ಕರ್ನಾಟಕ

karnataka

ಅಕ್ರಮ ಆಸ್ತಿ ಸಂಪಾದನೆ ಆರೋಪ: ಇದೇ 30ಕ್ಕೆ ನಿವೃತ್ತಿಯಾಗಬೇಕಿದ್ದ ಐಎಎಸ್​ ಅಧಿಕಾರಿ ಬಂಧನ

By

Published : Jun 23, 2022, 9:13 AM IST

IAS Officer Ram Vilas Yadav
ಐಎಎಸ್​ ಅಧಿಕಾರಿ ರಾಮ್​ ವಿಲಾಸ್​ ಯಾದವ್ ()

ರಾಮ್ ವಿಲಾಸ್ ಎಸ್‌ಪಿ ಸರ್ಕಾರದ ಅತ್ಯಂತ ನಿಕಟ ಅಧಿಕಾರಿಯಾಗಿದ್ದರು. ಆದರೆ, ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರ ಅವರು 2019 ರಲ್ಲಿ ಉತ್ತರಾಖಂಡಕ್ಕೆ ತೆರಳಿದ್ದರು.

ಡೆಹ್ರಾಡೂನ್: ಆದಾಯಕ್ಕೆ ಮೀರಿ ಆಸ್ತಿ ಸಂಪಾದನೆ ಆರೋಪದಡಿ ಐಎಎಸ್ ಅಧಿಕಾರಿ ರಾಮ್ ವಿಲಾಸ್ ಯಾದವ್ ಅವರನ್ನು ಬುಧವಾರ ವಿಚಾರಣೆ ನಡೆಸಿದ ನಂತರ ತಡರಾತ್ರಿ ರಾಜ್ಯ ವಿಜಿಲೆನ್ಸ್ ಇಲಾಖೆ ಬಂಧಿಸಿದೆ. ಹೈಕೋರ್ಟ್ ಆದೇಶದ ಮೇರೆಗೆ ರಾಮ್ ವಿಲಾಸ್ ಯಾದವ್ ಬುಧವಾರ ಮಧ್ಯಾಹ್ನ ತಮ್ಮ ವಕೀಲರೊಂದಿಗೆ ಖಾಸಗಿ ಕಾರಿನಲ್ಲಿ ಡೆಹರಾಡೂನ್‌ನ ವಿಜಿಲೆನ್ಸ್ ಕಚೇರಿಗೆ ಆಗಮಿಸಿದ್ದರು. ಅಲ್ಲಿ ಅವರನ್ನು ಸುಮಾರು 14 ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು ಎಂದು ರಾಜ್ಯ ವಿಜಿಲೆನ್ಸ್ ವಿಭಾಗದ ನಿರ್ದೇಶಕ ಅಮಿತ್ ಸಿನ್ಹಾ ತಿಳಿಸಿದ್ದಾರೆ.

14 ಗಂಟೆಗಳಲ್ಲಿ 70 ಪ್ರಶ್ನೆ: ಕಾಲ್ನಡಿಗೆಯಲ್ಲೇ ಪೊಲೀಸ್​ ಭದ್ರತೆಯಲ್ಲಿ ವಿಜಿಲೆನ್ಸ್​ನ ಮುಖ್ಯಗೇಟ್​ನಿಂದ ಒಳಬಂದ ರಾಮ್​ ವಿಲಾಸ್​ ಮಾಧ್ಯಮಗಳ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದೇ ಕಚೇರಿ ಒಳಗೆ ತೆರಳಿದರು. 14 ಗಂಟೆಗಳ ವಿಚಾರಣೆಯಲ್ಲಿ ಸುಮಾರು 70 ಪ್ರಶ್ನೆಗಳನ್ನು ರಾಮ್​ ವಿಲಾಸ್​ ಯಾದವ್​ ಅವರಿಗೆ ಕೇಳಲಾಯಿತು. ವಿಜಿಲೆನ್ಸ್‌ನ ಒಬ್ಬರು ಎಸ್‌ಪಿ, ಇಬ್ಬರು ಉಪ ಎಸ್‌ಪಿಗಳು, ಆರು ಇನ್‌ಸ್ಪೆಕ್ಟರ್‌ಗಳು ಮತ್ತು ಒಬ್ಬರು ಜಂಟಿ ನಿರ್ದೇಶಕರು ವಿಚಾರಣೆಯಲ್ಲಿ ಪಾಲ್ಗೊಂಡಿದ್ದರು.

