ಕರ್ನಾಟಕ

karnataka

ಎನ್​ಐಎ ಕಾರ್ಯಾಚರಣೆ.. ಐವರು ಖಲಿಸ್ತಾನಿ ಉಗ್ರರ ಸುಳಿವು ನೀಡಿದವರಿಗೆ ನಗದು ಬಹುಮಾನ

By ETV Bharat Karnataka Team

Published : Sep 20, 2023, 10:48 PM IST

NIA
NIA

ಭಾರತದಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಐವರು ಖಲಿಸ್ತಾನಿ ಉಗ್ರರ ಬಗ್ಗೆ ಸುಳಿವು ನೀಡಿದವರಿಗೆ ಎನ್​ಐಎ 5 ಲಕ್ಷ ಮತ್ತು 10 ಲಕ್ಷ ನಗದು ಬಹುಮಾನ ಘೋಷಿಸಿದೆ.

ನವದೆಹಲಿ : ದೇಶದ ಒಳಗಿನ ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಎನ್​ಐಎ(ರಾಷ್ಟ್ರೀಯ ತನಿಖಾ ದಳ) ಐವರು ಖಲಿಸ್ತಾನಿ ಭಯೋತ್ಪಾದಕರ ಮಾಹಿತಿ ನೀಡಿದವರಿಗೆ ನಗದು ಬಹುಮಾನವನ್ನು ಘೋಷಿಸಿದೆ. ಐವರು ಖಲಿಸ್ತಾನಿ ಭಯೋತ್ಪಾದಕರ ಕುರಿತು ಸುಳಿವು ನೀಡಿದವರಿಗೆ 5 ಲಕ್ಷ ಮತ್ತು 10 ಲಕ್ಷ ನಗದು ಬಹುಮಾನ ನೀಡುವುದಾಗಿ ಘೋಷಣೆ ಎನ್​ಐಎ ತಿಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಎನ್​ಐಎ, ಉಗ್ರ ಪಟ್ಟಿಯಲ್ಲಿರುವ ಖಲಿಸ್ತಾನಿ ಉಗ್ರರಾದ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾ ಮತ್ತು ಲಖ್ಬೀರ್ ಸಿಂಗ್ ಸಂಧು ಅಲಿಯಾಸ್ ಲಾಂಡಾ ಕುರಿತು ಮಾಹಿತಿ ನೀಡಿದವರಿಗೆ ತಲಾ 10 ಲಕ್ಷ ರೂಪಾಯಿ ನೀಡಲಾಗುವುದು ಎಂದು ತಿಳಿಸಿದೆ. ಈ ಆರೋಪಿಗಳು ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ)ಸಂಘಟನೆ ಮೂಲಕ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದರು ಎಂದು ಎನ್ಐಎ ಹೇಳಿದೆ.

ಜೊತೆಗೆ ಈ ಇಬ್ಬರು ಉಗ್ರರ ಮೂವರು ಸಹಚರರ ಕುರಿತು ಮಾಹಿತಿ ನೀಡಿದವರಿಗೆ ತಲಾ 5 ಲಕ್ಷ ರೂ. ಬಹುಮಾನವನ್ನು ಘೋಷಿಸಲಾಗಿದೆ. ಸಹಚರರಾದ ಪರ್ಮಿಂದರ್ ಸಿಂಗ್ ಕೈರಾ ಅಲಿಯಾಸ್ ಪಟ್ಟು, ಸತ್ನಾಮ್ ಸಿಂಗ್ ಅಲಿಯಾಸ್ ಸತ್ಬೀರ್ ಸಿಂಗ್ ಅಲಿಯಾಸ್ ಸತ್ನಾ ಮತ್ತು ಯದ್ವಿಂದರ್ ಸಿಂಗ್ ಅಲಿಯಾಸ್ ಯಡ್ಡಾ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ ಐದು ಲಕ್ಷ ರೂಪಾಯಿ ನಗದು ಬಹುಮಾನವನ್ನು ಎನ್ಐಎ ಘೋಷಿಸಿದೆ.

ಈ ಎಲ್ಲಾ ಆರೋಪಿಗಳ ವಿರುದ್ಧ ದೇಶದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕದಡುವ ಹಾಗೂ ಪಂಜಾಬ್​ನಲ್ಲಿ ಬಿಕೆಐ ಸಂಘಟನೆಯ ಭಯೋತ್ಪಾದಕ ಚಟುವಟಿಕೆಗಳಿಗೆ ಉತ್ತೇಜಿಸುತ್ತಿರುವ ಸಂಬಂಧ ಎನ್​ಐಎ ಪ್ರಕರಣ ದಾಖಲಿಸಿದೆ. ಎನ್‌ಐಎ, ಯುಎಪಿಎ ಕಾಯ್ದೆ 1967 ಅಡಿಯಲ್ಲಿ ಸೆಕ್ಷನ್ 17, 18, 18 ಬಿ, 20, 38 ಮತ್ತು 39 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದೆ.

ಈ ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಭಯೋತ್ಪಾದನಾ ಕೃತ್ಯ, ಬಿಕೆಐ ಸಂಘಟನೆಗೆ ಹಣ ಸಂಗ್ರಹ, ಮಾದಕ ವಸ್ತುಗಳ ಕಳ್ಳಸಾಗಣೆ, ಉದ್ಯಮಿಗಳಿಂದ ದರೋಡೆ ನಡೆಸಿದ ಮುಂತಾದ ಆರೋಪಗಳಿವೆ. ಪಂಜಾಬ್​ನಲ್ಲಿ ಭಯೋತ್ಪಾದನೆ ಸೃಷ್ಟಿಸುವ ಉದ್ದೇಶದಿಂದ ಟಾರ್ಗೆಟ್​ ಕಿಲ್ಲಿಂಗ್ ನಡೆಸಿದ​ ಆರೋಪ ಇವರ ಮೇಲಿದೆ. ಅಲ್ಲದೆ ಈ ಆರೋಪಿಗಳು ಅಮಾಯಕ ಯುವಕರಿಗೆ ಹಣದ ಆಮಿಷವೊಡ್ಡಿ ತಮ್ಮ ಬಿಕೆಐ ಸಂಘಟನೆ ನೇಮಕಾತಿ ಮಾಡಿಕೊಳ್ಳುತ್ತಿದ್ದರು. ಜೊತೆಗೆ ತಮ್ಮ ಜಾಲವನ್ನು ದೇಶ ವಿವಿಧ ಭಾಗಗಳಲ್ಲಿ ವಿಸ್ತರಿಸಿ ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದರು ಎಂದು ಎನ್​ಐಎ ತಿಳಿಸಿದೆ.

ಇದನ್ನೂ ಓದಿ :ಕೆನಡಾದಲ್ಲಿರುವ ಭಾರತೀಯರೇ ಎಚ್ಚರ, ಅಲ್ಲಿಗೆ ಹೋಗಬೇಕೆನ್ನುವವರು ಸದ್ಯಕ್ಕೆ ಪ್ರಯಾಣ ನಿಲ್ಲಿಸಿ: ಕೇಂದ್ರ ಸರ್ಕಾರ ಸಲಹೆ

ABOUT THE AUTHOR

...view details