ಕರ್ನಾಟಕ

karnataka

ಮದ್ಯ ನೀತಿ ಹಗರಣ: ಮತ್ತೆ ಐದು ದಿನಗಳ ಕಾಲ ಇಡಿ ವಶಕ್ಕೆ ಮನೀಶ್ ಸಿಸೋಡಿಯಾ

By

Published : Mar 17, 2023, 6:45 PM IST

ದೆಹಲಿ ಮದ್ಯ ನೀತಿ ಹಗರಣದಲ್ಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಮತ್ತೆ ಐದು ದಿನಗಳ ಕಾಲ ಜಾರಿ ನಿರ್ದೇಶನಾಲಯ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ.

Etv Bharat
Etv Bharat

ನವದೆಹಲಿ:ಸಾಕಷ್ಟು ಚರ್ಚೆಗೆ ಗ್ರಾಸವಾದ ದೆಹಲಿ ಮದ್ಯ ನೀತಿ ಹಗರಣದಲ್ಲಿ ಬಂಧಿತರಾಗಿರುವ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಜಾರಿ ನಿರ್ದೇಶನಾಲಯ (ಇಡಿ) ಕಸ್ಟಡಿ ಅವಧಿ ವಿಸ್ತರಣೆಯಾಗಿದೆ. ಸಿಸೋಡಿಯಾ ಅವರನ್ನು ಮತ್ತೆ ಐದು ದಿನಗಳ ಕಾಲ ಇಡಿ ವಶಕ್ಕೆ ನೀಡಿ ಶುಕ್ರವಾರ ರೋಸ್ ಅವೆನ್ಯೂ ನ್ಯಾಯಾಲಯ ಆದೇಶಿಸಿದೆ.

ಇದನ್ನೂ ಓದಿ:ಸ್ನೂಪಿಂಗ್ ಕೇಸ್: ಮನೀಶ್ ಸಿಸೋಡಿಯಾಗೆ ಮತ್ತೊಂದು ಸಂಕಷ್ಟ, ಎಫ್‌ಐಆರ್ ದಾಖಲಿಸಿದ ಸಿಬಿಐ

ಈ ಹಿಂದೆ ಮಾರ್ಚ್​​ 10ರಂದು ಏಳು ದಿನಗಳ ಕಾಲ ಇಡಿ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿತ್ತು. ಇಂದಿಗೆ ಈ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಮತ್ತೆ ಸಿಸೋಡಿಯಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಅಲ್ಲದೇ, ಇನ್ನೂ ಏಳು ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕೆಂದು ಇಡಿ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಸಿಸೋಡಿಯಾ ಅವರನ್ನು ಇದುವರೆಗೆ ವಿಚಾರಣೆಗೆ ಒಳಪಡಿಸಿದ ನಂತರವೂ ಇನ್ನೂ ಕೆಲವು ಸಾಕ್ಷ್ಯಗಳನ್ನು ಸಂಗ್ರಹಿಸಬೇಕಾಗಿದೆ. ಆದ್ದರಿಂದ ಅವರ ಕಸ್ಟಡಿ ಅವಧಿ ವಿಸ್ತರಿಸುವ ಅಗತ್ಯವಿದೆ ಎಂದು ವಾದ ಮಂಡಿಸಿದರು.

ನ್ಯಾಯಾಲಯದಲ್ಲಿ ವಾದ - ಪ್ರತಿವಾದ : ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ ಇಡಿ ಪರ ವಕೀಲರು ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ಮದ್ಯ ನೀತಿ ಹಗರಣದಲ್ಲಿ ಆಗಿನ ಅಬಕಾರಿ ಆಯುಕ್ತ ಅರಬ್ ಗೋಪಿ ಕೃಷ್ಣ ಪಾತ್ರ ಮತ್ತು ಅದರಲ್ಲಿ ಮನೀಶ್​ ಸಿಸೋಡಿಯಾ ಭಾಗಿಯಾಗಿರುವ ಬಗ್ಗೆ ಇಡಿ ಪರವಾಗಿ ವಕೀಲ ಜೊಹೆಬ್ ಹುಸೇನ್ ನ್ಯಾಯಾಲಯದ ಗಮನಕ್ಕೆ ತಂದರು.

