ಕರ್ನಾಟಕ

karnataka

ಗುಜರಾತ್​ನಲ್ಲಿ ವ್ಯಕ್ತಿಯ ಕಾಲಿಗೆ ಹಗ್ಗ ಕಟ್ಟಿ 1 ಕಿಮೀ ಎಳೆದೊಯ್ದ ಟ್ರಕ್​​!

By

Published : Jan 23, 2023, 6:52 PM IST

ದೇಶಾದ್ಯಂತ ಭೀಕರ ವಾಹನ ಅಪಘಾತಗಳ ಸರಣಿ - ಗುಜರಾತ್​ನಲ್ಲಿ ವ್ಯಕ್ತಿ ಎಳೆದೊಯ್ದ ಟ್ರಕ್ ​- ಕಾಲಿಗೆ ಹಗ್ಗ ಕಟ್ಟಿ ವ್ಯಕ್ತಿಗೆ ಅಪಘಾತ - ​​ಟ್ರಕ್​ನಿಂದ ಕಿಲೋಮೀಟರ್​ಗಟ್ಟಲೇ ಎಳೆದೊಯ್ದ ಘಟನೆ

dragged-for-1-km-
ಗುಜರಾತ್​ನಲ್ಲಿ ವ್ಯಕ್ತಿಯ ಕಾಲಿಗೆ ಹಗ್ಗ ಕಟ್ಟಿ 1 ಕಿಮೀ ಎಳೆದೊಯ್ದ ಟ್ರಕ್

ಸೂರತ್:ದೆಹಲಿ, ಬೆಂಗಳೂರು, ಬಿಹಾರದಲ್ಲಿ ವಾಹನ ಬಳಸಿ ಮನುಷ್ಯರನ್ನು ಎಳೆದೊಯ್ದ ಘಟನೆಗಳು ದೇಶಾದ್ಯಂತ ಸದ್ದು ಮಾಡಿವೆ. ಇಂಥದ್ದೇ ಘಟನೆ ಈಗ ಗುಜರಾತ್​ನ ಸೂರತ್​ನಲ್ಲಿ ಇಂದು ನಡೆದಿದೆ. ವ್ಯಕ್ತಿಯ ಕಾಲಿಗೆ ಹಗ್ಗ ಕಟ್ಟಿ ಆತನನ್ನು ಟ್ರಕ್​​ನಿಂದ ಕಿಲೋಮೀಟರ್​ಗಟ್ಟಲೇ ಎಳೆದೊಯ್ಯಲಾಗಿದೆ. ಘಟನೆಯಲ್ಲಿ ವ್ಯಕ್ತಿಯ ತಲೆ, ಕೈ ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಅದೃಷ್ಟವಶಾತ್​ ವ್ಯಕ್ತಿ ಬದುಕುಳಿದಿದ್ದಾನೆ.

ಘಟನೆಯ ವಿವರ:ಗುಜರಾತ್‌ನ ಸೂರತ್ ಜಿಲ್ಲೆಯ ಹಜಿರಾ ಪ್ರದೇಶದಲ್ಲಿ ಇಂದು ಟ್ರಕ್‌ನಿಂದ ಸುಮಾರು 1 ಕಿಲೋಮೀಟರ್​ವರೆಗೆ ಕಾಲಿಗೆ ಹಗ್ಗ ಬಿಗಿದ ವ್ಯಕ್ತಿಯೊಬ್ಬರನ್ನು ಎಳೆದೊಯ್ದಲಾಗಿದೆ. ದುರಂತದ ಆತ ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಹಜಿರಾ ಪೊಲೀಸರು ತನಿಖೆ ಆರಂಭಿಸಿದ್ದು, ಭೀಕರ ದುರಂತದ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕಾಲಿಗೆ ಹಗ್ಗ ಕಟ್ಟಿ ವ್ಯಕ್ತಿಯನ್ನು ಟ್ರಕ್​​ ಮೂಲಕ ಎಳೆದೊಯ್ಯಲಾಗುತ್ತಿತ್ತು. ಇದನ್ನು ಕಂಡ ಕಾರು ಚಾಲಕನೊಬ್ಬ ರಕ್ಷಣೆಗೆ ಧಾವಿಸಿದ್ದಾನೆ. ಟ್ರಕ್​ ಬೆನ್ನತ್ತಿದ ಕಾರು ಚಾಲಕ ಕಿಲೋಮೀಟರ್​ ಎಳೆದೊಯ್ದ ಬಳಿಕ ಟ್ರಕ್​ ನಿಲ್ಲಿಸಿ ವ್ಯಕ್ತಿಯನ್ನು ಟ್ರಕ್​​ಗೆ ಕಟ್ಟಿದ್ದ ಹಗ್ಗವನ್ನು ಕತ್ತರಿಸಿದ್ದಾನೆ. ಚಾಲಕ ಬಳಿಕ ಟ್ರಕ್​ ಸಮೇತ ಪರಾರಿಯಾಗಿದ್ದಾನೆ. ವ್ಯಕ್ತಿಯ ಕಾಲಿಗೆ ಹಗ್ಗದಿಂದ ಏಕೆ ಕಟ್ಟಲಾಗಿತ್ತು ಎಂಬುದು ಇನ್ನೂ ತಿಳಿದು ಬಂದಿಲ್ಲ. ಅಪಘಾತದಲ್ಲಿ ವ್ಯಕ್ತಿಯ ತಲೆ, ಕಾಲು ಮತ್ತು ಕೈಗಳಿಗೆ ತೀವ್ರ ಗಾಯಗಳಾಗಿವೆ. ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಶಾದ್ಯಂತ ಭೀಕರ ಕಹಿ ಘಟನೆಗಳು:ಹೊಸ ವರ್ಷಾರಂಭದ ದಿನದಂದು ದೆಹಲಿಯ ಸುಲ್ತಾನ್​ಪುರದಲ್ಲಿ ಯುವತಿಯನ್ನು ಕಾರಿನಡಿ 14 ಕಿಮೀ ಎಳೆದೊಯ್ದು ಆಕೆಯ ಭೀಕರ ಸಾವಿಗೆ ಕಾರಣವಾಗಿದ್ದ ಐವರನ್ನು ಬಂಧಿಸಲಾಗಿದೆ. ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದ ಆರೋಪಿಗಳು ಯುವತಿಯ ಸ್ಕೂಟಿಗೆ ಡಿಕ್ಕಿ ಹೊಡೆದು ಆತುರದಲ್ಲಿ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದರು. ಈ ವೇಳೆ, ಯುವತಿ ಕಾರಿನಡಿ ಸಿಕ್ಕಿಬಿದ್ದು, ರಸ್ತೆಗೆ ಪರಚಿಕೊಂಡು ಆಕೆಯ ದೇಹ ಛಿದ್ರವಾಗಿತ್ತು.

