹಿಸುಕಿ ಹತ್ಯೆ ಮಾಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢ... ತಂದೆಯಿಂದ ಮರಣದಂಡನೆಗೆ ಒತ್ತಾಯ

Last Updated :Feb 18, 2023, 10:45 AM IST

ABOUT THE AUTHOR

...view details