ಅಲ್ಲದೇ, ಮಾರ್ಚ್ 19 ಮತ್ತು 20ರಂದು ದಿನೇಶ್​ ಅರೋರಾ ಸೇರಿ ಇಬ್ಬರು ಆರೋಪಿಗಳನ್ನು ವಿಚಾರಣೆಗೆ ಕರೆಯಲಾಗಿದೆ. ಇವರನ್ನು ಸಿಸೋಡಿಯಾ ಮುಂದೆಯೇ ವಿಚಾರಣೆ ನಡೆಸಬೇಕಿದೆ ಎಂದು ಇಡಿ ವಕೀಲರು ತಿಳಿಸಿದರು. ಅದೇ ಸಮಯದಲ್ಲಿ ಸಿಸೋಡಿಯಾ ಪರ ವಕೀಲರು, ಇಡಿ ಪರ ವಕೀಲರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಇಡಿ ಕಸ್ಟಡಿ ಅವಧಿ ಅಂತ್ಯಗೊಳಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಮನವಿ ಮಾಡಿದರು. ಸಿಸೋಡಿಯಾ ಪರವಾಗಿ ಹಿರಿಯ ವಕೀಲರಾದ ದಯಾ ಕೃಷ್ಣನ್, ರೋಹಿತ್ ಮಾಥುರ್ ಮತ್ತು ಸಿದ್ಧಾರ್ಥ್ ಅಗರ್ವಾಲ್ ವಾದ ಮಂಡಿಸಿದರು. ವಾದ ಮತ್ತು ಪ್ರತಿವಾದ ಆಲಿಸಿದ ನ್ಯಾಯಾಲಯವು ಐದು ದಿನಗಳ ಕಾಲ ಕಸ್ಟಡಿ ಅವಧಿ ವಿಸ್ತರಿಸಿತು.

ಸಿಸೋಡಿಯಾ ವಿರುದ್ಧದ ಆರೋಪವೇನು?: ದೆಹಲಿ ಮದ್ಯ ನೀತಿ ಹಗರಣದಲ್ಲಿ ಕ್ರಿಮಿನಲ್ ಪಿತೂರಿ, ಭ್ರಷ್ಟಾಚಾರ ಮತ್ತು ಸಾಕ್ಷ್ಯಗಳ ನಾಶ ಹಾಗೂ ವಿರೂಪಗೊಳಿಸಿದ ಆರೋಪದ ಮೇಲೆ ಮಾರ್ಚ್​ 26ರಂದು ದೆಹಲಿ ಉಪ ಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಈಗಾಗಲೇ ಜೈಲಿನಲ್ಲಿರುವ ಸಿಸೋಡಿಯಾ ಅವರನ್ನು ಇಡಿ ಅಧಿಕಾರಿಗಳು ಕೂಡ ಮಾರ್ಚ್​ 9ರಂದು ತಮ್ಮ ವಶಕ್ಕೆ ಪಡೆದಿದ್ದರು.

ಇದೇ ಈ ಮದ್ಯ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಮನೀಶ್​ ಸಿಸೋಡಿಯಾ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ, ಸಿಸೋಡಿಯಾ ಬೇರೆ ಹೆಸರಲ್ಲಿನ ಸಿಮ್​ ಕಾರ್ಡ್‌ಗಳು ಮತ್ತು ಮೊಬೈಲ್ ಫೋನ್‌ಗಳನ್ನು ಖರೀದಿಸಿದ್ದಾರೆ. ಇಷ್ಟೇ ಅಲ್ಲ, ಇದುವರೆಗೆ ಸಿಸೋಡಿಯಾ ನೀಡಿರುವ ಉತ್ತರಗಳು, ಇದೇ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಿ ಇತರ ಆರೋಪಿಗಳು ನೀಡಿದ ಹೇಳಿಕೆಗಳಿಗೆ ವಿರುದ್ಧವಾಗಿವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಏಳು ದಿನ ಜಾರಿ ನಿರ್ದೇಶನಾಲಯದ ವಶಕ್ಕೆ ಮನೀಶ್ ಸಿಸೋಡಿಯಾ.. ಹೇಳಿಕೆ ವಾಪಸ್ ಪಡೆಯಲು ಪಿಳ್ಳೈ ನಿರ್ಧಾರ!

ABOUT THE AUTHOR

...view details