ರಾಜ್ಯದ ಬೆಂಗಳೂರಿನಲ್ಲಿ ಸಿಗ್ನಲ್​ ದಾಟಿ ಬಂದ ಮಹಿಳೆಯನ್ನು ಪ್ರಶ್ನಿಸಿದ್ದಕ್ಕೆ ಕಾರಿನಿಂದ ಗುದ್ದಲು ಬಂದಾಗ ಆ ವ್ಯಕ್ತಿ ಬಾನೆಟ್​ ಮೇಲೆ ಹತ್ತಿದ್ದ 4 ಕಿಮೀ ದೂರ ಆತನನ್ನು ಬಾನೆಟ್​ ಮೇಲೆಯೇ ಎಳೆದೊಯ್ಯಲಾಗಿತ್ತು. ಬಳಿಕ ಬೈಕ್​ ಸವಾರರು ಆತನನ್ನು ರಕ್ಷಿಸಿದ್ದರು. ಪ್ರಕರಣದಲ್ಲಿ ಉಭಯ ಕಡೆಯವರು ಸೇರಿ ಐವರನ್ನು ಬಂಧಿಸಲಾಗಿದೆ.

ಬೈಕ್​ನಲ್ಲಿ ವೃದ್ಧನ ಎಳೆದೊಯ್ದಿದ್ದ ಯುವಕ:ಇನ್ನೊಂದು ಪ್ರಕರಣದಲ್ಲಿ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ 71 ವರ್ಷದ ವೃದ್ಧನನ್ನು ಯುವಕನೊಬ್ಬ ಬೈಕ್​ ಹಿಂದೆಯೇ 1 ಕಿಲೋಮೀಟರ್​ ಎಳೆದೊಯ್ದಿದ್ದ. ಘಟನೆಯಲ್ಲಿ ವೃದ್ಧನಿಗೆ ತರಚಿದ ಗಾಯಗಳಾಗಿತ್ತು. ಕಾರಿಗೆ ಅಪಘಾತ ಮಾಡಿದ್ದ ವೃದ್ಧನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಬೈಕ್​ ಅನ್ನು ಹಿಂದಿನಿಂದ ಹಿಡಿದುಕೊಂಡಿದ್ದ ಕಾರಣ 1 ಕಿಲೋ ಎಳೆದೊಯ್ಯಲಾಗಿತ್ತು.

ಬಿಹಾರದಲ್ಲಿ ಕಾರು ಹತ್ತಿಸಿ ಹತ್ಯೆ:ಇನ್ನು ಬಿಹಾರದಲ್ಲಿ ನಡೆದ ಭೀಕರ ಘಟನೆಯಲ್ಲಿ ವ್ಯಕ್ತಿಯೊಬ್ಬ ಕಾರಿನ ಮೇಲಿಂದ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ರಸ್ತೆಯಲ್ಲಿ ಸೈಕಲ್​ ಮೇಲೆ ಹೋಗುತ್ತಿದ್ದಾತನನ್ನು ಗುದ್ದಿದ ಕಾರು ಚಾಲಕ ಬಳಿಕ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿದ್ದ. ಈ ವೇಳೆ, ವೃದ್ಧ ವೈಪರ್​ ಹಿಡಿದು ಕಾರಿನ ಮೇಲೆಯೇ ಕುಳಿತಿದ್ದ. ಬಳಿಕ ಕಾರನ್ನು ದಿಢೀರನೇ ನಿಲ್ಲಿಸಿದ್ದರಿಂದ ಆತ ರಸ್ತೆಗೆ ಬಿದ್ದಾಗ, ಆತನ ಮೇಲೆಯೇ ಕಾರು ಚಲಾಯಿಸಿಕೊಂಡು ಹೋಗಲಾಗಿತ್ತು. ತೀವ್ರ ಗಾಯಗೊಂಡ ವ್ಯಕ್ತಿ ಸಾವನ್ನಪ್ಪಿದ್ದ.

ಓದಿ:ಕಾರಿನಡಿ ಸಿಲುಕಿ ದೆಹಲಿ ಯುವತಿ ಸಾವು: ಲೆಫ್ಟಿನೆಂಟ್​ ಗವರ್ನರ್​ ನಿವಾಸದ ಮುಂದೆ ಭಾರಿ ಪ್ರತಿಭಟನೆ

ABOUT THE AUTHOR

...view details