ಕರ್ನಾಟಕ

karnataka

ಬಿಜೆಪಿಯ ನಕಲಿ ರಾಷ್ಟ್ರೀಯತೆ, ಒಡೆದು ಆಳುವ ನೀತಿಯಿಂದ ಸಮಾಜ ವಿಘಟನೆ: ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ವಾಗ್ದಾಳಿ

By

Published : Feb 17, 2022, 3:58 PM IST

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜವಾಹರ್​ಲಾಲ್ ನೆಹರೂ​ ಸೇರಿದಂತೆ ಕಾಂಗ್ರೆಸ್​ ನಾಯಕರನ್ನು ಟೀಕಿಸಿದ್ದಕ್ಕೆ ತಿರುಗೇಟು ನೀಡಿ, ಮೋದಿ ಅವರು ದೇಶದ ಇತಿಹಾಸ ದೂಷಿಸುವ ಬದಲು ತಮ್ಮ ಸ್ಥಾನದ ಘನತೆ ಕಾಪಾಡಿಕೊಳ್ಳಬೇಕು. ಕಾಂಗ್ರೆಸ್ ಎಂದಿಗೂ ಒಡೆದು ಆಳುವ ರಾಜಕಾರಣವನ್ನು ಮಾಡಿಲ್ಲ. ರಾಜಕೀಯ ಲಾಭಕ್ಕಾಗಿ ದೇಶವನ್ನು ವಿಭಜಿಸಲಿಲ್ಲ ಎಂದು ಹೇಳಿದ್ದಾರೆ.

manmohan-singh
ಮನಮೋಹನ್

ನವದೆಹಲಿ:ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಕಲಿ ರಾಷ್ಟ್ರೀಯತೆ ಮತ್ತು ವಿಭಜಕ ನೀತಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಪ್ರಧಾನಮಂತ್ರಿ ಮನಮೋಹನ್​ ಸಿಂಗ್​ ಅವರು, ಎನ್​ಡಿಎ ಸರ್ಕಾರ ವಿದೇಶಾಂಗ ನೀತಿಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿರುವ ಸಿಂಗ್​, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜವಾಹರ್​ಲಾಲ್ ನೆಹರೂ​ ಸೇರಿದಂತೆ ಕಾಂಗ್ರೆಸ್​ ನಾಯಕರನ್ನು ಟೀಕಿಸಿದ್ದಕ್ಕೆ ತಿರುಗೇಟು ನೀಡಿ, ಮೋದಿ ಅವರು ದೇಶದ ಇತಿಹಾಸ ದೂಷಿಸುವ ಬದಲು ತಮ್ಮ ಸ್ಥಾನದ ಘನತೆಯನ್ನು ಕಾಪಾಡಿಕೊಳ್ಳಬೇಕು. ಕಾಂಗ್ರೆಸ್ ಎಂದಿಗೂ ಒಡೆದು ಆಳುವ ರಾಜಕಾರಣವನ್ನು ಮಾಡಿಲ್ಲ. ರಾಜಕೀಯ ಲಾಭಕ್ಕಾಗಿ ದೇಶವನ್ನು ವಿಭಜಿಸಲಿಲ್ಲ ಎಂದು ಹೇಳಿದ್ದಾರೆ.