ಐಎಎಸ್​ ಅಧಿಕಾರಿ ರಾಮ್​ ವಿಲಾಸ್​ ಯಾದವ್

ಸುದೀರ್ಘ ವಿಚಾರಣೆಯ ಸಮಯದಲ್ಲಿ ರಾಮ್ ವಿಲಾಸ್ ಯಾದವ್ ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ರಕ್ಷಣಾ ವಕೀಲ ಅಭಿನವ್ ಶರ್ಮಾ ಆರೋಪಿಸಿದರು. ಇದಲ್ಲದೇ ತನಿಖಾ ಆದೇಶದಿಂದಾಗಿ ಉತ್ತರಾಖಂಡ ಸರ್ಕಾರವು ರಾಮ್ ವಿಲಾಸ್ ಯಾದವ್ ಅವರನ್ನು ಅಮಾನತುಗೊಳಿಸಿದೆ. ರಾಮ್ ವಿಲಾಸ್ ಯಾದವ್ ಬಂಧನಕ್ಕೆ ತಡೆಯಾಜ್ಞೆ ನೀಡಲು ಇಂದು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಬೇಕಿತ್ತು. ಆದರೆ, ಅದಕ್ಕೂ ಮೊದಲು ರಾಮ್ ವಿಲಾಸ್ ಅವರ ಬಂಧನ ಮಾಡಲಾಗಿದೆ. ಈ ಪ್ರಕರಣದಲ್ಲಿ ಅವರ ಮೇಲಿನ ಕಾನೂನು ಹಿಡಿತ ತೀವ್ರಗೊಂಡಿದೆ.

ಪ್ರಕರಣ ದಾಖಲಿಸಿದ ನಂತರ ಸರ್ಕಾರದಿಂದ ಅನುಮತಿ ಪಡೆದ ವಿಜಿಲೆನ್ಸ್ ತಂಡ, ಉತ್ತರಾಖಂಡದಿಂದ ಉತ್ತರ ಪ್ರದೇಶವೆರೆಗ ಇರುವ ಯಾದವ್ ಅವರ ಬೇನಾಮಿ ಆಸ್ತಿಗಳ ಮೇಲೆ ದಾಳಿ ನಡೆಸಿತು. ವಾಸ್ತವವಾಗಿ, ಐಎಎಸ್ ರಾಮ್ ವಿಲಾಸ್ ಯಾದವ್ ಅವರನ್ನು ಪ್ರಶ್ನಿಸಲು ವಿಜಿಲೆನ್ಸ್ ಬಹಳ ಸಮಯದಿಂದ ಒತ್ತಾಯಿಸುತ್ತಿತ್ತು. ಆದರೆ, ಯಾದವ್ ವಿಜಿಲೆನ್ಸ್ ಮುಂದೆ ವಿಚಾರಣೆಗೆ ಹಾಜರಾಗಿರಲಿಲ್ಲ. ಇಷ್ಟೇ ಅಲ್ಲ, ಯಾದವ್ ತಮ್ಮ ಬಂಧನಕ್ಕೆ ಸಂಬಂಧಿಸಿದಂತೆ ತಡೆಯಾಜ್ಞೆಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ತನಿಖಾ ದಾಖಲೆಯ ಉತ್ತರಕ್ಕಾಗಿ ವಿಜಿಲೆನ್ಸ್ ಕಚೇರಿಗೆ ಹಾಜರಾಗುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ನಿನ್ನೆ ವಿಚಾರಣೆಗೆ ಹಾಜರಾಗಿದ್ದರು.

ಸ್ವತಃ ಶುಗರ್ ಪೇಷೆಂಟ್ ಎಂದು ಹೇಳಿಕೊಂಡಿದ್ದರು: ಡೆಹ್ರಾಡೂನ್ ವಿಜಿಲೆನ್ಸ್ ಹೆಡ್‌ಕ್ವಾರ್ಟರ್ಸ್‌ನಲ್ಲಿ ಬುಧವಾರ ಮಧ್ಯಾಹ್ನದಿಂದ ತಡರಾತ್ರಿವರೆಗೆ ನಡೆದ ವಿಚಾರಣೆ ವೇಳೆ ರಾಮ್ ವಿಲಾಸ್ ಯಾದವ್ ಅವರು ಶುಗರ್ ಪೇಷಂಟ್ ಎಂದು ಹೇಳಿಕೊಂಡಿದ್ದರು. ಹಾಗಾಗಿ ಅವರಿಗೆ ಮಧ್ಯೆ ಮಧ್ಯೆ ವಿಶ್ರಾಂತಿಯನ್ನೂ ನೀಡಲಾಗಿತ್ತು. ಮಧ್ಯಾಹ್ನ, ವಿಜಿಲೆನ್ಸ್ ಟೀಂ ಅವರ ಮನೆಯಿಂದಲೇ ಆಹಾರವನ್ನು ತರಿಸಿ ಯಾದವ್​ ಅವರಿಗೆ ನೀಡಿತ್ತು.

ಯಾದವ್ ನಿವಾಸದ ಮೇಲೆ ದಾಳಿ :ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮತ್ತು ಉತ್ತರಾಖಂಡ್‌ನ ಎಲ್‌ಡಿಎ ಮಾಜಿ ಕಾರ್ಯದರ್ಶಿ ರಾಮ್ ವಿಲಾಸ್ ಯಾದವ್ ವಿರುದ್ಧ ಪ್ರಕರಣ ದಾಖಲಾದ ನಂತರ, ಲಖನೌದ ಪುರ್ನಿಯಾದಲ್ಲಿರುವ ಅವರ ಮನೆ ಮೇಲೆ ದಾಳಿ ನಡೆಸಿತ್ತು. ಇದಲ್ಲದೇ ಯುಪಿಯ ಘಾಜಿಪುರ ಮತ್ತು ಗಾಜಿಯಾಬಾದ್ ಸ್ಥಳಗಳ ಮೇಲೂ ರೇಡ್ ಮಾಡಲಾಗಿತ್ತು.

ಎಸ್​ಪಿ ಸರ್ಕಾರಕ್ಕೆ ಆಪ್ತರಾಗಿದ್ದ ರಾಮ್ ವಿಲಾಸ್ : ರಾಮ್ ವಿಲಾಸ್ ಲಖನೌ ಅಭಿವೃದ್ಧಿ ಪ್ರಾಧಿಕಾರದಲ್ಲಿ ದೀರ್ಘಕಾಲ ನಿಯೋಜನೆಗೊಂಡಿದ್ದರು. ಆ ನಂತರ ಮಂಡಿ ಪರಿಷತ್ತಿನ ಹೆಚ್ಚುವರಿ ನಿರ್ದೇಶಕರಾಗಿ ಅವರು ಕೆಲಸ ಮಾಡಿದ್ದರು. ರಾಮ್ ವಿಲಾಸ್ ಎಸ್‌ಪಿ ಸರ್ಕಾರದ ಅತ್ಯಂತ ನಿಕಟ ಅಧಿಕಾರಿಯಾಗಿದ್ದರು. ಆದರೆ, ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರ ಅವರು 2019 ರಲ್ಲಿ ಉತ್ತರಾಖಂಡಕ್ಕೆ ತೆರಳಿದ್ದರು. ಐಎಎಸ್ ರಾಮ್ ವಿಲಾಸ್ ಯಾದವ್ ಅವರು ಯುಪಿಯ ಲಖನೌ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿದ್ದಾಗ ಅವರ ಆದಾಯಕ್ಕಿಂತ 500 ಪಟ್ಟು ಹೆಚ್ಚು ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಹೇಮಂತ್ ಕುಮಾರ್ ಮಿಶ್ರಾ ಅವರ ದೂರಿನ ಮೇರೆಗೆ ಉತ್ತರಾಖಂಡ ಸರ್ಕಾರವು 9 ಜನವರಿ 2019 ರಂದು ವಿಜಿಲೆನ್ಸ್‌ನಲ್ಲಿ ಅವರ ವಿರುದ್ಧ ಮುಕ್ತ ತನಿಖೆಗೆ ಆದೇಶಿಸಿತ್ತು. ಉತ್ತರಪ್ರದೇಶದಿಂದ ಉತ್ತರಾಖಂಡಕ್ಕೆ ಹಸ್ತಾಂತರಿಸಿದ ಎಲ್ಲ ದಾಖಲೆಗಳ ಆಧಾರದ ಮೇಲೆ ವಿಜಿಲೆನ್ಸ್ ಇಲಾಖೆಯು ಉತ್ತರಾಖಂಡದಲ್ಲೂ ಯಾದವ್ ವಿರುದ್ಧ ವರದಿ ಸಲ್ಲಿಸಿತ್ತು. ರಾಮ್ ವಿಲಾಸ್ ಯಾದವ್ ಅವರು ಜೂನ್ 30 ರಂದು ನಿವೃತ್ತರಾಗಲಿದ್ದು, ಅದಕ್ಕೂ ಮೊದಲು ಕಾನೂನಿನ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ.

ಇದನ್ನೂ ಓದಿ :ಲಂಚಕ್ಕೆ ಬೇಡಿಕೆ: ಎಸಿಬಿ ಕಚೇರಿ ಸಮೀಪವೇ ಸಿಕ್ಕಿಬಿದ್ದ ಚಾಮರಾಜನಗರ ಎಸ್​​ಡಿಎ

ABOUT THE AUTHOR

...view details