ನಕಲಿ ರಾಷ್ಟ್ರೀಯತೆಯಿಂದ ವಿಘಟನೆ:ಕಾಂಗ್ರೆಸ್​ ಎಂದಿಗೂ ದೇಶದ ಗೌರವ ಅಥವಾ ಪ್ರಧಾನಿ ಸ್ಥಾನಕ್ಕೆ ಧಕ್ಕೆ ತರುವ ಕೆಲಸ ಮಾಡಿಲ್ಲ. ಎನ್​ಡಿಎ ಸರ್ಕಾರದ ನಕಲಿ ರಾಷ್ಟ್ರೀಯತೆ ದೇಶಕ್ಕೆ ಅಪಾಯಕಾರಿಯಾಗಿದೆ. ಇದರಿಂದ ಸಮಾಜ ವಿಘಟನೆ ಹೊಂದುತ್ತಿದೆ. ಬ್ರಿಟಿಷರ ಒಡೆದು ಆಳುವ ನೀತಿಯನ್ನು ಸರ್ಕಾರ ಅನುಸರಿಸಿ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಟೀಕಿಸಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಆರ್ಥಿಕ, ವಿದೇಶಾಂಗ ನೀತಿಯಲ್ಲಿ ತಿಳಿವಳಿಕೆ ಹೊಂದಿಲ್ಲ. ಗಡಿಯಲ್ಲಿ ಚೀನಾ ಅತಿಕ್ರಮಣ, ದೌರ್ಜನ್ಯ ಹೆಚ್ಚುತ್ತಿದೆ. ಇದನ್ನು ಸರ್ಕಾರ ಮರೆಮಾಚಿದೆ. ಎಲ್​ಎಸಿಯಲ್ಲಿ ನಡೆಯುವ ಘಟನೆಗಳನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ವಿದೇಶಾಂಗ ನೀತಿಯಲ್ಲೂ ಕೂಡ ಸಂಪೂರ್ಣ ಸೋಲು ಕಂಡಿದೆ. ಮಾಡಿದ 'ಪಾಪಗಳನ್ನು' ಮರೆಮಾಚಲು ಕಾಂಗ್ರೆಸ್​ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಡವರ ಕಷ್ಟ ಅರ್ಥ ಮಾಡಿಕೊಳ್ಳಿ:ಇದಲ್ಲದೇ ದೇಶದಲ್ಲಿ ಕೋವಿಡ್​ ತಡೆಗಟ್ಟುವಲ್ಲಿ ಸರ್ಕಾರ ದೋಷಪೂರಿತ ನಿರ್ಧಾರ ಕೈಗೊಂಡಿದೆ. ಒಂದೆಡೆ ಹಣದುಬ್ಬರ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ನಿರುದ್ಯೋಗ ತಾಂಡವವಾಡುತ್ತಿದೆ. ಬಿಜೆಪಿ ಸರ್ಕಾರ ಏಳೂವರೆ ವರ್ಷ ಅಧಿಕಾರದಲ್ಲಿದ್ದರೂ ಸಾಮಾನ್ಯ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವಿದೆ.

ಮಾಡಿದ ತಪ್ಪುಗಳನ್ನು ಸರಿಪಡಿಸುವ ಬದಲು ನೆಹರೂ ಅವರನ್ನು ದೂಷಿಸುವುದರಲ್ಲಿಯೇ ಮಗ್ನವಾಗಿದೆ. ಇತರರನ್ನು ದೂಷಿಸುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡು ಟೀಕಿಸಿದರು.

ನನ್ನ ಎರಡು ಅವಧಿಯ ಯುಪಿಎ ಸರ್ಕಾರದಲ್ಲಿ ದೇಶದ ಇಮೇಜ್​ ಹೆಚ್ಚಿಸುವ ಕೆಲಸವನ್ನು ಮಾಡಿದ್ದೇನೆ. ನಾನು ಮಾತನಾಡುವುದಕ್ಕಿಂತ, ಕೆಲಸ ಹೆಚ್ಚು ಮಾತನಾಡುವಂತೆ ಮಾಡಿದ್ದೆ. ರಾಜಕೀಯ ಲಾಭಕ್ಕಾಗಿ ನಾನು ಎಂದಿಗೂ ಒಡೆದು ಆಳುವ ನೀತಿಯನ್ನು ಅನುಸರಿಸಲಿಲ್ಲ. ರಾಜಕಾರಣಿಗಳಿಗೆ ಅಪ್ಪುಗೆ, ಬಿರಿಯಾನಿ ತಿನ್ನಿಸುವ ಮೂಲಕ ಸಂಬಂಧಗಳು ಸುಧಾರಣೆಯಾಗುವುದಿಲ್ಲ ಎಂದು ವ್ಯಂಗ್ಯವಾಡಿದರು.

ಓದಿ:ಬೆಂಗಳೂರಲ್ಲಿ ತಂದೆಯ ತಿಥಿ ದಿನವೇ ಮಗಳ ದುರಂತ ಅಂತ್ಯ: ಮೃತನ ಪತ್ನಿ, ಮಗ ಸೇರಿ ಐವರ ಸ್ಥಿತಿ ಗಂಭೀರ

ABOUT THE AUTHOR

...view details